ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಅಂಜದೀವ್ ದ್ವೀಪದ ಸಮೀಪ ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕಾ ಬೋಟ್ವೊಂದು ಮುಳುಗಡೆಯಾಗಿದೆ.
ಬೋಟ್ನಲ್ಲಿ ಅಪಾಯಕ್ಕೆ ಸಿಲುಕಿದ್ದ 24 ಮಂದಿ ಮೀನುಗಾರರನ್ನು ಸಮೀಪದಲ್ಲಿದ್ದ ಇತರೆ ಮೀನುಗಾರಿಕಾ ಬೋಟ್ಗಳ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ರಕ್ಷಿಸಿದ್ದಾರೆ.
ಬೆಳಂಬಾರ ಮೂಲದ ನೀಲಕಂಠ ಖಾರ್ವಿ ಅವರಿಗೆ ಸೇರಿದ ‘ಶ್ರೀ ಮಾತಾ’ ಹೆಸರಿನ ಮೀನುಗಾರಿಕಾ ಬೋಟ್ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ವೇಳೆ ಅವಘಡಕ್ಕೀಡಾಗಿದೆ. ಅಂಜದೀವ್ ದ್ವೀಪದ ಸಮೀಪ ಸಮುದ್ರದಲ್ಲಿದ್ದ ಸಂದರ್ಭದಲ್ಲಿ ಬೋಟ್ ಅಪಾಯಕ್ಕೆ ಸಿಲುಕಿದ್ದು, ಕ್ರಮೇಣ ಮುಳುಗಡೆಯಾಗಿದೆ ಎಂದು ತಿಳಿದುಬಂದಿದೆ.
ಬೋಟ್ ಮುಳುಗುತ್ತಿರುವುದನ್ನು ಗಮನಿಸಿದ ಸಮೀಪದಲ್ಲಿದ್ದ ಐದಾರು ಮೀನುಗಾರಿಕಾ ಬೋಟ್ಗಳ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಧಾವಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಗೆ ಮುಂದಾದ ಅವರು, ಬೋಟ್ನಲ್ಲಿದ್ದ ಎಲ್ಲಾ 24 ಮಂದಿ ಮೀನುಗಾರರನ್ನು ಸುರಕ್ಷಿತವಾಗಿ ತಮ್ಮ ಬೋಟ್ಗಳಿಗೆ ಸ್ಥಳಾಂತರಿಸಿಕೊಂಡಿದ್ದಾರೆ.
ಸಮುದ್ರದ ಮಧ್ಯದಲ್ಲಿ ಬೋಟ್ ಮುಳುಗಡೆಯಾಗಿದ್ದರಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಆದರೆ ಇತರೆ ಮೀನುಗಾರಿಕಾ ಬೋಟ್ಗಳ ಸಿಬ್ಬಂದಿ ತಕ್ಷಣ ಸ್ಪಂದಿಸಿದ್ದರಿಂದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ. ರಕ್ಷಿಸಲ್ಪಟ್ಟ ಎಲ್ಲ ಮೀನುಗಾರರು ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ.
ಮೀನುಗಾರರನ್ನು ರಕ್ಷಿಸಿದ ಬಳಿಕ ‘ಶ್ರೀ ಮಾತಾ’ ಬೋಟ್ ಅನ್ನು ಉಳಿಸಿಕೊಳ್ಳಲು ಕೂಡ ಪ್ರಯತ್ನ ನಡೆಸಲಾಗಿದೆ. ಇತರೆ ಬೋಟ್ಗಳ ಸಹಾಯದಿಂದ ಹಗ್ಗಗಳನ್ನು ಕಟ್ಟಿ ಬೋಟ್ ಅನ್ನು ಎಳೆಯುವ ಪ್ರಯತ್ನ ಮಾಡಲಾಗಿದೆ. ಆದರೆ ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗದೆ ಬೋಟ್ ಸಂಪೂರ್ಣವಾಗಿ ಸಮುದ್ರದಲ್ಲಿ ಮುಳುಗಿದೆ ಎನ್ನಲಾಗಿದೆ.
ಬೋಟ್ ಮುಳುಗಡೆಯಿಂದ ಮೀನುಗಾರಿಕಾ ಬೋಟ್ ಹಾಗೂ ಅದರಲ್ಲಿದ್ದ ಮೀನುಗಾರಿಕಾ ಪರಿಕರಗಳಿಗೆ ಭಾರೀ ಹಾನಿಯಾಗಿದೆ. ಘಟನೆಯಿಂದ ₹80 ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿರುವುದಾಗಿ ತಿಳಿದುಬಂದಿದೆ.
ಘಟನೆಗೆ ನಿಖರ ಕಾರಣ ಏನು ಎಂಬುದು ತಿಳಿದುಬಂದಿಲ್ಲ. ಬೋಟ್ನಲ್ಲಿ ತಾಂತ್ರಿಕ ದೋಷ ಉಂಟಾಗಿತ್ತೇ ಅಥವಾ ಸಮುದ್ರದ ಪರಿಸ್ಥಿತಿಯಿಂದ ಅವಘಡ ಸಂಭವಿಸಿತೇ ಎಂಬ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ.





