Sj*

ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಖ್ಯಾತ ತಮಿಳು ನಿರ್ದೇಶಕ ಹಾಗೂ ನಟ ಪಿ. ಸಮುದ್ರಖನಿ ಅವರ ಮುಂಬರುವ ‘ಸ್ಕೂಲ್ ಬಸ್’ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸೆಪ್ಟೆಂಬರ್ 2ರಂದು ಸುದೀಪ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಚಿತ್ರತಂಡ ಮಧ್ಯರಾತ್ರಿ ಅವರ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಈ ಮಹತ್ವದ ಪ್ರಾಜೆಕ್ಟ್‌ನಲ್ಲಿ ಅವರು ಇರುವುದನ್ನು ಅಧಿಕೃತವಾಗಿ ಪ್ರಕಟಿಸಿದೆ. ಖ್ಯಾತ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅರ್ಪಿಸುತ್ತಿರುವ ಈ ಚಿತ್ರವು ಭಾರಿ ನಿರೀಕ್ಷೆಯನ್ನು ಹುಟ್ಟುಹಾಕಿದೆ.
ನಾಡೋಡಿಗಲ್’, ‘ಅಪ್ಪ’ ಮತ್ತು ‘ವಿನೋದಯ ಸಿತಂ’ ಮುಂತಾದ ಸದಭಿರುಚಿಯ ಚಿತ್ರಗಳ ಮೂಲಕ ಜನಪ್ರಿಯರಾಗಿರುವ ಪಿ. ಸಮುದ್ರಖನಿ ಅವರು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುವುದರ ಜೊತೆಗೆ ಪ್ರಮುಖ ಪಾತ್ರದಲ್ಲೂ ಅಭಿನಯಿಸುತ್ತಿದ್ದಾರೆ. 22 ಮಕ್ಕಳ ಜವಾಬ್ದಾರಿ ಹೊತ್ತ ಶಾಲಾ ಬಸ್ ಚಾಲಕನೊಬ್ಬನ ಸುತ್ತ ಈ ಕಥೆ ಸಾಗಲಿದ್ದು, ಮಕ್ಕಳ ಭಾವನೆಗಳು, ಪೋಷಕರ ಕಳಕಳಿ ಹಾಗೂ ಶಿಕ್ಷಕರ ಬದುಕಿನ ವಿವಿಧ ಮಗ್ಗುಲುಗಳ ಮೇಲೆ ಈ ಸಿನಿಮಾ ಬೆಳಕು ಚೆಲ್ಲಲಿದೆ.

school1

ಈ ಹಿಂದೆ ತಮಿಳಿನಲ್ಲಿ ‘ಪುಲಿ’ ಮತ್ತು ‘ಮುಡಿಂಜ ಇವನ ಪುಡಿ’ (ಕನ್ನಡದಲ್ಲಿ ‘ಕೋಟಿಗೊಬ್ಬ 2’) ಸೇರಿದಂತೆ ಹಲವು ಚಿತ್ರಗಳ ಮೂಲಕ ಗುರುತಿಸಿಕೊಂಡಿದ್ದ ಸುದೀಪ್, ‘ಸ್ಕೂಲ್ ಬಸ್’ ಪ್ರಾಜೆಕ್ಟ್ ಒಪ್ಪಿಕೊಳ್ಳಲು ಅದರ ಆಕರ್ಷಕ ಕಥಾವಸ್ತುವೇ ಪ್ರಮುಖ ಕಾರಣ ಎನ್ನಲಾಗಿದೆ. ನಿರ್ದೇಶಕ ಸಮುದ್ರಖನಿ ಹೇಳಿದ ವಿಶಿಷ್ಟ ಕಥೆ ಹಾಗೂ ಗ್ಲಿಂಪ್ಸ್ ವೀಕ್ಷಿಸಿದ ಬಳಿಕ, ಸುದೀಪ್ ಈ ಚಿತ್ರದಲ್ಲಿ ನಟಿಸಲು ತಕ್ಷಣವೇ ಗ್ರೀನ್‌ ಸಿಗ್ನಲ್ ತೋರಿದ್ದಾರೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

school2

ಲೆನಿನ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಡಾ. ಪಿ. ಲೆನಿನ್ ಮುತ್ತುರಾಜ್ ಮತ್ತು ಡಾ. ಎ. ಟಿ. ಆಶಾ ಲೆನಿನ್ ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಸ್ಯಾಮ್ ಸಿ.ಎಸ್ ಸಂಗೀತ ಸಂಯೋಜಿಸುತ್ತಿದ್ದು, ಎನ್. ಕೆ. ಏಕಾಂಬರಂ ಛಾಯಾಗ್ರಹಣ, ಎ. ಎಲ್. ರಮೇಶ್ ಸಂಕಲನ, ಜಾಕಿ ಕಲಾ ನಿರ್ದೇಶನ ಹಾಗೂ ಸಿಲ್ವಾ ಮತ್ತು ದಿನೇಶ್ ಸುಬ್ಬರಾಯನ್ ಸಾಹಸ ನಿರ್ದೇಶನ ಒದಗಿಸಿದ್ದಾರೆ. ಯುನಿವರ್ಸಲ್‌ ಕಥಾಹಂದರ ಹೊಂದಿರುವ ‘ಸ್ಕೂಲ್ ಬಸ್’ ಚಿತ್ರವನ್ನು ಕನ್ನಡ, ತಮಿಳು, ತೆಲುಗು, ಹಿಂದಿ, ಇಂಗ್ಲಿಷ್ ಮಾತ್ರವಲ್ಲದೆ ಚೈನೀಸ್ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಭಾಷೆಗಳಲ್ಲಿ ವಿಶ್ವದಾದ್ಯಂತ ತೆರೆಗೆ ತರಲು ಸಿದ್ಧತೆಗಳು ಭರದಿಂದ ಸಾಗುತ್ತಿವೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ