ಚಿತ್ರಕಲೆಯಲ್ಲಿ ಅಪರಿಮಿತ ಸಾಧನೆ ಮಾಡಿರುವ 52ರ ಹರಯದ ಬಿ.ಎ. ಪದವೀಧರೆ ಮಣಿ ಶೇಖರ್‌ ಖೋ ಖೋ, ಕಬಡ್ಡಿಗಳಲ್ಲಿಯೂ ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.

ವಾಲಿಬಾಲ್‌, ಬ್ಯಾಸ್ಕೆಟ್‌ ಬಾಲ್, ಚದುರಂಗ ಕ್ರೀಡೆಗಳ ಚಾಂಪಿಯನ್‌ ಆಗಿದ್ದಾರೆ. ಮೆಹೆಂದಿ, ತರಕಾರಿ ಕೆತ್ತನೆ, ಪುಷ್ಟ ಜೋಡಣೆ (ಇಕೆಬಾನಾ), ಫ್ರೆಶ್‌ ಫ್ರೂಟ್‌ ಜ್ಯೂಸ್‌ ತಯಾರಿಕೆಯಲ್ಲೂ ಹಲವು ಪ್ರಶಸ್ತಿ ಗಳಿಸಿದ್ದಾರೆ. ಅನೇಕ ಖಾಸಗಿ ಟಿ.ವಿ. ಚಾನೆಲ್ ಕಾರ್ಯಕ್ರಮಗಳಲ್ಲಿ ಬಹುಮಾನ ಗಳಿಸಿದ್ದಾರೆ. ಇವರ ಕೆಲಸಗಳಿಗೆ ಪತಿ ಪಿ.ಎಲ್. ರಾಜಶೇಖರ್‌ರ ಸಂಪೂರ್ಣ ಸಹಕಾರವಿದೆ.

ಆರತಿಗೊಬ್ಬ ಮಗಳು, ಕೀರುತಿಗೊಬ್ಬ ಮಗ ಇವರ ಸುಖೀ ಸಂಸಾರದ ಸದಸ್ಯರು. ಕಲಾ ಸೇವೆಗಾಗಿ ತಮ್ಮ ಇಡೀ ಜೀವನವನ್ನೇ ಮುಡುಪಾಗಿಟ್ಟಿರುವ ಸಹೃದಯವಂತೆ ಮಣಿ ಶೇಖರ್‌ ಅವರಿಗೆ ಅವರ ಪತಿ ಪಿ.ಎಲ್. ರಾಜಶೇಖರ್‌ ಬೆನ್ನೆಲುಬಾಗಿದ್ದಾರೆ. ತಾಯಿ ಲೀಲಮ್ಮ ಒಳ್ಳೆಯ ಕಲಾವಿದೆ. ತಾಯಿಯಿಂದ ಸ್ಛೂರ್ತಿ ಪಡೆದ ಮಣಿ ಶೇಖರ್‌ ತಾಯಿಯ ಹಾದಿಯಲ್ಲೇ ಸಾಗುತ್ತಾ, ಅನನ್ಯ ಸಾಧನೆಯತ್ತ ಮುನ್ನುಗ್ಗುತ್ತಿರುವ ಯಶಸ್ವಿ ಕಲಾವಿದೆಯಾಗಿದ್ದಾರೆ.

ಚಿತ್ರ ಕಲಾವಿದೆಯಾಗಿ ಸಾಧನೆ

DSCN2100

ಕಳೆದ ಮೂವತ್ತು ವರ್ಷಗಳಿಂದ ಮಣಿ ಶೇಖರ್‌ ಒಂದು ಅಮೋಘ ಚಿತ್ರಕಲಾ ಸಂಸ್ಥೆ ನಡೆಸುತ್ತಿದ್ದಾರೆ. ಮೊದಲಿಗೆ ಮಹಿಳೆಯರಿಗಾಗಿ ನೂರಕ್ಕೂ ಹೆಚ್ಚು ವಿವಿಧ ಚಿತ್ರಕಲೆ, ಕರಕುಶಲ ಕಲೆಗಳಲ್ಲಿ ತರಬೇತಿ ಕೊಟ್ಟಿದ್ದಾರೆ. ಹದಿನೈದು ವರ್ಷಗಳಿಂದ ಮಕ್ಕಳಿಗಾಗಿ ತರಗತಿ ನಡೆಸುತ್ತಿದ್ದಾರೆ. ಮಣಿ ಸ್ಕೂಲ್ ‌ಆಫ್‌ ಆರ್ಟ್ಸ್ ಮೂಲಕ ಎರಡು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದಾರೆ. ಇವರ ಹತ್ತಿರ ತರಬೇತಿ ಪಡೆದ ಮಹಿಳೆಯರು ಸ್ವತಂತ್ರವಾಗಿ ತರಗತಿ ನಡೆಸಿ ಸ್ವಯಂ ಉದ್ಯೋಗಿಗಳಾಗಿದ್ದರೆ, ಇಲ್ಲಿ ಕಲಿತ ಮಕ್ಕಳು ರಾಜ್ಯ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಸಾಧನೆಗೆ ಸಂದ ಪ್ರಶಸ್ತಿಗಳು

ಮಣಿ ಶೇಖರ್‌ರವರ ಕಲಾ ಸೇವೆ ಗುರುತಿಸಿ ಹಲವಾರು ಸಂಘ ಸಂಸ್ಥೆಗಳು ಇವರಿಗೆ ಅನೇಕ ಪ್ರಶಸ್ತಿಗಳನ್ನು ನೀಡಿ ಪುರಸ್ಕರಿಸಿವೆ. ಕರ್ನಾಟಕ ಪ್ರಗತಿಶ್ರೀ, ಬುದ್ಧಶಾಂತಿ, ವಿಶ್ವಮಾನ್ಯ ವಿವೇಕರತ್ನ, ಕಲಾಶ್ರೀ ಮುಂತಾದ ಹಲವಾರು ಪ್ರಶಸ್ತಿಗಳು ಲಭಿಸಿವೆ. ರೋಟರಿ, ಲಯನ್ಸ್, ನೀಲಗಂಗಾ ಮಹಿಳಾ ಬಳಗ, ಆರ್ಯ ವೈಶ್ಯ ಸಂಸ್ಥೆ ಮುಂತಾಗಿ ಹಲವಾರು ಸಂಸ್ಥೆಗಳಿಂದ ಪುರಸ್ಕರಿಸಲ್ಪಟ್ಟಿದ್ದಾರೆ.

ವಿವಿಧೆಡೆ ಪ್ರದರ್ಶನಗಳು

ಪ್ರಸ್ತುತ ಹ್ಯಾಂಡಿ ಕ್ರಾಫ್ಟ್ಸ್ ಬೋರ್ಡ್‌ ಸದಸ್ಯರಾಗಿ ಭಾರತದ ಉದ್ದಗಲಕ್ಕೂ ಸಂಚರಿಸಿ ಪ್ರದರ್ಶನ ಹಾಗೂ ಡೆಮಾನ್‌ ಸ್ಟ್ರೇಷನ್ ನೀಡಿದ್ದಾರೆ. ದೆಹಲಿ, ಶಿಲ್ಲಾಂಗ್‌, ಚೆನ್ನೈ, ಸೂರಜ್‌ ಕುಂಡ್‌, ಪಾಟ್ನಾ, ಇಂಧೋರ್‌, ಹೈದರಾಬಾದ್‌ ಅಲ್ಲದೆ, ದೇಶದಾದ್ಯಂತ ಹಾಗೂ ವಿದೇಶ (ಸಿಡ್ನಿ)ದಲ್ಲೂ ತರಬೇತಿ, ಪ್ರದರ್ಶನ ನೀಡಿದ್ದಾರೆ.

ವೈವಿಧ್ಯಮಯ ಸೇವೆ

DSCN2083

ಮೈಸೂರಿನ ಬಾಲಭವನ, ಕ್ವೀನ್ಸ್ ಸ್ಕೂಲ್ ‌ಆಫ್‌ ಡಿಸೈನ್‌, ಎಸ್‌.ಡಿ.ಎಂ. ಶಾರದಾ ವಿಲಾಸ, ಜೆ.ಎಸ್‌.ಎಸ್‌., ವಿಜಯ ವಿಠಲ ಶಾಲೆ, ಟೆರೇಷಿಯನ್‌ ಕಾಲೇಜ್‌ ಇತ್ಯಾದಿ ಹಲವಾರು ಶಾಲಾ, ಕಾಲೇಜುಗಳಲ್ಲಿ ಗೆಸ್ಟ್ ಫ್ಯಾಕಲ್ಟಿ ಆಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ, ಮಂಗಳೂರಿನ ಕರಾವಳಿ ಕಾಲೇಜು, ಶ್ರೀದೇವಿ ಕಾಲೇಜು, ನಿಟ್ಟೆ, ಪುತ್ತೂರಿನ ಗ್ಲೋರಿಯ ಕಾಲೇಜಿನಲ್ಲಿಯೂ ಸೇವೆ ಸಲ್ಲಿಸಿದ್ದಾರೆ. ಹಲವಾರು ಕಡೆ ತೀರ್ಪುಗಾರರಾಗಿದ್ದಾರೆ. ದಸರಾ ವಸ್ತು ಪ್ರದರ್ಶನದಲ್ಲಿ ಸತತ ಹತ್ತು ವರ್ಷ ಬಹುಮಾನ ಪಡೆದು, ಚಾಂಪಿಯನ್ ಆಫ್‌ ಚಾಂಪಿಯನ್ಸ್ ಪ್ರಶಸ್ತಿ ಪಡೆದಿದ್ದಾರೆ.

ಮೈಸೂರಿನಲ್ಲಿ `ಕಾಮಿಲನ್‌’ ಎಂಬ ಸಂಸ್ಥೆಯನ್ನು ಸ್ಥಾಪಿಸಿ, ಅದರ ಅಧ್ಯಕ್ಷರಾಗಿ ಹದಿನೈದು ವರ್ಷಗಳಿಂದ ನಡೆಸುತ್ತಿದ್ದಾರೆ. ಈ ಸಂಸ್ಥೆ ಮುಖೇನ ಚಿತ್ರಕಲೆ, ರಂಗೋಲಿ ಮುಂತಾದ ಪ್ರಾಚೀನ ಕಲೆಗಳನ್ನು ಹಲವಾರು ಮಹಿಳೆಯರಿಗೆ ಪರಿಚಯಿಸಿ ಜೀವಂತಗೊಳಿಸಿದ್ದಾರೆ.

ರೇಡಿಯೋ, ಟಿ.ವಿ. ಮೂಲಕ ಹಲವಾರು ಕಾರ್ಯಕ್ರಮಗಳಿಂದ ಕನ್ನಡ ನಾಡಿನ ಕಲಾ ರಸಿಕರಿಗೆ ಪರಿಚಿತರಾಗಿದ್ದಾರೆ.

ಮೈಸೂರು ದಸರಾ ಸಮಯದಲ್ಲಿ ಕರ್ಜನ್‌ ಪಾರ್ಕ್‌ನಲ್ಲಿ ನಡೆಯುವ ಫಲಪುಷ್ಪ ಪ್ರದರ್ಶನದಲ್ಲಿ ಬಹಳಷ್ಟು ಬಹುಮಾನಗಳನ್ನು ಗಳಿಸಿದ್ದಾರೆ ಮತ್ತು ತೀರ್ಪುಗಾರರಾಗಿದ್ದಾರೆ. ಮಂಡ್ಯದ ತೋಟಗಾರಿಕೆ ಇಲಾಖೆಯಲ್ಲೂ ಸೇವೆ ಸಲ್ಲಿಸಿದ್ದಾರೆ.

ಅಪರೂಪದ ಕಲಾ ಸಾಧನೆ

ಮೂರು ಬಾರಿ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ನೀಡಿದ್ದಾರೆ. ಅಲ್ಲದೆ, ಅವರ ಶಾಲಾ ಮಕ್ಕಳ ಕಲಾಕೃತಿಗಳನ್ನು ಒಟ್ಟುಗೂಡಿಸಿ `ಚಿತ್ರನಂದನ’ ಎನ್ನುವ ಪುಸ್ತಕವನ್ನು ಪ್ರಕಟಿಸಿದ್ದಾರೆ. ಹಲವು ವರ್ಷಗಳಿಂದ ಶಾಲಾ ವಾರ್ಷಿಕೋತ್ಸವ ನಡೆಸಿ, ಅದರಲ್ಲಿ ಬಹಳಷ್ಟು ಸ್ಪರ್ಧೆ ಏರ್ಪಡಿಸಿ. ಬಹುಮಾನ ಕೊಟ್ಟು ಮಕ್ಕಳನ್ನು ಪ್ರೋತ್ಸಾಹಿಸಿದ್ದಾರೆ. ಹಿರಿಯ ಕಲೆಗಾರರನ್ನು ಗುರುತಿಸಿ ಅವರನ್ನು ಆಧರಿಸಿ ಸನ್ಮಾನಿಸಿದ್ದಾರೆ. ಹಲವರಿಗೆ ಆರ್ಥಿಕವಾಗಿ ನೆರವಾಗಿದ್ದಾರೆ. ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ ನಡೆಸುತ್ತಾರೆ. ಮಕ್ಕಳಿಗಾಗಿ ಹಲವಾರು ಪ್ರಾತ್ಯಕ್ಷಿಕೆಗಳನ್ನು ಆಗಾಗ ಏರ್ಪಡಿಸುತ್ತಾರೆ. ಹಲವು ವರ್ಷಗಳಿಂದ ಕಿವುಡು ಮಕ್ಕಳಿಗಾಗಿ ಉಚಿತ ತರಬೇತಿ ನೀಡುತ್ತಿದ್ದಾರೆ. ಬಡಮಕ್ಕಳಿಗೆ ತರಬೇತಿಯೊಂದಿಗೆ ಸಲಕರಣೆಗಳನ್ನೂ ಕೊಟ್ಟು ಅವರು ಮುಂದುವರಿಯಲು ನೆರವಾಗಿದ್ದಾರೆ.

`ಅಪರೂಪ ದಿಬ್ಬಣ’ ಮಳಿಗೆ ಸ್ಥಾಪಿಸಿ ಅಲ್ಲಿ ಮದುವೆ, ಹಬ್ಬಕ್ಕೆ ಬೇಕಾದ ಎಲ್ಲಾ ಕಲಾಕೃತಿಗಳನ್ನು ತಯಾರಿಸುತ್ತಾರೆ. (ಕಾಯಿ ಅಲಂಕಾರ, ಕೊಬ್ಬರಿ ಕೆತ್ತನೆ, ಸಕ್ಕರೆ ಸಾಮಾನು, ಮೇಣದ ಸಾಮಾನು, ಗೌರಿ ಅಲಂಕಾರ, ಹಾರಗಳು ಇತ್ಯಾದಿ) ಇದಕ್ಕಾಗಿ 20 ಜನರನ್ನು ತೊಡಗಿಸಿಕೊಂಡು, ಅವರಿಗೆಲ್ಲಾ ಉದ್ಯೋಗ ನೀಡಿದ್ದಾರೆ. ಮದುವೆಗೆ ಬೇಕಾದ ಎಲ್ಲಾ ಸಾಮಾನುಗಳು ಒಂದೇ ಸೂರಿನಡಿ ಸಿಗುವುದರಿಂದ ಜನರು ಖುಷಿಯಿಂದ ಸ್ಪಂದಿಸುತ್ತಿದ್ದಾರೆ. ಕಲಾಶ್ರೀ ಮಣಿ ಶೇಖರ್‌ ತಮ್ಮ ಸೇವಾ ಕೈಂಕರ್ಯಗಳಿಂದ ಕನ್ನಡನಾಡಿಗೆ ಇನ್ನೂ ಹೆಚ್ಚಿನ ಕೀರ್ತಿ ತರಲಿ ಎಂದು `ಗೃಹಶೋಭಾ’ ಹಾರೈಸುತ್ತಾಳೆ.

– ಬಿ. ಬಸವರಾಜು

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ