– ರಾಘವೇಂದ್ರ ಅಡಿಗ ಎಚ್ಚೆನ್.
ಒಂದು ಹೊಸ ಸಿನಿಮಾ ರೂಪುಗೊಳ್ಳುತ್ತಿದೆ ಎಂಬ ಸುಳಿವು ಸಿಕ್ಕಾಕ್ಷಣವೇ ಅದರಲ್ಲಿ ಅಡಕವಾಗಿರಬಹುದಾದ ಕಥೆಯ ಬಗ್ಗೆ ಕುತೂಹಲವೊಂದು ಹರಳುಗಟ್ಟಲಾರಂಭಿಸುತ್ತೆ. ಸಾಮಾನ್ಯವಾಗಿ, ಇಂಥಾ ಕಲ್ಪನೆಗಳೆಲ್ಲವೂ ಮಾಮೂಲು ಶೈಲಿಯ ಬಿಂದುವಿನಲ್ಲಿಯೇ ಗಿರಕಿ ಹೊಡೆಯುತ್ತವೆ. ಆದರೆ, ನಮ್ಮೆಲ್ಲರ ಪಾಲಿಗೆ ಚಿರಪರಿಚಿತವಾಗಿರುವ, ದೈವೀಕ ಗಂಧ ಮೆತ್ತಿಕೊಂಡಿರುವ ಕಮಲದ ಹೂವಿನ ಬಗ್ಗೆಯೇ ಒಂದು ಸಿನಿಮಾ ರೂಪುಗೊಳ್ಳುತ್ತದೆ ಎಂದರೆ ಸಹಜವಾಗಿಯೇ ಅಚ್ಚರಿ ಮೂಡಿಕೊಳ್ಳುತ್ತೆ. ಅಂಥಾದ್ದೊಂದು ಕುತೂಹಲ ತಾನೇತಾನಾಗಿ ಮೂಡಿಕೊಂಡಿರುವುದು ‘ಪದ್ಮಗಂಧಿ’ ಎಂಬ ಸಿನಿಮಾದ ಬಗ್ಗೆ.

ಕನ್ನಡ, ಸಂಸ್ಕೃತ ಮತ್ತು ಹಿಂದಿ ಭಾಷೆಗಳಲ್ಲಿ ರೂಪುಗೊಳ್ಳುತ್ತಿರುವ ಈ ಚಿತ್ರವನ್ನು ಸುಚೇಂದ್ರ ಪ್ರಸಾದ್ ನಿರ್ದೇಶನ ಮಾಡುತ್ತಿದ್ದಾರೆ. ಮಾಜಿ ಎಂಎಲ್ಸಿ, ಪ್ರಸಿದ್ಧ ಅಂಕಣಕಾರ್ತಿ, ಸಂಸ್ಕೃತದ ಭೂಮಿಕೆಯಲ್ಲಿ ನಾನಾ ದಿಕ್ಕಿನ ಅಧ್ಯಯನ, ಪಾಂಡಿತ್ಯದ ಮೂಲಕ ಹೆಸರಾಗಿರುವ ಎಸ್.ಆರ್ ಲೀಲಾ ಈ ಚಿತ್ರಕ್ಕೆ ಕಥೆ ಸಿದ್ಧಪಡಿಸುವುದರ ಜೊತೆಗೆ ನಿರ್ಮಾಪಕಿಯಾಗಿಯೂ

ಜೊತೆಯಾಗಿದ್ದಾರೆ. ನಮ್ಮಲ್ಲಿ ದೈವೀಕ ಅನುಭೂತಿ ಸ್ಫುರಿಸುವ ಕಮಲ ಪುಷ್ಪದ ಬಗ್ಗೆ ಆಳವಾಗಿ ಅರಿವಿನ ಪರಿಧಿಯನ್ನು ವಿಸ್ತರಿಸಿಕೊಳ್ಳುತ್ತಾ ಸಾಗಿದ್ದ ಲೀಲಾ ಅವರ ಪಾಲಿಗೆ, ಅದರ ಅಗಾಧತೆ ಮೊಗೆದರೂ ಮುಗಿಯದ ಅಕ್ಷಯ ಪಾತ್ರೆಯಂತೆ ಭಾಸವಾಗಲಾರಂಭಿಸಿತ್ತು. ಕಡೆಗೂ ಕಮಲ ಪುಷ್ಪದ ಬಗ್ಗೆ ನಿರಂತರವಾಗಿ ಆರೇಳು ವರ್ಷ ಅಧ್ಯಯನ ನಡೆಸಿದ್ದ ಅವರು ಕಡೆಗೂ ಅಪರೂಪದ ಕಥೆಯೊಂದನ್ನು ಸಿದ್ಧಪಡಿಸಿ, ನಂತರ ಸುಚೇಂದ್ರ ಪ್ರಸಾದ್ ನಿರ್ದೇಶನದ ಜವಾಬ್ದಾರಿ ಹೊತ್ತುಕೊಂಡಿದ್ದರು
ಡಿಸೆಂಬರ್ ತಿಂಗಳಲ್ಲಿ ತೆರೆಗೆ ಬರುತ್ತಿರುವ ಈ ಚಿತ್ರದ ಕುರಿತು ಮಾಧ್ಯಮದವರೊಂದಿಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

‘ಸಿನಿಮಾವು ಆದಿಯಿಂದ ಅಂತ್ಯದವರೆಗೂ ಪದ್ಮಗಂಧಿಯ ಪರಿಮಳ ಪಸರಿಸುತ್ತದೆ. ದೈವೀಕ ಗಂಧ ಮೆತ್ತಿಕೊಂಡಿರುವ ಕಮಲದ ಹೂವಿನ ಬಗ್ಗೆಯೇ ಕಥೆ ಇದೆ. ಕಮಲ ಕುರಿತ ವಿಚಾರಗಳನ್ನು ಸಂಶೋಧಿಸಿ ಸನ್ನಿವೇಶಗಳಲ್ಲಿ ಕಟ್ಟಿಕೊಡಲಾಗಿದೆ. ಕಮಲ ಯಾಕೆ ರಾಷ್ಟ್ರೀಯ ಪುಷ್ಪವಾಯ್ತು, ಒಂದು ಪಕ್ಷಕ್ಕೆ ಲಾಂಛನವಾಯ್ತು, ಬ್ರಹ್ಮ ಯಾಕೆ ಇದರ ಮೇಲೆ ಕುಳಿತುಕೊಳ್ಳುತ್ತಾನೆ, ಆಯುರ್ವೇದಕ್ಕೆ ಇದು ಯಾಕೆ ಬೇಕು? ಎಂದು ನೋಡುತ್ತ ಹೋದಾಗ ಕಮಲಕ್ಕೆ 36 ಸಾವಿರಕ್ಕೂ ಹೆಚ್ಚು ಪರ್ಯಾಯ ನಾಮಗಳಿವೆ ಎನ್ನುವುದನ್ನು ಕೇಳಿ ಅಚ್ಚರಿಯಾಯ್ತು. ಪದ್ಮ ಸಂಬಂಧಿ ಎಂಬ ಅರ್ಥದಲ್ಲಿ ಈ ಸಿನಿಮಾ ಮಾಡಲಾಗಿದೆ’ ಸುಚೇಂದ್ರ ಪ್ರಸಾದ್ ಹೇಳಿದ್ದಾರೆ.
ವಿದ್ಯಾರ್ಥಿಯಾಗಿ ಮಹಾಪದ್ಮ, ಗುರುಮಾತೆ ಪಾತ್ರದಲ್ಲಿ ಉಡುಪಿಯ ಪರಿಪೂರ್ಣ ಚಂದ್ರಶೇಖರ್ ಇವರೊಂದಿಗೆ ಶತಾವಧಾನಿ ಆರ್.ಗಣೇಶ್, ಗೌರಿ ಸುಬ್ರಹ್ಮಣ್ಯ, ಪ್ರೇಮಾ, ಹೇಮಂತ್ಕುಮಾರ್, ಆಚಾರ್ಯ ಮೃತ್ಯುಂಜಯ ಶಾಸ್ತ್ರಿ, ಜಿ.ಎಲ್.ಭಟ್ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ. ಡಾ.ದೀಪಕ್ ಪರಮಶಿವನ್ ಸಂಗೀತ, ಮನು ಯಪ್ಲಾರ್-ನಾಗರಾಜ್ ಅದ್ವಾನಿ-ಗಿರಿಧರ್ ದಿವಾನ್ ಛಾಯಾಚಿತ್ರಗ್ರಹಣ, ಎನ್.ನಾಗೇಶ್ ನಾರಾಯಣಪ್ಪ ಸಂಕಲನವಿದೆ.





