ಉತ್ತರ ಕನ್ನಡ ಜಿಲ್ಲೆಯ ಅರೆಬೈಲ್ ಘಟ್ಟದ ಬಳಗಾರ್ ಸಮೀಪ ಗುರುವಾರ ಮುಂಜಾನೆ ತೂಫಾನ್ ಕ್ರೂಸರ್ ಹಾಗೂ ಲಾರಿ ಮುಖಾಮುಖಿ ಡಿಕ್ಕಿಯಾಗಿದ್ದು, 6 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದರೆ, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಕ್ರೂಸರ್​ ಚಾಲಕ ಧಾರವಾಡದ ಕುರುಬಗಟ್ಟಿಯ ಸಂಜೀವ (33) ಅಭಿಷೇಕ್ ಈಶ್ವರ (28), ಅಕ್ಷಯ (26), ಅಭಿಷೇಕ್ (27), ಬಸಪ್ಪ ದೇವಪ್ಪ ಕನಕನವರ (38) ಮತ್ತು ಸಂಜಯ್ ಅಂಗಡಿ ಎನ್ನಲಾಗಿದೆ. ಐವರು ಅಪಘಾತದ ತೀವ್ರತೆಗೆ ಸ್ಥಳದಲ್ಲೇ ಮೃತಪಟ್ಟರೆ, ಮತ್ತೊಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ. ಇನ್ನು, ಅಪಘಾತದಲ್ಲಿ ಶಿವರಾಜ್ ದುರ್ಗಪ್ಪ ಮಡಿವಾಳ್ (22 ವರ್ಷ), ಮಂಜುನಾಥ್ ಅಶೋಕ್ ಚುಲಕಿ (32 ವರ್ಷ), ಸಚಿನ್, ಚೆನ್ನಬಸಯ್ಯ ಬಸಲಿಂಗಯ್ಯ ಸಂಪಗಾವ (28 ವರ್ಷ) ಎಂಬ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಧಾರವಾಡ ಮೂಲದ 9 ಮಂದಿ ಕ್ರೂಸರ್​ ವಾಹನದಲ್ಲಿ ಅಂಕೋಲದ ಕಡೆಗೆ ಪ್ರಯಾಣಿಸುತ್ತಿದ್ದಾಗ ಎದುರಿನಿಂದ ಬಂದ ಲಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕ್ರೂಸರ್​ ಸಂಪೂರ್ಣ ನಜ್ಜುಗುಜ್ಜಾಗಿದೆ.

ಕ್ರೂಸರ್ ವಾಹನದಲ್ಲಿದ್ದವರೆಲ್ಲರೂ ಧಾರವಾಡ ಮೂಲದವರಾಗಿದ್ದು, ಬೆಂಗಳೂರು ಮೂಲದ ಪ್ರಸಿದ್ಧ ಆಹಾರ ವಿತರಣಾ ಸಂಸ್ಥೆಯೊಂದರಲ್ಲಿ ಪಾರ್ಟ್ ಟೈಮ್ ಡೆಲಿವರಿ ಬಾಯ್ಸ್ ಆಗಿ ಕೆಲಸ ಮಾಡುತ್ತಿದ್ದರು. ಇವರೆಲ್ಲಾ ಬುಧವಾರ ರಾತ್ರಿ (ಜು.8) ಪ್ರವಾಸಕ್ಕೆಂದು ಜೊತೆಯಾಗಿ ಧರ್ಮಸ್ಥಳ ಹಾಗೂ ಚಿಕ್ಕಮಗಳೂರು ಕಡೆಗೆ ಹೊರಟ್ಟಿದ್ದರು. ಆದರೆ, ಮುಂಜಾನೆ ಯಲ್ಲಾಪುರದ ಅರಬೈಲ್ ಘಾಟ್ ತಲುಪುತ್ತಿದ್ದಂತೆ ಎದುರಿನಿಂದ ಬಂದ ಲಾರಿ ಹಾಗೂ ಇವರ ಕ್ರೂಸರ್ ನಡುವೆ ಡಿಕ್ಕಿ ಹೊಡೆದಿದ್ದು,  ದುರಂತಕ್ಕೆ ಒಳಗಾಗಿದ್ದಾರೆ.

ಯಲ್ಲಾಪುರ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಅಪಘಾತದಲ್ಲಿ ಮೃತಪಟ್ಟ 6 ಜನರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಅಪಘಾತದ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ