ನಂದಿನಿ ಬಮುಲ್‌ ಉತ್ಪನ್ನಗಳ ರಾಯಭಾರಿಯಾಗಿ ಹಿರಿಯ ನಟಿ ಸುಧಾರಾಣಿ ನೇಮಕವಾಗಿದ್ದು,ಈ ಬಗ್ಗೆ ಬೆಂಗಳೂರು ಸಹಕಾರ ಹಾಲು ಒಕ್ಕೂಟದ ಅಧ್ಯಕ್ಷ ಡಿ.ಕೆ ಸುರೇಶ್‌ ಮಾಹಿತಿ ಹಂಚಿಕೊಂಡಿದ್ದಾರೆ.

ಡಿ.ಕೆ ಸುರೇಶ್‌ ಅವರು ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಮಾಹಿತಿ ನೀಡಿದ್ದು, ನಮ್ಮ ಬಮುಲ್‌ ಕುಟುಂಬಕ್ಕೆ ಹಿರಿಯ ನಟಿ ಸುಧಾರಾಣಿ ಅವರಿಗೆ ಆತ್ಮೀಯ ಸ್ವಾಗತ ಎಂದು ಹೇಳಿದ್ದಾರೆ.

ಕನ್ನಡ ಚಿತ್ರರಂಗದ ಹಿರಿಯ ನಟಿ ಸುಧಾರಾಣಿ ಅವರು ಸದಾಶಿವನಗರದ ನಿವಾಸದಲ್ಲಿ ಡಿ.ಕೆ.ಸುರೇಶ್‌ ಅವರನ್ನು ಔಪಚಾರಿಕವಾಗಿ ಭೇಟಿಯಾಗಿ ಮಾತುಕತೆ ನಡೆಸಿದರು.

ಈ ಸಂದರ್ಭ ಮಾತನಾಡಿದ ಡಿ.ಕೆ.ಸುರೇಶ್‌, ರೈತರ ಏಳಿಗೆಗೆ ನಿರ್ಮಿತವಾದ ಮತ್ತು ಲಕ್ಷಾಂತರ ಗ್ರಾಹಕರ ನಂಬಿಕೆಗೆ ಪಾತ್ರವಾದ ಬಮುಲ್ ನಂದಿನಿ ಬ್ರಾಂಡ್ ಅಂಬಾಸಿಡರ್ ಆಗಿ ಶ್ರೀಮತಿ ಸುಧಾ ರಾಣಿ ಅವರನ್ನು ಸ್ವಾಗತಿಸುತ್ತಿರುವುದು ಸಂತೋಷದ ವಿಷಯ. ಡಾ. ರಾಜ್‌ಕುಮಾರ್, ಶಿವರಾಜ್‌ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್ ಅವರು ಮುಂದುವರಿಸಿದ ಪರಂಪರೆಯ ಹಾದಿಯಲ್ಲಿ, ಈ ಸಹಕಾರವು ಕರ್ನಾಟಕದ ಜನರೊಂದಿಗೆ ನಂದಿನಿಯ ಭಾವನಾತ್ಮಕ ಬಾಂಧವ್ಯ ಹಾಗೂ ರೈತರ ಮೇಲಿನ ನಮ್ಮ ಬದ್ಧತೆಯನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ ಎಂದಿದ್ದಾರೆ.

ದೇಸಿ ಹಸುಗಳ ಹಾಲಿನಿಂದ ತಯಾರಿಸಲಾದ ದೇಸಿ ಹಸುವಿನ ತುಪ್ಪ, ದೇಸಿ ಹಸುವಿನ ಹಾಲು ಸೇರಿದಂತೆ ಹೊಸ ಉತ್ಪನ್ನಗಳ ಮೂಲಕ ನಂದಿನಿ ಮತ್ತಷ್ಟು ಬಲಗೊಳ್ಳಲಿದೆ. ದೇಸಿ ಹಸುಗಳ ಸಂರಕ್ಷಣೆ, ರೈತರಿಗೆ ನ್ಯಾಯಸಮ್ಮತ ಬೆಲೆ ಮತ್ತು ಗ್ರಾಹಕರಿಗೆ ಶುದ್ಧ, ಗುಣಮಟ್ಟದ ಉತ್ಪನ್ನಗಳು – ಈ ದಿಕ್ಕಿನಲ್ಲಿ ಒಂದು ಹೊಸ ಕ್ರಾಂತಿ ಆರಂಭವಾಗಿದೆ ಎಂದಿದ್ದಾರೆ.

ಬಮುಲ್ ನಂದಿನಿಯ ಮುಂದಿನ ಹಂತದ ಬೆಳವಣಿಗೆಗಾಗಿ ಹೊಸ ಉತ್ಪನ್ನಗಳು, ಮತ್ತು ಮಾರ್ಕೆಟಿಂಗ್‌ನ್ನು ಮುನ್ನಡೆಸುತ್ತಿರುವ ಸಂಪೂರ್ಣ ಬಮುಲ್ ತಂಡದ ಶ್ರಮ ಶ್ಲಾಘನೀಯ. ನಂಬಿಕೆ, ಪರಂಪರೆ ಮತ್ತು ರೈತ ಕಲ್ಯಾಣದ ಮೇಲೆ ನಿರ್ಮಿತವಾದ ಈ ಸಹಕಾರ ಸಂಸ್ಥೆಯನ್ನು ಇನ್ನಷ್ಟು ಬಲಪಡಿಸೋಣ ಎಂದು ಹೇಳಿದ್ದಾರೆ.

ಗೌರವದ ವಿಷಯ: ನಂದಿನಿ ಬಮುಲ್‌ ಉತ್ಪನ್ನಗಳ ರಾಯಭಾರಿಯಾರಿಯಾಗಿ ನೇಮಕ ಮಾಡಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ನಟಿ ಸುಧಾರಾಣಿ, ಬೆಂಗಳೂರು ಸಹಕಾರ ಹಾಲು ಒಕ್ಕೂಟಕ್ಕೆ ಧನ್ಯವಾದಗಳು. ತಲೆಮಾರುಗಳಿಂದ ಪ್ರತಿಯೊಬ್ಬ ಕನ್ನಡಿಗನ ನಂಬಿಕೆಯ ಪ್ರತೀಕ ನಂದಿನಿ. ರೈತರ ಸಹಕಾರಿ ಸಂಸ್ಥೆಯಾದ ಬಮುಲ್ ನಂದಿನಿ ಜತೆ ಒಡಗೂಡುವ ಅವಕಾಶ ನನಗೆ ಅತ್ಯಂತ ಗೌರವದ ವಿಷಯ ಎಂದಿದ್ದಾರೆ.

ಡಾ. ರಾಜ್‌ಕುಮಾರ್, ಶಿವರಾಜ್‌ಕುಮಾರ್ ಹಾಗೂ ಪುನೀತ್ ರಾಜ್‌ಕುಮಾರ್ ಅವರಂತಹ ಮೇರು ವ್ಯಕ್ತಿಗಳ ಹಾದಿಯನ್ನು ಅನುಸರಿಸಿ ಬ್ರ್ಯಾಂಡ್ ಅಂಬಾಸಿಡರ್ ಆಗಿರುವುದು ಕೇವಲ ಅನುಕರಣೆಯಲ್ಲ ಧನ್ಯತೆ ಮತ್ತು ಹೆಮ್ಮೆಯ ಜವಾಬ್ದಾರಿ ಎಂದಿದ್ದಾರೆ.

ಡಿ. ಕೆ. ಸುರೇಶ್ ಅವರೊಂದಿಗೆ ಹಾಗೂ ಬಮುಲ್‌ನ ಹೊಸ ಉತ್ಪನ್ನಗಳು, ತಂತ್ರಯೋಜನೆ ಮತ್ತು ಮಾರುಕಟ್ಟೆ ಕಾರ್ಯತಂತ್ರವನ್ನು ಮುನ್ನಡೆಸುತ್ತಿರುವ ಮನೋಹರ್‌ ಐಯ್ಯರ್ ಅವರೊಂದಿಗೆ ಸಂವಾದ ನಡೆಯಿತು. ಹೊಸ ಉತ್ಪನ್ನಗಳ ಬಿಡುಗಡೆಯ ಹಿಂದೆ ಇರುವ ದೃಷ್ಟಿಕೋನ ನಿಜಕ್ಕೂ ಪ್ರೇರಣಾದಾಯಕವಾಗಿತ್ತು ಎಂದು ಹೇಳಿದ್ದಾರೆ.

ನಮ್ಮ ದೇಸಿ ಹಸುಗಳನ್ನು ಸಂರಕ್ಷಿಸುವುದು, ರೈತರಿಗೆ ನ್ಯಾಯಸಮ್ಮತ ಬೆಲೆ ಖಚಿತಪಡಿಸುವುದು ಹಾಗೂ ಗ್ರಾಹಕರಿಗೆ ಗುಣಮಟ್ಟದ, ವಿಶ್ವಾಸಾರ್ಹ ಉತ್ಪನ್ನಗಳನ್ನು ತಲುಪಿಸುವುದೇ ಇದರ ಉದ್ದೇಶ. ಈ ಹೊಸ ಅಧ್ಯಾಯದಲ್ಲಿ ದೇಸಿ ಹಸುಗಳಿಂದ ತಯಾರಿಸಿದ A2 ತುಪ್ಪ, A2 ಹಾಲು ಸೇರಿದಂತೆ ಹಲವು ಉತ್ಪನ್ನಗಳು ಸೇರಿವೆ.

ಸಂಪ್ರದಾಯ, ಶುದ್ಧತೆ ಮತ್ತು ರೈತರ ಕಲ್ಯಾಣದ ಮೌಲ್ಯಗಳು ಅಡಕವಾಗಿರುವ, ರೈತರನ್ನು ಮನ್ನೆಲೆಗೆ ತರುವ, ನಮ್ಮ ಬೇರುಗಳನ್ನು ಗೌರವಿಸುವ ಮತ್ತು ಕರ್ನಾಟಕದ ಪರಂಪರೆಯನ್ನು ಮುಂದಿನ ಪೀಳಿಗೆಗಳಿಗೆ ಸಾಗಿಸುವ ಈ ಚಳವಳಿಗೆ ಬೆಂಬಲ ನೀಡಲು ನನಗೆ ಅಪಾರ ಹೆಮ್ಮೆಯಾಗುತ್ತಿದೆ ಎಂದು ಸುಧಾರಾಣಿ ತಿಳಿಸಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ