ಬೆಂಗಳೂರಿನ ನಮ್ಮ ಮೆಟ್ರೊ ಜಾಲದ ನಾಗಸಂದ್ರ ಮೆಟ್ರೊ ನಿಲ್ದಾಣದಲ್ಲಿ ಬೆಂಕಿ ಭಾನುವಾರ ಮಧ್ಯಾಹ್ನ ಕಾಣಿಸಿಕೊಂಡಿದ್ದು, ನಿಲ್ದಾಣದ ಆವರಣದಿಂದ ಹೊಗೆ ಮತ್ತು ಜ್ವಾಲೆಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪ್ರಯಾಣಿಕರಲ್ಲಿ ಆತಂಕ ಉಂಟಾಯಿತು.
ಗ್ರೀನ್ ಲೈನ್ನ ಮಾದಾವರ ಮೆಟ್ರೊ ನಿಲ್ದಾಣ–ಸಿಲ್ಕ್ ಇನ್ಸ್ಯುಟ್ಯೂಟ್ ಮೆಟ್ರೊ ನಿಲ್ದಾಣ ಮಾರ್ಗದಲ್ಲಿರುವ ನಾಗಸಂದ್ರ ಮೆಟ್ರೋ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಬೆಂಗಳೂರು ಮೆಟ್ರೊ ರೈಲು ನಿಗಮ (BMRCL) ನೀಡಿದ ಮಾಹಿತಿಯ ಪ್ರಕಾರ, ಮಧ್ಯಾಹ್ನ ಸುಮಾರು 1.30 ಗಂಟೆಗೆ ನಿಲ್ದಾಣದ ತುರ್ತು ನಿರ್ಗಮನ ಪ್ರದೇಶದ ಸಮೀಪದ ಒಂದು ಸೂಚನಾ ಫಲಕಕ್ಕೆ ಬೆಂಕಿ ತಗುಲಿತ್ತು.
ಘಟನಾ ಸ್ಥಳದ ದೃಶ್ಯಗಳಲ್ಲಿ ನಿಲ್ದಾಣದ ಒಂದು ಭಾಗದಿಂದ ದಟ್ಟ ಹೊಗೆ ಮತ್ತು ಜ್ವಾಲೆಗಳು ಎದ್ದಿರುವುದು ಕಂಡುಬಂದಿದ್ದು, ಸುತ್ತಮುತ್ತಲಿನ ನಿವಾಸಿಗಳು ಹಾಗೂ ಪ್ರಯಾಣಿಕರ ಗಮನ ಸೆಳೆಯಿತು. ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಈ ವಿಷಯ ಹರಡಿದ್ದರಿಂದ ಸುರಕ್ಷತೆ ಕುರಿತು ಕೆಲ ಕಾಲ ಆತಂಕ ವ್ಯಕ್ತವಾಗಿತ್ತು. ಬಿಎಂಆರ್ಸಿಎಲ್ನ ಕಾರ್ಯಾಚರಣೆ ಮತ್ತು ಅಗ್ನಿಶಾಮಕ ಪ್ರತಿಕ್ರಿಯಾ ತಂಡಗಳು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ತ್ವರಿತವಾಗಿ ನಂದಿಸಲಾಯಿತು ಹಾಗೂ ಪರಿಸ್ಥಿತಿ ಸಂಪೂರ್ಣ ನಿಯಂತ್ರಣಕ್ಕೆ ತರಲಾಯಿತು ಎಂದು ಸಂಸ್ಥೆ ತಿಳಿಸಿದೆ.
ಅಧಿಕಾರಿಗಳ ಪ್ರಕಾರ, ಇದು ಸಣ್ಣ ಪ್ರಮಾಣದ ಬೆಂಕಿ ಅವಘಡವಾಗಿದ್ದು, ಹೆಚ್ಚಿನ ಹಾನಿಯಾಗುವ ಮೊದಲು ನಿಯಂತ್ರಣಕ್ಕೆ ತರಲಾಗಿದೆ. ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ತಿಳಿಸಿದ್ದಾರೆ.
ಬೆಂಕಿ ಕಾಣಿಸಿಕೊಂಡಿದ್ದರೂ ಮೆಟ್ರೋ ರೈಲು ಸಂಚಾರದಲ್ಲಿ ಯಾವುದೇ ವ್ಯತ್ಯಯ ಉಂಟಾಗಿಲ್ಲ. ಗ್ರೀನ್ ಲೈನ್ ಮಾರ್ಗದಲ್ಲಿ ರೈಲು ಸೇವೆಗಳು ಎಂದಿನಂತೆ ಮುಂದುವರಿದವು ಎಂದು ಬಿಎಂಆರ್ಸಿಎಲ್ ಸ್ಪಷ್ಟಪಡಿಸಿದೆ.
ಸಾರ್ವಜನಿಕರು ಆತಂಕ ಪಡಬಾರದು ಎಂದು ಮನವಿ ಮಾಡಿರುವ ಮೆಟ್ರೋ ನಿಗಮ, ಅಗತ್ಯವಿದ್ದಲ್ಲಿ ಮುಂದಿನ ಮಾಹಿತಿ ನೀಡಲಾಗುವುದು. ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ತುರ್ತು ನಿರ್ಗಮನ ಪ್ರದೇಶದ ಬಳಿಯಿದ್ದ ಸೂಚನಾ ಫಲಕಕ್ಕೆ ಬೆಂಕಿ ತಗುಲಲು ಕಾರಣವಾದ ಅಂಶಗಳ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.





