ಕ್ರೇಜಿಸ್ಟಾರ್ ರವಿಚಂದ್ರನ್ ನಟನೆಯ ‘ಶಾಂತಿ ಕ್ರಾಂತಿ’ ಸಿನಿಮಾ ಮರುಬಿಡುಗಡೆ ಮಾಡಬೇಕೆಂದು ಇತ್ತೀಚೆಗೆ ಸೋಶಿಯಲ್​ ಮೀಡಿಯಾದಲ್ಲಿ ಟ್ರೆಂಡ್‌ ಶುರುವಾಗಿತ್ತು.

ಇದೀಗ ಶಾಂತಿ ಕ್ರಾಂತಿ ಸಿನಿಮಾ ಮರುಬಿಡುಗಡೆ ಬಗ್ಗೆ ರವಿಚಂದ್ರನ್ ಸಹೋದರ ಬಾಲಾಜಿ ವೀರ ಸ್ವಾಮಿ ಸ್ಪಷ್ಟನೆ ನೀಡಿದ್ದು, ಈ ವಿಡಿಯೊವನ್ನು ನಟ ರಘುರಾಮ್ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಶಾಂತಿ ಕ್ರಾಂತಿ ಮರುಬಿಡುಗಡೆ ಆಗಬೇಕೆಂಬ ಟ್ರೆಂಡ್ ಶುರುವಾದ ತಕ್ಷಣವೇ ನಾನು ಮತ್ತು ಅಣ್ಣ ರವಿಚಂದ್ರನ್ ಈ ಬಗ್ಗೆ ಚರ್ಚಿಸಿದ್ದೇವೆ. ಶಾಂತಿ ಕ್ರಾಂತಿಯ ನೆಗೆಟಿವ್ (ರೀಲ್) ನಮ್ಮ ಬಳಿ ಇರುವುದು ಕರಗಿ ಹೋಗಿದೆ. ನೆಗೆಟಿವ್ ಇಲ್ಲದೆ ಸಿನಿಮಾವನ್ನು ಮರುಬಿಡುಗಡೆ ಮಾಡಲು ಸಾಧ್ಯವೇ ಇಲ್ಲ. ಶಾಂತಿ ಕ್ರಾಂತಿಯ ನೆಗೆಟಿವ್‌ಗಾಗಿ ಹುಡುಕಾಟ ನಡೆಸುತ್ತಿದ್ದೇವೆ. ಈಗಿನ ತಂತ್ರಜ್ಞಾನಕ್ಕೆ ಅಳವಡಿಸಲು ಅದರ ಮೇಲೆ ಕೆಲಸ ಮಾಡಬೇಕಾಗಿರುವುದರಿಂದ ಒಂದು ವರ್ಷದವರೆಗೆ ಸಮಯಾವಕಾಶ ಬೇಕು ಎಂದಿದ್ದಾರೆ.

ರವಿಚಂದ್ರನ್ ಕನಸಿನ ಕೂಸು ‘ಶಾಂತಿ ಕ್ರಾಂತಿ’ ಭಾರತೀಯ ಚಿತ್ರರಂಗದಲ್ಲೇ ದೊಡ್ಡ ಮಟ್ಟದಲ್ಲಿ ಗಮನ ಸೆಳೆದಿತ್ತು. 1991ರಲ್ಲಿ ಬಂದ ಈ ಚಿತ್ರದ ಮೂಲಕ ಭಾರತೀಯ ಚಿತ್ರರಂಗವೇ ಕನ್ನಡದತ್ತ ತಿರುಗಿ ನೋಡುವಂತಾಗಿತ್ತು. ಈ ಚಿತ್ರ ಅಂದು ಬಹುಕೋಟಿ ವೆಚ್ಚದಲ್ಲಿ, ಏಕಕಾಲಕ್ಕೆ 4 ಭಾಷೆಗಳಲ್ಲಿ ನಿರ್ಮಾಣಗೊಂಡಿತ್ತು.

ಈಶ್ವರಿ ಸಂಸ್ಥೆಯ ಸಂಸ್ಥಾಪಕರಾದ ವೀರಸ್ವಾಮಿ ನಿಧನದ ನಂತರ, ಅವರು ನಿರ್ಮಿಸಿದ ಪ್ರಸಿದ್ಧ ಚಿತ್ರಗಳ ಎಲ್ಲ ರೀತಿಯ ಹಕ್ಕುಗಳು ಅಧಿಕೃತವಾಗಿ ಅವರ ಪುತ್ರ ವಿ.ಬಾಲಾಜಿ ಅವರ ಹೆಸರಿನಲ್ಲೇ ಇವೆ.

ಶಾಂತಿ ಕ್ರಾಂತಿ ಸಿನಿಮಾದ ಮದರ್‌ ಪ್ರಿಂಟ್‌ ಮದರಾಸಿನ ಪ್ರಸಾದ್‌ ಲ್ಯಾಬ್‌ನಲ್ಲಿ ನಡೆದ ಬೆಂಕಿ ಅನಾಹುತದಲ್ಲಿ ಅಗ್ನಿಗೆ ಆಹುತಿಯಾಗಿದೆ. ಹೀಗಾಗಿ ಶಾಂತಿ ಕ್ರಾಂತಿ ಸಿನಿಮಾದ ಮೂಲ ಪ್ರಿಂಟ್‌ನ ತುಣುಕು ಕೂಡಾ ಈಗ ಲಭ್ಯವಿಲ್ಲ. ಸದ್ಯ ಟಿವಿ ರೈಟ್ಸ್‌ಗೆ ಕೊಟ್ಟಿರುವ ಹೆಚ್​ಡಿ ಗುಣಮಟ್ಟವಷ್ಟೇ ಉಳಿದಿದೆ. ಇದನ್ನು ತೆಗೆದುಕೊಂಡು, 4K, 8K ಕ್ವಾಲಿಟಿಯಲ್ಲಿ ರಿಲೀಸ್‌ ಮಾಡೋದು ದೊಡ್ಡ ಸವಾಲಾಗಿದೆ. ಸದ್ಯಕ್ಕಂತೂ ರೀ-ರಿಲೀಸ್​ ಮಾಡಲಾಗುವುದಿಲ್ಲ. ಸೋರ್ಸ್​​ ಹುಡುಕಾಟದಲ್ಲಿದ್ದೇವೆ. ಸಿಗುತ್ತಿದ್ದಂತೆ ಮರು ಬಿಡುಗಡೆ ಮಾಡುತ್ತೇವೆ ಎಂಬುದನ್ನು ನಿಮಗೆ ತಿಳಿಸುತ್ತೇವೆ ಎಂದು ಬಾಲಾಜಿ ತಿಳಿಸಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ