ಕನ್ನಡ ಚಿತ್ರರಂಗದಲ್ಲಿ ಒಂದೊಮ್ಮೆ “ಒಳ್ಳೆಯ ಚಿತ್ರ ಮಾಡಲು ಹೊಸ ಕಥೆಗಳೇ ಇಲ್ಲ” ಎಂಬ ಮಾತು ಕೇಳಿಬರುತ್ತಿತ್ತು. ಆದರೆ ಅದೇ ಸಮಯದಲ್ಲಿ ಒಬ್ಬ ಲೇಖಕಿಯ ಕಾದಂಬರಿಗಳೇ ಒಂದರ ಹಿಂದೆ ಒಂದರಂತೆ ಜನಪ್ರಿಯ ಸಿನಿಮಾಗಳಾಗಿ ಬೆಳ್ಳಿತೆರೆಗೆ ಬರುತ್ತಿದ್ದವು. ಕನ್ನಡದ ಜೊತೆಗೆ ಅವರ ಒಂದು ಕಾದಂಬರಿ ಮಲಯಾಳಂ ಚಿತ್ರವಾಗಿಯೂ ರೂಪುಗೊಂಡಿತ್ತು. ಬದುಕಿದ್ದು ಕೇವಲ 35 ವರ್ಷಗಳಷ್ಟೇ; ಆದರೆ ಆ ಅಲ್ಪಾವಧಿಯಲ್ಲೇ ಅವರು ಬರೆದ ಸಾಹಿತ್ಯದ ಪ್ರಮಾಣ ಮತ್ತು ಪ್ರಭಾವ ಅಪಾರ. ಇಂದಿಗೂ ಅವರ ಕಾದಂಬರಿಗಳು ಮರುಮುದ್ರಣಗೊಳ್ಳುತ್ತಿವೆ, ಹೊಸ ತಲೆಮಾರಿನ ಓದುಗರನ್ನು ಸೆಳೆಯುತ್ತಿವೆ. ನಿಧನರಾಗಿ ಸುಮಾರು 60+ ವರ್ಷಗಳು ಕಳೆದರೂ ಕನ್ನಡಿಗರ ಮನಸ್ಸಿನಲ್ಲಿ ಅಚ್ಚಳಿಯದ ಹೆಸರಾಗಿ ಉಳಿದಿರುವ ಆ ಪ್ರತಿಭಾವಂತ ಲೇಖಕಿ ಯಾರು ಗೊತ್ತೇ?
ಅನುಸೂಯ ಶಂಕರ್!
ಆದರೆ ಈ ಹೆಸರು ಕೇಳಿದಾಗ ಬಹುತೇಕರಿಗೆ ತಕ್ಷಣ ನೆನಪಾಗದೇ ಇರಬಹುದು. ಅದೇ “ತ್ರಿವೇಣಿ” ಎಂದಾಕ್ಷಣ ಕನ್ನಡ ಸಾಹಿತ್ಯಾಸಕ್ತರ ಮನಸ್ಸಿನಲ್ಲಿ ಹಲವು ಕಾದಂಬರಿಗಳ ಪಾತ್ರಗಳು, ಭಾವನೆಗಳು ಮತ್ತು ಕಥೆಗಳು ಕಣ್ಣ ಮುಂದೆ ಬರುತ್ತವೆ.
ಸಾಹಿತ್ಯದ ವಾತಾವರಣದಲ್ಲೇ ಅರಳಿದ ಪ್ರತಿಭೆ
1928ರ ಸೆಪ್ಟೆಂಬರ್ 1ರಂದು ಮೈಸೂರಿನ ಚಾಮರಾಜಪುರಂನಲ್ಲಿ ವಾಸವಿದ್ದ, ಬೆಳ್ಳೂರಿನ ಮೂಲದವರಾದ ಶ್ರೀ ಬಿ. ಎಂ. ಕೃಷ್ಣಸ್ವಾಮಿ ಮತ್ತು ಶ್ರೀಮತಿ ತಂಗಮ್ಮ ದಂಪತಿಗೆ ಹೆಣ್ಣುಮಗು ಜನಿಸಿತು. ಪೋಷಕರು ಆ ಮಗುವಿಗೆ ಭಾಗೀರಥಿ ಎಂದು ನಾಮಕರಣ ಮಾಡಿದರು. ಆದರೆ ಶಾಲೆಯ ದಾಖಲೆಗಳಲ್ಲಿ ಆಕೆಯ ಹೆಸರು ಅನುಸೂಯ ಎಂದು ಅಧಿಕೃತವಾಗಿ ದಾಖಲಾಗಿತು. ಅದು ಸಾಮಾನ್ಯ ಕುಟುಂಬವಾಗಿರಲಿಲ್ಲ. ಮನೆಯಲ್ಲೇ ಸಾಹಿತ್ಯದ ಗಾಳಿ ಬೀಸುತ್ತಿತ್ತು.
ಅವರ ದೊಡ್ಡಪ್ಪ ಬಿ. ಎಂ. ಶ್ರೀಕಂಠಯ್ಯ (ಬಿ.ಎಂ.ಶ್ರೀ) — ಕನ್ನಡದ ಕಣ್ವ ಎಂದೇ ಖ್ಯಾತರಾದ ಪ್ರಸಿದ್ಧ ಸಾಹಿತಿ. ಖ್ಯಾತ ಲೇಖಕಿ ವಾಣಿ ಅವರ ಚಿಕ್ಕಮ್ಮ. ಮುಂದೆ ಸ್ವತಃ ಒಳ್ಳೆಯ ಬರಹಗಾರ್ತಿಯಾಗಿ ಗುರುತಿಸಿಕೊಂಡ ಆರ್ಯಂಬಾ ಪಟ್ಟಾಭಿ ಅವರ ತಂಗಿ. ಹೀಗಾಗಿ ಮನೆಯಲ್ಲಿ ಸಾಹಿತ್ಯ, ಕಾವ್ಯ, ಬರವಣಿಗೆಗಳ ಚರ್ಚೆ ಸಹಜವಾಗಿಯೇ ನಡೆಯುತ್ತಿತ್ತು.
ಈ ವಾತಾವರಣ ಅನುಸೂಯ ಅವರೊಳಗಿನ ಬರಹಗಾರ್ತಿಯನ್ನು ಬಹಳ ಚಿಕ್ಕ ವಯಸ್ಸಿನಲ್ಲೇ ಎಚ್ಚರಿಸಿತು. ಬಾಲ್ಯದಲ್ಲಿಯೇ ಅವರು ಬರೆಯಲು ಆರಂಭಿಸಿದರು. ಆದರೆ ತಮ್ಮ ಬರಹಗಳನ್ನು ಯಾರೂ ಓದಬಾರದು ಎಂದು ಅವುಗಳನ್ನು ಕಪಾಟಿನೊಳಗೆ ಬಚ್ಚಿಡುತ್ತಿದ್ದರು. ಒಂದು ದಿನ ಆ ಬರಹಗಳು ತಾಯಿ ತಂಗಮ್ಮನವರ ಕಣ್ಣಿಗೆ ಬಿದ್ದವು. ಬರಹಗಳನ್ನು ಓದಿದ ತಾಯಿ ಮಗಳ ಪ್ರತಿಭೆಯನ್ನು ಗುರುತಿಸಿದರು. “ಇಷ್ಟು ಚೆನ್ನಾಗಿ ಬರೆಯುತ್ತೀಯಲ್ಲ, ಇದನ್ನು ಪ್ರಕಟಿಸಬಹುದು” ಎಂದು ಪ್ರೋತ್ಸಾಹಿಸಿದರು. ಒಬ್ಬ ಲೇಖಕಿಯ ಜನನಕ್ಕೆ ಕೆಲವೊಮ್ಮೆ ದೊಡ್ಡ ಪ್ರಕಾಶಕರಿಗಿಂತ ಮೊದಲು ಒಬ್ಬ ತಾಯಿಯ ಪ್ರೋತ್ಸಾಹವೇ ಕಾರಣವಾಗಿರುತ್ತದೆ. ತ್ರಿವೇಣಿಯವರ ವಿಷಯದಲ್ಲೂ ಇದೇ ಸತ್ಯ.
ಓದಿನಲ್ಲೂ ಅಪೂರ್ವ ಪ್ರತಿಭೆ

ಅನುಸೂಯ ಅವರು ಓದಿನಲ್ಲೂ ಬಹಳ ಮುಂದಿದ್ದರು. ಅವರ ಪ್ರೌಢಶಿಕ್ಷಣ ಮಂಡ್ಯದಲ್ಲಿ ನಡೆಯಿತು





