ಮೋಡಗಳೊಂದಿಗೆ ಸರಸವಾಡುತ್ತಾ ಪ್ರಕೃತಿಯ ಸೊಬಗಿನ ನಡುವೆ ಹರಡಿಕೊಂಡಿರುವ ಪುಟ್ಟ ಕೋಟೆಯೊಂದು ಇಲ್ಲಿ ಬೆಟ್ಟದ ತುತ್ತ ತುದಿಯಲ್ಲಿ ನಿಂತು ಎಲ್ಲರನ್ನೂ ಕೈಬೀಸಿ ಕರೆಯುತ್ತದೆ.

ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 48ರ ಮಧ್ಯಭಾಗದಲ್ಲಿರುವ ಮಂಜ್ರಾಬಾದ್‌ ಕೋಟೆ ತನ್ನ ವಿಶಿಷ್ಟ ವಾಸ್ತುಶೈಲಿಯಿಂದಾಗಿ ಗಮನಸೆಳೆಯುತ್ತದೆ. ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲೇ ಇದ್ದರೂ ಹಸಿರು ಸಿರಿ ಹಾಗೂ ಮೋಡಗಳ ನಡುವೆ ತನ್ನನ್ನು ಮರೆಮಾಡಿಕೊಂಡಿರುವ ಕಾರಣದಿಂದಲೇ ಇದು ಶತ್ರುಗಳಿಗೆ ಭಯಭೀತಿ ಉಂಟು ಮಾಡುವ ತಾಣವಾಗಿತ್ತು. ಮೈಸೂರಿನ ಹುಲಿ ಟಿಪ್ಪು ಸುಲ್ತಾನನ ಆಳ್ವಿಕೆಯ ಸಂದರ್ಭದಲ್ಲಿ ಅಂದರೆ ಸುಮಾರು ಕ್ರಿ.ಶ. 1785ರಲ್ಲಿ ಈ ಕೋಟೆಯ ನಿರ್ಮಾಣ ಪ್ರಾರಂಭವಾಗಿ 7 ವರ್ಷಗಳ ನಂತರ ಪೂರ್ಣಗೊಂಡಿದೆ. ಟಿಪ್ಪು ಹೆಸರು ಕೇಳಿದರೇ ಭಯಭೀತರಾಗುತ್ತಿದ್ದ ಬ್ರಿಟಿಷರಿಗೆ ಟಿಪ್ಪು ನಿರ್ಮಿಸಿದ ಇಂಥ ಅನೇಕ ಕೋಟೆಗಳು ಕಣ್ಣಿಗೇ ಬಿದ್ದಿರಲಿಲ್ಲವಂತೆ. ಮಂಜು ಮುಸುಕಿದ ಕಾಡಿನ ನಡುವೆ ಇರುವುದೇ ಇದಕ್ಕಿರುವ ಪ್ರಾಮುಖ್ಯತೆ ಆಗಿತ್ತು.

ಪ್ರಕೃತಿಯ ನಡುವಿನ ಕೆಲಸ

ನಿಸರ್ಗದ ಹಸಿರು ವನಸಿರಿಯ ನಡುವೆ ಚೆಲುವಿನಿಂದ ಕಂಗೊಳಿಸುವ ಮಂಜ್ರಾಬಾದ್‌ ಕೋಟೆಗೆ ಸುಮಾರು 250 ಮೆಟ್ಟಿಲುಗಳನ್ನೇರಿ ತಲುಪಬಹುದು. ಇತರ ಕೋಟೆಗಳಿಗಿಂತಲೂ ಭಿನ್ನವಾಗಿರುವ ಇದು ಮದ್ದು ಗುಂಡುಗಳ ಸಂಗ್ರಹದ ಕೇಂದ್ರವಾಗಿತ್ತು ಎಂದು ಇತಿಹಾಸಕಾರರು ಹೇಳುತ್ತಾರೆ. ಎತ್ತರದ ದಿಣ್ಣೆಯಂತಹ ಆಯಕಟ್ಟಿನ ಜಾಗದಲ್ಲಿ ನಿರ್ಮಿಸಿರುವ ಈ ಕೋಟೆಯಿಂದ ಶತ್ರುಗಳ ಆಗುಹೋಗುಗಳನ್ನು ಗಮನಿಸಲಾಗುತ್ತಿತ್ತು. ಶತ್ರುಗಳು ಒಳಗೆ ನುಸುಳದ ಹಾಗೆ ಭದ್ರವಾದ ದ್ವಾರಗಳು ಹಾಗೂ ಕಲ್ಲುಗಳಿಂದ ಕೋಟೆಯನ್ನು ನಿರ್ಮಿಸಲಾಗಿತ್ತು. ಇಸ್ಲಾಮಿಕ್‌ ವಾಸ್ತು ಶೈಲಿಯಲ್ಲಿರುವ ಕೋಟೆಯ ಬಲಿಷ್ಠ ಮುಖ್ಯದ್ವಾರಗಳ ಅಕ್ಕಪಕ್ಕದಲ್ಲಿ ಕಾಲುಗಾರರ ಗೂಡು ನಿರ್ಮಿಸಿರುವುದು ಕೋಟೆಯ ವಿಶೇಷತೆಗಳಲ್ಲೊಂದು. ಮಬ್ಬು ಕತ್ತಲಾಗುತ್ತಿದ್ದಂತೆ ಕೋಟೆಯ ಸುತ್ತಲೂ ಬೆಂಕಿಯ ಪಂಜುಗಳನ್ನು ಹೊತ್ತಿಸಲು ಹಾಗೂ ಕಾವಲಿಗಾಗಿ ಇಲ್ಲಿ ಸದಾ ಕಾವಲುಗಾರರಿರುತ್ತಿದ್ದರು.

munjara-bad

ಅತ್ಯಂತ ಆಕರ್ಷಣೀಯವಾಗಿರುವ ಮಂಜ್ರಾಬಾದ್‌ ಕೋಟೆಯಲ್ಲಿ ಅನೇಕ ಚಲನಚಿತ್ರಗಳ ಚಿತ್ರೀಕರಣ ನಡೆದಿರುವುದು. ಇದರ ಸೌಂದರ್ಯಕ್ಕೆ ಸಾಟಿಯೇ ಇಲ್ಲ ಎನ್ನುವುದನ್ನು ತಿಳಿಸುವುದರ ಜೊತೆಗೆ ಆ ಚಿತ್ರದ ನಾಯಕಿಯರಿಗಿಂತಲೂ ತನ್ನ ಸೌಂದರ್ಯವೇನೂ ಕಡಿಮೆ ಇಲ್ಲ ಎನ್ನುವಂತೆ ನೂರಾರು ವರ್ಷಗಳಿಂದಲೂ ಆಕರ್ಷಣೆ ಕಳೆದುಕೊಳ್ಳದೆ ಎದೆ ಚಾಚಿಕೊಂಡಿದೆ.

ವೀಕ್ಷಣೆಗೆ ಸೂಕ್ತ

ಅಂದು ಶತ್ರುಗಳ ಆಗುಹೋಗುಗಳ ವೀಕ್ಷಣೆಯ ಜೊತೆ ಮದ್ದುಗುಂಡುಗಳು ಹಾಗೂ ಶಸ್ತ್ರಾಸ್ತ್ರಗಳ ಸಂಗ್ರಹವಾಗಿದ್ದ ಈ ಕೋಟೆ ಇಂದು ನಿಸರ್ಗ ಪ್ರೇಮಿಗಳು ಪ್ರಕೃತಿಯ ಸೊಬಗನ್ನು ವೀಕ್ಷಿಸಲು ಸೂಕ್ತ ಸ್ಥಳವಾಗಿದೆ. ಸಮುದ್ರ ಮಟ್ಟದಿಂದ ಸುಮಾರು 3,240 ಅಡಿ ಎತ್ತರದಲ್ಲಿದ್ದು ಇಲ್ಲಿಂದ ಪಶ್ಚಿಮ ಬೆಟ್ಟಗಳ ಸುಂದರ ಸಾಲುಗಳು ರಮಣೀಯವಾಗಿ ಕಾಣುತ್ತವೆ.

2 ಎಕರೆಗಳಿಗೂ ಹೆಚ್ಚು ವಿಸ್ತೀರ್ಣ ಇರುವ ಈ ಪ್ರದೇಶದ ಒಳಭಾಗದಲ್ಲಿ ಕೆಲವು ಕುದುರೆ ಲಾಯಗಳು, 4 ದಿಕ್ಕುಗಳಲ್ಲಿ ಮೆಟ್ಟಿಲಿರುವ ಆಳವಾದ ಕೆರೆಗಳಿವೆ. ಸೈನಿಕರ ವಸತಿ ಗೃಹಗಳು ಇಂದು ಮಳೆ, ಗಾಳಿಗೆ ಸಿಲುಕಿ ಹಾಳಾಗಿದ್ದು ಪ್ರವಾಸಿಗರಿಗೆ ಒಂದು ಹಳೆ ಪಾಳು ಬಿದ್ದ ಕೋಟೆಯಾಗಿ ಕಂಗೊಳಿಸುತ್ತಿದೆ.

ಶತ್ರುಗಳು ಒಳಗೆ ನುಸುಳದಂತೆ ಕೋಟೆಯ ಸುತ್ತಲೂ ಸುಮಾರು 5 ಅಡಿ ಅಗಲದ ಕಾಲುವೆ ನಿರ್ಮಿಸಲಾಗಿದ್ದು, ಇಂದು ಅದು ನೀರಿಲ್ಲದೆ ಬತ್ತಿಹೋಗಿದೆ.

ರಹಸ್ಯ ಮಾರ್ಗ

ಬೆಟ್ಟಗಳ ತುತ್ತ ತುದಿಯಲ್ಲಿರುವ ಮಂಜ್ರಾಬಾದ್‌ ಕೋಟೆಯೊಳಗೆ 2 ರಹಸ್ಯ ಸುರಂಗ ಮಾರ್ಗದ ದ್ವಾರಗಳಿವೆ. ಒಂದು ದ್ವಾರ ಕಾಸರಗೋಡಿನ ಸಮೀಪದ ಬೇಕಲ್ ಕೋಟೆಗೆ ಸಾಗಿದರೆ, ಮತ್ತೊಂದು ಮಾರ್ಗ ಮೈಸೂರಿಗೆ ಸಂಪರ್ಕ ಕಲ್ಪಿಸುತ್ತದೆ ಎಂದು ಸ್ಥಳೀಯರು ತಿಳಿಸುತ್ತಾರೆ. ಸದ್ಯಕ್ಕೆ ಎರಡೂ ಮಾರ್ಗಗಳನ್ನು ಸ್ವಲ್ಪ ದೂರದಲ್ಲಿ ಮುಚ್ಚಲಾಗಿದೆಯಂತೆ.

ಹೀಗೆ ಅನೇಕ ವಿಸ್ಮಯಗಳನ್ನು ತನ್ನ ಒಡಲಲ್ಲಿ ತುಂಬಿಕೊಂಡಿರುವ ಆಕರ್ಷಕ ಮಂಜ್ರಾಬಾದ್‌ ಕೋಟೆಗೆ ಒಮ್ಮೆ ಭೇಟಿ ನೀಡಿ.

ನಿತ್ಯದ ಕೆಲಸ ಹಾಗೂ ಟೆನ್ಶನ್‌ಗಳ ನಡುವೆ ಇದು ನಿಮ್ಮ ಮನಸ್ಸಿಗೆ ಸ್ವಲ್ಪ ಉಲ್ಲಾಸವನ್ನು ನೀಡುತ್ತದೆ.

– ಸಾಲೋಮನ್‌

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ