ಸಿನಿಮಾ ರಂಗ ಅಯಸ್ಕಾಂತದಂತೆ ಎಲ್ಲರನ್ನೂ ಸೆಳೆಯುತ್ತದೆ. ಪ್ರಭಾವಶಾಲಿ ಮಾಧ್ಯಮ, ಇದಕ್ಕೆ ಸೋಲದವರೇ ಇಲ್ಲ ಎನ್ನಬಹುದು. ರಂಗಭೂಮಿ ಕಲಾವಿದನಾಗಿ ಸಾಕಷ್ಟು ಚಟುವಟಿಕೆಗಳಲ್ಲಿ ಭಾಗವಹಿಸಿ ನುರಿತವರಾಗಿರುವ ಕಿರಣ್ ನಾರಾಯಣ್ ಸಿನಿಮಾದಲ್ಲಿ ನಟನಾಗಬೇಕು, ಜೊತೆಗೆ ನಿರ್ದೇಶನದ ಆಸೆ ಹೊತ್ತರು. ಕನ್ಸ್ಟ್ರಕ್ಷನ್ ಬಿಸ್ನೆಸ್ ಮಾಡಿದ್ದಾರೆ. ಸಿನಿಮಾ ಸಲುವಾಗಿ ಕಂಪ್ಲೀಟಾಗಿ ಅದನ್ನು ಬಿಟ್ಟು, ಅದರಲ್ಲಿ ಗಳಿಸಿದ ಹಣವನ್ನು ತಮ್ಮ `ಸ್ನೇಹರ್ಷಿ’ ಸಿನಿಮಾ ಸಲುವಾಗಿ ಹಾಕಿದಂತಹ ಆಶಾವಾದಿ. ಸಾಧಿಸಲು ಹೊರಟಂತಹ ಹಠವಾದಿ.
ನೀವು ಸಿನಿಮಾ ರಂಗಕ್ಕೆ ಬಂದದ್ದು ಹೇಗೆ?
ಆ್ಯಕ್ಟಿಂಗ್ ನನ್ನ ಪ್ಯಾಷನ್. ಡೈರೆಕ್ಟರ್ ಆಗಬೇಕೆಂಬ ಹಂಬಲ. ಹಾಗಾಗಿ ಎರಡೂ ಜವಾಬ್ದಾರಿ ನಾನೇ ಹೊತ್ತುಕೊಂಡು ಸಿನಿಮಾ ಮಾಡ್ತಿದ್ದೀನಿ.
ನಿಮಗೆ ಸ್ಛೂರ್ತಿ ಎಲ್ಲಿಂದ ಬಂತು?

ಮಣಿರತ್ನಂ ಅವರ ಬಾಂಬೆ, ಅಣ್ಣಾವ್ರ ನಾಂದಿ ಚಿತ್ರ, ಬಿ.ಆರ್. ಪಂತುಲು, ಭಾರ್ಗವ್ ಅವರ ಚಿತ್ರಗಳು ನನಗಿಷ್ಟ. ಮುಖ್ಯವಾಗಿ ನಾನು ಅಭಿನಯದಲ್ಲಿ ತೊಡಗಿಕೊಳ್ಳಲು ಮಿನುಗುತಾರೆ ಕಲ್ಪನಾ ಅವರ ಅಭಿನಯವೇ ಸ್ಛೂರ್ತಿ. ಅವರ ಚಿತ್ರಗಳನ್ನು ನೋಡುತ್ತಾ ಭಾವುಕನಾಗಿ ಅವರಂತೆ ಭಾವುಕನಾಗಿ ನಟಿಸಲು ಪ್ರಯತ್ನಿಸುತ್ತಿದ್ದೆ.
ಸ್ನೇಹರ್ಷಿ ಸಿನಿಮಾ ಬಗ್ಗೆ ವಿವರವಾಗಿ ಹೇಳ್ತೀರಾ…?
ತುಂಬಾ ಸ್ಟ್ರಾಂಗ್ ಕಮೆಂಟ್ ಇರುವಂತಹ ಸಿನಿಮಾ, ಸಿನಿಮಾ ಮೂಲಕ ಒಳ್ಳೆಯ ಸಂದೇಶ ಕೊಡಬೇಕು ಎಂದು ಬಹಳ ಸಾಮಾಜಿಕ ಕಳಕಳಿ ಹೊಂದಿದ್ದೇನೆ. ಹಾಗೆಯೇ ನನ್ನ ಮೊದಲನೇ ಸಿನಿಮಾ ಆಗಿರುವ `ಸ್ನೇಹರ್ಷಿ’ಯಲ್ಲೂ ಅದನ್ನು ತೋರಿಸುವ ಪ್ರಯತ್ನ ಮಾಡಿದ್ದೇನೆ. ನುರಿತ ಟೆಕ್ನೀಶಿಯನ್ಸ್ ಇದ್ದಾರೆ. ಕೆ.ಜಿ.ಎಫ್ಎಡಿಟರ್ನಮ್ಮ ಚಿತ್ರದ ಎಡಿಟಿಂಗ್ ಕೆಲಸ ಮಾಡಿದ್ದಾರೆ. ಸುಧಾ ಬೆಳವಾಡಿ ಅಮ್ಮನ ಪಾತ್ರ ವಹಿಸಿದ್ದಾರೆ. ಸಾಕಷ್ಟು ಸಪೋರ್ಟ್ ಮಾಡಿದ್ದಾರೆ. ಚಿತ್ರದ ನಾಯಕಿ ಸೌಮ್ಯಾ. ಹಿರಿಯ ಕಲಾವಿದ ಉಮೇಶ್ ಗಮನ ಸೆಳೆಯುತ್ತಾರೆ. ಸಿನಿಮಾ ರಿಲೀಸ್ಗೆ ರೆಡಿ, ಸೆನ್ಸಾರ್ ಆಗಬೇಕಿದೆ.
ಕೊರೋನಾದ ಸಂಕಷ್ಟ ಸಮಯದಲ್ಲಿ ನೀವು ಇತರರ ನೆರವಿಗೆ ಹೇಗೆ ನಿಂತಿರಿ?

ಕೊರೋನಾ ಸಂಕಷ್ಟದ ಸಮಯದಲ್ಲಿ ಸಾಕಷ್ಟು ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬಂದಿರುವ ಸ್ನೇಹರ್ಷಿ ನಾಯಕ ಕಿರಣ್ ನಾರಾಯಣ್, ಚಿತ್ರರಂಗದ ಅಸಂಘಟಿತರಿಗೆ ತಮ್ಮ ಸಹಾಯಹಸ್ತ ಚಾಚಿದ್ದಾರೆ. ಗುರುತಿನ ಚೀಟಿ ಇಲ್ಲದೆ ಸರ್ಕಾರದ ಸಹಾಯ ಧನದಿಂದ ವಂಚಿತರಾದವರ ಹಸಿವನ್ನು ನೀಗಿಸುವ ಪುಣ್ಯದ ಕೆಲಸ ಮಾಡಿದ್ದಾರೆ. ಭಾಮ ಹರೀಶ್ರವರ ಉಲ್ಲಾಸ್ ಶಾಲೆಯ ಆವರಣದಲ್ಲಿ 150ಕ್ಕೂ ಹೆಚ್ಚು ಸಿನಿ ಕಾರ್ಮಿಕರಿಗೆ ಕಿರಣ್ ನಾರಾಯಣ್ ದಿನಸಿ ಕಿಟ್ಗಳನ್ನು ವಿತರಣೆ ಮಾಡಿದ್ದರು. ಇದೇ ಸಮಯದಲ್ಲಿ ಅನಾಥ ಶವಗಳ ಬಂಧು ಎನಿಸಿಕೊಂಡ ಅರ್ಜುನ್ ಗೌಡ, ಪತ್ರಿಕಾ ಪ್ರಚಾರಕರ್ತ ಸುಧೀಂದ್ರ ವೆಂಕಟೇಶ್, ನಿರ್ಮಾಪಕ ಭಾಮ ಹರೀಶ್ ಹಾಗೂ ಭಾಮ ಗಿರೀಶ್ ಅವರಿಗೆ ಸ್ನೇಹರ್ಷಿ ಚಿತ್ರ ತಂಡದಿಂದ ಗೌರವ ಸಮರ್ಪಣೆ ಮಾಡಲಾಗಿತ್ತು.
ಈ ಚಿತ್ರದ ಹಾಡು, ಮತ್ತಿತರ ವಿವರಗಳ ಬಗ್ಗೆ……..
ಜನಮನ ಗೆದ್ದ ಹಾಡು, ಕೊಟ್ಟಿತು ಡಬ್ಬಲ್ ಖುಷಿ! ಶ್ರೀ ಲಕ್ಷ್ಮೀ ಬೇಟೆರಾಯ ಕಂಬೈನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ `ಸ್ನೇಹರ್ಷಿ’ ಚಿತ್ರದ ಮೊದಲ ಹಾಡು ಡಿ ಬಿಟ್ಸ್ ಯೂಟ್ಯೂಬ್ ಚಾನಲ್ ಮೂಲಕ ಬಿಡುಗಡೆಯಾಗಿದೆ. ಈಗ ಒಂದು ಮಿಲಿಯನ್ ವಾಯ್ಸ್ ಕಂಡಿದೆ! ಖ್ಯಾತ ಗಾಯಕ ನವೀನ್ ಸಜ್ಜು ಹಾಡಿರುವ ಈ ಹಾಡು ಬಿಡುಗಡೆಯಾದ ಕೆಲವೇ ಸಮಯದಲ್ಲಿ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗಿದೆ. ಚಿತ್ರದ ನಾಯಕ ಕಿರಣ್ ನಾರಾಯಣ್ ಈ ಹಾಡಿಗೆ ಭರ್ಜರಿ ಸ್ಟೆಪ್ಸ್ ಹಾಕಿದ್ದು, ಅವರ ನೃತ್ಯಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಭಜರಂಗಿ ಮೋಹನ್ ಈ ಹಾಡಿಗೆ ನೃತ್ಯ ನಿರ್ದೇಶನ ನೀಡಿದ್ದಾರೆ.
ಈ ಚಿತ್ರದ ಕಥೆ ಮತ್ತು ಕಾನ್ಸೆಪ್ಸ್ ಏನು?

ಈ ಚಿತ್ರಕ್ಕೆ ನಮ್ಮ ತಾಯಿ ನಾಗತಿಹಳ್ಳಿ ಪ್ರತಿಭಾ ಕಥೆ ಬರೆದಿದ್ದಾರೆ. ಅಮ್ಮ ಹೇಳುವ ಕಥೆ ಬೇರೆಯವರಿಗಿಂತ ನನಗೆ ಬೇಗ ಅರ್ಥವಾಗುತ್ತದೆ. ಹಾಗಾಗಿ ಈ ಚಿತ್ರವನ್ನು ನಿರ್ದೇಶಿಸಲು ನಾನೇ ಮುಂದಾದೆ. ಸಾಮಾಜಿಕ ಕಾಳಜಿಯ ಕಥಾ ಹಂದರವಿದ್ದು, ನಾನೇ ಚಿತ್ರಕಥೆ ಬರೆದಿದ್ದೇನೆ. ಈ ಚಿತ್ರದ ತಾಂತ್ರಿಕವರ್ಗ ಹಾಗೂ ಕಲಾವಿದರ ಬಗ್ಗೆ ತಿಳಿಸಿ.
ಕಿರಣ್ ಅವರ ಚಿತ್ರದ ತಾಂತ್ರಿಕ ವರ್ಗ ಹಾಗೂ ಕಲಾವಿದರ ಪರಿಚಯ ಹೀಗಿದೆ.
ನಾಗತಿಹಳ್ಳಿ ಪ್ರತಿಭಾ ಹಾಗೂ ಕಿರಣ್ ನಾರಾಯಣ್ ಈ ಚಿತ್ರದ ನಿರ್ಮಾಪಕರು. ತಮ್ಮ ಪಾತ್ರದ ಬಗ್ಗೆ ವಿವರಣೆ ನೀಡುವ ನಟಿ ಸುಧಾ ಬೆಳವಾಡಿ, ಕಿರಣ್ ನಾರಾಯಣ್ ಸಾಧಾರಣ ಕಥೆಯನ್ನು ಅಸಾಧಾರಣ ರೀತಿಯಲ್ಲಿ ತೆರೆಗೆ ತರುತ್ತಿದ್ದಾರೆ. ಕಥೆ ತುಂಬಾ ಚೆನ್ನಾಗಿದೆ. ನಿರ್ದೇಶನದ ಜೊತೆಗೆ ನಾಯಕ ಹಾಗೂ ಸಿನಿರಂಗ ಪ್ರವೇಶಿಸುತ್ತಿರುವ ಈ ಹುಡುಗನಿಗೆ ಒಳ್ಳೆಯದಾಗಲಿ ಎಂದು ಶುಭ ಕೋರಿದರು.
ಚಿತ್ರದ ಇನ್ನಿತರ ವಿರಗಳ ಬಗ್ಗೆ ಹೇಳಿ.
ಆಕಾಶ್ ಅಯ್ಯಪ್ಪ `ಸ್ನೇಹರ್ಷಿ’ ಚಿತ್ರಕ್ಕೆ ಸಂಗೀತ ನೀಡಿದ್ದು, ರವಿ ಕಿಶೋರ್ ಛಾಯಾಗ್ರಹಣ ಹಾಗೂ ಶ್ರೀಕಾಂತರವರ ಸಂಕಲನವಿದೆ. ರಾಜು ಎನ್.ಕೆ. ಗೌಡ ಗೀತರಚನೆ ಮಾಡಿದ್ದಾರೆ.
ಕಿರಣ್ ನಾರಾಯಣ್ ನಾಯಕನಾಗಿ ನಟಿಸಿರುವ ಈ ಚಿತ್ರದ ತಾರಾಬಳಗದಲ್ಲಿ ಸುಧಾ ಬೆಳವಾಡಿ, ನಾಗತಿಹಳ್ಳಿ ಜಯಪ್ರಕಾಶ್, ಚಕ್ರವರ್ತಿ, ನವೀನ್, ದೇವಕಿ, ರಂಗನಾಥ್, ಮಾರುತಿ, ಸೌಮ್ಯಾ ಮುಂತಾದವರಿದ್ದಾರೆ.
– ಸರಸ್ವತಿ ಜಾಗೀರ್ದಾರ್





