ಹೆಣ್ಣಿನ ಪ್ರಗತಿಯ ಕುರಿತಾಗಿ ಅನೇಕಾನೇಕ ಕ್ರಾಂತಿಕಾರಿ ಮಾತುಗಳು ಅನಾದಿ ಕಾಲದಿಂದಲೂ ಕೇಳಿಬರುತ್ತಲೇ ಇವೆ. ಇವೆಲ್ಲದರ ಪರಿಣಾಮವಾಗಿ ಪ್ರಸ್ತುತ ಪರಿಸ್ಥಿತಿಯಲ್ಲಿ ಹೆಣ್ಣಿನ ಪ್ರಗತಿ ಎಷ್ಟು ಮಾತ್ರ ಫಲಕಾರಿಯಾಗಿದೆ……?
ಮಾರ್ಚ್ಅಂತಾರಾಷ್ಟ್ರೀಯ ಮಹಿಳಾ ದಿನ. ಮಹಿಳೆ ಆತ್ಮಗೌರವದಿಂದ ಜೀವನ ನಡೆಸಲಿ ಎಂಬ ಸದುದ್ದೇಶದಿಂದ ವಿಶ್ವಸಂಸ್ಥೆಯು ಘೋಷಿಸಿದ ಈ ದಿನವನ್ನು ಮಹಿಳಾ ದಿನವೆಂದು ಅಂತಾರಾಷ್ಟ್ರೀಯವಾಗಿ ಆಚರಿಸಲಾಗುತ್ತದೆ. ಈ ದಿನ ಮಹಿಳಾ ಇತಿಹಾಸದಲ್ಲಿ ತನ್ನದೇ ಆದ ಒಂದು ಮಹತ್ವ ವೈಶಿಷ್ಟ್ಯಗಳಿವೆ. ಪುರುಷ ಪ್ರಧಾನ ಸಮಾಜದಲ್ಲಿ ಹಿತಾಸಕ್ತಿಗಳ ಮುಷ್ಟಿಯಲ್ಲಿ ನಲುಗಿಹೋದ ಮಹಿಳೆ ಪ್ರಥಮವಾಗಿ ತನ್ನ ಧ್ವನಿಯನ್ನು, ಪ್ರತಿಭಟನೆಯನ್ನು ತೋರಿದ ಪ್ರಮುಖ ದಿನ ಇದು.
ಮೌನವಾಗಿ ಸಹಿಸುವಿಕೆ : ಸಾವಿರಾರು ವರ್ಷಗಳ ಹಿಂದೆ ವಿದೇಶದಲ್ಲಿ ಹೆಣ್ಣುಮಕ್ಕಳ ಬಗ್ಗೆ ಪುರುಷ ಸಮಾಜ ಅಸಡ್ಡೆ, ಅನಾಸಕ್ತಿ, ದೌರ್ಜನ್ಯ ತೋರುತ್ತಾ ಬಂದಿತ್ತು. ಮಹಿಳೆಯರ ಮೇಲೆ ಸಾಮಾಜಿಕ, ಆರ್ಥಿಕ, ದೈಹಿಕ ಶೋಷಣೆ, ಅನ್ಯಾಯ, ಅತ್ಯಾಚಾರಗಳನ್ನು ನಡೆಸುತ್ತಿದ್ದರು. ಪ್ರಪಂಚದ ಎಲ್ಲಾ ಮಹಿಳೆಯರು ಮೂಕರಂತೆ ಅಸಹಾಯಕರಾಗಿದ್ದ ಕಾಲ ಅದಾಗಿತ್ತು. ಹಿಂದೆಯೂ ಕೂಡ ಎಷ್ಟೋ ಮಹಿಳೆಯರು ದುಷ್ಟ ಶಕ್ತಿಗಳಿಗೆ ಹೆದರಿ ಅವುಗಳಿಗೆ ಬಲಿಯಾಗಿ ಎಲ್ಲವನ್ನೂ ಮೌನವಾಗಿ ಸಹಿಸಿಕೊಳ್ಳುತ್ತಾ, ತಮ್ಮ ಜೀವನವನ್ನು ಕೊನೆಗಾಣಿಸಿಕೊಳ್ಳುತ್ತಾ, ಈ ಜ್ವಲಂತ ಸಮಸ್ಯೆಗಳನ್ನು ಸಮಸ್ಯೆಗಳನ್ನಾಗಿಯೇ ಉಳಿಸಿ ಕರಗಿ ಹೋಗುತ್ತಿರುವುದು ಸುಳ್ಳಲ್ಲ. ನಮ್ಮ ದೇಶದಲ್ಲಂತೂ ಹೆಣ್ಣಿನ ಕುರಿತಾದ ಶೋಷಣೆಗೆ ಎಂದೆಂದೂ ಕೊನೆ ಇಲ್ಲ.
ಮಹಿಳಾ ದಿನಾಚರಣೆ : ಮಹಿಳಾ ದಿನಾಚರಣೆಯ ಪ್ರಥಮ ಪ್ರತಿಭಟನೆಯ ಮಹಿಳಾ ಕೂಗು ಕೇಳಿ ಬಂದಿದ್ದು 1907ರಲ್ಲಿ. ಅಮೆರಿಕಾದ ನ್ಯೂಯಾರ್ಕಿನ ಸಿದ್ಧ ಉಡುಪಿನ ಕಾರ್ಖಾನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಅಲ್ಲಿ ಎಲ್ಲಾ ಜನಾಂಗದ ಮಹಿಳಾ ಕೆಲಸಗಾರರೂ ಸಮಾನ ವೇತನಕ್ಕಾಗಿ ಹಾಗೂ ದಿನಕ್ಕೆ 8 ಗಂಟೆ ದುಡಿಮೆಯ ಹಕ್ಕಿಗಾಗಿ ಸಂಘಟಿತರಾಗಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಆಗ ಸರ್ಕಾರ ಅವರ ಮೇಲೆ ಗುಂಡಿನ ಸುರಿಮಳೆ ಸುರಿಸಿದಾಗ, ಅಲ್ಲಿನ ಮಹಿಳಾ ಕಾರ್ಮಿಕರು ಯಾರೂ ಸಾವಿನ ಬಗ್ಗೆ ಧೃತಿಗೆಡದೆ ತಮ್ಮ ಹೋರಾಟವನ್ನು ಮುಂದುವರಿಸಿದ್ದರು. ಕೊನೆಗೆ ಸರ್ಕಾರ ಅವರ ಉಗ್ರ ಹೋರಾಟಕ್ಕೆ ಮಣಿದು ಅವರ ಬೇಡಿಕೆಯನ್ನು ಒಪ್ಪಿಕೊಂಡಿತು, ಮಹಿಳೆಯರ ಏಳಿಗೆಯ ವಿಷಯಕ್ಕೆ ನಾಂದಿ ಹಾಡಿತು.
ಈ ಒಂದು ಘಟನೆ ಪ್ರಪಂಚದ ನಾನಾ ಭಾಗದ ಮಹಿಳೆಯರು ತಮಗಾದ ಅನ್ಯಾಯ, ಅತ್ಯಾಚಾರದ ವಿರುದ್ಧ ಹೋರಾಡಲು ಪ್ರೇರಣೆ ನೀಡಿತು. ಆಗ ಈ ದಿನವನ್ನು ಅತ್ಯಂತ ಮಹತ್ವದ ದಿನವನ್ನಾಗಿ ಆಚರಿಸಲು ಅಂದಿನ ಸಮಾಜದ ನಾಯಕಿಯಾಗಿದ್ದ ಕ್ಲಾರಾ ಜೆಟ್ ಕಿನ್ 1910ರ ಮಾರ್ಚ್ 8 ರಂದು ಮಹಿಳೆಯರಿಗೆ ಸಾರ್ವತ್ರಿಕ ಮತದಾನದ ಹಕ್ಕನ್ನು ಬೇಡಿಕೆಯನ್ನಾಗಿಟ್ಟುಕೊಂಡು, ಆ ದಿನವನ್ನು ಅಂತಾರಾಷ್ಟ್ರೀಯ ಮಹಿಳಾ ದಿನವನ್ನಾಗಿ ಆಚರಿಸಿದರು.
ಯಾವ ದಿಕ್ಕಿನಲ್ಲಿದೆ : 21ನೇ ಶತಮಾನದ ಹಾದಿಯಲ್ಲಿ ಸಾಗಿರುವ ಇಂದಿನ ಮಹಿಳೆಯರ ಆಲೋಚನೆ ನಡೆ ಯಾವ ದಿಕ್ಕಿನಲ್ಲಿದೆ? ಹಾಗಂತ ಈ ಆಚರಣೆಯಿಂದ ಘೋಷಣೆಯ ಆಶಯ ಸಾಕಾರಗೊಂಡಿದೆಯೇ? ಈ ಮಹಿಳಾ ದಿನದ ಆಚರಣೆ ಕೇವಲ ಯಾಂತ್ರಿಕವಾಗಿ ನಡೆಯುತ್ತಿದೆಯೇ? ಅಥವಾ ಅರ್ಥಪೂರ್ಣವಾಗಿವೆಯೇ? ಮಹಿಳೆಯರನ್ನು ಸಬಲರನ್ನಾಗಿಸುವ ದೆಸೆಯಲ್ಲಿ ಹಿಂದಿನ ಈ ಚರಿತ್ರೆ ಎಷ್ಟು ಪೂರಕವಾಗಿದೆ? ಆಕೆ ಸ್ಥಾನಮಾನಗಳಲ್ಲಿ ಬದುಕಿನಲ್ಲಿ ಗಣನೀಯ ಬದಲಾವಣೆಗಳು ಕಂಡು ಬಂದಿವೆಯೇ? ಮುಂತಾದ ಪ್ರಶ್ನೆಗಳು ಎದುರಾಗುತ್ತವೆ.
ಪ್ರಗತಿ ಆಗಿಲ್ಲ : ಎಲ್ಲಿಯವರೆಗೆ ಮಹಿಳೆಯನ್ನು ಆಳಿನಂತೆ ನಡೆಸಿಕೊಳ್ಳಲಾಗುತ್ತದೋ ಅಲ್ಲಿಯವರೆಗೆ ಸಮಾಜದಲ್ಲಿ ದುಃಸ್ಥಿತಿ ಮುಂದುವರಿಯುತ್ತದೆ ಎಂದು ಹೇಳಿದ್ದಾರೆ ಡಾ. ಎಸ್. ರಾಧಾಕೃಷ್ಣನ್. ನಮ್ಮ ದೇಶದಲ್ಲಿಯೇ ನೋಡಿ ಜಾತಿ ಮತ, ಪಂಥದ ಪ್ರಭಾವ, ಅಧಿಕ ಕಂದಾಚಾರ, ಮೂಢನಂಬಿಕೆಗಳಿಂದ ಸಮಾಜ ತತ್ತರಿಸುತ್ತಿದೆ. ಪುರುಷ ಸರಿಸಮಾನ ಸ್ಥಾನ, ಸ್ವಾಭಿಮಾನ, ಸ್ವಾವಲಂಬನೆಯಿಂದ ಜೀವಿಸುವಲ್ಲಿ ಸಾಧನೆಯತ್ತ ಸಾಗಿದೆಯಾದರೂ ಪರಿಪೂರ್ಣ ಪ್ರಗತಿ ಆಗಿಲ್ಲ.
ಅಸಮತೋಲನ : ಜಗತ್ತಿನಾದ್ಯಂತ ಸ್ತ್ರೀಯರನ್ನು ಕಡೆಗಣಿಸುತ್ತಾ ಸಾಗಿರುವುದು ಆಧುನಿಕ ಪ್ರಪಂಚದ ವಿಪರ್ಯಾಸ. ಭ್ರೂಣಹತ್ಯೆ, ಶಿಶುಹತ್ಯೆ, ಲೈಂಗಿಕ ಕಿರುಕುಳ, ಹಿಂಸೆ ಇವೆಲ್ಲ ನಿರಂತರವಾಗಿ ಸ್ತ್ರೀ ಸಮುದಾಯವನ್ನು ಕಾಡುತ್ತಲೇ ಇದೆ. ಹೀಗಾಗಿ ಪುರುಷ ಸ್ತ್ರೀ ಸಂಖ್ಯೆಯಲ್ಲಿ ಅಸಮತೋಲನ ವ್ಯಾಪಕವಾಗಿದೆ. ಇದನ್ನು ನಿವಾರಿಸಲು ಸರ್ಕಾರ ಕಾಲ ಕಾಲಕ್ಕೂ ಅನೇಕ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಿದೆ. ಆದಾಗ್ಯೂ ನಿರೀಕ್ಷಿತ ಸುಧಾರಣೆ ಸಾಧ್ಯವಾಗಲಿಲ್ಲ. ಶೋಷಣೆ, ತಾರತಮ್ಯ, ಅಸಮಾನತೆ ಇಂದಿಗೂ ಮುಂದುವರಿದಿದೆ. ಅಮಾನವೀಯ ಪದ್ಧತಿ ನಿಂತಿಲ್ಲ. ಹೆಣ್ಣು ಮಗವನ್ನು ಹತ್ಯೆ ಮಾಡುವ ಕ್ರೂರ ಕೃತ್ಯ ತಾಯಿ ಗರ್ಭದಲ್ಲಿ ಇರುವಾಗಲೇ ಆರಂಭಗೊಂಡು ಬೆಳೆಯುವ ಹಂತದಲ್ಲೂ ಹತ್ಯ, ಅಸಮಾನತೆಯ ಕಾರ್ಯ ಮುಂದುವರಿಯುತ್ತಲೇ ಇದೆ.
ಲೈಂಗಿಕ ಕಿರುಕುಳ, ಮಾನಸಿಕ ದೈಹಿಕ ಹಿಂಸೆಯಂತಹ ದುಷ್ಕೃತ್ಯಗಳು ನಡೆಯುತ್ತಲೇ ಇವೆ.
ಕಿರುತೆರೆ ಪಾತ್ರ ಹಿರಿದು : ಮಾಧ್ಯಮಗಳಲ್ಲಿ ಕಿರುತೆರೆಯ ಪಾತ್ರ ಹಿರಿದು. ಮಹಿಳೆಯನ್ನು ಅಲಂಕಾರಿಕ ಗೊಂಬೆಗಳಂತೆ ಪ್ರತಿಬಿಂಬಿಸುವುದು ಜಾಹೀರಾತುಗಳಲ್ಲಿ ಅವಿತರತವಾಗಿ ನಡೆದಿದೆ. ಹೆಣ್ಣಿನ ಅವಶ್ಯಕತೆ ಇಲ್ಲದಿದ್ದರೂ ಪುರುಷರ ಒಳಉಡುಪು, ಶೇವಿಂಗ್ ಬ್ಲೇಡ್, ಡಿಯೋಡರೆಂಟ್, ಸೋಪು ಮುಂತಾದ ಜಾಹೀರಾತುಗಳಲ್ಲಿ ಹೆಣ್ಣಿಗೆ ಕಡಿಮೆ ಬಟ್ಟೆ ತೊಡಿಸಿ ಅವರ ಜೊತೆ ನಿಂತು ತೋರಿಸುವುದು ಹಾಗೆಯೇ ಕ್ರಿಕೆಟ್ ಮೈದಾನದಲ್ಲಿ ಕಿಕ್ಕಿರಿದ ಜನಜಂಗುಳಿಯಲ್ಲಿ ಮತ್ತದೆ ಕನಿಷ್ಠ ಉಡುಪಿನ ಯುವತಿಯರು ಗೊಂಬೆ ಕುಣಿಯುಂತೆ ಹಾಸ್ಯಾಸ್ಪದವಾಗಿ ತೋರಿಸುತ್ತಾರೆ.
ಹೆಣ್ಣು ಖಳನಾಯಕಿ : ಟಿವಿಗಳಲ್ಲಿ ಬರುವ ಧಾರಾವಾಹಿಗಳು ಹುರುಳಿಲ್ಲದ ಕಥೆಯಾಗಿದ್ದು, ಹೆಣ್ಣಿಗೆ ಹೆಣ್ಣೆ ಶತ್ರು ಎಂಬ ಇಂಗಿತವನ್ನೇ ಬಂಡವಾಳವಾಗಿಸಿಕೊಂಡು ಖಳನಾಯಕಿಯಾಗಿ ಆಕೆಯನ್ನು ಬಿಂಬಿಸುವುದು ಎಷ್ಟು ಸಮಂಜಸ?
ಕಡೆಗಣಿಸುವ ಹಕ್ಕಿಲ್ಲ : ಒಂದು ಜನಾಂಗ ಎಷ್ಟರ ಮಟ್ಟಿಗೆ ಪ್ರಗತಿ ಸಾಧಿಸಿದೆ ಎಂಬುದನ್ನು ನೋಡಬೇಕಾದರೆ ಆ ಜನಾಂಗದ ಹೆಣ್ಣುಮಕ್ಕಳು ಸಾಮಾಜಿಕವಾಗಿ ಎಷ್ಟು ಮುಂದುವರಿಯಲಿದ್ದಾರೆ ಎಂಬುದನ್ನು ನೋಡಬೇಕು ಎಂದು ಹೇಳಿದ್ದಾರೆ ಸ್ವಾಮಿ ವಿವೇಕಾನಂದರು. ಅವರ ಮಾತಿನಂತೆ ಹೆಣ್ಣುಮಕ್ಕಳು ಸುರಕ್ಷಿತರಾಗಿ ಸಮಾಜದಲ್ಲಿ ಗೌರವದ ಸ್ಥಾನ ಪಡೆಯುವುದರ ಮೂಲಕ ತಲೆ ಎತ್ತಿ ಬದುಕು, ಆತ್ಮಾಭಿಮಾನದಿಂದ ಮುನ್ನಡೆಯುವ ಹಕ್ಕು ಅವರಿಗೂ ಇದೆ. ಅದನ್ನು ಕಸಿಯುವ ಹಕ್ಕು ಯಾರಿಗೂ ಇಲ್ಲವೆಂಬ ಸತ್ಯ ಸಂಗತಿ ತಿಳಿದರೆ ಸಮಾಜಕ್ಕೆ ಒಳಿತು.
– ರಾಜೇಶ್ವರಿ ವಿಶ್ವನಾಥ್