ರೋಗಿ : ಡಾಕ್ಟರೇ…. ಥಂಡಿ ಹೆಚ್ಚಾಗಿದೆ. ಹೀಗಾಗಿ ಬ್ಲೋಯರ್‌ ಆನ್‌ ಮಾಡಿಕೊಂಡೇ ಸರ್ಜರಿ ಮಾಡಿ.

ಡಾಕ್ಟರ್‌ : ಅದು ಏಕೆ?

ರೋಗಿ : ಏಕೆಂದರೆ ಸರ್ಜರಿಗೂ ವಿಸರ್ಜನೆಗೂ ಬಹಳ ಅಂತರವೇನಿಲ್ಲ. ಥಂಡಿಯಿಂದಾಗಿ ಸರ್ಜರಿ ಮಾಡುವಾಗ ನಿಮ್ಮ ಕೈ ನಡುಗಲಿಲ್ಲ ಅಂದ್ರೆ, ನೀವು ಯಶಸ್ವೀ ಸರ್ಜನ್‌! ಹಾಗಾಗದೆ ಕೈ ನಡುಗಿ ಸರ್ಜರಿ ಎಡವಟ್ಟಾದರೆ….. 1-2 ದಿನಗಳಲ್ಲಿ ನನ್ನ ಹೆಣದ ವಿಸರ್ಜನೆ ಆಗಿಹೋಗುತ್ತದೆ!

 

ಪತ್ನಿ : ಮದುವೆಯ ಆರಂಭದಲ್ಲಿ ನನ್ನನ್ನು ಬಹು ಸಿಹಿಯಾದ ಶಬ್ದಗಳಿಂದ ಹಾಲುಖೀರು, ರಸಮಲಾಯಿ, ಹಾಲುಹೋಳಿಗೆ….. ಅಂತೆಲ್ಲ ಕರೆಯುತ್ತಿದ್ದಿರಿ. ಮದುವೆ ಆಗಿ 6 ತಿಂಗಳಾಯಿತು, ಈಗೇಕೆ ಹಾಗೆ ಕರೆಯುತ್ತಿಲ್ಲ…..?

ಪತಿ : ಅಯ್ಯೋ ಮಹರಾಯ್ತಿ….. ಹಾಲಿನಿಂದ ತಯಾರಿಸುವ ಸಿಹಿ ವ್ಯಂಜನ ಎಷ್ಟು ದಿನಕ್ಕೂ ಹಳಸದೆ ಹಾಗೇ ಇರುತ್ತದೆಯೇ……?

 

ಸುರೇಶ : ಎಷ್ಟೋ ಜಗಳಗಳ ನಂತರ ಎಲ್ಲಾ ಪತಿಪತ್ನಿಯರ ನಡುವೆ ನಿರಂತರ ವೈಮನಸ್ಯ ಹೆಚ್ಟುತ್ತಿರಲು ಕಾರಣವೇನು ಎಂದು ಕೊನೆಗೂ ಸ್ಪಷ್ಟವಾಯಿತು.

ಮಹೇಶ : ಅದೇನಪ್ಪ ಅಂಥದ್ದು?

ಸುರೇಶ : ಎಲ್ಲೋ ಇದ್ದ ಈ ಎರಡು ಜೀವಗಳನ್ನು ಒಂದು ಮಾಡಿದ ಮದುವೆ ದಲ್ಲಾಳಿಯದು!

 

ಮಗ : ಅಮ್ಮ…… ನಾನು ಹೇಗೆ ಕಾಣ್ತೀದ್ದೀನಮ್ಮ?

ತಾಯಿ : ಅದನ್ನು ನಿನ್ನ ಗರ್ಲ್ ಫ್ರೆಂಡ್‌ ನ್ನೇ ಕೇಳಬೇಕಪ್ಪ.

ಮಗ : ಅದರೆ…. ನನಗೆ ಯಾರೂ ಗರ್ಲ್ ಫ್ರೆಂಡೇ ಇಲ್ವಲ್ಲ?

ತಾಯಿ : ಹಾಗಿದ್ದರೆ ಈ ಪ್ರಶ್ನೆಯನ್ನು ನಿನಗೆ ನೀನೇ ಕೇಳಿಕೋ…. ಅದರಲ್ಲೇ ಅರ್ಥ ಮಾಡಿಕೋ!

 

ಒಬ್ಬ ಅತಿ ತೆಳ್ಳಗೆ ಎಲುಬುಗೂಡಿನಂತಿದ್ದ ವ್ಯಕ್ತಿ ಶೇವಿಂಗ್‌ ಮಾಡಿಸಲೆಂದು ಅಂಗಡಿಗೆ ಬಂದಿದ್ದ.

ಕಡ್ಡಿ ಪೈಲ್ವಾನ್‌ : ಈ ನನ್ನ ಕೆನ್ನೆ ನೋಡು…. ಸಣ್ಣಗಿರುವ ಕಾರಣ ಒಳಗೆ ಹೋಗಿಬಿಟ್ಟಿದೆ, ಶೇವಿಂಗ್‌ ಮಾಡಿಕೊಳ್ಳುವುದೇ ಕಷ್ಟಕರ. ನಿನ್ನ ಸೆಲೂನಿನಲ್ಲಿ ಏನಾದ್ರೂ ಪರಿಹಾರ ಇದೆಯೇ?

ಕ್ಷೌರಿಕ : ಹ್ಞಾಂ, ನಿಮ್ಮಂಥವರಿಗಾಗಿಯೇ ನನ್ನ ಬಳಿ ದೊಡ್ಡ ನಿಂಬೆ ಗಾತ್ರದ ಗೋಲಿ ಇದೆ. ಅದನ್ನು ಕೆನ್ನೆಗೆ ಒತ್ತರಿಸಿಕೊಳ್ಳಿ, ಆಗ ನೀಟಾಗಿ ಶೇವ್ ‌ಮಾಡಿಬಿಡುತ್ತೇನೆ.

ಕಡ್ಡಿ ಪೈಲ್ವಾನ್‌ : ಅದೇನೋ ಸರಿ, ಅಕಸ್ಮಾತ್‌ ಮರೆತು ನಾನೇನಾದರೂ ಇದನ್ನು ನುಂಗಿಬಿಟ್ಟರೆ ಬಹಳ ಅಪಾಯಕಾರಿ ಅಲ್ಲವೇ? ಆಗ ಏನು ಮಾಡುವುದು?

ಕ್ಷೌರಿಕ : ಅದೇನೋ ನಿಜ, ನಿಮ್ಮಂಥವರು ಎಷ್ಟೋ ಮಂದಿ ಹೀಗೇ ಮಾಡಿದ್ದಾರೆ. ಈ ಬಗ್ಗೆ ನೀವೇನೂ ಹೆದರಬೇಕಿಲ್ಲ. ಮಾರನೇ ದಿನ ಬೆಳಗ್ಗೆ ಸಂಡಾಸಿಗೆ ಹೋದರೆ ಅದು ತಾನಾಗಿ ಹೊರಬರುತ್ತದೆ. ಎಷ್ಟೋ ಜನ ಪ್ರಾಮಾಣಿಕವಾಗಿ ಅದನ್ನು ಹೀಗೇ ತಂದುಕೊಟ್ಟಿದ್ದಾರೆ!

ಇದನ್ನು ಕೇಳುತ್ತಿದ್ದ ಕಡ್ಡಿ ಪೈಲ್ವಾನ್‌ ಗತಿ ಏನಾಗಿರಬಹುದು ಊಹಿಸಿ….

 

ಬಸ್‌ ಸ್ಟಾಪಿನಲ್ಲಿ ನಿಂತಿದ್ದ ಒಬ್ಬ ಗ್ಲಾಮರಸ್‌ ಬೆಡಗಿಯನ್ನು ಇಂಪ್ರೆಸ್‌ ಮಾಡಲು ಗುಂಡ ಯತ್ನಿಸುತ್ತಿದ್ದ.

ಗುಂಡ : ನಿಮ್ಮ ಡ್ರೆಸ್‌ ಬಹಳ ಚೆನ್ನಾಗಿದೆ…..

ಹುಡುಗಿ : ಥ್ಯಾಂಕ್ಸ್

ಗುಂಡ : ನಿಮ್ಮ ಮೇಕಪ್‌…. ಹೇರ್‌ ಸ್ಟೈಲ್ ‌ನಿಜಕ್ಕೂ ಬೊಂಬಾಟಾಗಿದೆ!

ಹುಡುಗಿ : ಥ್ಯಾಂಕ್‌ ಯೂ ಸೋ ಮಚ್‌ ಬ್ರದರ್‌.

ಗುಂಡ : ಆದರೆ…. ನೋಡೋದಿಕ್ಕೆ ಮಾತ್ರ ಬಲು ಕುರೂಪಿ!

 

ರಂಗ : ಕಲ್ಲುಮುಳ್ಳು ತುಂಬಿರುವ ದುರ್ಗಮ ಹಾದಿಯಲ್ಲಿ ಸದಾ ನಿಮ್ಮ ಸಂಗಾತಿ ಆಗಿರುವವರು ಯಾರು?

ಸೀನ : ಬಹುಶಃ ಪತ್ನಿ, ಗರ್ಲ್ ಫ್ರೆಂಡ್‌, ಪ್ರೇಮಿ, ತಾಯಿ, ತಂಗಿ, ಬಂಧುಬಳಗ, ಫ್ರೆಂಡ್ಸ್….. ಯಾರಾದರೂ ಆಗಿರಬಹುದು.

ರಂಗ : ಅದೇನಲ್ಲ ಬಿಡು…. ಚಪ್ಪಲಿ ಮಾತ್ರ!

ಸೀನ : ಓಹೋ… ಸದಾ ಎಮೋಶನಲ್ ಆಗಿರುವ ಬದಲು ಆಗಾಗ ಪ್ರಾಕ್ಟಿಕಲ್ ಆಗಿಯೂ ಯೋಚಿಸಬೇಕು ಅಂತೀಯಾ?

ರಂಗ : ಅಲ್ಲವೇ ಮತ್ತೆ?

 

ಮಾಲಾ : ಕೆಲವು ಕ್ಷಣಗಳ ನಿರ್ಲಕ್ಷ್ಯದಿಂದಾಗಿ 14 ದಿನಗಳ ಕಾಲ ಅಜ್ಞಾತವಾಸಕ್ಕೆ ಹೋಗಬೇಕಾಯಿತು.

ಲೀಲಾ : ಎಲ್ಲಾ ಪ್ರೇಮ ಕಾಮಗಳ ಮಹಿಮೆ!

ಮಾಲಾ : ಛೇ…ಛೇ…! ಅದಲ್ಲ, ಕೊರೋನಾದಿಂದ ಕ್ವಾರಂಟೈನ್‌ ಆಗಿತ್ತು ಮಾರಾಯ್ತಿ!

 

ರವಿ ತನ್ನ ಗರ್ಲ್ ಫ್ರೆಂಡ್‌ ನ್ನೇ ಮದುವೆ ಆಗಬೇಕೆಂಬ ಹಠದಿಂದ ಅವಳ ತಂದೆಯನ್ನು ಅನುಮತಿ ಕೇಳಲು ಹೋದ.

ತಂದೆ : ನೋಡಪ್ಪ, ನನ್ನ ಮಗಳು ತನ್ನ ಇಡೀ ಜೀವನ ಯಾರೋ ಮೂರ್ಖನೊಂದಿಗೆ ಕಳೆಯುವುದು ಖಂಡಿತಾ ನಮಗಾರಿಗೂ ಇಷ್ಟವಿಲ್ಲ!

ರವಿ : ಅದಕ್ಕೆ ತಾನೇ ಸಾರ್‌ ನಾನು ನಿಮ್ಮ ಮಗಳನ್ನು ಈ ಮನೆಯಿಂದ ಹೊರಗೆ ಕರೆದುಕೊಂಡು ಹೋಗಿ ಮದುವೆ ಆಗ್ತೀನಿ ಅಂದದ್ದು?

ನಂತರ ರವಿಗೆ ಎಂಥ ಧರ್ಮದೇಟು ಬಿದ್ದಿರಬಹುದೆಂದು ನೀವೇ ಊಹಿಸಿ!

 

ಒಂದು ದಿನ ಪತ್ನಿ ಬಹಳ ರೊಮ್ಯಾಂಟಿಕ್‌ ಮೂಡ್‌ ನಲ್ಲಿ ಪತಿಯನ್ನು ಕೇಳಿದಳು, “ನೀವು ನನಗಾಗಿ ಆಕಾಶದಿಂದ ಚಂದ್ರ ತಾರೆಯರನ್ನು ಕಿತ್ತು ತಂದುಕೊಡ್ತೀರಾ?”

ಪತಿ ತಕ್ಷಣ ಒಳಗಿನ ಕೋಣೆಗೆ ಹೋಗಿ ಒಂದು ಕನ್ನಡಿಯನ್ನು ತಂದು ಅವಳ ಕೈಲಿ ಕೊಟ್ಟ.

ಪತ್ನಿ : ಓಹ್‌…… ನೀವೆಷ್ಟು ರೊಮ್ಯಾಂಟಿಕ್‌! ಎದುರಿಗಿರುವ ಕನ್ನಡಿಯಲ್ಲಿನ ಮುಖಕ್ಕಿಂತ ಆ ಚಂದ್ರ ತಾರೆಯರ ಸೌಂದರ್ಯ ಹೆಚ್ಚೇನಲ್ಲ ಎಂದು ಹೊಗಳುತ್ತಿದ್ದೀರಾ….? ಥೂ ಹೋಗಿಪ್ಪ….. ನನಗೆ ಬಹಳ ನಾಚಿಕೆ ಆಗ್ತಿದೆ!

ಪತಿ : ಹಾಗಲ್ಲ…. ಈ ಮುಸುಡಿಯನ್ನು ಸರಿಯಾಗಿ ನೋಡು, ಇಂಥ ಮೂತಿಗೆ ಆಕಾಶದಲ್ಲಿರುವ ಚಂದ್ರ ತಾರೆಯರು ಬೇರೆ ಒಂದು ಕೇಡು! ಅಂತ ಸರಿಯಾಗಿ ಅರ್ಥ ಮಾಡಿಕೊಳ್ಳಲಿ ಅಂತ….ಸ್ವಲ್ಪ ಹೊತ್ತಿಗೆ ನೋಡಿದರೆ ಪತಿಯ ತಲೆಯ ಮೇಲೆ ಕನ್ನಡಿ 16 ಹೋಳಾಗಿ ಸಿಡಿದಿತ್ತಂತೆ!

 

ಸೀನ : ಇತ್ತೀಚೆಗೆ ಸಮಾಜದಲ್ಲಿ ಬಹಳ ಪರಿವರ್ತನೆ ಆಗಿಹೋಗಿದೆ… ಜನ ತಮ್ಮ ದರ್ಪ ಮರೆತಂತಿದೆ…

ನಾಣಿ : ಇಲ್ಲವಲ್ಲ…. ಯಾಕೆ ಹಾಗೆ ಹೇಳ್ತಿದ್ದೀಯಾ?

ಸೀನ : ನಿನ್ನೆ ಒಂದು ಮದುವೆಗೆ ಹೋಗಿದ್ದೆ….. ಅಲ್ಲಿ ಹುಡುಗನ ಭಾವ ಒಂದಿಷ್ಟೂ ಮುಖ ಗಂಟು ಹಾಕಿಕೊಳ್ಳದೆ ನಗುನಗುತ್ತಾ ಎಲ್ಲರೊಂದಿಗೆ ಮಾತನಾಡುತ್ತಿದ್ದ…. ಚಿಕ್ಕಪ್ಪ ಪ್ರೀತಿಯಿಂದ ಎಲ್ಲರನ್ನೂ ವಿಚಾರಿಸಿ ಊಟಕ್ಕೆ ಕೂರಿಸುತ್ತಿದ್ದ ಅಂತೀನಿ!

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ