ಕೇಂದ್ರ ಸಾಹಿತ್ಯ ಅಕಾಡೆಮಿಯ 2025ನೇ ಸಾಲಿನ ಯುವ ಪುರಸ್ಕಾರವು ಯುವ ಲೇಖಕ ಆರ್. ದಿಲೀಪ್ ಕುಮಾರ್ ಅವರ “ಪಚ್ಚೆಯ ಜಗುಲಿ” ವಿಮರ್ಶಾ ಸಂಕಲನಕ್ಕೆ ಹಾಗೂ ಬಾಲ ಸಾಹಿತ್ಯ ಪುರಸ್ಕಾರವು ಲೇಖಕ ಕೆ. ಶಿವಲಿಂಗಪ್ಪ ಹಂದಿಹಾಳು ಅವರ “ನೋಟ್ ಬುಕ್” ಮಕ್ಕಳ ಕೃತಿಗೆ ಲಭಿಸಿದೆ.

ಎರಡೂ ಕೃತಿಗಳು ಕನ್ನಡ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ ನೀಡಿವೆ. ಪ್ರಶಸ್ತಿ ವಿಜೇತರಿಗೆ ತಲಾ 50,000 ರೂಪಾಯಿ ನಗದು ಮತ್ತು ಪ್ರಶಸ್ತಿ ಫಲಕ ನೀಡಲಾಗುತ್ತದೆ. ಪ್ರಶಸ್ತಿ ಪ್ರದಾನ ಸಮಾರಂಭವು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಅಕಾಡೆಮಿ ಪ್ರಕಟಣೆ ತಿಳಿಸಿದೆ.ಕವಿ, ವಿಮರ್ಶಕ ಹಾಗೂ ಸಂಶೋಧಕರಾದ ಚಾಮರಾಜನಗರದ ದಿಲೀಪ್​ ಕುಮಾರ್​ ಹುಟ್ಟಿದ್ದು 1991ರ ಮಾರ್ಚ್​ 16ರಂದು. ಪದವಿ ಶಿಕ್ಷಣವನ್ನು ಸರ್ಕಾರಿ ಪದವಿ ಕಾಲೇಜು ಚಾಮರಾಜನಗರ, ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನು ಜೆಎಸ್​ಎಸ್​ ಕಾಲೇಜು ಚಾಮರಾಜನಗರದಲ್ಲಿ ಪೂರೈಸಿದ ದಿಲೀಪ್​ ಕುಮಾರ್​, ಇದೇ ಕಾಲೇಜಿನಲ್ಲಿ ಬಿಎಡ್​ ಪದವಿಯನ್ನು ಪಡೆದರು. ನಾಲ್ಕು ವರ್ಷಗಳ ಕಾಲ ಚಾಮರಾಜನಗರ, ಕೊಳ್ಳೇಗಾಲ, ಗುಂಡ್ಲುಪೇಟೆಗಳಲ್ಲಿನ ಪದವಿ ಪೂರ್ವ ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ.

ದಿಲೀಪ್​ ಕುಮಾರ್​ ಅವರು ಮಹಾಕವಿ ಪಂಪನ ಎರಡೂ ಮಹಾಕಾವ್ಯಗಳ ಕುರಿತು ಸರಣಿ ವಿಮರ್ಶಾ ಲೇಖನಗಳನ್ನು ಬರೆದಿದ್ದಾರೆ. ವಚನ ಸಾಹಿತ್ಯ ಕುರಿತು ಬರೆದ ಲೇಖನಗಳನ್ನು “ಶಬ್ದ ಸೋಪಾನ” ಹೆಸರಿನಲ್ಲಿ ಪ್ರಕಟಿಸಿದ್ದಾರೆ. “ಹಾರುವ ಹಂಸೆ” ಅವರ ಕವನ ಸಂಕಲನ.

ಶಿವಲಿಂಗಪ್ಪ ಹಂದಿಹಾಳು ಅವರು ಬಳ್ಳಾರಿ ಜಿಲ್ಲೆಯ ಹಂದಿಹಾಳು ಗ್ರಾಮದವರು. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕರಾಗಿದ್ದಾರೆ. ನಾನು ಮತ್ತು ಕನ್ನಡಕ- ಕವನ ಸಂಕಲನ, ಎಳೆಬಿಸಿಲು – ಮಕ್ಕಳ ಸಾಹಿತ್ಯ ಸಂಪದ, ಶಾವೋಲಿನ್ – ಇಂಗ್ಲಿಷ್​ ಮೂಲ ಮಕ್ಕಳ ಕತೆಗಳು, ಆನಂದಾವಲೋಕನ – ಭಾರತೀಯ ಮಕ್ಕಳ ಸಾಹಿತ್ಯ ಕುರಿತು, ಬಳ್ಳಾರಿಯ ಬೆಡಗು – ಕಥಾ ಸಂಕಲನ, ದಿ ಯಂಗ್ ಸೈಂಟಿಸ್ಟ್​ – ಮಕ್ಕಳ ಕಾದಂಬರಿ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಅವರ ನೋಟ್​ ಬುಕ್​ ಮಕ್ಕಳ ಸಣ್ಣ ಕಥೆಗಳ ಪುಸ್ತಕವು 2021ರಲ್ಲಿ ಪ್ರಕಟವಾಗಿತ್ತು.

ಕನ್ನಡ ವಿಭಾಗದಲ್ಲಿ ಯುವ ಪುರಸ್ಕಾರಕ್ಕೆ ಲೇಖಕರಾದ ಜಿ.ಎಂ. ಹೆಗಡೆ, ಪ್ರೊ.ವಿಕ್ರಂ ವಿಸಾಜಿ ಹಾಗೂ ವಿದ್ವಾಂಸ ಟಿ. ಪಿ. ಅಶೋಕ ಹಾಗೂ ಬಾಲ ಸಾಹಿತ್ಯ ಪುರಸ್ಕಾರಕ್ಕೆ ಲೇಖಕರಾದ ಬಸು ಬೇವಿನಗಿಡದ, ಬೇಲೂರು ರಘುನಂದನ್ ಹಾಗೂ ಎಚ್​. ಶಶಿಕಲಾ ತೀರ್ಪುಗಾರರಾಗಿದ್ದರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ