ಜಾಗೀರ್ದಾರ್*
abbs studios ಲಾಂಛನದಲ್ಲಿ ಅಜನೀಶ್ ಲೋಕನಾಥ್ ಹಾಗೂ ಸಿ.ಆರ್ ಬಾಬಿ ಅವರು ನಿರ್ಮಿಸಿರುವ, ಸಿ.ಆರ್.ಬಾಬಿ ಅವರ ನಿರ್ದೇಶನದಲ್ಲಿ ಬಿಗ್ ಬಾಸ್ ಖ್ಯಾತಿಯ ಶೈನ್ ಶೆಟ್ಟಿ ಹಾಗೂ ಅಂಕಿತ ಅಮರ್ ನಾಯಕ-ನಾಯಕಿಯಾಗಿ ನಟಿಸಿರುವ ಬಹು ನಿರೀಕ್ಷಿತ “ಜಸ್ಟ್ ಮ್ಯಾರೀಡ್” ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ಅದ್ದೂರಿಯಾಗಿ ನೆರವೇರಿತು. ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಆನ್ ಲೈನ್ ಮೂಲಕ ಟ್ರೇಲರ್ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಮದುವೆ ಮನೆ ವಾತಾವರಣ ನಿರ್ಮಾಣವಾಗಿತ್ತು. ಮುಂಭಾಗಲಿನಲ್ಲೇ ಮಂಗಳದ್ರವ್ಯಗಳನ್ನು ನೀಡಿ ಮುತ್ತಿನ ಹಾರ ಹಾಕಿ ಬಂದ ಅತಿಥಿಗಳನ್ನು ಸ್ವಾಗತಿಸಲಾಯಿತು. ಹೆಣ್ಣುಮಕ್ಕಳು ಮೆಹಂದಿ ಹಾಕಿಸಿಕೊಂಡು ಸಂಭ್ರಮಿಸುತ್ತಿದ್ದದ್ದು ಅಲ್ಲಿ ಕಂಡು ಬಂತು. ಚಿತ್ರತಂಡದರು ಮದುವೆಗೆ ಹೋಗುವಾಗ ಸಿದ್ದವಾಗುವ ಹಾಗೆ “ಜಸ್ಟ್ ಮ್ಯಾರೀಡ್” ಟ್ರೇಲರ್ ಬಿಡುಗಡೆ ಸಮಾರಂಭಕ್ಕೂ ಬಂದಿದ್ದು ವಿಶೇಷವಾಗಿತ್ತು. ಟ್ರೇಲರ್ ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.
ನಾನು ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಲು ನೆರವಾಗಿ ನಿಂತ ಸಿ.ಆರ್ ಬಾಬಿ ಅವರಿಗೆ ಚಿತ್ರ ನಿರ್ದೇಶನ ಮಾಡಬೇಕೆಂಬ ಆಸೆ ಮೊದಲಿನಿಂದಲೂ ಇತ್ತು. ನಾನು ಕೂಡ ಚಿತ್ರ ನಿರ್ದೇಶನ ಮಾಡಿ ಅಂತ ಹೇಳುತ್ತಿದ್ದೆ. ಆದರೆ ಈಗ ಕಾಲ ಕೂಡಿ ಬಂದಿದೆ. ಚಿತ್ರ ಆರಂಭವಾದ ದಿನದಿಂದಲೂ ನನಗೆ ಚಿತ್ರತಂಡ ನೀಡುತ್ತಿರುವ ಸಹಕಾರ ಅಪಾರ. ಅದರ ಜೊತೆಗೆ ಶಿವರಾಜಕುಮಾರ್, ಉಪೇಂದ್ರ, ಕಿಚ್ಚ ಸುದೀಪ್, ರಕ್ಷಿತ್ ಶೆಟ್ಟಿ, ರಾಜ್ ಬಿ ಶೆಟ್ಟಿ, ರಿಷಬ್ ಶೆಟ್ಟಿ , ನಿಥಿಲನ್, ಅಜಯ್ ಭೂಪತಿ ಸೇರಿದಂತೆ ಅನೇಕ ಗಣ್ಯರು ನಮ್ಮ ಚಿತ್ರದ ಹಾಡುಗಳು, ಟೀಸರ್ ಹಾಗೂ ಟ್ರೇಲರ್ ಅನ್ನು ಬಿಡುಗಡೆ ಮಾಡಿ ಕೊಟ್ಟಿದ್ದಾರೆ. ಹಾಡುಗಳು ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿ ಜನಪ್ರಿಯವಾಗಿದೆ. ಚಿತ್ರ ವೀಕ್ಷಣೆ ಮಾಡಿರುವ ನಿರ್ಮಾಪಕ ವಿಜಯ್ ಕಿರಗಂದೂರು ತಮ್ಮ ವಿ.ಕೆ ಫಿಲಂಸ್ ಮೂಲಕ ನಮ್ಮ ಚಿತ್ರವನ್ನು ವಿತರಣೆ ಮಾಡುತ್ತಿದ್ದಾರೆ. ಆಗಸ್ಟ್ 22 ರಂದು ನಮ್ಮ ಚಿತ್ರ ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ ಎಂದು ನಿರ್ಮಾಪಕ ಹಾಗೂ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ತಿಳಿಸಿದರು.
ನಿರ್ದೇಶನ ಮಾಡಬೇಕೆಂಬ ಹಲವು ವರ್ಷಗಳ ಕನಸು “ಜಸ್ಟ್ ಮ್ಯಾರೀಡ್” ಚಿತ್ರದ ಮೂಲಕ ನೆರವೇರಿದೆ ಎಂದು ಮಾತನಾಡಿದ ನಿರ್ದೇಶಕಿ ಸಿ.ಆರ್.ಬಾಬಿ, ಬಹು ತಾರಾಬಳಗವಿರುವ ನಮ್ಮ ಚಿತ್ರದ ಚಿತ್ರೀಕರಣ ನಿಗದಿತ ಯೋಜನೆಗೂ ಮೂರು ದಿನಗಳ ಮುಂಚೆ ಪೂರ್ಣವಾಗಿದೆ. ಅದಕ್ಕೆ ಕಾರಣ ಕಲಾವಿದರ ಹಾಗೂ ತಂತ್ರಜ್ಞರ ಸಹಕಾರ. ಅದರಲ್ಲೂ ಛಾಯಾಗ್ರಾಹಕ ಪಿ.ಜಿ ಅವರು ಮುಖ್ಯ ಕಾರಣ. ನಿರ್ಮಾಪಕ ಅಜನೀಶ್ ಅವರಂತೂ ಯಾವುದೇ ಕೊರತೆ ಬಾರದ ಹಾಗೆ ಚಿತ್ರ ನಿರ್ಮಾಣ ಮಾಡಿದ್ದಾರೆ. ಇಂದು ಟ್ರೇಲರ್ ಬಿಡುಗಡೆಯಾಗಿದೆ. ಆಗಸ್ಟ್ 22 ರಂದು ಚಿತ್ರ ತೆರೆಗೆ ಬರಲಿದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು.
ಕಳೆದ ಒಂದು ವರ್ಷದಿಂದ ನನ್ನ ಹತ್ತಿರ ಯಶಸ್ವಿ ಚಿತ್ರಗಳಾದ “ಕಾಟೇರ”, “ಕೃಷ್ಣಂ ಪ್ರಣಯ ಸಖಿ”, “ಮಾದೇವ” ಚಿತ್ರಗಳ ಫಲಕಗಳಿದೆ. “ಎಕ್ಕಾ” ಚಿತ್ರ ಕೂಡ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದೆ. ಈಗ ಆ ಸಾಲಿಗೆ ಸೇರುವ ಮತ್ತೊಂದು ಚಿತ್ರ “ಜಸ್ಟ್ ಮ್ಯಾರೀಡ್” ಆಗಲಿದೆ ಎಂದು ಮಾತನಾಡಿದ ನಟಿ ಶೃತಿ ನಿರ್ದೇಶಕಿ ಸಿ.ಆರ್ ಬಾಬಿ ಅವರ ಕಾರ್ಯ ವೈಖರಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು ಹಾಗೂ ಚಿತ್ರೀಕರಣದ ಅನುಭವವನ್ನು ಹಂಚಿಕೊಂಡರು.
ನಿರ್ದೇಶಕರು ನನ್ನ ಪಾತ್ರ ಗೌಪ್ಯವಾಗಿಟ್ಟಿದ್ದಾರೆ. ಹಾಗಾಗಿ ಪಾತ್ರದ ಬಗ್ಗೆ ಹೇಳುವ ಹಾಗಿಲ್ಲ. ಆದರೆ ಚಿತ್ರೀಕರಣದ ಅನುಭವ ಹೇಳಬಹುದು. ಖಂಡಿತವಾಗಿಯೂ ಇದು ಸಿ.ಆರ್ ಬಾಬಿ ಅವರ ಮೊದಲ ನಿರ್ದೇಶನದ ಚಿತ್ರ ಅಂತ ಹೇಳಲು ಸಾಧ್ಯವಿಲ್ಲ. ಅನುಭವಿ ನಿರ್ದೇಶಕರ ಹಾಗೆ ಕಾರ್ಯ ನಿರ್ವಹಿಸಿದ್ದಾರೆ. ಚಿತ್ರರಂಗದಲ್ಲಿ ನಿರ್ದೇಶಕಿಯರ ಸಂಖ್ಯೆ ಕಡಿಮೆ. ಅಂತಹುದರಲ್ಲಿ ಮಹಿಳೆಯೊಬ್ಬರಿಗೆ ನಿರ್ದೇಶನ ನೀಡಲು ಅವಕಾಶ ನೀಡಿದ ಅಜನೀಶ್ ಲೋಕನಾಥ್ ಅವರಿಗೆ ಅಭಿನಂದನೆ ತಿಳಿಸುತ್ತೇನೆ ಎಂದರು ನಟಿ ಮಾಳವಿಕ ಅವಿನಾಶ್.
ಆಗಷ್ಟೇ “ಕಾಂತಾರ” ಸಿನಿಮಾ ಬಿಡುಗಡೆಯಾಗಿತ್ತು. ಆ ಸಮಯದಲ್ಲಿ ಅಜನೀಶ್ ಅವರಿಂದ ನನಗೊಂದು ಕರೆ ಬರುತ್ತದೆ. ನಾನೊಂದು ಚಿತ್ರ ನಿರ್ಮಾಣ ಮಾಡುತ್ತಿದ್ದೇನೆ. ನೀವು ನಾಯಕನಾಗಿ ನಟಿಸಬೇಕು ಎಂದು. ಆನಂತರ ಸಿ.ಆರ್.ಬಾಬಿ ಹಾಗೂ ಅಜನೀಶ್ ಅವರು ಈ ಚಿತ್ರದ ಕಥೆ ಹೇಳುತ್ತಾರೆ. ನನಗಂತೂ ಕಥೆ ಬಹಳ ಇಷ್ಟವಾಗುತ್ತದೆ. ನಂತರ ಚಿತ್ರೀಕರಣ ಪ್ರಾರಂಭವಾಗುತ್ತದೆ. ಇನ್ನೂ, ಈ ಚಿತ್ರದಲ್ಲಿ ದೇವರಾಜ್, ಶೃತಿ, ಮಾಳವಿಕ ಅವಿನಾಶ್, ಶ್ರೀಮನ್ ಹೀಗೆ ಅನುಭವಿ ಕಲಾವಿದರ ದೊಡ್ಡ ತಾರಾಬಳಗವೇ ಇದೆ. ಇಂತಹ ಹಿರಿಯರೊಡನೆ ನಟಿಸಿದ್ದು ಬಹಳ ಖುಷಿಯಾಗಿದೆ. ಅವಕಾಶ ನೀಡಿದ ಸಿ.ಆರ್.ಬಾಬಿ ಹಾಗೂ ಅಜನೀಶ್ ಅವರಿಗೆ ಧನ್ಯವಾದ ಎಂದರು ನಾಯಕ ಶೈನ್ ಶೆಟ್ಟಿ.
ನಾನು ಈ ಸಿನಿಮಾ ಜರ್ನಿಯ ಮೂರು ಅಂಶಗಳ ಬಗ್ಗೆ ಮಾತನಾಡುತ್ತೇನೆ. ಅದು ಕನಸು, ಕೆಲಸ ಹಾಗೂ ಕಥೆ. ಚಿಕ್ಕಂದಿನಿಂದಲೂ ನನಗೆ ನಟನೆಯಲ್ಲಿ ಆಸಕ್ತಿ. ಟಿವಿ ಅಥವಾ ದೊಡ್ಡ ಪರದೆಯಲ್ಲಿ ತಾರೆಯರನ್ನು ನೋಡಿದಾಗ ಇವರೆಲ್ಲಾ ಇಷ್ಟು ಚೆನ್ನಾಗಿ ಹೇಗೆ ಅಭಿನಯಿಸುತ್ತಾರೆ. ಹೀಗೆ, ಸಾಕಷ್ಟು ಪ್ರಶ್ನೆಗಳು ಮೂಡುತ್ತಿದ್ದವು. ಇದು ನನ್ನ ಎರಡನೇ ಚಿತ್ರ. ಎರಡನೇ ಚಿತ್ರದಲ್ಲೇ ಇಂತಹ ಮಹಾನ್ ತಾರೆಗಳ ಜೊತೆಗೆ ನಟಿಸುವ ಅವಕಾಶ ಒದಗಿ ಬಂತು. ಈ ಅವಕಾಶ ನೀಡಿದ ಸಿ.ಆರ್ ಬಾಬಿ ಹಾಗೂ ಅಜನೀಶ್ ಅವರಿಗೆ ಅನಂತ ಧನ್ಯವಾದ ಎಂದರು ನಾಯಕಿ ಅಂಕಿತ ಅಮರ್.
ಚಿತ್ರದಲ್ಲಿ ನಟಿಸಿರುವ ಶ್ರೀಮಾನ್, ವಾಣಿ ಹರಿಕೃಷ್ಣ, ಅಭಿನವ್, ವೇದಿಕಾ, ನೃತ್ಯ ನಿರ್ದೇಶಕಿ ಶಾಂತಿ ಮಾಸ್ಟರ್, ಕಲಾ ನಿರ್ದೇಶಕ ಅಮರ್ ಹಾಗೂ ವಿ.ಕೆ.ಫಿಲಂಸ್ ನ ರಾಜೇಶ್ ಅವರು ಸೇರಿದಂತೆ ಚಿತ್ರತಂಡದ ಅನೇಕ ಸದಸ್ಯರು “ಜಸ್ಟ್ ಮ್ಯಾರೀಡ್” ಕುರಿತು ಮಾತನಾಡಿದರು. ಖ್ಯಾತ ಗಾಯಕ ಜಸ್ಕರಣ್ ಸಿಂಗ್ ಚಿತ್ರದ ಹಾಡೊಂದನ್ನು ವೇದಿಕೆಯಲ್ಲಿ ಹಾಡಿದರು. ಈ ಚಿತ್ರದ ಹಾಡುಗಳು ಹಾಗೂ ಟ್ರೇಲರ್ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ.