– ರಾಘವೇಂದ್ರ ಅಡಿಗ ಎಚ್ಚೆನ್.
ಚಿತ್ರ: ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ
ನಿರ್ದೇಶನ: ಅಭಿಷೇಕ್ ಮಂಜುನಾಥ್
ನಿರ್ಮಾಣ: ಎಚ್.ಕೆ. ಪ್ರಕಾಶ್
ತಾರಾಂಗಣ: ದೀಕ್ಷಿತ್ ಶೆಟ್ಟಿ, ಬೃಂದಾ ಆಚಾರ್ಯ, ಗೋಪಾಲಕೃಷ್ಣ ದೇಶಪಾಂಡೆ, ಉಷಾ ಭಂಡಾರಿ ಮೊದಲಾದವರು
ರೇಟಿಂಗ್: 3/5
ನ್ಯಾಷನಲ್ ಕ್ರಶ್ ರಶ್ಮಿಕಾ ಜೊತೆಗಿನ ದಿ ಗರ್ಲ್ಫ್ರೆಂಡ್ ಚಿತ್ರದ ಸಕ್ಸಸ್ ಖುಷಿಯಲ್ಲಿರೋ ದೀಕ್ಷಿತ್ ಶೆಟ್ಟಿ, ಇದೀಗ ಮತ್ತೊಂದು ಭಿನ್ನ ಅಲೆಯ ಚಿತ್ರದ ಮೂಲಕ ಪ್ರೇಕ್ಷಕರನ್ನ ಎಂಟರ್ಟೈನ್ ಮಾಡೋಕೆ ಬಂದಿದ್ದಾರೆ. ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ ಸಿನಿಮಾ ಈ ವಾರ(ನವೆಂಬರ್ 27) ತೆರೆಗೆ ಬಂದಿದೆ.. ಸಿಂಪಲ್ ಸುನಿ ಹಾಗೂ ರಕ್ಷಿತ್ ಶೆಟ್ಟಿ ಗರಡಿಯಲ್ಲಿ ಪಳಗಿರೋ ವಿ.ಎಫ್.ಎಕ್ಸ್. ಪಿನಾಕ ಕಂಪೆನಿಯ ಅಭಿಷೇಕ್ ನಿರ್ದೇಶನದ ಚೊಚ್ಚಲ ಚಿತ್ರ ಇದಾಗಿದೆ.. ದಿಯಾ, ದಸರಾ ಖ್ಯಾತಿಯ ದೀಕ್ಷಿತ್ ಶೆಟ್ಟಿ ನಟನೆಯ ಮತ್ತೊಂದು ಕಂಟೆಂಟ್ ಬೇಸ್ಡ್ ಸಿನಿಮಾ ಇದಾಗಿದ್ದು, ಸ್ಯಾಂಡಲ್ವುಡ್ ಏಂಜಲ್ ಬೃಂದಾ ಆಚಾರ್ಯ ಈ ಚಿತ್ರದಲ್ಲಿ ನಾಯಕಿಯಾಗಿ ಮಿಂಚು ಹರಿಸಲಿದ್ದಾರೆ. ರಂಗಿತರಂಗ, ಅವನೇ ಶ್ರೀಮನ್ನಾರಾಯಣ ಚಿತ್ರಗಳ ನಿರ್ಮಾಪಕ ಹೆಚ್ ಕೆ ಪ್ರಕಾಶ್ ಈ ಚಿತ್ರದ ಮೂಲಕ ಮತ್ತೊಂದು ಸಿನಿಮಾ ಕೊಟ್ಟಿದ್ದಾರೆ. ಜೂಡಾ ಸ್ಯಾಂಡಿ ಮ್ಯೂಸಿಕ್, ಅಭಿಷೇಕ್ ಕಾಸರಗೋಡು ಸಿನಿಮಾಟೋಗ್ರಫಿ ಚಿತ್ರಕ್ಕೆ ಸಾಥ್ ನೀಡಿದ್ದು, ಭರತ್ ಚಿತ್ರಕ್ಕೆ ದೊಡ್ಡ ಟ್ವಿಸ್ಟ್ ನೀಡ್ತಾರೆ. ಇನ್ನು ಗೋಪಾಲಕೃಷ್ಣ ದೇಶಪಾಂಡೆ ಪ್ರಮುಖ ಪಾತ್ರ ಪೋಷಿಸಿದ್ದು, ಹಾಸ್ಟೆಲ್ ಹುಡುಗರು ಚಿತ್ರದ ಕಲಾವಿದರ ದಂಡು ಇಲ್ಲಿಯೂ ದೀಕ್ಷಿತ್ ಜೊತೆ ರಾಬರರ್ಸ್ ಆಗಿ ಸಾಥ್ ನೀಡಿದ್ದಾರೆ. ಹಾಗಾದರೆ ಚಿತ್ರ ಹೇಗಿದೆ? ಇಲ್ಲಿ ಓದಿ..

ಮೊದಲಿಗೆ ಹೇಳಬೇಕೆಂದರೆ ಮನಿ ಹೀಸ್ಟ್ ವಬ್ ಸೀರೀಸ್ ನೋಡಿದವರಿಗೆ ಈ ಚಿತ್ರ ನೋಡಿದಾಗ ಮತ್ತೆ ಆ ಸೀರೀಸ್ ನೆನಪಾಗುವುದು ಸಹಜ ಏಕೆಂದರೆ ಇದು ಸ್ಯಾಂಡಲ್ವುಡ್ ಮನಿ ಹೀಸ್ಟ್ ಎಂದೆನ್ನಬಹುದು. ರಾಜ್ಯದ ವಿಧಾನಸಭೆ ಎಲೆಕ್ಷನ್ ಘೋಷಣೆಯಗಿದ್ದ ಸಮಯದಲ್ಲಿ ನಡೆಯುವ ಬ್ಯಾಂಕ್ ರಾಬರಿ ಕಥಾನಕವಿದು. ಹಳ್ಳಿಯೊಂದರಲ್ಲಿ ಬ್ಯಾಂಕ್ ಅನ್ನು ಲೂಟಿ ಮಾಡಲು ಸಿದ್ದವಾಗುವ ಆರು ಜನರ ತಂಡ ಪ್ರಾಣಿಗಳ ಮುಖವಾಡಗಳೊಂದಿಗೆ ಬ್ಯಾಂಕಿಗೆ ನುಗ್ಗುತ್ತದೆ. ಸ್ವಾಭಾವಿಕವಾಗಿ, ತಂಡದ ಪ್ರತಿ ಸದಸ್ಯರು ಪ್ರಾಣಿಗಳ ಸಂಕೇತದ ಹೆಸರನ್ನು ಹೊಂದಿರುತ್ತಾರೆ. ಅನಿರೀಕ್ಷಿತ ಾಡೆತಡೆಗಳ ಜೊತೆಗೆ ಯೋಜಿತವಾಗಿ ಪ್ಲ್ಯಾನ್ ಮಾಡಿರದ ಕಾರಣದಿಂದ ಎಲ್ಲವೂ ನಿರೀಕ್ಷಿಸಿದಂತೆ ನಡೆಯುವುದಿಲ್ಲ. ಹಾಗಾದರೆ ಅಂತಿಮವಾಗಿ ರಾಬರಿ ತಡ ಹಣವನ್ನು ಲೂಟಿ ಮಾಡಿತೋ ಇಲ್ಲವೋ? ಅವರು ಸಿಕ್ಕಿಬಿದ್ದರೋ? ತಪ್ಪಿಸಿಕೊಂಡರೋ? ಈ ಎಲ್ಲಾ ಪ್ರಶ್ನೆಗೆ ಉತ್ತರ ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ ಚಿತ್ರದಲ್ಲಿದೆ.
ಇದೊಂದು ಕಾಮಿಡಿ ಥ್ರಿಲ್ಲರ್ ಜಾನರ್ ಚಿತ್ರವಾಗಿದ್ದು ಅಭಿಷೇಕ್ ನಿರ್ದೇಶನದಲ್ಲಿ ದೀಕ್ಷಿತ್ ಅವರ ಪಾತ್ರವು ಹಲವೆಡೆಗಳಲ್ಲಿ ಉತ್ಪ್ರೇಕ್ಷೆಯಿಂದಲೂ ಕೆಲವೆಡೆ ಹಾಸ್ಯದಿಂದಲೂ ಗಮನ ಸೆಳೆಯುತ್ತದೆ. ದರೋಡೆಗೆ ಬಂದ ಗ್ಯಾಂಗ್ ಲೀಡರ್ ಗೆ ಆ ಬ್ಯಾಂಕಿನೊಳಗೇ ಸಿಕ್ಕುವ ಅರ್ಪಿತಾ ಪಾತ್ರದಲ್ಲಿ ನಾಯಕಿ ಬೃಂದಾ ಆಚಾರ್ಯ ಸಹ ಇಷ್ಟವಾಗುತ್ತಾರೆ. ಇವರಲ್ಲದೆ ನಿಖಾಧಿಕಾರಿಯು (ವಿಶ್ವನಾಥ ಮಾಂಡಲಿಕ) ಒಂದು ಪ್ರಮುಖ ಪಾತ್ರವಾಗಿದ್ದರೆ, ಜನಪ್ರಿಯ ಸುದ್ದಿ-ಕೇಂದ್ರಿತ ಯೂಟ್ಯೂಬರ್ (ಗೋಪಾಲಕೃಷ್ಣ ದೇಶಪಾಂಡೆ) ಮತ್ತು “ಉದಯೋನ್ಮುಖ ಪತ್ರಕರ್ತ” (ಭರತ್ ಜಿ. ಬಿ.) , ಕಂಟೆಂಟ್ ಕ್ರಿಯೇಟರ್ (ಎ. ಎಸ್. ಸೂರಜ್) ಮತ್ತು ಜಾನಪದ ಗಾಯಕಿ (ಉಷಾ ಭಂಡಾರಿ) ಪಾತ್ರ್ಗಳು ಗಮನ ಸೆಳೆಯುವಂತಿದೆ.
ಇಡೀ ಚಿತ್ರದಲ್ಲಿ ಸಾಂದರ್ಭಿಕ ಸಂಭಾಷಣೆಯೇ ಬಂಡವಾಳ. ಆದರೆ ತಾಂತ್ರಿಕ ವೈಭವಗಳ ಹೊರತಾಗಿಯೂ ಚಿತ್ರಕಥೆ, ನಿರೂಪಣೆಯು ಸೋತಿದೆ. .ಹಾಡುಗಳ ಪೈಕಿ ಶಿವನ ಕುರಿತ ಜಾನಪದ ಗೀತೆ ಮಾತ್ರ ಕೇಳಿಸಿಕೊಳ್ಳುವಂತಿದೆ. ಅಭಿಷೇಕ್ ಕಾಸರಗೋಡು ಅವರ ಛಾಯಾಗ್ರಹಣದಲ್ಲಿ ದೃಶ್ಯಗಳು ಉತ್ತಮವಾಗಿ ಬಂದಿದೆ. ಹೀಗೆ ನ್ಯೂನತೆಗಳ ಹೊರತಾಗಿಯೂ, ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ ಒಮ್ಮೆ ನೊಡಬಹುದಾದ ಹಾಸ್ಯ ಚಲನಚಿತ್ರ ಎನ್ನಬಹುದು.





