ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಬಾಂಬ್ ದಾಳಿ ನಡೆಸಿ ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆ ಮಾಡಿದೆ. ಇದರ ಬೆನ್ನಲ್ಲೇ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಅಲೀಪುರದಲ್ಲಿ ಶೋಕ ಮಡುಗಟ್ಟಿದೆ.

ಅಯತೊಲ್ಲಾ ಅಲಿ ಖಮೇನಿ ಹತ್ಯೆ ವಿಚಾರ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಶೋಕಾಚರಣೆ ನಡೆಸಿದ್ದಾರೆ. ಮತ್ತೊಂದೆಡೆ ಹತ್ಯೆ ಮಾಡಿದ ಇಸ್ರೇಲ್​ ಹಾಗೂ ಅಮೆರಿಕ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಲೀಪುರವನ್ನು ‘ಮಿನಿ ಇರಾನ್’ ಎಂದೇ ಕರೆಯಲಾಗುತ್ತದೆ. ಅದಕ್ಕೆ ಕಾರಣ, 1986ರಲ್ಲಿ ಅಯತೊಲ್ಲಾ ಅಲಿ ಖಮೇನಿ ಈ ಗ್ರಾಮಕ್ಕೆ ಬಂದಿದ್ದರು. ಈ ಗ್ರಾಮದಲ್ಲಿ ಅತೀ ಹೆಚ್ಚು ಶಿಯಾ ಮುಸ್ಲಿಮರಿದ್ದಾರೆ. ಖಮೇನಿ ಅವರನ್ನು ಧರ್ಮಗುರುವೆಂದೇ ಅವರು ಗೌರವಿಸುತ್ತಾರೆ.ಖಮೇನಿ ಹತ್ಯೆ ವಿಷಯ ತಿಳಿಯುತ್ತಿದ್ದಂತೆಯೇ ಗ್ರಾಮದ ಒಂದೆಡೆ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ ಶಿಯಾ ಸಮುದಾಯದವರು, ಖಮೇನಿ ಅವರ ಭಾವಚಿತ್ರ ಹಿಡಿದು ಕಂಬನಿ ಮಿಡಿದರು. ಪ್ರತಿಭಟನೆಯಲ್ಲಿ ಮೌಲ್ವಿಗಳು ಸಹ ಭಾಗವಹಿಸಿದ್ದರು. ಸುಮಾರು 25 ಸಾವಿರ ಶಿಯಾ ಮಸ್ಲಿಮರು ಇದ್ದಾರೆ.

ಈ ವೇಳೆ, ಗ್ರಾಮಸ್ಥರು ಬಿಕ್ಕಿ ಬಿಕ್ಕಿ ಅತ್ತ ದೃಶ್ಯಗಳು ಕಂಡುಬಂದವು. ಅಯತೊಲ್ಲಾ ಅಲಿ ಖಮೇನಿ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಮುದಾಯದವರು ಪ್ರಾರ್ಥಿಸಿದರು. ಕಪ್ಪು ಬಟ್ಟೆ ಧರಿಸಿ ಮೆರವಣಿಗೆ ನಡೆಸಿದ ಗ್ರಾಮಸ್ಥರು, ಮೂರು ದಿನಗಳ ಕಾಲ ಶೋಕಾಚರಣೆ ನಡೆಸಲು ನಿರ್ಧರಿಸಿದ್ದಾರೆ.

1986ರಲ್ಲಿ ಸ್ವತಃ ಖಮೇನಿ ಅಲೀಪುರಕ್ಕೆ ಭೇಟಿ ನೀಡಿದ್ದ ವೇಳೆ ಅಭೂತಪೂರ್ವ ಸ್ವಾಗತ ದೊರೆತಿತ್ತು. ಅಲೀಪುರದೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಖಮೇನಿಗೂ ಇಲ್ಲಿನ ಜನರ ಬಗ್ಗೆ ವಿಶೇಷ ಪ್ರೀತಿ ಇತ್ತು. ಖಮೇನಿ ಬಂದು ಹೋದ ನಂತರ ಖಮೇನಿ ಅವರ ಸಹಕಾರದೊಂದಿಗೆ “ಇಮಾಮ್​ ಖಮೇನಿ” ಆಸ್ಪತ್ರೆ ಕಟ್ಟಿಸಲಾಗಿತ್ತು.

ಅಲೀಪುರದ ಸುಮಾರು 150ಕ್ಕೂ ಹೆಚ್ಚು ಮಂದಿ ಇರಾನ್​ನಲ್ಲಿ ನೆಲೆಸಿದ್ದಾರೆ. 100ಕ್ಕೂ ಹೆಚ್ಚು ಮಂದಿ ಚಿನ್ನಾಭರಣ, ವಜ್ರದ ವ್ಯಾಪಾರದಲ್ಲಿ ತೊಡಗಿಕೊಂಡಿದ್ದು, 50ಕ್ಕೂ ಹೆಚ್ಚು ಮಂದಿ ವೈದ್ಯಕೀಯ ಶಿಕ್ಷಣ ಹಾಗೂ ಧಾರ್ಮಿಕ ಅಧ್ಯಯನದಲ್ಲಿ ತೊಡಗಿದ್ದಾರೆ. ಯುದ್ಧದ ಹಿನ್ನೆಲೆಯಲ್ಲಿ ಅಲ್ಲಿರುವವರ ರಕ್ಷಣೆಗೆ ಕ್ರಮ ಕೈಗೊಳ್ಳಲಾಗಿದೆ.

ಅಲೀಪುರ-ಇರಾನ್​ ಬಾಂಧವ್ಯ: ಖಮೇನಿ ಅವರ ಧಾರ್ಮಿಕ ಸಂದೇಶಗಳನ್ನು ಅಲೀಪುರದ ಜನ ಶ್ರದ್ಧೆಯಿಂದ ಪಾಲಿಸುತ್ತಾರೆ. ಗ್ರಾಮದಲ್ಲೇ ಇರುವ “ಅಲಿ ಟಿವಿ” ಮೂಲಕ ಖಮೇನಿ ಅವರ ಧಾರ್ಮಿಕ ಪ್ರವಚನಗಳು ಜನರನ್ನು ತಲುಪುತ್ತಿದ್ದವು.

ಸಹಾಯವಾಣಿ: ಯುದ್ಧ ಪೀಡಿತ ಮಧ್ಯಪ್ರಾಚ್ಯ ದೇಶಗಳಲ್ಲಿ ಸಿಲುಕಿರುವವರ ರಕ್ಷಣೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಸಹಾಯವಾಣಿ ಕೇಂದ್ರ ತೆರೆದಿದೆ. ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರದ ದೂ.08156-277002 ಕರೆ ಮಾಡಬಹುದು ಅಥವಾ ಮೊ.9591178093/ 9845531026ಗೆ ವಾಟ್ಸಪ್​ ಸಂದೇಶ ಕಳುಹಿಸಬಹುದು ಎಂದು ಜಿಲ್ಲಾಧಿಕಾರಿ ಜಿ. ಪ್ರಭು ತಿಳಿಸಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ