– ರಾಘವೇಂದ್ರ ಅಡಿಗ ಎಚ್ಚೆನ್.
ಗಿಲ್ಲಿ ನಟ ಇದುವರೆಗೂ ಹಲವು ಚಿತ್ರಗಳಲ್ಲಿ ನಟಿಸಿದ್ದರೂ, ಹೀರೋ ಆಗಿರಲಿಲ್ಲ. ಈಗ ಇದೇ ಮೊದಲ ಬಾರಿಗೆ ಪೂರ್ಣಪ್ರಮಾಣದ ನಾಯಕನಾಗಿ ಅವರು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಗಿಲ್ಲಿ ನಟ, ‘ಬಿಗ್ ಬಾಸ್’ನಲ್ಲಿರುವಾಗ ‘ಪಳಾರ್ ಗಿಲ್ಲಿ ಎಂದೇ ಜನಪ್ರಿಯರಾಗಿದ್ದರು. ಈಗ ‘ಪಳಾರ್’ ಎಂಬ ಹೆಸರಿನ ಚಿತ್ರದಲ್ಲಿ ಅವರು ನಾಯಕನಾಗುತ್ತಿರುವುದು ವಿಶೇಷ. ಇಂದು ಗಿಲ್ಲಿ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಈ ಸಂದರ್ಭದಲ್ಲಿ ಶ್ರೀ ಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ನಡೆದಿದೆ.

ಈ ಚಿತ್ರವನ್ನು ರಾಶಿ ಫಿಲಂಸ್ ಬ್ಯಾನರ್ ಅಡಿ ಹರೀಶ್ ಮತ್ತು ನವೀನ್ ನಿರ್ಮಿಸುತ್ತಿದ್ದಾರೆ. ‘ಬಾಂಬೆ ಮಿಠಾಯಿ, ‘ಫಾರೆಸ್ಟ್’ ಮುಂತಾದ ಚಿತ್ರಗಳನ್ನು ನಿರ್ದೇಶಿಸಿದ್ದ ಚಂದ್ರಮೋಹನ್ ಕಥೆ-ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ಚಿತ್ರಕ್ಕೆ ಚಂದ್ರಶೇಖರನ್ ಛಾಯಾಗ್ರಹಣ, ವಾಸುಕಿ ವೈಭವ್ ಸಂಗೀತವಿದೆ. ಚಿತ್ರದಲ್ಲಿ ಗಿಲ್ಲಿ ನಟ ಜೊತೆಗೆ ಸುಧಾಕರ್ ಗೌಡ ಮುಂತಾದವರು ನಟಿಸುತ್ತಿದ್ದಾರೆ. ಈ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಅರ್ಪಿಸುತ್ತಿದೆ.
ಪಳಾರ್ ಎಂದರೆ ಹಳ್ಳಿ ಕಡೆ ಕಿಲಾಡಿ ಎಂಬ ಅರ್ಥ ಬರುತ್ತದೆ.ಇದೇ ಶೀರ್ಷಿಕೆ ಸಿನಿಮಾ ಈಗ ಸೆಟ್ಟೇರಿದ್ದು ಗಿಲ್ಲಿ ನಟ ಬಿಗ್ ಬಾಸ್ ಮನೆಯಲ್ಲಿದ್ದಾಗಲೇ ತಾನು ಪಳಾರ್ ಎಂದು ಕರೆದುಕೊಂಡದ್ದನ್ನು ನಾವು ನೆನಪಿಸಿಕೊಳ್ಳಬಹುದು.

ಇನ್ನು ಈ ಚಿತ್ರದ ನಾಯಕಿ ಯಾರು ಎಂದು ಇನ್ನೂ ಫೈನಲ್ ಆಗಿಲ್ಲ ಆದರೆ ಬಿಗ್ ಬಾಸ್ ಮನೆ ಯಶಸ್ವಿ ಜೋಡಿ ಗಿಲ್ಲಿ ಕಾವು ( ಕಾವ್ಯ ಶೈವ) ಜೋಡಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ಚಿತ್ರ ತಂಡದಿಂದ ಅಧಿಕೃತ ಘೋಷಣೆ ಇನ್ನಷ್ಟೇ ಬರಬೇಕಾಗಿದೆ.
ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಗಮನ ಸೆಳೆಯುತ್ತಿದೆ. ಪಂಚೆ-ಶರ್ಟ್ ಧರಿಸಿ ಗಿಲ್ಲಿ ನಟ ಅವರು ಕಾಣಿಸಿಕೊಂಡಿದ್ದಾರೆ. ಇದನ್ನು ‘ಪ್ಯಾನ್ ಕರ್ನಾಟಕ ಮೂವೀ’ ಎಂದು ಕರೆಯಲಾಗಿದೆ. ಅದರ ಹಿಂದೆಯೂ ತಮಾಷೆ ಅಡಗಿದೆ. ಅದೇನು ಎಂಬುದನ್ನು ಈಗಾಗಲೇ ಸಿನಿಮಾ ಅನೌನ್ಸ್ಮೆಂಟ್ ಪ್ರೋಮೋದಲ್ಲಿ ಗಿಲ್ಲಿ ನಟ ವಿವರಿಸಿದ್ದಾರೆ.





