ಒಂಬತ್ತನೇ ತರಗತಿಯಿಂದ ಮೂರನೇ ಭಾಷೆಯನ್ನು ಪರಿಚಯಿಸುವ ಪ್ರಸ್ತಾವನೆಯ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಕಳವಳ ವ್ಯಕ್ತಪಡಿಸಿದ್ದು, ಅಂತಹ ಕ್ರಮವು ವಿದ್ಯಾರ್ಥಿಗಳ ಮೇಲೆ ಶೈಕ್ಷಣಿಕ ಹೊರೆಯನ್ನು ಹೆಚ್ಚಿಸಬಹುದು ಎಂದು ಅಭಿಪ್ರಾಯ ಪಟ್ಟಿದೆ.
ಯಾವುದೇ ಹೊಸ ಭಾಷೆಯನ್ನು 5 ಅಥವಾ 6 ನೇ ತರಗತಿಯಿಂದ ಪರಿಚಯಿಸಬೇಕು ಎಂದು ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಆರ್. ಮಹಾದೇವನ್ ಅವರ ಪೀಠ ತಿಳಿಸಿದೆ. 9 ನೇ ತರಗತಿಯಲ್ಲಿ ಮೂರನೇ ಭಾಷೆಯನ್ನು ಪರಿಚಯಿಸದಂತೆ ಕೇಂದ್ರ ಸರ್ಕಾರಕ್ಕೆ ಮೌಖಿಕವಾಗಿ ಸೂಚಿಸಿದೆ.
ದಯವಿಟ್ಟು 9 ನೇ ತರಗತಿಯಿಂದ ಮೂರನೇ ಭಾಷೆಯನ್ನು ಪರಿಚಯಿಸಬೇಡಿ. ಇದು ವಿದ್ಯಾರ್ಥಿಗಳಿಗೆ ಅನಗತ್ಯವಾಗಿ ಒತ್ತಡ ಹೆಚ್ಚಿಸುತ್ತದೆ. ನೀವು ಹೊಸ ಭಾಷೆಯನ್ನು ಪರಿಚಯಿಸಲು ಬಯಸಿದರೆ, ಅದನ್ನು 5 ನೇ ಅಥವಾ 6 ನೇ ತರಗತಿಯಲ್ಲಿ ಮಾಡಿ ಆದರೆ 9ನೇ ತರಗತಿಯಲ್ಲಿ ಅಲ್ಲ. ಒಂಬತ್ತನೇ ತರಗತಿ ಒತ್ತಡದಿಂದ ತುಂಬಿರುತ್ತದೆ ಎಂದು ನ್ಯಾಯಮೂರ್ತಿ ನಾಗರತ್ನ ಕೇಂದ್ರದ ಪರವಾಗಿ ಹಾಜರಾದ ವಕೀಲರಿಗೆ ತಿಳಿಸಿದರು.
ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಜವಾಹರ್ ನವೋದಯ ವಿದ್ಯಾಲಯಗಳ (ಜೆಎನ್ವಿ) ಸ್ಥಾಪನೆಗೆ ಅನುಕೂಲವಾಗುವಂತೆ ಮದ್ರಾಸ್ ಹೈಕೋರ್ಟ್ ನೀಡಿದ್ದ ನಿರ್ದೇಶನದ ವಿರುದ್ಧ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯ ಪೀಠ ಈ ವಿಷಯ ತಿಳಿಸಿದೆ.
ಶಾಲೆಗಳು ಅನುಸರಿಸುತ್ತಿರುವ ತ್ರಿಭಾಷಾ ನೀತಿಯ ಬಗ್ಗೆ ಕಳವಳ ವ್ಯಕ್ತಪಡಿಸಿ ತಮಿಳುನಾಡು ಜೆಎನ್ವಿಗಳ ಸ್ಥಾಪನೆಯನ್ನು ನಿರಂತರವಾಗಿ ವಿರೋಧಿಸುತ್ತಾ ಬಂದಿದೆ. ಸಿಬಿಎಸ್ಇಯ ಭಾಷಾ ನೀತಿಗೆ ಸಂಬಂಧಿಸಿದ ಅರ್ಜಿಯನ್ನು ಪೀಠವು ನೇರವಾಗಿ ಆಲಿಸದಿದ್ದರೂ, ಶಾಲೆಗಳಲ್ಲಿ ಮೂರನೇ ಭಾಷೆಯನ್ನು ಪರಿಚಯಿಸಬೇಕಾದ ಹಂತದ ಬಗ್ಗೆ ಅದು ಅವಲೋಕನ ಮಾಡಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಪ್ರತ್ಯೇಕ ಸುಪ್ರೀಂ ಕೋರ್ಟ್ ಪೀಠವು ಪ್ರಸ್ತುತ ಸಿಬಿಎಸ್ಇಯ ಹೊಸ ನೀತಿಯನ್ನು ಪ್ರಶ್ನಿಸುವ ಅರ್ಜಿಗಳ ವಿಚಾರಣೆ ನಡೆಸುತ್ತಿದೆ ಮತ್ತು ಇತ್ತೀಚೆಗೆ ಸಂಬಂಧಿತ ಅಧಿಸೂಚನೆಗೆ ತಡೆ ನೀಡಲು ನಿರಾಕರಿಸಿತ್ತು.





