ಎಸ್. ಜೆ.
ಮೆಗಾ ಸುಪ್ರೀಂ ಹೀರೋ ಸಾಯಿ ದುರ್ಗಾ ತೇಜ್ ಅಭಿನಯದ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಆ್ಯಕ್ಷನ್-ಡ್ರಾಮಾ ‘ಸಂಬರಾಲ ಯೇಟಿ ಗಟ್ಟು’ (SYG) ಚಿತ್ರದ ಸಂಪೂರ್ಣ ಚಿತ್ರೀಕರಣ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಪ್ರತಿಷ್ಠಿತ ಪ್ರೈಮ್ಶೋ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಕೆ. ನಿರಂಜನ್ ರೆಡ್ಡಿ ಹಾಗೂ ಚೈತನ್ಯ ರೆಡ್ಡಿ ಅತ್ಯಂತ ಅದ್ಧೂರಿ ವೆಚ್ಚದಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ನೂತನ ಪ್ರತಿಭೆ ರೋಹಿತ್ ಕೆ.ಪಿ. ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ಸದ್ಯ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡವು, ಪೋಸ್ಟ್-ಪ್ರೊಡಕ್ಷನ್ ಕೆಲಸಗಳನ್ನು ಭರದಿಂದ ಮಾಡುತ್ತಿದೆ. 2027ರ ಜನವರಿ 12ರಂದು ಸಂಕ್ರಾಂತಿ ಹಬ್ಬದ ಕೊಡುಗೆಯಾಗಿ ಚಿತ್ರವನ್ನು ವಿಶ್ವಾದ್ಯಂತ ತೆರೆಗೆ ತರುವುದಾಗಿ ಅಧಿಕೃತವಾಗಿ ಚಿತ್ರತಂಡ ಪ್ರಕಟಿಸಿದೆ.
ಚಿತ್ರದ ರಿಲೀಸ್ ಡೇಟ್ ಪೋಸ್ಟರ್ ಸಿನಿಪ್ರಿಯರಲ್ಲಿ ಭಾರಿ ಕುತೂಹಲ ಮೂಡಿಸಿದೆ. ಪೋಸ್ಟರ್ನಲ್ಲಿ ಸಾಯಿ ದುರ್ಗಾ ತೇಜ್ ಅವರು ಹಿಂದೆಂದೂ ಕಾಣದ ರಗಡ್ ಮತ್ತು ತೀವ್ರ ಲುಕ್ನಲ್ಲಿ ಅಬ್ಬರಿಸಿದ್ದಾರೆ. ರಕ್ತಸಿಕ್ತ ಮುಖ, ಕೈಯಲ್ಲಿ ಆಯುಧ, ಮುಖದಲ್ಲಿ ಗಂಭೀರ ಭಾವದೊಂದಿಗೆ ಬೆಂಕಿಯ ಜ್ವಾಲೆಗಳು ಹಾಗೂ ಹೊತ್ತಿ ಉರಿಯುತ್ತಿರುವ ಕಟ್ಟಡಗಳ ನಡುವೆ ಅವರು ನಿರ್ಭಯವಾಗಿ ನಡೆದುಬರುವ ದೃಶ್ಯವು ಚಿತ್ರದಲ್ಲಿನ ಭೀಕರ ಸಂಘರ್ಷ ಹಾಗೂ ಚಿತ್ರದಲ್ಲಿ ಹೈ-ವೋಲ್ಟೇಜ್ ಆ್ಯಕ್ಷನ್ ಇದೆ ಎಂಬುದನ್ನು ಅನಾವರಣಗೊಳಿಸಿದೆ. ಈಗಾಗಲೇ ಬಿಡುಗಡೆಯಾಗಿರುವ ‘ಅಸುರ ಆಗಮನ’ ಗ್ಲಿಂಪ್ಸ್ ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ಪಡೆದುಕೊಂಡಿದ್ದು, ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಹಲವು ನೈಜ ಹಾಗೂ ವಿಭಿನ್ನ ತಾಣಗಳಲ್ಲಿ ಬೃಹತ್ ಸೆಟ್ಗಳನ್ನು ನಿರ್ಮಿಸಿ ಈ ಚಿತ್ರವನ್ನು ಶೂಟ್ ಮಾಡಲಾಗಿದೆ. ಸಾಯಿ ದುರ್ಗಾ ತೇಜ್ ಅವರ ಜೊತೆಗೆ ಐಶ್ವರ್ಯಾ ಲಕ್ಷ್ಮಿ ನಾಯಕಿಯಾಗಿ ನಟಿಸಿದ್ದು, ಜಗಪತಿ ಬಾಬು, ಸಾಯಿ ಕುಮಾರ್, ಶ್ರೀಕಾಂತ್, ಅನನ್ಯಾ ನಾಗಲ್ಲ ಹಾಗೂ ಬಾಲಿವುಡ್ನ ಖ್ಯಾತ ನಟರೊಬ್ಬರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಪ್ಯಾನ್-ಇಂಡಿಯಾ ಮೆರುಗನ್ನು ಹೆಚ್ಚಿಸಿದ್ದಾರೆ. ರೋಹಿತ್ ಕೆ.ಪಿ. ಭಾವನಾತ್ಮಕ ಅಂಶಗಳ ಜೊತೆಗೆ ರೋಮಾಂಚಕ ಆ್ಯಕ್ಷನ್ ಸನ್ನಿವೇಶಗಳನ್ನು ಈ ಕಥೆಯಲ್ಲಿ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ ಎಂಬುದು ಚಿತ್ರತಂಡದ ಮಾಹಿತಿ.
ಉನ್ನತ ತಾಂತ್ರಿಕ ಮೌಲ್ಯಗಳೊಂದಿಗೆ ಮೂಡಿಬರುತ್ತಿರುವ ಈ ಚಿತ್ರಕ್ಕೆ ಬಿ. ಅಜನೀಶ್ ಲೋಕನಾಥ್ ಅವರ ಸಂಗೀತ ನಿರ್ದೇಶನವಿದ್ದು, ವೆಟ್ರಿವೇಲ್ ಪಳನಿಸಾಮಿ ಅವರ ಛಾಯಾಗ್ರಹಣವಿದೆ. ಛೋಟಾ ಕೆ. ಪ್ರಸಾದ್ ಸಂಕಲನ, ಗಾಂಧಿ ನಡಿಕುಡಿಕರ್ ಪ್ರೊಡಕ್ಷನ್ ಡಿಸೈನ್, ಕೆವಿನ್ ಮಾಸ್ಟರ್ ಸಾಹಸ ನಿರ್ದೇಶನ ಹಾಗೂ ಆಯೆಷಾ ಮರಿಯಮ್ ಕಾಸ್ಟ್ಯೂಮ್ ಡಿಸೈನಿಂಗ್ ಜವಾಬ್ದಾರಿ ಹೊತ್ತಿದ್ದಾರೆ. ಪ್ರೇಕ್ಷಕರಿಗೆ ಅತ್ಯುತ್ತಮ ಸಿನಿಮೀಯ ಅನುಭವ ನೀಡಲು ಚಿತ್ರತಂಡವು ತಾಂತ್ರಿಕ ಹಾಗೂ ದೃಶ್ಯ ವೈಭವದ ಗುಣಮಟ್ಟಕ್ಕೆ ಹೆಚ್ಚಿನ ಒತ್ತು ನೀಡಿ ಕೆಲಸ ಮಾಡುತ್ತಿದೆ.





