ಪ್ರಕೃತಿಯ ತರಹವೇ ಮಾನವ ಸ್ವಭಾವ ಸಹ ವೈವಿಧ್ಯತೆಗಳಿಂದ ಕೂಡಿದೆ. ಹೀಗಾಗಿ ನಮ್ಮ ಜೀವನ ನಿಜಕ್ಕೂ ವಿಸ್ಮಯಗಳ ಭಂಡಾರ! ಹಾಗಾಗಿ ಈ ಪ್ರಪಂಚ ಉಜ್ವಲತೆ, ಸ್ವಪ್ನಲೋಕದ ಸಾಕಾರ ಆಗಿರುವಂತೆ ಅನೇಕ ನಿಗೂಢ, ನೋವು ತುಂಬಿದ ಕಥೆಗಳನ್ನೂ ಅಡಗಿಸಿಕೊಂಡಿದೆ. ಹೀಗಾಗಿ ಮಾನವ ಲೋಕದ ಈ ಸಿಹಿಕಹಿಯ ಸಾಕ್ಷಾತ್ಕಾರ ಆಗಬೇಕಾದರೆ ಬೆಳ್ಳಿತೆರೆಗಿಂತ ಚೆಂದದ್ದು ಬೇರೇನಿರಲು ಸಾಧ್ಯ…..?

02-Kannada-movie

ಕನ್ನಡ : ಫುಲ್ ಮೀಲ್ಸ್

ಸದ್ಯದ ಬದಲಾದ ಕಾಲಘಟ್ಟದಲ್ಲಿ ಸಿನಿಮಾವೊಂದು ಯಶಸ್ವಿಯಾಗಿ, ಥಿಯೇಟರ್‌ ಗಳಲ್ಲಿ ಸತತ 25 ದಿನ ಪೂರೈಸುವುದೊಂದು ವಿಶೇಷ! ಈ ಕ್ರೆಡಿಟ್‌ `ಫುಲ್ ಮೀಲ್ಸ್’ ಚಿತ್ರಕ್ಕೆ ದಕ್ಕಿದೆ. ವೆಡ್ಡಿಂಗ್‌ ಫೋಟೋಗ್ರಾಫರ್‌ ನೊಬ್ಬನ ಪ್ರೀತಿಯ ಬಲೆಗೆ ಬೀಳುವ ತ್ರಿಕೋನ ಪ್ರೇಮದ ರಮ್ಯ ಚಿತ್ರವಿದು. ನಟ ಲಿಖಿತ್‌ ಶೆಟ್ಟಿ ನಾಯಕನಾಗಿ ನಟಿಸಿ, ನಿರ್ಮಿಸಿರುವ, ಈ ಚಿತ್ರದ ಚಿತ್ರಕಥೆ, ನಿರ್ದೇಶನ ಎನ್‌. ವಿನಾಯಕ್‌ ರದು. ಖುಷಿ ರವಿ ಮತ್ತು ತೇಜಸ್ವಿನಿ ಶರ್ಮ, ಇಬ್ಬರೂ ನಾಯಕಿಯರಾಗಿ ಇಲ್ಲಿ ಮಿಂಚಿದ್ದಾರೆ.

ಯಾರದೋ ಮದುವೆಗೆ ಬಂದು ಪ್ರೀವೆಡ್ಡಿಂಗ್‌ ಫೋಟೋಶೂಟ್‌ ನಡೆಸುವ ಫೋಟೋಗ್ರಾಫರ್‌ ಮೇಲೆ ಮದುಮಗಳಿಗೆ ಆಕರ್ಷಣೆ ಮೂಡುತ್ತದೆ. ಈ ಕುತೂಹಕಾರಿ ಒನ್‌ ಲೈನ್‌ ಚಿತ್ರಣವೇ `ಫುಲ್ ಮೀಲ್ಸ್.’ ಎಲ್ಲ ವಯೋಮಾನದವರಿಗೆ ಸೂಕ್ತವಾದ ಫ್ಯಾಮಿಲಿ ಎಂಟರ್‌ ಟ್ರೈನರ್‌. ಈ ಚಿತ್ರದಲ್ಲಿ ರೊಮ್ಯಾಂಟಿಕ್‌ ಕಾಮಿಡಿಯೇ ಹೈಲೈಟ್‌.

`ಸಂಕಷ್ಟಕರ ಗಣಪತಿ, ಅಬ್ಬಬ್ಬ, ಫ್ಯಾಮಿಲಿ ಪ್ಯಾಕ್‌’ ಚಿತ್ರಗಳಲ್ಲಿ ನಾಯಕನಾಗಿದ್ದ ಲಿಖಿತ್‌ ಶೆಟ್ಟಿ ಇಲ್ಲಿ ಮತ್ತೊಮ್ಮೆ ಗೆದ್ದಿದ್ದಾರೆ! ತಮ್ಮ ಚೊಚ್ಚಲ ಚಿತ್ರದಲ್ಲೇ ನಿರ್ದೇಶಕ ಸೈ ಎನಿಸುತ್ತಾರೆ. ಗುರು ಕಿರಣ್‌ ಸಂಗೀತ ನಿರ್ದೇಶನವಿದೆ. ಇತರ ತಾರಾಗಣದಲ್ಲಿ ರಂಗಾಯಣ ರಘು, ವಿಜಯ್‌ ಚಿಂಡೂರ್‌, ರವಿಶಂಕರ್‌ ಗೌಡ, ಚಂದ್ರಕಲಾ ಮೋಹನ್‌ ಜೊತೆಗೂಡಿದ್ದಾರೆ.

05-Malayalam-Movie-'Kalamkaval'

ಮಲೆಯಾಳಂ : ಕಲಂಕಾಲ್

ಈ ಚಿತ್ರ ಕೇರಳದ ಒಬ್ಬ ಕುಖ್ಯಾತ ಸೀರಿಯಲ್ ಕಿಲ್ಲರ್‌ ನ ಕುರಿತಾದ ಕ್ರೈಂ ಥ್ರಿಲ್ಲರ್‌. ಒಂಟಿ ಹೆಣ್ಣನ್ನು ಆಕ್ರಮಿಸುವ `ಸೈನೈಡ್ ಮೋಹನ್‌’ ಎಂಬಾತನ ನೈಜ ಕಥೆಯಿಂದ ಪ್ರೇರಿತ.

ಇಲ್ಲಿ ಖ್ಯಾತ ನಟ ಮಮ್ಮುಟಿ ಕಿಲ್ಲರ್‌ ಹಾಗೂ ವಿನಾಯಗನ್‌ ಇನ್‌ ವೆಸ್ಟಿಗೇಟರ್‌. ಈ ಚಿತ್ರ ಯಾವ ರೀತಿ ಕ್ರೂರಿ ಕಾಮಪಿಪಾಸು ಹೆಣ್ಣುಮಕ್ಕಳನ್ನು ವಂಚಿಸಿ, ಕೊಲೆಗೈಯುತ್ತಾನೆ ಎಂದು ಹೇಳುತ್ತಾ ಸಾಗುತ್ತದೆ. ಚಿತ್ರದ ನಿರ್ದೇಶಕರು ಜಿತಿನ್‌ ಕೆ. ಬೋಸ್‌ (ಡೆಬ್ಯು) ಹಾಗೂ ಸಂಗೀತ ಮುಜೀಬ್‌ ಮಜೀದ್‌. ಸೈಕೋಪಾತ್‌ ನ ಸುತ್ತಾ ತಿರುಗುವ ಕ್ರೈಂನ್ನು ಇನ್‌ ಸ್ಪೆಕ್ಟರ್‌ ಮಾರ್ಮಿಕವಾಗಿ ಭೇದಿಸುವುದೇ ಕಥೆ. ತಾರಾಗಣದಲ್ಲಿ ಗಾಯತ್ರಿ ಅರುಣ್‌, ರಾಜೇಶ್‌ ವಿಜಯನ್‌, ಶೃತಿ ರಾಮಚಂದ್ರನ್‌, ಮಾಳವಿಕಾ ಮೆನನ್‌ ಸಹ ಜೊತೆಗಿದ್ದಾರೆ. ಚರ್ವಿತಚವರ್ಣ ಫಿಲ್ಮಿ ಕಥೆಯಾದರೂ ಮಲೆಯಾಳದ ಮೊನಚಾದ ಚಿತ್ರಕಥೆ, ನಿರ್ದೇಶನ, ಮಮ್ಮುಟಿಯಂಥ ದೈತ್ಯ ಪ್ರತಿಭೆಗಳ ನಟನೆ ಚಿತ್ರಕ್ಕೆ ಹೊಸ ಟಚ್‌ ನೀಡಿದೆ.

01-Bengali-Film-'Swarthopor'

ಬಂಗಾಳಿ : ಸ್ವಾರ್ಥೋಪೋರ್

ಪ್ರೇಕ್ಷಕರ ಅಪಾರ ಮೆಚ್ಚುಗೆ ಗಳಿಸಿರುವ ಈ ಬಂಗಾಳಿ ಚಿತ್ರ, ಬಾಕ್ಸ್ ಆಫೀಸ್‌ ನಲ್ಲೂ ಬಿಗ್‌ ಹಿಟ್‌! ಈ ಚಿತ್ರದ ನಿರ್ದೇಶಕರು ಅನ್ನಪೂರ್ಣಾ ಬಸು, ಸಂಗೀತ ಅಮಿತ್‌ ಚಟರ್ಜಿ. ಈ ಚಿತ್ರ ಅಣ್ಣತಂಗಿಯರಾದ ಅಪರ್ಣಾ ಹಾಗೂ ಸೌರವ್, ತಾಯಿತಂದೆಯರ ಮರಣಾನಂತರ, ತಮ್ಮ ಪಿತ್ರಾರ್ಜಿತ ಆಸ್ತಿಯಾದ ಮನೆ ಯಾರಿಗೆ ಸಿಗಬೇಕೆಂದು ಹೊಡೆದಾಡುವ ಸಾಂಸಾರಿಕ ಕಥಾಹಂದರ ಹೊಂದಿದೆ. ತಾರಾಗಣದಲ್ಲಿ ಕೋಯೆಲ್ ‌ಮಲ್ಲಿಕ್‌, ಕೌಶಿಕ್‌ ಸೇನ್‌, ಅನನ್ಯಾ ಸೇನ್‌, ಅನಿರ್ಬನ್‌ ಚಕ್ರವರ್ತಿ ಮುಂತಾದವರಿದ್ದಾರೆ. ತಂದೆಮಗಳ ಪಾತ್ರಗಳು ಅತ್ಯಂತ ಮನೋಜ್ಞವಾಗಿ ಮೂಡಿಬಂದಿವೆ.

07-Mrathi-movie_Uttar

ಮರಾಠಿ : ಉತ್ತರ್

ಇದು ಅಪ್ಪಟ ಕೌಟುಂಬಿಕ ಚಿತ್ರವಾಗಿದ್ದು, ತಾಯಿಮಗನ ಬಾಂಧ್ಯದ ಪರಿಪಕ್ವತೆ ಎತ್ತಿಹಿಡಿದಿದೆ. ಈ ಚಿತ್ರದ ಮೂಲಕಥೆ, ಗೀತೆಗಳು, ನಿರ್ದೇಶನ ಕ್ಷಿತಿಜ್‌ ಪಟವರ್ಧನ್‌ ರದು. ಸಂಗೀತ ಪ್ರತೀಕ್‌ ಓಂಕಾರ್‌ ಕೇಲ್ಮರ್‌. ತಾರಾಗಣದಲ್ಲಿ ರೇಣುಕಾ ಶಹಾಣೆ, ಅಭಿನಯ್ ಬೆರ್ಡೆ, ಋತಾ ದುರ್ಗುವೆ, ನಿರ್ಮೀತಿ ಸಾವಂತ್‌ ಮುಂತಾದವರು. ಈ ಚಿತ್ರ ತಾಯಿಮಗನ ನಡುವೆ ಪೀಳಿಗೆಯ ಅಂತರದ ಆಧಾರದಲ್ಲಿ ನಡೆಯುವ ಮಾನವೀಯ ಘರ್ಷಣೆಗಳ ಮೌಲ್ಯಯುತ ಪ್ರತಿಬಿಂಬವಾಗಿದೆ. ಗಂಭೀರ ಕಾಯಿಲೆಗೆ ತುತ್ತಾಗುವ ತಾಯಿ, ಕೆಲವೇ ದಿನ ಬದುಕಿರುತ್ತಾಳೆ ಎಂದು ವೈದ್ಯರು ಘೋಷಿಸುತ್ತಾರೆ. ತನ್ನ ಪ್ರಾಜೆಕ್ಟ್ ನಲ್ಲೇ ಬಿಝಿ ಆಗಿರುವ ಮಗ ತಾಯಿಯ ಭಾವನೆಗಳಿಗೆ ಸ್ಪಂದಿಸುತ್ತಾನಾ? ಇಡೀ ಚಿತ್ರ ತುಂಬಾ ಭಾವನಾತ್ಮಕ ಆಗದೆ ತುಸು ಎಡವಿದೆ ಎಂದೇ ಹೇಳಬಹುದು. ಚಿತ್ರಕಥೆ ಸಹ ದುರ್ಬಲವಾಗಿದೆ. ಸಂಭಾಷಣೆ ಎಲ್ಲಾ ಕಡೆ ಪ್ರಭಾವಶಾಲಿ ಆಗಿರದೆ, ಸಾಧಾರಣ ಎನಿಸಿದೆ. ಇಡೀ ಚಿತ್ರವನ್ನು ರೇಣುಕಾ ತಾನೇ ಹೊತ್ತು ಮುಂದುವರಿಸಿರುವುದು ದೊಡ್ಡ ಪ್ಲಸ್‌ ಪಾಯಿಂಟ್‌.

06-Gujarati-movie

ಗುಜರಾತಿ : ಅಜಬ್ಟಾರ್ಝನ್ನೀ ಗಜಬ್ಕಹಾನಿ

ಈ ಸಾಹಸಮಯ ಚಿತ್ರ ಕೇವಲ ಹೊಡೆದಾಟಕ್ಕೆ ಮಾತ್ರ ಸೀಮಿತವಾಗದೆ ಭಾವನಾತ್ಮಕತೆ, ಹಾಸ್ಯ, ಜಂಗಲ್ ಸ್ಟೈಲ್ ‌ಎಗ್ಝೈಟ್ ಮೆಂಟ್‌ ಜೊತೆಗೆ ಫ್ಯಾಮಿಲಿ ಫ್ರೆಂಡ್ಲಿ ಪ್ಯಾಕೇಜ್‌ ಆಗಿದೆ. ಒಬ್ಬ ತರುಣ ತನ್ನ ಇಡೀ ಜೀವನವನ್ನು ಕಾಡಿನಲ್ಲೇ ಕಳೆದವನು ಹೇಗೆ ನಾಡಿಗೆ ಸ್ಪಂದಿಸುತ್ತಾನೆಂಬುದೇ ಮೂಲಕಥೆ. ಪ್ರವಾಸಕ್ಕೆಂದು ಕಾಡಿನ ಹತ್ತಿರ ಬಂದು, ಬ್ರೇಕ್‌ ಡೌನ್‌ ಆದ ಬಸ್ಸಿನಿಂದ ಬಳಲುವ ನಗರದ ಶಾಲಾ ಸಿಬ್ಬಂದಿ. ಮಕ್ಕಳಿಗೆ ನೆರವಾಗುವ ಅವನ ಸ್ವಭಾವ, ಎಲ್ಲಕ್ಕಿಂತ ಮಾನವೀಯತೆ ಮಿಗಿಲು ಎಂದು ಸಾರುತ್ತದೆ. ಕಾಡುಮನುಷ್ಯ. ಮಕ್ಕಳ ನಡುವಿನ ಬಾಂಧವ್ಯ ಇಲ್ಲಿ ಅನನ್ಯ! ಈ ಚಿತ್ರದ ನಿರ್ದೇಶಕರು ಸುರೇಶ್‌ ಜೋಶಿ, ನಿರ್ಮಾಪಕರು ಹಿತೇಶ್‌/ದೀಪಕ್‌ ಗಜ್ಜಾರ್‌. ತಾರಾಗಣದಲ್ಲಿ ಚೇತನ್‌ ದೈಯಾ ಮುಂತಾದವರು. ಬಹಳ ದಿನಗಳ ನಂತರ ಮಕ್ಕಳ ಚಿತ್ರಕ್ಕೆ ಇಲ್ಲಿ ಪ್ರಾಧಾನ್ಯತೆ ದೊರಕಿದೆ. ಮಕ್ಕಳಿಗೆ ಈ ಜಂಗಲ್ ಹೀರೋನ ಆ್ಯಂಟಿಕ್ಸ್, ಮುಗ್ಧತೆ ಬಲು ಇಷ್ಟವಾಗುತ್ತದೆ.

04-Telugu-Movie-New

ತೆಲುಗು : ಕಲಿವಿ ವಾನಂ

ಆಧುನಿಕ ತೆಲುಗು ಚಿತ್ರಗಳಲ್ಲಿ ಮೆಸೇಜ್‌ ಬಲು ಅಪರೂಪ. ಈ ಚಿತ್ರ ಅದಕ್ಕೆ ಅಪವಾದ! ತೆಲಂಗಾಣದ ಗ್ರಾಮೀಣ ಪರಿಸರದಲ್ಲಿ ಚಿತ್ರಿತಗೊಂಡು ಪರಿಸರಪ್ರೇಮ, ಮರಗಳ ಪ್ರಾಮುಖ್ಯತೆ, ಪ್ರಕೃತಿಯ ಪ್ರಾಬಲ್ಯವನ್ನು ಇದು ಎತ್ತಿ ಹಿಡಿಯುತ್ತದೆ. ಈ ಚಿತ್ರದ ನಿರ್ದೇಶಕರು ರಾಜ್‌ ನರೇಂದ್ರ. ಸಂಗೀತ ಎಸ್‌.ಕೆ. ಮದೀನ್‌. ಪ್ರಮುಖ ತಾರಾಗಣ : ರಘು ಬಾಬು, ಸಮೇತಾ ಗಾಂಧಿ, ವಿಜಯಲಕ್ಷ್ಮಿ, ಬಿತ್ತಿರಿ ಸತ್ತಿ, ಬಿ. ಸತ್ಯನಾರಾಯಣ, ನಾಗದುರ್ಗಾ. ಪರಿಸರದ ಜೊತೆ ಸಾಂಸಾರಿಕ ಕಥೆಯನ್ನೂ ಬೆರೆಸಿ ಒಟ್ಟಿಗೆ ಉಣಬಡಿಸಲಾಗಿದೆ. ಜಾಗಿತ್ಯವಾ ಜಿಲ್ಲೆಯ `ಗತರಾಜಪಲ್ಲಿ’ ಎಂಬ ಹಳ್ಳಿಯಲ್ಲಿ ನಡೆಯುವ ರಾಜಕೀಯ ಇಲ್ಲಿ ಬೆರೆತಿದೆ. ತೆಲಂಗಾಣ ಜಾನಪದದಲ್ಲಿ ಪ್ರಮುಖ ಹೆಸರಾದ ನಾಗದುರ್ಗಾ ಇಲ್ಲಿ ಪ್ರಧಾನ ಪಾತ್ರವೊಂದರಲ್ಲಿ ಗಮನ ಸೆಳೆಯುತ್ತಾರೆ. ಸ್ವಾರ್ಥ ತೊರೆದು ಪ್ರತಿಯೊಬ್ಬ ಪ್ರಜೆಯೂ ವೃಕ್ಷಪ್ರೇಮ ಬೆಳೆಸಿಕೊಳ್ಳಬೇಕೆಂಬುದೇ ಇಲ್ಲಿ ಪ್ರಧಾನ ಸಂದೇಶ. ಗ್ರಾಮೀಣ ಪರಿಸರದಲ್ಲಿ ಬಿಸ್‌ ನೆಸ್‌ಬೆಳೆಸಲು, ಕಾರ್ಖಾನೆ ಅಭಿವೃದ್ಧಿಪಡಿಸಲು ಕಾಡು ನಾಶ ಆಗಬಾರದು ಎನ್ನುತ್ತಾರೆ.

03-Tamil-movie

ತಮಿಳು : ಮಹಾಸೇನಾ

ಒಂದು ಗ್ರಾಮೀಣ ಪರಿಸರದಲ್ಲಿ 2 ಹಳ್ಳಿಗಳ ನಡುವಿನ ಹಳೆಯ ಶತಮಾನಗಳ ಸತತ ದ್ವೇಷದ ಕಥೆ ಇದು. ಎರಡೂ ಗ್ರಾಮಗಳಿಗೆ ಬೇಕಾದ ಯಾಝೀ ದೈವ ಪ್ರತಿಮೆಯನ್ನು ತಮ್ಮದಾಗಿಸಿಕೊಳ್ಳಲು ದೊಡ್ಡ ಹೋರಾಟವೇ ನಡೆಯುತ್ತಿರುತ್ತದೆ. ಒಂದು ತಂಡದ ನಾಯಕ ಸೆಂಗುಟ್ಟನ್‌, ಸೇನಾ ಎಂಬ ಆನೆ ಸಾಕುತ್ತಿದ್ದು, ಅಚಾನಕ್ಕಾಗಿ ಹಬ್ಬದ ನಡುವೆ ಆತನ ಮಗಳನ್ನು ಕಾಡಿಗೆ ಎತ್ತಿಕೊಂಡು ಹೋಗಿಬಿಡುತ್ತದೆ. ಆತನಿಗೆ ಕಾಡುಪಾಲಾದ ಮಗಳು ಕ್ಷೇಮವಾಗಿ ದೊರಕಿದಳೆ? ದೈವದ ಪ್ರತಿಮೆ ಶತ್ರುಗಳ ಪಾಲಾಗಲಿಲ್ಲ ತಾನೇ…..? ಎಂಬುದೇ ಉಳಿದ ಕಥೆ.

ಸರ್ಕಾರಿ ಆಧುನಿಕ ಅಧಿಕಾರಿ ವಿಮಲ್, ಆತನ ಪತ್ನಿ ಸೃಷ್ಟೀ, ಅರಣ್ಯಾಧಿಕಾರಿ ವಿಜಯ್‌, ವಿಮಲ್ ನ ಮಗಳು ಈ ಕಾಡಿನ ಕಥಾಹಂದರದಲ್ಲಿ ಆಧುನಿಕ ನಾಗರಿಕರಾಗಿ ಗಮನ ಸೆಳೆಯುತ್ತಾರೆ. ಯೋಗಿಬಾಬು ಹಾಸ್ಯ ಸುಮಾರಾಗಿದೆ. ಈ ಚಿತ್ರದ ಮೂಲಕಥೆ, ನಿರ್ದೇಶಕರು ದಿನೇಶ್‌ ಕೈಚೆಲ್ವನ್‌ (ಡೆಬ್ಯು). ಸಂಗೀತ ಉದಯ್‌ ಪ್ರಕಾಶ್‌. ಪ್ರಮುಖ ತಾರಾಗಣದಲ್ಲಿ ವಿಮಲ್ ರಾಜ್‌, ಜಾನ್‌ ವಿಜಯ್‌, ಮಹಿಮಾ ಗುಪ್ತಾ, ಸೃಷ್ಟೀ ದಂಗೀ, ಕಬೀರ್‌ ದುಹಾನ್‌ ಸಿಂಗ್‌ ಮುಂತಾದವರಿದ್ದಾರೆ.

ಪ್ರತಿನಿಧಿ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ