ಕನ್ನಡ ಚಿತ್ರರಂಗದಲ್ಲಿ ನವನಾಯಕಿಯಾಗಿ ಕಾಣಿಸಿಕೊಂಡ ನಿಶ್ವಿಕಾ ನಾಯ್ಡು, ತಮ್ಮ ಪ್ರತಿಭೆಯಿಂದ ಪರಭಾಷಾ ಚಿತ್ರಗಳಲ್ಲೂ ಮಿಂಚುತ್ತಿದ್ದಾರೆ. ಐಟಂ ಸಾಂಗ್ಸ್ ಇವರ ಅಚ್ಚುಮೆಚ್ಚಿನ ಆಯ್ಕೆ. ಇನ್ನಷ್ಟು ಈಕೆಯ ವಿವರಗಳನ್ನು ತಿಳಿಯೋಣವೇ…..?
ನಿಶ್ವಿಕಾ ನಾಯ್ಡು ಚಂದನವನದ ಮೋಹಕ ನಟಿಯರಲ್ಲಿ ಒಬ್ಬರು. 2018ರ `ಅಮ್ಮಾ ಐ ಲವ್ ಯೂ’ (ತಮಿಳು ಮೂಲ : ಪಿಚ್ಚೆಕಾರನ್) ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದ ಈ ನಟಿ ಕಳೆದ ತಿಂಗಳಲ್ಲಿ ಬಿಡುಗಡೆಯಾದ ಕಿಚ್ಚ ಸುದೀಪ್ ಅಭಿನಯದ `ಮಾರ್ಕ್’ವರೆಗೆ ಹಿಂತಿರುಗಿ ನೋಡಿದವರೇ ಅಲ್ಲ.
ನಿಶ್ವಿಕಾ ಸಿನಿಮಾಗಳಲ್ಲಿ ಹೀರೋಯಿನ್ ಆಗಿ ಮಾತ್ರವಲ್ಲದೆ, ಸ್ಪೆಷಲ್ ಐಟಂ ಸಾಂಗ್ ಗಳಲ್ಲಿ ಡ್ಯಾನ್ಸ್ ಮಾಡುವ ಮೂಲಕ ಮಿಂಚುತ್ತಿದ್ದಾರೆ. ಅವರನ್ನು ಸಾಮಾನ್ಯವಾಗಿ ಚಂದನವನದ ಸಿಕ್ಸ್ ಪ್ಯಾಕ್ ಸುಂದರಿ ಎಂದೇ ಗುರುತಿಸಲಾಗುತ್ತದೆ. ಏಕೆಂದರೆ ಅವರು ತಮ್ಮ ಡ್ಯಾನ್ಸ್, ಅಭಿನಯದ ಜೊತೆಗೆ ಸಿಕ್ಸ್ ಪ್ಯಾಕ್ ಆ್ಯಬ್ಸ್ ಮೂಲಕವೇ ಸಹಸ್ರಾರು ಅಭಿಮಾನಿಗಳನ್ನು ಸೆಳೆದಿದ್ದಾರೆ. ಮಸ್ತ್ ಮಲೈಕಾ….`ಮಾರ್ಕ್’ ಸಿನಿಮಾದ `ಮಸ್ತ್ ಮಲೈಕಾ….’ ಎಂಬ ಹಾಡಿಗೆ ನಿಶ್ವಿಕಾ ಗ್ಲಾಮರಸ್ ಹೆಜ್ಜೆ ಹಾಕಿದ್ದಾರೆ. ಸುದೀಪ್ಮತ್ತು ನಿಶ್ವಿಕಾ ನಾಯ್ಡು ಮಸ್ತ್ ಆಗಿ ಡ್ಯಾನ್ಸ್ ಮಾಡಿರುವ ಈ ಹಾಡು ಸಿನಿಮಾದ ಹೈಲೈಟ್ ಗಳಲ್ಲಿ ಒಂದಾಗಿತ್ತು. ಇಂತಹ ಪ್ರತಿಭಾವಂತ ನಟಿ ನಿಶ್ವಿಕಾ ಕನ್ನಡದವರಾಗಿ ಕನ್ನಡ ಮಾತ್ರವಲ್ಲದೆ, ಪರಭಾಷೆಗಳಲ್ಲೂ ಸಹ ತಮ್ಮ ಛಾಪು ಮೂಡಿಸಿದ್ದಾರೆ ಎನ್ನುವುದು ನಮ್ಮ ಹೆಮ್ಮೆ.
ನಿಶ್ವಿಕಾ ನಾಯ್ಡು ಬೆಂಗಳೂರಿನಲ್ಲಿ ಜನಿಸಿದರು. ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಮನಃಶಾಸ್ತ್ರದಲ್ಲಿ ಪದವಿ ಮುಗಿಸಿರುವ ಇವರು, ಮಾಡೆಲಿಂಗ್ ಕ್ಷೇತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದ್ದಾರೆ. 2018ರಲ್ಲಿ ತೆರೆಕಂಡ ಚಿರಂಜೀವಿ ಸರ್ಜಾ ಅಭಿನಯದ `ಅಮ್ಮಾ ಐ ಲವ್ ಯೂ’ ಇವರ ಮೊದಲ ಸಿನಿಮಾ ಆಗಿತ್ತು. ಅವರಿಗೆ ಶಾಸ್ತ್ರೀಯ ನೃತ್ಯದ ಹಿನ್ನೆಲೆ ಮತ್ತು ಜಾನಪದ ನೃತ್ಯ ಪ್ರಕಾರಗಳಲ್ಲೂ ಪ್ರಾವೀಣ್ಯತೆ ಇದೆ.

ಹಲವು ಚಿತ್ರಗಳಲ್ಲಿ ನಾಯಕಿ
ಅದರ ನಂತರ ಅನೀಶ್ ತೇಜೇಶ್ವರ್ ಜೊತೆ `ವಾಸು ನಾನ್ ಪಕ್ಕಾ ಕಮರ್ಷಿಯಲ್,’ ಶ್ರೇಯಸ್ ಕೆ. ಮಂಜು ಜೊತೆ `ಪಡ್ಡೆ ಹುಲಿ,’ ಜಡೇಶ್ ಹಂಪಿಯರ `ಜಂಟಲ್ ಮೆನ್’ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಜೊತೆ ತೆರೆ ಹಂಚಿಕೊಂಡಿದ್ದಾರೆ. ಇದು ಅವರಿಗೆ ಹೆಚ್ಚಿನ ಖ್ಯಾತಿ ಒದಗಿಸಿತ್ತು. ಇದಾದ ನಂತರ ನಿಶ್ವಿಕಾ ಚಂದನ್ ಶೆಟ್ಟಿಯರ ಮ್ಯೂಸಿಕ್ ಆಲ್ಬಂ `ಪಾರ್ಟಿ ಫ್ರೀಕ್’ನಲ್ಲಿ ಸಹ ಕಾಣಿಸಿಕೊಂಡರು. ಕೆರಿಯರ್ ನ ಟರ್ನಿಂಗ್ ಪಾಯಿಂಟ್ ಒಂದು ರೀತಿಯಲ್ಲಿ ಇದು ಅವರ ವೃತ್ತಿ ಬದುಕಿಗೊಂದು ಮಹತ್ವದ ತಿರುವಾಗಿತ್ತು. ಇದರ ನಂತರ ಇವರು ಅನೇಕ ಚಿತ್ರಗಳಲ್ಲಿ ಹಾಡುಗಳಿಗೆ ಜಬರ್ದಸ್ತ್ ಆಗಿ ಹೆಜ್ಜೆ ಹಾಕಿದ್ದಾರೆ. ಸಿಂಪಲ್ ಸುನಿ ನಿರ್ದೇಶನದ, ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ `ಸಖತ್’ ಸಿನಿಮಾದ ನಾಯಕಿಯಾಗಿ ಸಹ ಅವರು ಅಭಿನಯಿಸಿದ್ದರು.
ಅನೀಶ್ ತೇಜೇಶ್ವರ್ ರೊಂದಿಗೆ ರಾಮಾರ್ಜುನ (2021)ದಲ್ಲಿ ನಟಿಸಿದ್ದ ನಿಶ್ವಿಕಾ, 2022ರಲ್ಲಿ ಯೋಗರಾಜ್ ಭಟ್ ರ `ಗಾಳಿಪಟ-2,’ ಜಡೇಶ್ ಹಂಪಿರ `ಗುರು ಶಿಷ್ಯರು’ ಮತ್ತು ಡಾರ್ಲಿಂಗ್ ಕೃಷ್ಣ, ಮೇಘಾ ಶೆಟ್ಟಿ ಅಭಿನಯದ `ದಿಲ್ ಪಸಂದ್’ ಚಿತ್ರಗಳಲ್ಲಿ ಕಾಣಿಸಿಕೊಂಡರು. 2024ರಲ್ಲಿ, ನಿಶ್ವಿಕಾ ಶಿವರಾಜ್ ಕುಮಾರ್ ಮತ್ತು ಪ್ರಭುದೇವ್ ರೊಂದಿಗೆ `ಕರಟಕ ದಮನಕ’ದಲ್ಲಿ ಸಹ ಅಭಿನಯಿಸಿದ್ದರು. ಈ ಚಿತ್ರದ `ಹಿತ್ತಲಕ ಕರಿಬ್ಯಾಡ ಮಾವ’ ಹಾಡಿನಲ್ಲಿ ನಿಶ್ವಿಕಾ ನಾಯ್ಡುರ ಡ್ಯಾನ್ಸ್ ಸಖತ್ ಸದ್ದು ಮಾಡಿತ್ತು.
ತೆಲುಗಿನಲ್ಲಿ ಜನಪ್ರಿಯತೆ ನಿಶ್ವಿಕಾ ತೆಲುಗಿನಲ್ಲಿ ಸಹ ಛಾಪು ಮೂಡಿಸಿದ್ದು ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿಯವರ ಜೊತೆಗೆ ನಟಿ ನಿಶ್ವಿಕಾ ನಾಯ್ಡು ಕಾಣಿಸಿಕೊಂಡಿದ್ದಾರೆ. `ವಿಶ್ವಂಭರ’ ಚಿತ್ರದ ಐಟಂ ಸ್ಪೆಷಲ್ ನಲ್ಲಿ ನಿಶ್ವಿಕಾ ಹೆಜ್ಜೆ ಹಾಕಿದ್ದರು. ನಿಶ್ವಿಕಾ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಮಹಾನಟಿ ಎಂಬ ರಿಯಾಲಿಟಿ ಶೋ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಇತ್ತೀಚೆಗೆ ನಿಶ್ವಿಕಾ `ಮಾರ್ಕ್’ ಚಿತ್ರದ ಹಾಡಿನಲ್ಲಿ ಹೊರತಾಗಿ ಬೇರಾವ ಕನ್ನಡ ಚಿತ್ರಗಳಲ್ಲಿ ಸಹ ಕಾಣಿಸಿಕೊಂಡಿಲ್ಲ.

ಐಟಂ ಸಾಂಗ್ಸ್
ಇತ್ತೀಚೆಗೆ ಹೆಚ್ಚಾಗಿ ಹಾಡುಗಳಲ್ಲಿ ನೃತ್ಯದ ಮೂಲಕ ಮಾತ್ರ ಕಾಣಿಸಿಕೊಳ್ಳುತ್ತಿರುವ ನಿಶ್ವಿಕಾ `ನಾನು ಎಂದಿಗೂ ನನ್ನ ಮೇಲೆ ಮಾತ್ರ ಗಮನಹರಿಸಿಲ್ಲ. ಹಾಗೆ ಗಮನಕೊಟ್ಟು ನಾನು ನೃತ್ಯದಲ್ಲಿ ಅಭಿನಯಿಸುವುದಿಲ್ಲ,’ ಎನ್ನುತ್ತಾರೆ. `ಕನ್ನಡ ಚಿತ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳೀಯ ನಾಯಕಿಯರಿಗೆ ಹೆಚ್ಚಿನ ಅವಕಾಶಗಳನ್ನು ನೀಡಬೇಕು. ಆಗ ಪ್ರತಿಭಾವಂತರಾದ ಅವರು ನಟನೆ ಮಾತ್ರವಲ್ಲದೆ, ನೃತ್ಯದಲ್ಲಿಯೂ ಮಿಂಚುತ್ತಾರೆ. ನಾವು ಕೇವಲ ನಾಯಕಿಯ ಪಾತ್ರಗಳಿಗೆ ಸೀಮಿತವಾಗಬಾರದು.’
ಒಂದು ಪಾತ್ರದಲ್ಲಿ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುವುದು ನಿರ್ಣಾಯಕವಾಗಿದ್ದರೂ, ಗ್ಲಾಮರಸ್ ಆಗಿ ಪರದೆ ಮೇಲೆ ಮಿಂಚುವುದು ಅಷ್ಟೇ ಲಾಭದಾಯಕವಾಗಿದೆ, ಎನ್ನುವುದು ನಿಶ್ವಿಕಾ ಮಾತು.
ವಿಶೇಷ ಪಾತ್ರಕ್ಕಾಗಿ ಚ್ಯೂಸಿ
“ಸಿನಿಮಾಗಳು ಹುಡುಕಿಕೊಂಡು ಬರುತ್ತಿವೆ. ಆದರೆ ನನಗೆ ತಕ್ಕ, ನನಗೆ ಬೇಕಾದಂತಹ ವಿಶೇಷ ಪಾತ್ರಗಳು ದೊರಕುತ್ತಿಲ್ಲ. ಮಾಡಿದ್ದನ್ನೇ ಮಾಡುವುದಕ್ಕೆ ನನಗೆ ಇಷ್ಟವಿಲ್ಲ, ಟೈಪ್ ಕಾಸ್ಟ್ ಆಗಲಾರೆ. ಹೆಚ್ಚು ಹೆಚ್ಚು ಹೊಸ ಪಾತ್ರಗಳಲ್ಲಿ ನಾನು ಕಾಣಿಸಿಕೊಳ್ಳಬೇಕು.
“ಮುಂಚೆ ಎಲ್ಲಾ, ನಾನು ಮೊದಲು ಸ್ಯಾಂಡಲ್ ವುಡ್ ನಲ್ಲಿ ಸಾಧನೆ ಮಾಡಬೇಕು, ಇಲ್ಲಿ ದುಡ್ಡು ಮಾಡಬೇಕು ಎಂದುಕೊಳ್ಳುತ್ತಿದ್ದೆ. ಆದರೆ ಈಗ ಎಲ್ಲಾ ಇಂಡಸ್ಟ್ರಿಯಲ್ಲೂ ಕೆಲಸ ಮಾಡಬೇಕು ಮತ್ತು ಬೇರೆ ಭಾಷೆಯಿಂದಲೂ ಅವಕಾಶಗಳು ಬರುತ್ತಿವೆ. ಪ್ಯಾನ್ ಇಂಡಿಯಾ ಚಿತ್ರಗಳೇ ಮುಖ್ಯ!” ಎನ್ನುತ್ತಾರೆ ನಟಿ ನಿಶ್ವಿಕಾ ನಾಯ್ಡು.

ಹೊಸಬರಿಗೆ ಕಿವಿಮಾತು
ಇನ್ನು ಚಿತ್ರರಂಗಕ್ಕೆ ಆಗಮಿಸುವ ಹೊಸಬರಿಗೆ ನಿಶ್ವಿಕಾ ಹೇಳುವುದೆಂದರೆ, “ಒಮ್ಮೆ ಚಿತ್ರೋದ್ಯಮದಲ್ಲಿ ಅವಕಾಶ ಸಿಕ್ಕುವವರೆಗೆ ಮಾತ್ರ ನಿಮಗೆ ಗಾಡ್ ಫಾದರ್ ಅವಶ್ಯಕ ಎನಿಸುತ್ತದೆ. ಆದರೆ ಸಿಕ್ಕಿದ ಅವಕಾಶವನ್ನು ಹೇಗೆ ನೀವು ಬಳಸಿಕೊಳ್ಳುತ್ತೀರಿ.
“ಇದನ್ನು ಹೇಗೆ ಮುಂದುವರಿಸಿಕೊಂಡು ಹೋಗುವಿರಿ ಎನ್ನುವುದು ನಿಮ್ಮ ಕೈಯಲ್ಲೇ ಇರುತ್ತದೆ. ಪ್ರೇಕ್ಷಕರು ನಿಮ್ಮ ಅಭಿನಯದ ಮೂಲಕವಷ್ಟೇ ನಿಮ್ಮನ್ನು ಗುರುತಿಸುತ್ತಾರೆ, ನೀವೆಲ್ಲಿಂದ ಬಂದರು ಎನ್ನುವುದರಿಂದಲ್ಲ.”
– ರಾಘವೇಂದ್ರ ಅಡಿಗ ಎಚ್ಚೆನ್





