ಕಥೆ - ಸವಿತಾ ಮುದ್ಗಲ್
ಶ್ರಮಜೀವಿ ಶಾಂತಾ ಬಡವಳಾದರೂ ಸ್ವಾಭಿಮಾನಿ. ತನ್ನ ಬದುಕು ರೂಪಿಸಿಕೊಳ್ಳಲು, ತಾಯಿ ತಂದೆಗೆ ನೆರವಾಗಲು ಹೊಲಿಗೆ ಕೆಲಸ ಹಿಡಿದಳು. ಇವಳಿಂದ ಅಸೂಯೆಗೊಂಡ ಜಲಜಾ ಮಾಡಿದ ಕುತಂತ್ರವೇನು......? ಮುಂದೆ ಏನಾಯಿತು......?
ಮುದ್ದೇಬಿಹಾಳದ ಪುಟ್ಟ ಊರು, ಒಂದು ಓಣಿಯಲ್ಲಿ ಈಶಪ್ಪನ ಪುಟ್ಟ ಕುಟುಂಬ. ಹೆಂಡತಿ, ಒಬ್ಬ ಮಗಳು. ಬಡತನವಿದ್ದರೂ, ಇದ್ದುದರಲ್ಲಿ ಸುಖವಾಗಿ ಇದ್ದವು. ಮಗಳು ಶಾಂತಾ ನೋಡಲು ಸುಂದರವಾಗಿದ್ದರೂ ಅವಿದ್ಯಾವಂತೆ.
ಶಾಂತಾಗೆ ಸುಮಾರು ವರಗಳು ಬಂದು ಹೋದವು. ಒಂದು ಕೂಡ ಗಟ್ಟಿಯಾಗೋ ತರ ಕಾಣ್ತಾ ಇಲ್ಲ. ನಮ್ಮ ಕರ್ಮನೊ ಏನೋ ನೋಡು ಎಂದು ಈಶಪ್ಪ ತನ್ನ ಹೆಂಡ್ತಿ ಬಾಳಮ್ಮಗೆ ಹೇಳ್ತಾ ಇದ್ದ.
``ಅಷ್ಟು ಅವಸರ ಯಾಕೆ ಮಾಡ್ತೀರಿ.... ದೇವರು ಹುಟ್ಟಿಸಿದ ಮೇಲೆ ಹಕ್ಕಿಗೊಂದು ಪಕ್ಕಿ ಅಂತ, ಗಾದೇನೇ ಇದೆಯಲ್ವಾ....? ಕಾದಷ್ಟು ಮುಂದೊಂದು ದಿನ ಒಳ್ಳೆ ಸಂಬಂಧ ಕೂಡಿ ಬರಬಹುದು.''
``ಇದೆ ಸಮಾಧಾನದ ಮಾತು ನಿನ್ನಿಂದ. ಬೇರೆ ಏನು ಮಾಡೋದು ಬಾಳು, ಸಾಕಾಯ್ತು.....'' ಎಂದು ಈಶಪ್ಪ ನಿಟ್ಟಿಸಿರು ಬಿಡುತ್ತಾ, ``ಒಂದು ಕಪ್ ಟೀ ಆದ್ರೂ ಕೊಡೆ, ಯಾಕೋ ತಲೆ ತುಂಬಾ ನೋಯ್ತಾ ಇದೆ,'' ಎಂದು ಹೊರಗಡೆ ಕಟ್ಟೆ ಮೇಲೆ ಬಂದು ಕುಳಿತ.
ಮಗಳಿಗೆ ಟೀ ಮಾಡಲು ಹೇಳಿದಳು. ಶಾಂತಾ ಟೀ ಮಾಡಿ, ತಂದೆಗೆ ಕೊಟ್ಟು ಬಂದಳು.
ಶಾಂತಾ ಓದಿದ್ದು ಕೇವಲ ಏಳನೇ ತರಗತಿ ಅಷ್ಟೇ. ಓದು ತಲೆಗೆ ಹತ್ತಲಿಲ್ಲ, ಮನೇಲಿ ಬಡತನ, ತಂದೆಗೆ ಆಸ್ತಮಾ ಕಾಯಿಲೆ, ತಾಯಿ ಊರಿನ ಗೌಡ್ರು ಮನೇಲಿ ಅಡುಗೆ ಮಾಡ್ಲಿಕ್ಕೆ ಹೋಗ್ತಾ ಇದ್ಲು. ಜೀವನೋಪಾಯಕ್ಕೆ ಮಗಳಿಗೆ ಏನಾದ್ರೂ ಉದ್ಯೋಗ ಮಾಡಲು ವಿದ್ಯೆ ಇಲ್ಲ.
ತಾಯಿ ಯೋಚನೆ ಮಾಡಿ, ಮಗಳಿಗೆ ವಿದ್ಯೆ ಅಂತೂ ಕೈ ಹಿಡಿಯಲಿಲ್ಲ, ಹೊಲಿಗೆ ಕಲಿಸಿದ್ರೆ, ನಾಲ್ಕೈದು ಅರಿವೆ ಹೊಲಿದಾದ್ರೂ ಬದುಕು ಕಟ್ಟುತ್ತಾಳೆ ಎಂದು ಊರಿನಲ್ಲಿ ಸಹಕಾರ ಕೇಂದ್ರದಲ್ಲಿ ಒಂದು ದಿನ, ಈ ಬಡವರ ಸ್ಕೀಮ್ ನಲ್ಲಿ ಉಚಿತ ರಾಟೆ ಕೊಡುವುದು ಗೊತ್ತಾಗಿ, ಮಗಳನ್ನು ಕರೆದುಕೊಂಡು ಅಲ್ಲಿಗೆ ಹೋದಳು.
ಆಕೆಯ ಆಧಾರ್ ಕಾರ್ಡ್ ಫೋಟೋ, ಅರ್ಜಿ ತುಂಬಲು 100 ರೂ. ಕೊಟ್ಟು ಬಂದರು. ತಮ್ಮ ಓಣಿಯಲ್ಲಿ ತರಬೇತಿ ಕೇಂದ್ರದಲ್ಲಿ ಮಗಳನ್ನು ಸೇರಿಸಿದ ನಂತರ, ಶಾಂತಾ ಮೂರು ತಿಂಗಳಲ್ಲಿ ಬಟ್ಟೆ ಹೊಲಿಯೋದು ಕಲಿತುಕೊಂಡಳು. ಇವಳು ಬಟ್ಟೆ ಹೊಲಿಯೋದು ಗೊತ್ತಾದ ಮೇಲೆ ಓಣಿಯಲ್ಲಿ ಒಬ್ಬೊಬ್ಬರೆ ಬ್ಲೌಸ್, ಮಕ್ಕಳ ಫ್ರಾಕ್, ಗಂಡಸರ ಶರ್ಟ್, ಪ್ಯಾಂಟ್ ಹೊಲಿಯಲು ಕೊಡ ತೊಡಗಿದರು. ಅವಳು ಚೆನ್ನಾಗಿ ಹೊಲಿಯುತ್ತಾಳೆಂದು ಇಡೀ ಊರಿಗೆ ಪ್ರಚಾರವಾಯಿತು. ಶಾಂತಾಳಿಗೆ ಈ ಕೆಲಸ ಕೈಹಿಡಿದಿತ್ತು.
ಒಂದು ವರ್ಷದಲ್ಲಿ ಅವಳಿಗೆ ಆರ್ಡರ್ ಹೆಚ್ಚಾಗಿ ಬರತೊಡಗಿದ್ದರಿಂದ ಅಷ್ಟನ್ನೂ ಅವಳೇ ಹೊಲಿಯಾಗದೆ ನಾಲ್ಕು ಹುಡುಗಿಯರಿಗೆ ಹೊಲಿಗೆ ಕಲಿಸಿ, ಕೆಲಸಕ್ಕೆ ಇಟ್ಟುಕೊಂಡಳು. ಅಂಗಡಿಗೆ ಒಂದು ಹೆಸರು ಕೂಡ ಇಟ್ಟು, ಬೋರ್ಡ್ ಹಾಕಿದಳು.
ಇದನ್ನು ಸಹಿಸದ, ಪಕ್ಕದ ಮನೆ ಜಲಜಾ, ಅವಳೂ ಕೂಡ ಓದದೇ ಮನೆಯಲ್ಲೇ ಇದ್ದಳು. ಆದರೆ ಶ್ರೀಮಂತ ಕುಟುಂಬ. ಒಂದು ದಿನ ಅವಳ ತಾಯಿ, ``ನೋಡು ಆ ಹುಡುಗಿ ಬಡತನ ಸೋಸಿ, ನಾಲ್ಕು ಮಕ್ಕಳಿಗೆ ಕೆಲಸ ಕೊಟ್ಟು ಮನೆ ನಡೆಸುತ್ತಿದ್ದಾಳೆ. ನೀನೂ ಇದ್ದೀಯಾ, ತಿನ್ನೋದು ಅಡ್ಡಾಡೋದು ಇದೇ ಆಗೋಯ್ತು,'' ಎಂದು ಜಲಜಾಳನ್ನು ಬೈದಾಗ, ಅದವಳಿಗೆ ಮನಸ್ಸಿನಲ್ಲಿ ತೀವ್ರವಾದ ಅಸಹನೆ ಉಂಟು ಮಾಡಿತು.





