– ರಾಘವೇಂದ್ರ ಅಡಿಗ ಎಚ್ಚೆನ್.
ಆಶಾ ಗುರುಲಿಂಗಯ್ಯ ಅವರ ಮುಳ್ಳಿ ಗುಲಾಬಿ ಕಾದಂಬರಿಯನ್ನಾಧರಿಸಿ, ಅದೇ ಹೆಸರಲ್ಲಿ ನಿರ್ಮಾಣವಾಗುತ್ತಿರುವ ಚಿತ್ರಕ್ಕೆ
ಸ್ಟೈಲ್ ಶಿವು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಅಜಯ್ ಗೌಡ, ಆಶಾ, ಗಿರಿಜಾ ಲೋಕೇಶ್, ರೇಖಾದಾಸ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಲಿರುವ “ಮುಳ್ಳಿನ ಗುಲಾಬಿ” ಚಿತ್ರದ ಪ್ರಥಮ ಪತ್ರಿಕಾಗೋಷ್ಠಿ ಇತ್ತೀಚೆಗೆ ನಡೆಯಿತು.

ಈ ವೇಳೆ ಮಾತನಾಡಿದ ಲೇಖಕಿ ಕಮ್ ನಾಯಕಿ ಆಶಾ ಗುರುಲಿಂಗಯ್ಯ ಸ್ವದೇಶಿ ದಿಶಾ ಕಂಪನಿ ಸಿಇಓ ಆಗಿ ಕೆಲಸ ಮಾಡುತ್ತಿದ್ದೇನೆ. ಡಿಗ್ರಿ ಓದುವಾಗಲೇ ಕಾದಂಬರಿ ಬರೆಯುವ ಹವ್ಯಾಸವಿತ್ತು. ಕಷ್ಟಪಡುತ್ತಿದ್ದ ಒಬ್ಬ ಹೆಣ್ಣು ಮಗಳನ್ನು ನೋಡಿ ಈ ಕಥೆ ಬರೆದೆ. ಆಕೆ ಓದಲು ಎಷ್ಟು ಕಷ್ಟಪಡುತ್ತಾಳೆ, ಮದುವೆಯಾದ ಮೇಲೆ ಗಂಡನ ಮನೆಯಲ್ಲಿ ಏನೆಲ್ಲ ತೊಂದರೆ ಅನುಭವಿಸುತ್ತಾಳೆ ಎಂದು ಅದರಲ್ಲಿ ಹೇಳಿದ್ದೆ. ಆ ಕಾದಂಬರಿಗೆ ಬಿಟಿ. ಲಲಿತಾನಾಯಕ್ ಮುನ್ನುಡಿ ಬರೆದರೆ, ಮೈಸೂರು ರಮಾನಂದ್ ಹಿನ್ನುಡಿ ಬರೆದರು. ಪ್ರಕಟಿಸಿದಾಗ ಸಾವಿರ ಪ್ರತಿ ಸೇಲಾಗಿ ತುಂಬಾ ಸಕ್ಸಸ್ ಆಯ್ತು. ಇಷ್ಟೊಂದು ಜನ ಇಷ್ಟಪಟ್ಟ ಕಾದಂಬರಿ ಸಿನಿಮಾ ಆದರೆ ಎಲ್ಲರಿಗೂ ತಲುಪುತ್ತೆ ಅನಿಸಿತು. ಶಿವು ಸಿಕ್ಕಾಗ ಈಬಗ್ಗೆ ಹೇಳಿದಾಗ ಅವರೂ ಒಪ್ಪಿದರು ಎಂದು ಹೇಳಿದರು.
ನಿರ್ದೇಶಕ ಸ್ಮೈಲ್ ಶಿವು ಮಾತನಾಡಿ ನಿಸರ್ಗ ನಂತರ ಇದು ನನ್ನ ಎರಡನೇ ಚಿತ್ರ. ನಾವೆಲ್ಲ ಸ್ನೇಹಿತರೇ ಸೇರಿ ಈ ಸಿನಿಮಾ ಮಾಡುತ್ತಿದ್ದೇವೆ. ಅತ್ತೆ ಮನೆಯಲ್ಲಿ ಹೆಣ್ಣು ಯಾವರೀತಿ ತೊಂದರೆ ಅನುಭವಿಸ್ತಾಳೆ ಮತ್ತು ಅದರಿಂದ ಹೇಗೆ ಹೊರಬರುತ್ತಾಳೆ ಅನ್ನೋದನ್ನಿಟ್ಟುಕೊಂಡು ಈ ಚಿತ್ರ ಮಾಡುತ್ತಿದ್ದೇವೆ. ಹಳೇ ಚಿತ್ರಕ್ಕೂ ನಮ್ಮ ಚಿತ್ರಕ್ಕೂ ಸಂಬಂಧವಿಲ್ಲ. ಎಲ್ಲ ಕಾಲದಲ್ಲೂ ಹೆಣ್ಣಿನ ಕಷ್ಟ ಇದ್ದದ್ದೇ. 80% ಮೂಲಕಥೆ ಇಟ್ಟುಕೊಂಡು ಸ್ಕ್ರಿಪ್ಟ್ ಮಾಡಿದ್ದು, 25 ದಿನಗಳ ಕಾಲ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸುವ ಯೋಜನೆಯಿದೆ. ನಾಯಕನ ಪಾತ್ರಕ್ಕೆ ಇನ್ನೂ ಫೈನಲ್ ಆಗಿಲ್ಲ. ಚಿತ್ರದಲ್ಲಿ 2 ಹಾಡುಗಳಿದ್ದು ಪಲ್ಲಕ್ಕಿ ಮ್ಯೂಸಿಕ್ ಮಾಡುತ್ತಿದ್ದಾರೆ ಎಂದರು.

ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ನಿರ್ಮಾಪಕ ಅಜಯ್ ಗೌಡ ಮಾತನಾಡಿ ನಾನು ತೆರೆಯ ಹಿಂದೆ ತುಂಬಾ ವರ್ಷ ಕೆಲಸ ಮಾಡಿದ್ದೆ. ಮೊದಲ ಬಾರಿಗೆ ಸ್ಕ್ರೀನ್ ಮುಂದೆ ಬರ್ತಿದ್ದೇನೆ. ನನ್ನದು ಲವರ್ ಬಾಯ್ ಪಾತ್ರ ಎಂದರು.
ಚಿತ್ರಕಥೆ ಬರೆದ ಎಂಡಿ. ಕೌಶಿಕ್ ಮಾತನಾಡಿ ಈಗ ಕಾದಂಬರಿ ಆಧಾರಿತ ಚಿತ್ರಗಳ ನಿರ್ಮಾಣ ಕಡಿಮೆಯಾಗಿದೆ. ಈ ಕಥೆ ಪ್ರಸ್ತುತ ಸಮಾಜಕ್ಕೆ ಹಿಡಿದ ಕನ್ನಡಿಯಂತಿದೆ ಎಂದರು.
ಹಿರಿಯ ನಟಿ ರೇಖಾದಾಸ್, ಅಪೂರ್ವ, ಮೈಸೂರು ರಮಾನಂದ್, ಛಾಯಾಗ್ರಾಹಕ ಪಿವಿಆರ್. ಸ್ವಾಮಿ ಚಿತ್ರದ ಕುರಿತಂತೆ ಮಾತನಾಡಿದರು.
ಜೆಡಿಎಸ್ ನ ವಿಜಯೇಂದ್ರ, ಲಯನ್ಸ್ ನ ಸತ್ಯವತಿ ಮುಖ್ಯಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಶಿವಾನಂದ್ ಅವರ ಸಂಭಾಷಣೆ, ಸಂಜೀವ್ ರೆಡ್ಡಿ ಅವರ ಸಂಕಲನ ಈ ಚಿತ್ರಕ್ಕಿದೆ.





