ಕೆಲವೊಮ್ಮೆ ಜೀವನದಲ್ಲಿ ನಾವು ಹುಡುಕಿಕೊಂಡು ಹೋಗುವ ಸಂತೋಷ ನಮಗೆ ಸಿಗುವುದಿಲ್ಲ. ಆದರೆ… ನಾವು ಹುಡುಕದೇ ಇದ್ದಾಗ, ನಿರೀಕ್ಷೆಯೇ ಇಲ್ಲದ ಕ್ಷಣದಲ್ಲಿ, ಅದು ನಮ್ಮ ಬಾಗಿಲಿಗೆ ಬಂದು ನಿಂತುಬಿಡುತ್ತದೆ. ಅಂತಹ ಕ್ಷಣಗಳನ್ನೇ ಬಹುಶಃ “ಬಯಸದೇ ಬಂದ ಭಾಗ್ಯ” ಎನ್ನಬಹುದೇನೋ!

ಶಂಕರ ದೊಡ್ಡ ಐಟಿ ಕಂಪನಿಯೊಂದರಲ್ಲಿ ಜವಾಬ್ದಾರಿಯುತ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದ. ಕೆಲಸ ಎಂದರೆ ಅವನಿಗೆ ಕೇವಲ ಉದ್ಯೋಗವಾಗಿರಲಿಲ್ಲ. ಅದು ಅವನ ಬದುಕಿನ ಒಂದು ಭಾಗವೇ ಆಗಿತ್ತು. ದಿನಕ್ಕೆ ಹನ್ನೆರಡು–ಹದಿನಾಲ್ಕು ಗಂಟೆ ಕೆಲಸ ಮಾಡುವುದು ಅವನಿಗೆ ಸಾಮಾನ್ಯವಾಗಿತ್ತು. ಆಗಷ್ಟೇ ಹುಟ್ಟಿದ್ದ ಮುದ್ದಾದ ಮಗಳು. ಇನ್ನೂ ತವರು ಮನೆಯಲ್ಲೇ ಬಾಣಂತಿಯಾಗಿದ್ದ ಹೆಂಡತಿ. ಮಗಳ ಮುಖವನ್ನು ನೋಡಬೇಕು, ಹೆಂಡತಿಯ ಜೊತೆ ಒಂದೆರಡು ಮಾತು ಮಾತನಾಡಬೇಕು, “ಹೇಗಿದ್ದೀಯ?” ಎಂದು ಕೇಳಬೇಕು ಎನ್ನುವ ಆಸೆ ಇದ್ದರೂ, ಕೆಲಸದ ಒತ್ತಡದ ಮುಂದೆ ಆ ಆಸೆಗಳೆಲ್ಲಾ ಮೂಲೆಗುಂಪಾಗುತ್ತಿದ್ದವು.

ಪ್ರತೀ ಬಾರಿ ಹೆಂಡತಿ, “ರೀ… ನೀವು ನಮಗೆ, ಕುಟುಂಬಕ್ಕೆ ಸಮಯವೇ ಕೊಡ್ತಾ ಇಲ್ಲಾ…” ಎಂದು ಬೇಸರದಿಂದ ಹೇಳುತ್ತಿದ್ದಳು. ಅದಕ್ಕೆ ಶಂಕರ ಎಂದಿನಂತೆ, “ಅಯ್ಯೋ… ಇರಮ್ಮಾ! ಕೆಲಸ ಇರುವಾಗ ಕೆಲಸ ಮಾಡಿಬಿಡಬೇಕು. ಇನ್ನೇನು? ಕೆಲಸ ಮುಗಿದ ಮೇಲೆ ನಾವೆಲ್ಲಾ ಆರಾಮವಾಗಿ ಇರೋಣ…” ಎಂದು ಸಮಜಾಯಿಷಿ ಹೇಳುತ್ತಿದ್ದ. ಅವಳಿಗೆ ಆ ಮಾತು ಸಮಾಧಾನ ಕೊಡುತ್ತಿತ್ತೋ, ಇಲ್ಲವೋ ಗೊತ್ತಿಲ್ಲ.

ಆದರೆ ಶಂಕರ ಮಾತ್ರ ತನ್ನ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದೇನೆ ಎಂಬ ಸಮಾಧಾನದಿಂದ ಮತ್ತೆ ಕಂಪ್ಯೂಟರ್ ಮುಂದೆ ಕುಳಿತುಬಿಡುತ್ತಿದ್ದ. ಕೆಲವೊಮ್ಮೆ ಕೆಲಸದ ತೀವ್ರತೆ ಎಷ್ಟಿರುತ್ತಿತ್ತೆಂದರೆ, ಕಚೇರಿಗೆ ಹೋದ ಮೇಲೆ 24 ಗಂಟೆ, 48 ಗಂಟೆ, ಕೆಲವೊಮ್ಮೆ 72 ಗಂಟೆಯವರೆಗೂ ಮನೆಗೆ ಬಾರದ ಸಂದರ್ಭಗಳೂ ಬರುತ್ತಿದ್ದವು. ಅಂತಹ ಪರಿಸ್ಥಿತಿ ಯಾವಾಗ ಬೇಕಾದರೂ ಬರಬಹುದು ಎಂಬ ದೂರದೃಷ್ಟಿಯಿಂದಲೇ, ಅವನ ಕಚೇರಿಯ ಡ್ರಾಯರ್‌ನಲ್ಲಿ ಬ್ರಷ್, ಪೇಸ್ಟ್, ಸೋಪು, ಟವೆಲ್ ಮತ್ತು ಒಂದೆರಡು ಜೋಡಿ ಬಟ್ಟೆಗಳು ಯಾವಾಗಲೂ ಸಿದ್ಧವಾಗಿರುತ್ತಿದ್ದವು.

ಮನೆಯಲ್ಲಿರುವ ಶಂಕರನಿಗಿಂತ ಕಚೇರಿಯಲ್ಲಿರುವ ಶಂಕರನನ್ನೇ ಹೆಚ್ಚು ನೋಡ್ತೀವಿ!” ಎಂದು ಅವನ ತಂದೆ-ತಾಯಿಯೂ ಕೆಲವೊಮ್ಮೆ ತಮಾಷೆ ಮಾಡುತ್ತಿದ್ದರು. ಆದರೂ ಮಗನ ಕೆಲಸದ ಸ್ವಭಾವ ಅವರಿಗೆ ಚೆನ್ನಾಗಿ ಗೊತ್ತಿತ್ತು. “ಮನೆಗೆ ಬರಲು ಆಗದಿದ್ದರೆ ಪರವಾಗಿಲ್ಲ. ಆದರೆ ಸಮಯ ಸಿಕ್ಕಾಗ ಒಂದು ಕರೆ ಮಾಡು. ನೀನು ಚೆನ್ನಾಗಿದ್ದೀಯ ಅನ್ನೋದು ಗೊತ್ತಾದರೆ ಸಾಕು,” ಎಂದು ಅವರು ಹೇಳುತ್ತಿದ್ದರು. ಅದು ಅವರ ಮಗನ ಮೇಲಿನ ಪ್ರೀತಿ.

ಅದೊಂದು ದಿನವೂ ಶಂಕರ ಎಂದಿನಂತೆ ಕೆಲಸಕ್ಕೆ ಹೋಗಿದ್ದ. ಆದರೆ ಇದ್ದಕ್ಕಿದ್ದಂತೆ ಒಂದು ತುರ್ತು ಕರೆ ಬಂತು. “ತಕ್ಷಣ ಮುಂಬೈಗೆ ಹೋಗಬೇಕು.” ಮತ್ತೇನು? ಮನೆಗೆ ಫೋನ್ ಮಾಡಿ, “ತುರ್ತು ಕೆಲಸ ಬಂದಿದೆ. ಮುಂಬೈಗೆ ಹೋಗ್ತಿದ್ದೀನಿ. ಬಹುಶಃ ತಡರಾತ್ರಿ ಬರಬಹುದು, ಇಲ್ಲವೇ ನಾಳೆ ಆಗಬಹುದು,” ಎಂದು ತಿಳಿಸಿದ. ಹೆಂಡತಿ ಏನಾದರೂ ಹೇಳುವ ಮುನ್ನವೇ ಮುಂದಿನ ಕೆಲಸದ ಚಿಂತೆ ಅವನನ್ನು ಆವರಿಸಿತ್ತು.

ಮುಂಬೈ ವಿಮಾನ ನಿಲ್ದಾಣ ತಲುಪುವಷ್ಟರಲ್ಲಿ ಅಲ್ಲಿನ ಸಹೋದ್ಯೋಗಿ ಅವನಿಗಾಗಿ ಕಾಯುತ್ತಿದ್ದ. ಇಬ್ಬರೂ ಸಮಯ ವ್ಯರ್ಥ ಮಾಡದೆ ನೇರವಾಗಿ ಪ್ರಭಾದೇವಿಯಲ್ಲಿದ್ದ VSNL ಡೇಟಾ ಸೆಂಟರ್ ಕಡೆಗೆ ದೌಡಾಯಿಸಿದರು. ಮುಂಬೈನ ಡೇಟಾ ಸೆಂಟರ್ ಶಂಕರನಿಗೆ ಹೊಸದು. ಆದರೆ ಅವನ ಸಹೋದ್ಯೋಗಿಗೆ ಅದು ಎರಡನೇ ಮನೆಯಂತಿತ್ತು. ಅಲ್ಲಿನ ಬಹುತೇಕ ಸಿಬ್ಬಂದಿಗೆ ಆತ ಪರಿಚಿತ. ಒಳಗೆ ಕಾಲಿಟ್ಟ ತಕ್ಷಣ, “ನಮಸ್ಕಾರ ಸರ್!” “ಹೇಗಿದ್ದೀರಾ?” ಎಂಬ ಮಾತುಗಳು ಕೇಳಿಬರುತ್ತಿದ್ದವು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ