– ರಾಘವೇಂದ್ರ ಅಡಿಗ ಎಚ್ಚೆನ್
ಖ್ಯಾತ ನಿರ್ದೇಶಕ ಮಣಿರತ್ನಂ ಅವರ ನಿರ್ದೇಶನದ ಮೊದಲ ಚಲನಚಿತ್ರ ಹಾಗೂ ಏಕೈಕ ಕನ್ನಡ ಚಿತ್ರ ‘ಪಲ್ಲವಿ ಅನುಪಲ್ಲವಿ’ ಬಿಡುಗಡೆಯಾಗಿ ಇಂದು 43 ವರ್ಷಗಳನ್ನು ಪೂರೈಸಿದೆ. 1983ರಲ್ಲಿ ತೆರೆಕಂಡ ಈ ಚಿತ್ರ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ವಿಶೇಷ ಸ್ಥಾನ ಪಡೆದಿದ್ದು, ಮಣಿರತ್ನಂ ಅವರ ಸಿನಿ ಪಯಣಕ್ಕೆ ಭದ್ರ ಅಡಿಪಾಯ ಹಾಕಿದ ಕೃತಿ ಎಂದೇ ಪರಿಗಣಿಸಲಾಗಿದೆ.
‘ಪಲ್ಲವಿ ಅನುಪಲ್ಲವಿ’ ಚಿತ್ರದಲ್ಲಿ ಅನಿಲ್ ಕಪೂರ್, ಕಿರಣ್ ಮತ್ತು ಹಿರಿಯ ನಟಿ ಲಕ್ಷ್ಮಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದರು. ವಿಶೇಷವೆಂದರೆ, ಇದು ಬಾಲಿವುಡ್ನ ಖ್ಯಾತ ನಟ ಅನಿಲ್ ಕಪೂರ್ ಅವರು ಅಭಿನಯಿಸಿದ ಏಕೈಕ ಕನ್ನಡ ಚಲನಚಿತ್ರವಾಗಿದೆ. ಈ ಚಿತ್ರವು ಸಂಗೀತ, ಕಥಾನಕ ಮತ್ತು ಭಾವನಾತ್ಮಕ ನಿರೂಪಣೆಯ ಮೂಲಕ ಆ ಕಾಲದಲ್ಲೇ ಪ್ರೇಕ್ಷಕರ ಮನಗೆದ್ದಿತ್ತು.
ಚಿತ್ರ ಬಿಡುಗಡೆಯ 43ನೇ ವರ್ಷಾಚರಣೆಯ ಹಿನ್ನೆಲೆಯಲ್ಲಿ, ನಟ ಅನಿಲ್ ಕಪೂರ್ ಅವರು ಇಂದು ಸಾಮಾಜಿಕ ಜಾಲತಾಣದ ಮೂಲಕ ತಮ್ಮ ನೆನಪುಗಳನ್ನು ಹಂಚಿಕೊಂಡಿದ್ದಾರೆ. ‘ಪಲ್ಲವಿ ಅನುಪಲ್ಲವಿ’ ತಮ್ಮ ವೃತ್ತಿಜೀವನದಲ್ಲಿ ವಿಶೇಷ ಸ್ಥಾನ ಹೊಂದಿರುವ ಚಿತ್ರ ಎಂದು ಅವರು ಹೇಳಿಕೊಂಡಿದ್ದು, ಮಣಿರತ್ನಂ ಅವರೊಂದಿಗೆ ಮೊದಲ ಬಾರಿ ಕೆಲಸ ಮಾಡಿದ ಅನುಭವವನ್ನು ಗೌರವದಿಂದ ಸ್ಮರಿಸಿದ್ದಾರೆ.

43 ವರ್ಷಗಳ ಹಿಂದೆ, ನಾನು ಕನ್ನಡ ಚಿತ್ರರಂಗಕ್ಕೆ ನನ್ನ ಮೊದಲ ಹೆಜ್ಜೆ ಇಟ್ಟಿದ್ದೆ. ಅಂದಿನಿಂದ ಇಲ್ಲಿಯವರೆಗೆ, ಕನ್ನಡ ಚಿತ್ರರಂಗವು ಜಾಗತಿಕವಾಗಿ ಭಾರತೀಯ ಸಿನಿಮಾವನ್ನು ಹೇಗೆ ಮರು ವ್ಯಾಖ್ಯಾನಿಸುತ್ತಿದೆ ಮತ್ತು ಅಭಿವೃದ್ಧಿ ಹೊಂದುತ್ತಿದೆ ಎಂಬುದನ್ನು ನೋಡುವುದು ಅದ್ಭುತವಾಗಿದೆ ಎಂದು ಬರೆದುಕೊಂಡಿದ್ದಾರೆ.
ಮಣಿರತ್ನಂ ಅವರ ಸಿನಿ ಶೈಲಿಗೆ ಮುನ್ನುಡಿ ಬರೆದ ಈ ಚಿತ್ರವು, ನಂತರ ಅವರು ನಿರ್ದೇಶಿಸಿದ ಅನೇಕ ಶ್ರೇಷ್ಠ ಚಿತ್ರಗಳಿಗೆ ದಾರಿ ತೆರೆದಿತು. ಕನ್ನಡ ಚಿತ್ರರಂಗಕ್ಕೂ ಹೆಮ್ಮೆಯಾದ ಈ ಚಿತ್ರ, ಹೊಸ ತಲೆಮಾರಿನ ಪ್ರೇಕ್ಷಕರಿಗೂ ಇಂದಿಗೂ ಸವಿ ನೆನೆಪಿನ ವಿಷಯವಾಗಿದೆ.
43 ವರ್ಷಗಳಾದರೂ ‘ಪಲ್ಲವಿ ಅನುಪಲ್ಲವಿ’ ಚಿತ್ರವು ತನ್ನ ಸಂಗೀತ, ಕಥೆ ಮತ್ತು ಅಭಿನಯದ ಮೂಲಕ ಸಿನಿಪ್ರೇಮಿಗಳ ಮನಸ್ಸಿನಲ್ಲಿ ಇನ್ನೂ ಜೀವಂತವಾಗಿದೆ.

ಪಲ್ಲವಿ ಅನು ಪಲ್ಲವಿ ಚಿತ್ರವು ಹಲವಾರು ಕಾರಣಗಳಿಗಾಗಿ ವಿಶಿಷ್ಟವಾಗಿದ್ದು, ಈ ಚಿತ್ರದ ಮೂಲಕ ಮಣಿರತ್ನಂ ಅವರು ನಿರ್ದೇಶಕರಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಇಂದು ದೇಶದ ಅತ್ಯುತ್ತಮ ಚಲನಚಿತ್ರ ನಿರ್ಮಾಪಕರು ಮತ್ತು ನಿರ್ದೇಶಕರಲ್ಲಿ ಒಬ್ಬರಾಗಿದ್ದಾರೆ. 1983ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ಅನಿಲ್ ಕಪೂರ್, ಲಕ್ಷ್ಮಿ ಮತ್ತು ಕಿರಣ್ ವೈರಾಲೆ ಮುಖ್ಯ ಭೂಮಿಕೆಯಲ್ಲಿದ್ದರು. ಸಿನಿಮಾ ನಿರ್ಮಾಣದಲ್ಲಿ ಯಾವುದೇ ತರಬೇತಿ ಪಡೆದಿಲ್ಲದ ಮಣಿರತ್ನಂ ಅವರಿಗೆ ಅತ್ಯುತ್ತಮ ಚಿತ್ರಕಥೆಗಾಗಿ ಮತ್ತು ಅತ್ಯುತ್ತಮ ಛಾಯಾಗ್ರಹಣಕ್ಕಾಗಿ ಬಾಲು ಮಹೇಂದ್ರ ಅವರಿಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಲಭಿಸಿತು. ಈ ಚಿತ್ರಕ್ಕೆ ತಮಿಳು ಚಿತ್ರರಂಗದ ಮತ್ತೊಬ್ಬ ದಿಗ್ಗಜ ಬಾಲು ಮಹೇಂದ್ರ ಅವರ ಛಾಯಾಗ್ರಹಣವಿದೆ. ಅಲ್ಲದೆ, ಬಿ ಲೆನಿನ್ ಅವರ ಸಂಕಲನವಿದೆ. ಈ ಚಿತ್ರಕ್ಕೆ ಇಳಯರಾಜ ಅವರ ಸಂಗೀತ ಸಂಯೋಜನೆಯಿತ್ತು.





