- ರಾಘವೇಂದ್ರ ಅಡಿಗ ಎಚ್ಚೆನ್.
"ರಂಗಭೂಮಿಗೆ ಗೌರವ ಎನ್ನುವ ಕಾರಣಕ್ಕೆ ನಾನು ರಾಜ್ಯಸಭೆ ಸದಸ್ಯೆಯಾಗಿದ್ದೆ ನಾನು ರಾಜಕಾರಣಿಯಲ್ಲ, ನಾನೊಬ್ಬ ಕಲಾವಿದೆ, ಯಾವುದೇ ಪಕ್ಷಕ್ಕೆ ಸೀಮಿತವಾಗಿಲ್ಲ ಇಂದೂ ಯಾರಿಗಾದರೂ ಸಹಾಯವಾಗುತ್ತದೆ ಎಂದರೆ ಹೋಗುತ್ತೇನೆ." ರಂಗಕರ್ಮಿ, ಗಾಯಕಿಯೂ ಆಗಿರುವ ಬಿ, ಜಯಶ್ರೀ ಹೇಳಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ನಗರದ ನಯನ ಸಭಾಂಗಣದಲ್ಲಿ 'ಮನೆಯಂಗಳದಲ್ಲಿ ಮಾತುಕತೆ' ಯಲ್ಲಿ ಅವರು ತಮ್ಮ ಮನದಾಳದ ಮಾತನ್ನಾಡಿದರು, 'ಮನೆಯಂಗಳದಲ್ಲಿ ಮಾತುಕತೆ' ಕಾರ್ಯಕ್ರಮದಲ್ಲಿ ತಿಂಗಳ ಅತಿಥಿಯಾಗಿ ಅವರು ಭಾಗವಹಿಸಿದ್ದರು.
ಹಿಂದಿ ಕಲಿತದ್ದೇಕೆ?: : ''ಬಾಲ್ಯದಲ್ಲಿ ಓದುವ ಮನಸ್ಸಾಗಿ ನಾಟಕ ತೊರೆದು ತಾತ ಗುಬ್ಬಿ ವೀರಣ್ಣನವರ ಅನುಮತಿ ಪಡೆದು ಶಿಕ್ಷಣ ಮುಗಿಸಿದೆ. ನಂತರ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮ (ಎನ್ಎಸ್ಡಿ) ಸೇರಿಕೊಂಡೆ. ಆದರೆ, ಹಿಂದಿ ಬರುತ್ತಿರಲಿಲ್ಲ. ಓದಿದ್ದರೂ ಅಷ್ಟು ಚೆನ್ನಾಗಿ ಇಂಗ್ಲಿಷ್ ಬರುತ್ತಿರಲಿಲ್ಲ. ಹಿಂದಿಯಲ್ಲಿ ಮಾತನಾಡುತ್ತಾ ಇಬ್ರಾಹಿಂ ಅಲ್ಯಾಜಿ ಅವರನ್ನುಸ್ತ್ರೀಲಿಂಗದಲ್ಲಿ ಸಂಬೋಧಿಸಿದ್ದೆ. ಮುಂದೆ ಹೀಗಾಗಬಾರದೆಂಬ ಉದ್ದೇಶದಿಂದ ಸುಮಾರು ಒಂದೂವರೆ ತಿಂಗಳು ಕೇವಲ ಮೂಕಾಭಿನಯ ಮಾಡಿದೆ. ನಂತರ ದಿನಪತ್ರಿಕೆ ಓದುವ ಮೂಲಕ ಹಿಂದಿ ಕಲಿತೆ,'' ಎಂದು ಜಯಶ್ರೀ ಹೇಳಿದ್ದಾರೆ.

“ಎನ್ಎಸ್ಡಿಯಲ್ಲಿ ನಾನು ಮತ್ತು ಜ್ಯೋತಿ ದಕ್ಷಿಣ ಭಾಗದವರಾಗಿದ್ದರಿಂದ, ಅಲ್ಲಿ ಪ್ರವೇಶ ಪಡೆದು ಮೂರು ವರ್ಷ ಕಳೆದರೂ ಪಾತ್ರಗಳು ದೊರೆಯುತ್ತಿರಲಿಲ್ಲ. ಇದರಿಂದ ಕಲಿಯುವುದು ಹೇಗೆಂದು ಕೋಪಗೊಂಡೆವು. ಆದರೆ, ಅಲ್ಯಾಜಿ ಬಳಿ ದೂರು ಹೇಳುವುದು ಸಾಧ್ಯವಾಗದ ಮಾತು ಎಂಬುದು ಗೊತ್ತಿತ್ತು. ಹೀಗಾಗಿ, ಅವರ ಕಿವಿಗೆ ಬೀಳುವಂತೆ ಬೇಸರ ಮತ್ತು ಕೋಪದ ಮಾತುಗಳನ್ನಾಡುತ್ತಿದ್ದೆವು. ಅದು ಅಲ್ಯಾಜಿ ಅವರಿಗೆ ತಿಳಿಯಿತು. ಒಂದು ದಿನ ನಾಟಕದ ಅಭ್ಯಾಸ ಮುಗಿದ ನಂತರ ಅಲ್ಯಾಜಿ ಅವರು ನಮ್ಮನ್ನು ಕರೆದು ಏನು ಕಲಿತಿದ್ದೀರ ನಟಿಸಿ ಎಂದರು. ಆಗ ಸ್ವಲ್ಪವೂ ತೊದಲದೆ ನಟಿಸಿದೆವು. ಆಗ ಅಲಾಜಿ ನಮ್ಮನ್ನು ತಬ್ಬಿಕೊಂಡು ನೀವು ಗೆದ್ದಿದ್ದೀರಿ ಎಂದು ಬೆನ್ನು ತಟ್ಟಿದರು. ಅಂದುನಮಗಾದ ಖುಷಿ ಯಾವುದೇ ಬಿರುದು, ಪ್ರಶಸ್ತಿ ದೊರೆತರೂ ಸಿಗದು,'' ಎಂದರು.

ಪಕ್ಷಾತೀತವಾಗಿ ಅನುದಾನ ಬಳಕೆ: “ ರಾಜ್ಯಸಭೆ ಸದಸ್ಯೆಯಾಗಿ ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು, ಮನಸ್ಸಿಲ್ಲದಿದ್ದರೆ ಏನೂ ಸಾಧ್ಯವಿಲ್ಲ ಎಂಬುದು ತಿಳಿಯಿತು. ಅಲ್ಲಿ ಯಾರೂ ಆತ್ಮೀ ಯರಲ್ಲ, ಯಾರೂಶತ್ರುಗಳಲ್ಲ ನಾನು ರಾಜ್ಯಸಭೆಗೆ ನಾಮನಿರ್ದೇಶನಗೊಂಡಿದ್ದರಿಂದ ನನಗೆ ನಿರ್ದಿಷ್ಟ ಕ್ಷೇತ್ರವಿರಲಿಲ್ಲ. ಇಡೀ ಭಾರತ ನನ್ನದಾಗಿತ್ತು. ಯಾವುದೇ ಬೇಧವಿಲ್ಲದೆ, ಪಕ್ಷಾತೀತವಾಗಿ ಎಲ್ಲರ ಒಳಿತಾಗಿ ಅನುದಾನ ಬಳಸಿದ್ದೇನೆ. ರಸ್ತೆ, ಚರಂಡಿ, ಸಮುದಾಯ ಭವನ, ದೇವಸ್ಥಾನಗಳಿಗೆ ಅನುದಾನ ಕೊಡುತ್ತಿರಲಿಲ್ಲ, ಶಾಲೆ, ಆಸ್ಪತ್ರೆ, ಮಹಿಳೆಯರು, ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಅನುದಾನ ನೀಡಿದ್ದೇನೆ,'' ಎಂದು ಡಾ. ಬಿ. ಜಯಶ್ರೀ ಹೇಳಿದರು.

ಮೊಬೈಲ್ ನಿಂದ ಸಂಬಂಧಗಳು ಕಳೆದುಹೋಗಿದೆ: "ಪ್ರಸ್ತುತ ಕಾಲಘಟ್ಟದಲ್ಲಿ ಜೀವಂತಿಕೆ ಉಳಿಸಿಕೊಂಡಿರುವ ಕಲೆ ಎಂದರೆ ರಂಗಭೂಮಿ ಒಂದೇ. ಅದರ ಮೇಲೆ ತಂತ್ರಜ್ಞಾನಗಳ ಪ್ರಯೋಗ ಮಾಡಬೇಡಿ. ಬದಲಿಗೆ ನಿಮ್ಮ ಕ್ರಿಯಾಶೀಲತೆ ಬಳಸಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ನಾಟಕಗಳಲ್ಲಿ ತಂತ್ರಜ್ಞಾನದ ಬಳಕೆ ಮಾಡಲಾಗುತ್ತಿದೆ. ಆದರೆ ಪ್ರಯೋಗವೇ ಒಂದಿರುತ್ತದೆ, ಅಲ್ಲಿ ತೋರಿಸುವುದೇ ಒಂದಿರುತ್ತದೆ. ಹೀಗೆ ತಂತ್ರಜ್ಞಾನದ ಮೊರೆ ಹೋಗಿ ನಿಮ್ಮಲ್ಲಿರುವ ಕಲೆ ಮತ್ತು ಶಕ್ತಿಯನ್ನು ಸಾಯಿಸಬೇಡಿ ಎಂದು ಹೇಳಿದರೆ ಇಂದಿನವರು ಕೇಳುವುದಿಲ್ಲ. ಹಾಗಾಗಿ ಯುವಜನರಿಗೆ ಬುದ್ಧಿ ಹೇಳುವ ಸ್ಥಿತಿಯಲ್ಲಿ ನಾವಿಲ್ಲ, ಅದನ್ನು ತೆಗೆದುಕೊಳ್ಳುವ ಸ್ಥಿತಿಯಲ್ಲಿ ಅವರೂ ಇಲ್ಲ. ಈಗ ಏನಿದ್ದರೂ ಮೊಬೈಲ್ ಪ್ರಪಂಚದಲ್ಲಿ ಸಾಕಷ್ಟು ತಲ್ಲೀನರಾಗಿರುವ ಅವರಿಗೆ ಎಲ್ಲವೂ ಮೊಬೈಲ್ ಆಗಿದ್ದು, ಸಂಬಂಧಗಳನ್ನು ಕಳೆದುಕೊಂಡಿದ್ದಾರೆ " ಎಂದು ಜಯಶ್ರೀಯವರು ಅಭಿಪ್ರಾಯಪಟ್ಟರು.





