ಕಿರುತೆರೆಯ ರಾಧಾ ರಮಣ ನಟಿ ಕಾವ್ಯ ಗೌಡ ಹಾಗೂ ಪತಿ ಸೋಮಶೇಖರ್ ಮೇಲೆ ಹಲ್ಲೆ ನಡೆದಿದೆ. ಸಂಬಂಧಿಕರೇ ಕಾವ್ಯ ಗೌಡ ಮತ್ತು ಸೋಮಶೇಖರ್ ಅವರನ್ನ ಥಳಿಸಿದ್ದಾರೆ. ಸೋಮಶೇಖರ್ಗೆ ಚಾಕುವಿನಿಂದ ಇರಿದಿದ್ದಾರೆ.
“ಗಾಂಧಾರಿ”, ”ರಾಧಾ ರಮಣ” ಸೇರಿದಂತೆ ಹಲವಾರು ಧಾರವಾಹಿಗಳಲ್ಲಿ ಅಭಿನಯಿಸಿರುವ ಕಾವ್ಯ ಗೌಡ ಉದ್ಯಮಿ ಸೋಮಶೇಖರ್ ಅವರನ್ನು 5 ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟವರು. ಇದೀಗ ಕಾವ್ಯ ಗೌಡ ಪತಿ ಸೋಮಶೇಖರ್ ಮೇಲೆ ಹಲ್ಲೆ ನಡೆದಿದ್ದು, ಸಂಬಂಧಿಕರೇ ಹಲ್ಲೆ ನಡೆಸಿದ್ದು, ಕೌಟುಂಬಿಕ ಕಲಹ ಬೀದಿಗೆ ಬಿದ್ದಿದೆ.
ಸೋಮಶೇಖರ್ ಹಾಗೂ ನಂದೀಶ್ ಸಹೋದರರು. ಕಾವ್ಯ ಗೌಡ ಮತ್ತು ಪತಿ ಸೋಮಶೇಖರ್, ಪ್ರೇಮ ಮತ್ತು ಪತಿ ನಂದೀಶ್ ಒಂದೇ ಮನೆಯಲ್ಲಿ ವಾಸವಿದ್ದರು. ಅತ್ತೆ, ಮಾವನ ಜೊತೆಗೆ ಜಾಯಿಂಟ್ ಫ್ಯಾಮಿಲಿಯಲ್ಲಿ ಕಾವ್ಯ ಗೌಡ ನೆಲೆಸಿದ್ದರು. ಕಾವ್ಯ ಗೌಡ ಹಾಗೂ ಓರಗಿತ್ತಿ ಪ್ರೇಮ ಮಧ್ಯೆ ಮನಸ್ತಾಪ ಇತ್ತು.
ಕಾವ್ಯ ಗೌಡ ಮಗಳು ಸಿಯಾಳನ್ನ ನೋಡಿಕೊಳ್ಳುವ ಹುಡುಗಿ ಸಂಬಂಧ ಮನೆಯಲ್ಲಿ ಜಗಳ ಆರಂಭವಾಗಿದೆ. ಮಾತಿಗೆ ಮಾತು ಬೆಳೆದು, ಕೈ – ಕೈ ಮಿಲಾಯಿಸಿದ್ದಾರೆ. ಕಾವ್ಯ ಗೌಡಗೆ ಪ್ರೇಮ ತಂದೆ ರವಿಕುಮಾರ್ ಅತ್ಯಾಚಾರ ಬೆದರಿಕೆ ಹಾಕಿದ್ದಾರೆ. ಕಾವ್ಯ ಗೌಡ ಪತಿ ಸೋಮಶೇಖರ್ಗೆ ಚಾಕುವಿನಿಂದ ಇರಿದಿದ್ದಾರೆ. ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಕಾವ್ಯ ಗೌಡ ಪತಿ ಸೋಮಶೇಖರ್ಗೆ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ರಾಮಮೂರ್ತಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರೇಮ, ನಂದೀಶ್, ಪ್ರಿಯಾ, ರವಿಕುಮಾರ್ ವಿರುದ್ಧ ಕಾವ್ಯ ಗೌಡ ಸಹೋದರಿ ಭವ್ಯಾ ಗೌಡ ದೂರು ಕೊಟ್ಟಿದ್ದಾರೆ. ಇತ್ತ ಪ್ರೇಮ ಸಂಬಂಧಿಕರಿಂದ ಪ್ರತಿ ದೂರು ಸಹ ದಾಖಲಾಗಿದೆ.
ಘಟನೆ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿರುವ ಕಾವ್ಯ ಗೌಡ, ‘’ಒಂದು ಮನೆ ಅಂದ್ಮೇಲೆ ಗಲಾಟೆ ಇದ್ದೇ ಇರುತ್ತದೆ. ನನ್ನ ಮಗಳನ್ನ ನೋಡಿಕೊಳ್ಳಲು ಬಂದ ಹುಡುಗಿ ಮೇಲೆ ಕಳ್ಳತನದ ಆರೋಪ ಹೊರಿಸಿದ್ದರು. ನಮ್ಮ ಮನೆಯಲ್ಲಿ ಎಲ್ಲಾ ಕಡೆ ಕ್ಯಾಮೆರಾಗಳು ಇವೆ. ಲಿವಿಂಗ್ ಏರಿಯಾದಲ್ಲಿ ಯಾರೂ ಒಡವೆ ಇಡೋದಿಲ್ಲ. ಇದು ತಪ್ಪಾಯ್ತು. ನಮ್ಮ ಮಾವ ಇದನ್ನ ಇತ್ಯರ್ಥ ಮಾಡಿದ್ದರು. ನಾನು ಕೊಚ್ಚೆ ಮೇಲೆ ಕಲ್ಲು ಹಾಕೋದಿಲ್ಲ ಎಂದಿದ್ದಾರೆ.
‘’ನನ್ನ ಮಗಳು ದ್ರಾಕ್ಷಿ ತಿಂದಿದ್ದಳು. ಆನಂತರ ಹ್ಯಾಂಡ್ ವಾಶ್ ಮಾಡಿಕೊಂಡು ಬಂದಿದ್ದಾಳೆ. ಆಮೇಲೆ ನನ್ನ ಮಗಳನ್ನ ನೋಡಿಕೊಳ್ಳುತ್ತಿದ್ದ ಸುಮಾ ಎಂಬ ಹುಡುಗಿಗೆ ‘ಕಳ್ಳಿ ಕಳ್ಳಿ’ ಅಂತ ಕರೆದಿದ್ದಾರೆ. ನನ್ನ ಮಗು ಮೇಲೆ ಕೈ ಮಾಡಿದ್ದಾರೆ” ಎಂದು ಹೇಳಿದ್ದಾರೆ.
ಸಾಯಂಕಾಲ ಪ್ರೇಮ ಮನೆಯವರು ಬಂದಿದ್ದಾರೆ. ನನ್ನ ಮೇಲೆ ಅಟ್ಯಾಕ್ ಮಾಡಿದ್ದಾರೆ. ಕೋಲಿನಲ್ಲಿ, ದೊಣ್ಣೆಯಲ್ಲಿ ನನ್ನ ಮೇಲೆ ಅಟ್ಯಾಕ್ ಮಾಡಿದ್ದಾರೆ. ಪ್ರೇಮ ತಂದೆ ರವಿಕುಮಾರ್ ಹೇಳ್ತಾರೆ ‘’ನನಗೆ ಪೊಲಿಟಿಕಲ್ ಪವರ್ ಇದೆ. ನಿನ್ನನ್ನ 100 ಜನರ ಮುಂದೆ ರೇಪ್ ಮಾಡ್ತೀನಿ ಅಂತ. ರೇಪ್ ಅಂದ್ರೆ ಅಷ್ಟು ಈಸಿನಾ? ನಾನು ಸಿಲ್ಲಿ ವಿಚಾರಗಳಿಗೆ ನ್ಯೂಸ್ಗೆ ಬರುವ ಹುಡುಗಿ ಅಲ್ಲ. ನನ್ನ ಪ್ರೈವೇಟ್ ಪಾರ್ಟ್ಸ್ಗೆಲ್ಲಾ ಹೊಡೆದಿದ್ದಾರೆ. ಇದಕ್ಕೆ ಕಾನೂನು ಪ್ರಕಾರವಾಗಿಯೇ ಶಿಕ್ಷೆ ಆಗಬೇಕು. ನಾನು ತಪ್ಪು ಮಾಡಿಲ್ಲ. ಅದಕ್ಕೆ ಧೈರ್ಯವಾಗಿದ್ದೇನೆ. ನನ್ನ ಗಂಡನಿಗೆ ಚಾಕುವಿನಿಂದ ಚುಚ್ಚಿದ್ದಾರೆ. ಅದೃಷ್ಟವಶಾತ್.. ಪ್ರಾಣಾಪಾಯ ಆಗಿಲ್ಲ. ನನಗೆ ನ್ಯಾಯ ಬೇಕು” ಎಂದು ಕಾವ್ಯ ಗೌಡ ಆಗ್ರಹಿಸಿದ್ದಾರೆ.





