ಬಾಲಿವುಡ್ ಖ್ಯಾತ ನಟ ಅನುಪಮ್ ಖೇರ್ ಹಲವಾರು ಸಿನಿಮಾಗಳಲ್ಲಿ ಅದ್ಭುತ ಪಾತ್ರಗಳನ್ನು ಮಾಡಿದ್ದಾರೆ. ರಾಜಕೀಯವಾಗಿಯೂ ಸಕ್ರಿಯವಾಗಿರುವ ಅನುಪಮ್ ಖೇರ್, ಬಿಜೆಪಿ ಹಾಗೂ ನರೇಂದ್ರ ಮೋದಿ ಅವರ ಕಟ್ಟಾ ಬೆಂಬಲಿಗರಾಗಿದ್ದಾರೆ. ಅನುಪಮ್ ಖೇರ್ ಅವರು ಬಿಜೆಪಿ ಪರವಾದ ಪ್ರಾಪಗಾಂಡಾ ಸಿನಿಮಾಗಳಲ್ಲಿ ನಟಿಸಿದ್ದಾರೆ.
‘ದಿ ಕಶ್ಮೀರ್ ಫೈಲ್ಸ್’, ‘ದಿ ವ್ಯಾಕ್ಸಿನ್ ವಾರ್’, ‘ಎಮರ್ಜೆನ್ಸಿ’, ‘ಆಕ್ಸಿಡೆಂಟಲ್ ಪ್ರೈಮಿನಿಸ್ಟರ್’ ಸಿನಿಮಾಗಳಲ್ಲಿ ಅವರು ನಟಿಸಿದ್ದು, ಇದೀಗ ‘ಶ್ರೀ ರಾಮ ಭೂಮಿ’ ಹೆಸರಿನ ಸಿನಿಮಾನಲ್ಲಿ ನಟಿಸುತ್ತಿದ್ದಾರೆ.
‘ಶ್ರೀ ರಾಮ್ ಭೂಮಿ’ ಚಿತ್ರದಲ್ಲಿ ಅವರು ಅಶೋಕ್ ಸಿಂಘಾಲ್ ಪಾತ್ರ ನಿರ್ವಹಿಸಲಿದ್ದಾರೆ. ಅನುಪಮ್ ಖೇರ್ ಅವರ ಲುಕ್ನ ಕೆಲ ಚಿತ್ರಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಇದರ ನಡುವೆ ಖುದ್ದು ಅನುಪಮ್ ಖೇರ್ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ತಾವು ಅಶೋಕ್ ಸಿಂಘ್ವಾಲ್ ಅವರ ಪಾತ್ರದಲ್ಲಿ ನಟಿಸುತ್ತಿರುವುದಾಗಿ ಖಾತ್ರಿಪಡಿಸಿದ್ದಾರೆ.
ಈ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದ ಅನುಪಮ್ ಖೇರ್, ‘ನಾನು ನಿರ್ವಹಿಸುತ್ತಿರುವ ಪಾತ್ರದ ಕೆಲವು ಚಿತ್ರಗಳು ಮಾಧ್ಯಮಗಳಲ್ಲಿ ಈಗಾಗಲೇ ಕಾಣಿಸಿಕೊಂಡಿರುವುದರಿಂದ, ನಾನು ಯಾವ ಪಾತ್ರವನ್ನು ಮಾಡುತ್ತಿದ್ದೇನೆ ಎಂದು ತಿಳಿಸುವುದು ಸೂಕ್ತ. ‘ಶ್ರೀ ರಾಮ ಭೂಮಿ’ ಚಿತ್ರದಲ್ಲಿ ನಾನು ಅಶೋಕ್ ಸಿಂಘಾಲ್ ಅವರ ಪಾತ್ರ ನಿರ್ವಹಿಸುತ್ತಿದ್ದೇನೆ. ಸಂಪೂರ್ಣ ಸಮರ್ಪಣೆ, ದೃಢನಿಶ್ಚಯ ಮತ್ತು ಬದ್ಧತೆಯಿಂದ ಶ್ರೀ ರಾಮ್ ಜನ್ಮಭೂಮಿ ಚಳುವಳಿಗೆ ಮಾರ್ಗದರ್ಶನ ನೀಡಿದ ವ್ಯಕ್ತಿ ಅವರು’ ಎಂದು ಬರೆದುಕೊಂಡಿದ್ದಾರೆ.
‘ಅವರು ಕೇವಲ ನಾಯಕರಾಗಿರಲಿಲ್ಲ, ಬದಲಾಗಿ ಭಗವಾನ್ ಶ್ರೀರಾಮನ ಪರಮ ಭಕ್ತರಾಗಿದ್ದರು. ಅವರ ನಂಬಿಕೆ, ಸೂಕ್ಷ್ಮತೆ ಮತ್ತು ಅಚಲವಾದ ನಂಬಿಕೆಯು ಚಳುವಳಿಗೆ ಹೊಸ ಶಕ್ತಿಯನ್ನು ನೀಡಿತು. ಇಂತಹ ಐತಿಹಾಸಿಕ ವ್ಯಕ್ತಿಯೊಬ್ಬರ ಜೀವನವನ್ನು ತೆರೆಯ ಮೇಲೆ ಪ್ರಾಮಾಣಿಕವಾಗಿ ಮತ್ತು ಸೂಕ್ಷ್ಮವಾಗಿ ತರುವುದು ನನಗೆ ದೊಡ್ಡ ಜವಾಬ್ದಾರಿಯಾಗಿದೆ. ನಾನು ನನ್ನ ಅತ್ಯುತ್ತಮ ಪ್ರಯತ್ನ ಮಾಡುತ್ತೇನೆ. ನಿಮ್ಮೆಲ್ಲರ ಆಶೀರ್ವಾದ ಮತ್ತು ಶುಭ ಹಾರೈಕೆಗಳನ್ನು ಕೋರುತ್ತೇನೆ’ ಎಂದು ಅವರು ಹೇಳಿದ್ದಾರೆ.
ಚಿತ್ರೀಕರಣ ಸದ್ಯ ಅಯೋಧ್ಯೆಯಲ್ಲಿ ನಡೆಯುತ್ತಿದೆ. ಶೂಟಿಂಗ್ ಆರಂಭಿಸುವ ಮುನ್ನ ಅನುಪಮ್ ಖೇರ್ ರಾಮ ಮಂದಿರ, ಹನುಮಾನ್ ಮಂದಿರಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ. ಅಶೋಕ್ ಸಿಂಘ್ವಾಲ್ ಅವರು ‘ಅಯೋಧ್ಯೆ ರಾಮಜನ್ಮ ಭೂಮಿ’ ಚಳವಳಿಯ ನೇತೃತ್ವ ವಹಿಸಿದ್ದರು. ದಶಕಗಳ ಕಾಲ ರಾಮ ಮಂದಿರ ನಿರ್ಮಾಣಕ್ಕಾಗಿ ಆಗ್ರಹಿಸುತ್ತಲೇ ಬಂದಿದ್ದರು. ರಾಮ ಮಂದಿರ ನಿರ್ಮಾಣಕ್ಕೆ ಒತ್ತಾಯಿಸಿ ಉಪವಾಸವನ್ನೂ ಮಾಡಿದ್ದರು.





