- ರಾಘವೇಂದ್ರ ಅಡಿಗ ಎಚ್ಚೆನ್.
"ನನ್ನ ಸೊಸೆ ರಾಧಿಕಾ ಪಂಡಿತ್ ಮಹಾನ್ ಕಿಲಾಡಿ, ನಮ್ಮ ರಾಧಿಕಾ ತುಂಬಾ ಚೆನ್ನಾಗಿ ಕಥೆ ಸೆಲೆಕ್ಟ್ ಮಾಡುತ್ತಾಳೆ. ಕಥೆ ಆಯ್ಕೆ ಮಾಡೋದರಲ್ಲಿ ಅವಳು ಯಶ್ ಗಿಂತಲೂ ಕಿಲಾಡಿ. " ಎಂದು ಯಶ್ ತಾಯಿ ಪುಷ್ಪಾ ಅರುಣ್ ಕುಮಾರ್ ಹೇಳಿದ್ದಾರೆ.
ʻಪಿಎ ಪ್ರೊಡಕ್ಷನ್ಸ್ʼ ಹೆಸರಿನ ಹೊಸ ರ್ಮಾಣ ಸಂಸ್ಥೆ ಆರಂಭಿಸಿರುವ ಪುಷ್ಪಾ ಅರುಣ್ ಕುಮಾರ್ ಈ ಬ್ಯಾನರ್ ಅಡಿಯಲ್ಲಿ ಚೊಚ್ಚಲ ಸಿನಿಮಾ ʻಕೊತ್ತಲವಾಡಿʼ ಎನ್ನುವ ಸಿನಿಮಾ ಹೊರತರುತ್ತಿದ್ದು ಅದರ ಟೀಸರ್ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
"ನನ್ನ ಮಗಳು, ಮಗ ಯಾರಿಗೂ ನಾನು ನಿರ್ಮಾಣ ಸಂಸ್ಥೆ ಪ್ರಾರಂಭಿಸುವ ಬಗ್ಗೆ ಗೊತ್ತಿರಲಿಲ್ಲ. ನಾನೊಂದು ಚಿಕ್ಕ ಪ್ರಯತ್ನ ಮಾಡಿದ್ದೇನೆ. ಅದರಲ್ಲಿಯೂ ನನ್ನ ಸೊಸೆ ರಾಧಿಕಾ ಪಂಡಿತ್ ಕಥೆಗಳ ಆಯ್ಕೆಯಲ್ಲಿ ಯಶ್ ಅನ್ನು ಮೀರಿಸುತ್ತಾಳೆ. ಅವಳು ನನ್ನ ಸೊಸೆ ಆಗುವುದಕ್ಕೆ ಮುನ್ನವೂ ನಾನು ಅವಳ ಫ್ಯಾನ್! ಕಥೆ ವಿಚಾರದಲ್ಲಿ ತುಂಬಾ ಚೆನ್ನಾಗಿ ಆಯ್ಕೆ ಮಾಡಿಕೊಳ್ಳುತ್ತಾಳೆ. ಆ ವಿಚಾರದಲ್ಲಿ ನಾನು ಅವಳಿಂದ ಕಲಿಯಬೇಕಾಗಿರೋದು ತುಂಬಾ ಇದೆ” ಎಂದು ಅವರು ಹೇಳಿದ್ದಾರೆ.
ಯಶ್ ಸಂಪಾದನೆ ಬೇರೆ ನನ್ನ ಸಂಪಾದನೆ ನನ್ನದು!
"ಯಶ್ ಇದಾಗಲೇ ಒಂದು ನಿರ್ಮಾಣ ಸಂಸ್ಥೆ ಪ್ರಾರಂಭಿಸಿರಬಹುದು ಆದರೆ ಅವನ ಸಂಪಾದನೆ ಬೇರೆ ನನ್ನ ಸಂಪಾದನೆ ಬೇರೆ" ಎಂದ ಪುಷ್ಪಾ "ಎಲ್ಐಸಿಯಲ್ಲಿ ನಿಮ್ಮ ಹಣವನ್ನು ನೀವೆ ಪಾವತಿಸಬೇಕು. ಗಂಡನ ಅಕೌಂಟ್ನಿಂದ ಹಣ ಕೊಡುತ್ತೇವೆ ಅಂತಂದರೆ ಎಲ್ಐಸಿ ಒಪ್ಪಿಕೊಳ್ಳುವುದಿಲ್ಲ. ಅದನ್ನು ರಿಜೆಕ್ಟ್ ಮಾಡುತ್ತದೆ. ಆಗ ಮಗ ಬೇರೆ, ಗಂಡ ಬೇರೆ, ಮಗಳು ಬೇರೆ, ಸಂಪಾದನೆ ಎಲ್ಲರದ್ದೂ ಬೇರೆ ಬೇರೆ ಅನ್ನೋ ಪಾಠವನ್ನು ನಾನು ಅಲ್ಲಿಂದ ಕಲಿತಿದ್ದೇನೆ. ಯಶ್ ದುಡಿಯುವುದು ಅವನ ಸಾಮರ್ಥ್ಯದ ಮೇಲೆ ನಿಂತಿದೆ. ಹಾಗೆಂದು ನಾನು ಯಶ್ ತಾಯಿ ಎನ್ನುವ ಕಾರಣದಿಂದ ಎಷ್ಟು ದಿನ ನನಗೆ ಗೌರವ ಕೊಡುತ್ತೀರಾ? ಅದೇ ನಾನು ನಿರ್ಮಾಪಕಿಯಾದರೆ ಆಗ ಸಿಕ್ಕುವ ಗೌರವವೇ ಬೇರೆ." ಎಂದು ಹೇಳಿದ್ದಾರೆ.
ಇನ್ನು ತಮ್ಮ ಪುತ್ರಿಯ ಬಗ್ಗೆ ಮಾತನಾಡಿದ ಪುಷ್ಪಾ "ನನ್ನ ಮಗಳಿಗೆ ಸಿನಿಮಾ ಬಗ್ಗೆ ಆಸಕ್ತಿ ಇಲ್ಲ. ನಾನೇನು ಮಾಡುತ್ತಿದ್ದೇನೆ ಎನ್ನುವುದು ಗೊತ್ತು ಆದರೆ ಸಿನಿಮಾ ಬಗೆಗೆ ಹೆಚ್ಚೇನೂ ಕೇಳುವುದಿಲ್ಲ. ಅಮ್ಮ, ಅಣ್ಣ ಅವರೇನೋ ಮಾಡುತ್ತಿದ್ದಾರೆ ಎಂದು ಗೊತ್ತು. ಆದರೆ ಹೆಚ್ಚು ಆಸಕ್ತಿ ತೋರಿಸಲ್ಲ" ಎನ್ನುತ್ತಾರೆ.
ಇದಲ್ಲದೆ ‘ಕೆಲಸ ಮಾತನಾಡಬೇಕು, ನಾವು ಮಾತನಾಡಬಾರದು. ಯಶ್ ಮನೆಯವರ ಸಿನಿಮಾ ಎಂದರೆ ಇಡೀ ದೇಶ ನೋಡುತ್ತದೆ. ಅದಕ್ಕೆ ತಕ್ಕ ರೀತಿ ಮಾಡಿ. ಇಲ್ದಿದ್ದರೆ ಮಾಡಬೇಡಿ. ಸಿನಿಮಾ ಏನು ಕೇಳುತ್ತದೆಯೋ ಅದನ್ನು ಕೊಡಬೇಕು. ಸಿನಿಮಾಗೆ ಮೋಸ ಮಾಡಬಾರದು ಅಂತ ಚಿತ್ರತಂಡಕ್ಕೆ ನಾನು ಹೇಳಿದ್ದೆ. ಪ್ರೇಕ್ಷಕರ ಪ್ರತಿಕ್ರಿಯೆ ನಾವು ಕಾಯುತ್ತೇವೆ’ ಎಂದಿದ್ದಾರೆ ಯಶ್ ತಾಯಿ ಪುಷ್ಪ ಅರುಣ್ ಕುಮಾರ್.
ಇದೇ ವೇಳೆ "ನಮಗೆಲ್ಲಾ ಅಣ್ನಾವ್ರ ಮನೆಯೇ ಆದರ್ಶ. ರಾಜ್ ಕುಮಾರ್ ಅಭಿಮಾನಿ ನಾನು. ಮುಂಬರುವ ದಿನಗಳಲ್ಲಿ ಅಣ್ನಾವ್ರ ಮಗ ಶಿವಣ್ಣನಿಗಾಗಿ ಒಂದು ಸಿನಿಮಾ ಮಾಡುವ ಆಸೆ ಇದೆ." ಎಂದು ಪುಷ್ಪಾ ತಮ್ಮ ಮನದಿಂಗಿತ ಹೇಳಿದ್ದಾರೆ.