ಎರಡು ದೇಶದ ನಡುವೆ ಭಯಂಕರವಾಗಿ ಯುದ್ಧ ನಡೆಯುತ್ತದೆ ಎಂದರೆ, ಅದರಲ್ಲಿ ಸಾವಿರಾರು ಸೈನಿಕರು, ಲಕ್ಷಾಂತರ ಮದ್ದುಗುಂಡುಗಳು ಶಸ್ತ್ರಾಸ್ತ್ರಗಳು ಉಪಯೋಗ ಆಗುತ್ತದೆ. ಭಾರೀ ಪ್ರಮಾಣದ ಆಸ್ತಿ ಪಾಸ್ತಿಗಳು ನಷ್ಟವಾಗುತ್ತದೆ. ಶತ್ರು ರಾಷ್ಟ್ರಗಳು ಯಾವಾಗ? ಹೇಗೆ ನಮ್ಮ ಮೇಲೆ ಆಕ್ರಮಣ ಮಾಡುತ್ತಾರೋ? ಎಂದು ಸದಾಕಾಲವೂ ಕಣ್ರೆಪ್ಪೆ ಮುಚ್ಚದೇ ಗಡಿ ಪ್ರದೇಶಗಳನ್ನು ಕಾಯುವುದಕ್ಕಾಗಿಯೇ ಇಂದೆಲ್ಲಾ ಅನೇಕ ಆಧುನಿಕ ತಂತ್ರಜ್ಞಾನಗಳ ಬಳಕೆ ಆಗುತ್ತಿರುವುದನ್ನು ಇತ್ತೀಚಿನ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ನೋಡಿದ್ದೇವೆ. ಆದರೆ 60-70 ದಶಕದಲ್ಲಿ ಇಂತಹ ಯಾವುದೇ ಸೌಲಭ್ಯಗಳು ಇಲ್ಲದೇ ಇರುವಂತಹ ಸಂಧರ್ಭದಲ್ಲಿ ಭಾರತೀಯ ಸೈನ್ಯದ ಒಬ್ಬ ಸಾಮಾನ್ಯ ಮನುಷ್ಯ ಯುದ್ಧ ಭೂಮಿಯ ಆಸುಪಾಸಿನಲ್ಲಿರುವ ಹೆಜ್ಜೆ ಗುರುತುಗಳನ್ನು ನೋಡಿ ಕರಾರುವಾಕ್ಕಾಗಿ ಶತ್ರುಗಳ ಚಲನವಲಗಳನ್ನು ಗುರುತಿಸಿ ಭಾರತೀಯ ಸೈನ್ಯಕ್ಕೆ ಎಚ್ಚರಿಗೆ ನೀಡಿ ಯುದ್ದ ಗೆಲ್ಲಲು ಸಹಾಯ ಮಾಡಿದ ರಾಂಛೋದಾಸ್ ರಬಾರಿ ಎಲ್ಲರ ಪ್ರೀತಿಯ ಪಾಗಿ ಅವರ ಬಗ್ಗೆ ಪ್ರತಿಯೊಬ್ಬ ಭಾರತೀಯರು ತಿಳಿದುಕೊಳ್ಳಲೇ ಬೇಕಿದೆ.
ಅಖಂಡ ಭಾರತದ ಭಾಗವಾಗಿದ್ದ ಮತ್ತು ಪ್ರಸ್ತುತ ಪಾಕೀಸ್ಥಾನದ ಪಾಕಿಸ್ತಾನದ ಸಿಂಧ್ ಪ್ರಾಂತ್ಯಕ್ಕೆ ಸೇರಿರುವ ಪೆಥಾಪುರ್ ಗ್ರಾಮದ ವಭಾಯ್ ಮತ್ತು ನಾತಿಬಾ ದಂಪತಿಗಳಿಗೆ 1901ರಲ್ಲಿ ರಾಂಚೋದ್ಭಾಯ್ ಜನಿಸುತ್ತಾರೆ. ಆ ಸಮಯದಲ್ಲೇ ಸುಮಾರು 300 ಎಕರೆ ಭೂಮಿ ಮತ್ತು ಹಸುಗಳು, ಎಮ್ಮೆಗಳು, ಹೋರಿಗಳು, ಕುರಿಗಳು ಮತ್ತು ಮೇಕೆಗಳು ಸೇರಿದಂತೆ ಸುಮಾರು 300 ದನಕರುಗಳನ್ನು ಹೊಂದಿದ್ದ ಸ್ಥಿತಿವಂತ ಕುಟುಂಬ ಆವರದ್ದಾಗಿರುತ್ತದೆ. ಚಿಕ್ಕಂದಿನಿಂದಲೂ ಯಾವುದೇ ಶಾಲೆಗೆ ಹೋಗದೇ ಅನಕ್ಷರಸ್ಥರಾಗಿದ್ದರೂ, ಅಷ್ಟೊಂದು ಪ್ರಾಣಿಗಳ ಒಡನಾಟದಿಂದಾಗಿ ಮಣ್ಣಿನ ಮೇಲೆ ಅವುಗಳು ಮೂಡಿಸುವ ಹೆಜ್ಜೆ ಗುರುತುಗಳ ಆಧಾರದಿಂದಾಲೇ ಆ ಪ್ರಾಣಿ ಅಥವಾ ವ್ಯಕ್ತಿಯ ತೂಕವನ್ನು ನಿಖರವಾಗಿ ಹೇಳಬಲ್ಲಂತಹ ಅದ್ಭುತವಾದ ಕೌಶಲ್ಯವನ್ನು ಅವರಿಗೆ ದೈವದತ್ತವಾಗಿ ಬಂದಿರುತ್ತದೆ.
1947 ರಲ್ಲಿ ಭಾರತ ಮತ್ತು ಪಾಕಿಸ್ತಾನ ವಿಭಜನೆಯಾದಾಗ, ಆಷ್ಟೊಂದು ಜಮೀನನ್ನು ಹೊಂದಿದ್ದ ರಾಂಚೋಡ್ ಅವರ ಕುಟುಂಬವು ಅದೆಲ್ಲವನ್ನೂ ಬಿಟ್ಟು ಬರಲಾಗದೇ ಪಾಕಿಸ್ತಾನದಲ್ಲಿಯೇ ಉಳಿಯಲು ನಿರ್ಧರಿಸುತ್ತಾರೆ. ಆದಾಗಿ ಸ್ವಲ್ಪ ಸಮಯದಲ್ಲೇ ಪಾಕೀಸ್ಥಾನೀ ಪೋಲೀಸರು ಮತ್ತು ಸೈನ್ಯದವರು ಹಿಂದೂಗಳ ಮೆಲೆ ಸತತವಾಗಿ ದಬ್ಬಾಳಿಕೆ ಮತ್ತು ದೌರ್ಜನ್ಯ ನಡೆಶುತ್ತಿದ್ದ ಪ್ರಕ್ರಿಯಲ್ಲಿ ಇವರ ಕುಟುಂಬಕ್ಕೂ ಕಾಟ ನೀಡಿದ್ದನ್ನು ತಾಳಲಾರದೇ, ತಮ್ಮ ಮನೆಗೆ ಬಂದಿದ್ದ ಮೂವರು ಪೋಲೀಸರನ್ನು ರಾಂಚೋಡ್ ಅವರು ಕೊಂದು ಅವರ ಶವಗಳನ್ನು ತಮ್ಮ ಮನೆಯ ಕೋಣೆಯೊಂದರಲ್ಲಿ ಹಾಕಿ, ತಮ್ಮ ಕುಟುಂಬ ಮತ್ತು ದನಕರುಗಳೊಂದಿಗೆ ತಮಗೆ ತಿಳಿದಿದ್ದ ರಹಸ್ಯ ಮಾರ್ಗದ ಮೂಲಕ ಇಂದಿನ ಗುಜರಾತ್ನ ಬನಸ್ಕಂತ ಜಿಲ್ಲೆಯ ಪಾಕಿಸ್ತಾನದ ಗಡಿಯಲ್ಲಿರುವ ಪಥಾಪುರ್ ಗತ್ರಾಸ್ ಪ್ರಾಂತದ ಮೊಸಲ್ ಲಿಂಬಾಲಾಕ್ಕೆ ವಲಸೆ ಬರುತ್ತಾರೆ.
ಆತ್ತ ಪಾಕೀಸ್ಥಾನದಲ್ಲಿ ತಮ್ಮ ಪೋಲೀಸ್ ಅಧಿಕಾರಿಗಳನ್ನು ಕೊಂದು ತಪ್ಪಿಸಿಕೊಂಡಿರುವ ರಾಂಚೋಡ್ ಅವರನ್ನು ಹುಡುಕಿ ಕೊಟ್ಟವರಿಗೆ ಬಹುಮಾನ ಘೋಷಿಸಿದ್ದ ವಿಷಯ, ಲಿಂಬಾಲಾ ಜನರಿಗೂ ಗೊತ್ತಾದಾಗಲೇ ಯಾರೋ ದನಗಾಹಿ ಎಂದು ಕೊಂಡಿದ್ದ ವ್ಯಕ್ತಿ ರಾಂಚೋಡ್ ಸಾಮಾನ್ಯ ವ್ಕಕ್ತಿಯಲ್ಲಾ! ಎಂದು ತಿಳಿಯುತ್ತದೆ. ಆಷ್ಟರಲ್ಲಾಗಲೇ ರಾಚೋಂಡ್, ಮನುಷ್ಯರು ಮತ್ತು ಪ್ರಾಣಿಗಳ ಹೆಜ್ಜೆಯ ಗುರುತಿಸುವ ತನ್ನ ಅದ್ಭುತ ಕೌಶಲ್ಯವನ್ನು ಅಲ್ಲಿಯ ಜನರಿಗೆ ತಿಳಿದಿದ್ದ ಕಾರಣ, ಅವರು ರಾಂಚೋಡ್ ನನ್ನು ತಮ್ಮ ಗ್ರಾಮದ ಕಾವಲುಗಾರನನ್ನಾಗಿ ನೇಮಿಸಿದ್ದು, ತನ್ನ ಹೆಜ್ಜೆಗುರುತುಗಳನ್ನು ಗುರುತಿಸುವ ಮೂಲಕ ಆ ಊರಿನ ಅನೇಕ ಕಳ್ಳರನ್ನು ಹಿಡಿಯಲು ಸಹಕರಿಸಿದ್ದನ್ನು ಗಮನಿಸಿ ಆತನ ಬಗ್ಗೆ ಪಾಕೀಸ್ಥಾನಕ್ಕೆ ಯಾವುದೇ ಮಾಹಿತಿ ನೀಡದಿರಲು ನಿರ್ಧರಿಸುತ್ತಾರೆ. ಆದರೆ ಹೆಚ್ಚೆಗುರುತಿಸುವಿಕೆಯ ಸಾಮರ್ಥ್ಯ ಜನರ ಬಾಯಿಯಿಂದ ಬಾಯಿಗೆ ಅದು ಹೇಗೋ ಅಲ್ಲಿನ ಪೊಲೀಸ್ ಅಧಿಕಾರಿಗಳಿಗೆ ತಿಳಿದು ರಾಂಚೋಡ್ ನ ಸಾಮರ್ಥ್ಯವನ್ನು ಪರೀಕ್ಷಿಸಿ 1962ರಲ್ಲಿ ಆತನ 58 ನೇ ವಯಸ್ಸಿನಲ್ಲಿ, ಬನಸ್ಕಂತ ಪೊಲೀಸ್ ವರಿಷ್ಠಾಧಿಕಾರಿ ವನರಾಜ್ ಸಿಂಗ್ ಝಾಲಾ ಅವರ ಸಹಾಯದಿಂದ ಆತ ಪೊಲೀಸ್ ಮಾರ್ಗದರ್ಶಕರಾಗಿ ನೇಮಕಗೊಂಡ ನಂತರ ಆತನ ಜೀವನವೇ ಬದಲಾಯಿತು ಎಂದರೂ ತಪ್ಪಾಗದು.






