ಶಿಕ್ಷಕಿ ಆಗಿದ್ದ  ಆಶಾರಾಣಿ ಶೆಫ್ಆದ ಜರ್ನಿಯೇ ರೋಚಕ! ಈಕೆ ರೀತಿ ಪಾಕ ಪ್ರವೀಣೆಯಾಗಿ ಎಲ್ಲೆಲ್ಲೂ ಕೀರ್ತಿ ಪಡೆದಿದ್ದು ಹೇಗೆ ಎಂದು ವಿವರವಾಗಿ ತಿಳಿಯೋಣವೇ…..?

ಅಡುಗೆ ಅನ್ನೋದು ಕೇವಲ ಯಾವುದೋ ಆಹಾರವನ್ನು ಬೇಯಿಸಿ ಒಗ್ಗರಣೆ ಹಾಕೋದಲ್ಲ. ಅಡುಗೆ ಅನ್ನೋದು ಒಂದು ಅದ್ಭುತ ಕಲೆ. ಅದನ್ನು ಸಿದ್ಧಪಡಿಸಿ ಎಲ್ಲರನ್ನು ಸಂತೃಪ್ತಿಪಡಿಸುವುದು ಒಂದು ಮಹಾನ್‌ ವಿದ್ಯೆ. ಇಂತಹ ವಿದ್ಯೆ ಎಲ್ಲರಿಗೂ ಒಲಿಯೋದಿಲ್ಲ. ಇತ್ತೀಚೆಗಂತೂ ಅಡುಗೆ ಮಾಡುವ ವಿಧಾನವೇ ಒಂದು ಟ್ರೆಂಡ್‌ ಆಗಿದೆ. ಯಾವ ಐಟಿ, ಬಿಟಿಗೂ ಕಮ್ಮಿ ಇಲ್ಲದಂತೆ ಶೆಫ್‌ ಅನ್ನುವ ಹೆಸರಲ್ಲಿ ಬಹುದೊಡ್ಡ ಉದ್ಯಮವಾಗಿ ಬೆಳೆಯುತ್ತಿದೆ. ಅದಕ್ಕೆ ತಕ್ಕಂತೆ ಅಡುಗೆ ಮಾಡುವ ಕಲೆ, ರುಚಿ ಕೊಡುವ ತಂತ್ರ ಅದಕ್ಕೆ ಬಳಸುವ ಪದಾರ್ಥಗಳೂ ಕೂಡ ವಿಶ್ವಾದ್ಯಂತ ವ್ಯಾಪಕವಾಗಿ ಬದಲಾಗುತ್ತಲೇ ಇದೆ. ಇದೆಲ್ಲ ಅಡುಗೆ ಮಾಡುವವರ ಕೌಶಲ್ಯ ಮತ್ತು ಅದಕ್ಕೆ ಪಡೆದಿರುವ ತರಬೇತಿ ಮೇಲೆ ಅವಲಂಬಿತವಾಗಿರುತ್ತದೆ. ಅಡುಗೆ ಎನ್ನುವುದು ಕಲೆಯಾದರೆ, ಅದರಲ್ಲಿ ಬಳಸುವ ವಸ್ತುಗಳು ಕೂಡ ಅದೇ ರೀತಿ ಪರಿಗಣಿಸಿದಾಗ ಅದ್ಭುತವಾದ ಖಾದ್ಯ ಸೃಷ್ಟಿಯಾಗುತ್ತದೆ. ಅಂತೆಯೇ ಅಡುಗೆ ಮಾಡುವವರು ಸಂತೋಷದಿಂದ ಅಡುಗೆ ಮಾಡಿದರೆ ಅದನ್ನು ಎಲ್ಲರೂ ಸಂಭ್ರಮದಿಂದ ಸವಿಯುತ್ತಾರೆ. ಅಡುಗೆ ಬರೀ ಕಲೆ, ವಿಜ್ಞಾನ ಮಾತ್ರವಲ್ಲದೇ ಭಾವನಾತ್ಮಕ ವಿಚಾರಗಳಿಗೆ ಇಂಬು ಕೊಡುವ ಅದೊಂದು ಪಾಕ ಶಾಸ್ತ್ರವೇ ಹೌದು, ಎಂದು ಹೇಳಿದ್ರೂ ತಪ್ಪಾಗಲಿಕ್ಕಿಲ್ಲ.

ಅಡುಗೆಯ ಬಗ್ಗೆ ಸಾಮಾನ್ಯವಾಗಿ ಬಹುತೇಕ ಮಹಿಳೆಯರಿಗೆ ತಿಳಿದೇ ಇರುತ್ತದೆ. ಆದರೆ, ಸ್ವಾದಿಷ್ಟವಾಗಿ, ಸಂತಸದಿಂದ, ಆಸಕ್ತಿಯಿಂದ ಅಡುಗೆ ಮಾಡುವವರು ಬಹಳ ವಿರಳ. ಒಬ್ಬ ಗೃಹಿಣಿ ಅಡುಗೆ ತಯಾರಿಸುತ್ತಿರುವಾಗ ಆಕೆ ಯಾವ ಮನಸ್ಥಿತಿ, ಭಾವನೆ ಇಟ್ಟುಕೊಂಡು ಅಡುಗೆ ಮಾಡುತ್ತಾಳೋ, ಆ ಆಹಾರವನ್ನು ಸೇವಿಸುವವರಿಗೂ ಅದೇ ರೀತಿಯ ಭಾವನೆಗಳು ಸೇರಿಕೊಳ್ಳುತ್ತವೆ ಎಂಬುದು ಸಂಶೋಧನೆಗಳಿಂದ ದೃಢಪಟ್ಟಿದೆ. ಒಬ್ಬ ಗೃಹಿಣಿ ಸಂತೋಷದಿಂದ ಅಡುಗೆ ಮಾಡಿ ಉಣಬಡಿಸಿದರೆ, ತಿಂದವರಿಗೂ ತೃಪ್ತ ಭಾವ ಮೂಡುತ್ತದೆ. ಅಂತೆಯೇ ಕೋಪದಲ್ಲಿ ಮಾಡಿದ ಅಡುಗೆ ತಿಂದವರಿಗೂ ಕೋಪ ತರಿಸುತ್ತದೆ ಎಂಬುದೂ ಕೂಡ ಸಾಬೀತಾಗಿದೆ.

ಹಿಂದಿನ ಕಾಲದಲ್ಲಿ ತಾಯಂದಿರು ಅಡುಗೆ ಮಾಡುವಾಗ ಬಹಳ ಶಾಂತವಾಗಿ, ಕೆಲವು ಮಂತ್ರಗಳನ್ನು ಪಠಿಸುತ್ತಾ ಅಡುಗೆ ಮಾಡುತ್ತಿದ್ದರು. ಅದನ್ನು ಸೇವಿಸಿದ ಮನೆಯವರೆಲ್ಲರಲ್ಲೂ ಬಾಂಧವ್ಯ, ಪ್ರೀತಿ, ಒಗ್ಗಟ್ಟಿನ ಭಾವ ಇರುತ್ತಿತ್ತು. ಅದೇನೇ ಇರಲಿ, ನಾವು ಮಾಡುವ ಅಡುಗೆಯನ್ನು ಮತ್ತಷ್ಟು ಆಸಕ್ತಿಯಿಂದ ತಯಾರಿಸಿದರೆ, ಮನೆಯವರೆಲ್ಲರಲ್ಲೂ ಖಂಡಿತಾ ಪಾಸಿಟಿವ್ ‌ಭಾವನೆ ಮೂಡುತ್ತದೆ. ಅಡುಗೆ ಮಾಡುವುದಂತೂ ದಿಟ, ಸೇವಿಸುವುದು ಸತ್ಯ. ಹಾಗಿದ್ದ ಮೇಲೆ ನಾವು ಮಾಡುವ ಅಡುಗೆಯನ್ನು ಒಂದಷ್ಟು ಪ್ರೀತಿ, ಉತ್ಸಾಹ, ಶ್ರದ್ಧೆ, ಕಾಳಜಿಯಿಂದ ಮಾಡಿದ್ದಲ್ಲಿ, ಅದನ್ನು ಸೇವಿಸುವವರಲ್ಲೂ ಸಂತೃಪ್ತ ಭಾವ ಮೂಡುತ್ತದೆ.

ಕುಕಿಂಗ್ಕ್ವೀನ್ಆಶಾರಾಣಿ  ಶಿಕ್ಷಕಿ ಆಗಿದ್ದ ಇವರು ಶೆಫ್ಆಗಿದ್ದು ಹೇಗೆ…..?

ಕೆಲವರಿಗೆ ಅಡುಗೆ ಮಾಡು ಕಲೆ ಜನ್ಮಗತವಾಗಿ ಬಂದಿದ್ದರೆ, ಅದರ ಬಗ್ಗೆ ಮೂಡುವ ಆಸಕ್ತಿಯಿಂದ, ಮತ್ತೆ ಕೆಲವರಿಗೆ ವಿಭಿನ್ನ ರೀತಿಯ ರುಚಿ ನೋಡುವ ಮೂಲಕ ಬರಬಹುದು. ಮತ್ತೆ ಕೆಲವರಿಗೆ ಅವರು ಮಾಡಿದ ಆಹಾರವನ್ನು ಸೇವಿಸಿ, ಸೂಪರ್‌ ಇದೆ ಎಂದು ಸೇವಿಸಿದವರು ಹೇಳಿದಾಗ, ತಾನು ಇನ್ನೇನೋ ಸೇರಿಸಿ ಬಹಳಷ್ಟು ರುಚಿಕರವಾಗಿ ಮಾಡಬಹುದಿತ್ತೇ ಎಂದೆನಿಸಿ ಮತ್ತಷ್ಟು ಅಡುಗೆ ಮಾಡುವಲ್ಲಿ ಆಸಕ್ತಿ ಮೂಡುತ್ತದೆ. ಅಂತಹರ ಸಾಲಿನಲ್ಲಿ ಶೆಫ್‌ ಆಶಾರಾಣಿ ಕೂಡಾ ಸೇರುತ್ತಾರೆ. ಹೆಚ್ಚು ಮಸಾಲೆ ಬಳಸದೇ, ಅತಿ ಕಡಿಮೆ ಪದಾರ್ಥಗಳಲ್ಲಿ ಅತಿ ಹೆಚ್ಚು ರುಚಿಕರವಾಗಿ ಆಹಾರ ತಯಾರಿಸುವ ಕಲೆ ಇವರಿಗೆ ಕರತಲಾಮಲಕವಾಗಿದೆ.

ಆಶಾರಾಣಿ ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರಿನಲ್ಲಿ. ಅವರ ತಂದೆ ಎಚ್‌.ಎಂ.ಟಿ ನೌಕರರಾಗಿದ್ದರಿಂದ ಅವರು ವಿದ್ಯಾಭ್ಯಾಸ ಪೂರೈಸಿದ್ದು ಕೂಡ ಬೆಂಗಳೂರಿನಲ್ಲೇ. ಶೇಷಾದ್ರಿಪುರಂ ಕಾಲೇಜಿನಲ್ಲಿ ಪದವಿ ಪಡೆದ ಅವರಿಗೆ ಬಹಳ ಆಸಕ್ತಿಯ ವಿಷಯವೆಂದರೆ ಟೀಚರ್‌ ಆಗಿ ಕೆಲಸ ನಿರ್ವಹಿಸಬೇಕೆಂಬುದು. ಚಿಕ್ಕವರಿಂದಲೂ ಶಿಕ್ಷಕ ವೃತ್ತಿ ಬಹಳ ಇಷ್ಟಪಡುತ್ತಿದ್ದ ಆಶಾ, ತಾವು ಏಳನೇ ತರಗತಿಯಲ್ಲಿ ಇದ್ದಾಗಲೇ ಚಿಕ್ಕಮಕ್ಕಳಿಗೆ ಟ್ಯೂಷನ್‌ ಹೇಳುವುದರಿಂದ ಅವರಿಗೇನೋ ಗೌರವ ಸಿಗುತ್ತಿತ್ತು. ಮದುವೆ ನಂತರ ಅಡುಗೆಯ ಬಗ್ಗೆ ಅಷ್ಟೇನೂ ಆಸಕ್ತಿ ಇರಲಿಲ್ಲ. ಅದು ಹೇಗೆ ಬಂತೋ ಅವರಿಗೆ ತಿಳಿಯಲೇ ಇಲ್ಲ.

Asharani-(3)

ಮದುವೆಯಾದ 5-6 ವರ್ಷಗಳ ನಂತರ ಒಂದೊಂದಾಗಿ ಅಡುಗೆ ಮಾಡುವುದನ್ನು ಕಲಿಯಲು ಆರಂಭಿಸಿದರು. ಹೊಸ ಹೊಸದು ಪ್ರಯೋಗ ಮಾಡಿದಾಗ ತುಂಬಾ ಚೆನ್ನಾಗಿ ಮಾಡುತ್ತಿದ್ದರು. ಅದನ್ನು ತಿಂದು ರುಚಿ ನೋಡುತ್ತಿದ್ದ ಅವರ ಪತಿ ಸೋಮನಾಥ್‌ ಬಹಳ ರುಚಿಯಾಗಿದೆ ಎಂದು ಶಹಬಾಸ್‌ ಗಿರಿ ಕೊಡುತ್ತಿದ್ದರು. ಆಗ ಆಶಾರಿಗೆ ಇನ್ನಷ್ಟು ವಿಭಿನ್ನವಾಗಿ ಏನಾದರೂ ಟ್ರೈ ಮಾಡಬಾರದೇಕೆ ಎನಿಸಲು ಶುರುವಾಯ್ತು. ನಾನ್ಯಾಕೆ ಹೋಗಿ ಟಿವಿಗಳಲ್ಲಿ ತಮ್ಮ ಪಾಕವಿದ್ಯೆಯನ್ನು ತೋರಿಸಬಾರದು….? ಎನಿಸುತ್ತಿತ್ತು. ಹೀಗೆ ತಮ್ಮ ಪಾಕಶಾಲೆ, ಅಡುಗೆಯಲ್ಲಿನ ಪ್ರಾವೀಣ್ಯತೆ, ತಮ್ಮ ಜೀವನದ ಮಜಲುಗಳ ಕುರಿತು ಆಶಾರಾಣಿ `ಗೃಹಶೋಭಾ’ ಜೊತೆ ಮನಬಿಚ್ಚಿ ಮಾತನಾಡಿದ್ದಾರೆ.

ತೊಂದರೆ ಇದ್ದರೂ ಕಲೆ ಕೈಬಿಡ್ಲಿಲ್ಲ

“ಆಗೆಲ್ಲಾ ಯೂಟ್ಯೂಬ್‌ ಗಳು ಇರಲಿಲ್ಲ. ಟಿವಿಯಲ್ಲಿ ಮಾತ್ರ ನೋಡುತ್ತಿದ್ದೆ. ಅಲ್ಲಿ ಹೇಗೆ ಸಂಪರ್ಕ ಮಾಡಿಕೊಳ್ಳಬೇಕು ಎಂಬುದು ತಿಳಿಯುತ್ತಿರಲಿಲ್ಲ. ಆಯುಷ್‌ ಟಿವಿಯಲ್ಲಿ ಮೊದಲ ಬಾರಿಗೆ ಶೋಗಳನ್ನು ಕೊಟ್ಟು ಅಡುಗೆ ಮಾಡುವ ಬಗ್ಗೆ ತಿಳಿಸುವಂತಾದೆ. “ನಂತರ ಉದಯ, ಸ್ಟಾರ್‌ ಸುವರ್ಣ ಸೇರಿದಂತೆ ಯಾವ್ಯಾವ ಟಿವಿ ಚಾನೆಲ್ ‌ಗಳಲ್ಲಿ ಅಡುಗೆ ಶೋಗಳು ಇರುತ್ತವೆ ಅಲ್ಲೆಲ್ಲಾ ಹೋಗಿ ಕುಕ್ಕಿಂಗ್‌ ಶೋಗಳನ್ನು ಕೊಡುತ್ತಿದ್ದೆ. ಈಗ ಬರೀ ಸ್ಟಾರ್‌ ಸುವರ್ಣದಲ್ಲಿ ಬೊಂಬಾಟ್‌ ಭೋಜನ ಮಾತ್ರ ಬರುತ್ತಿದೆ. ಇದು ಏಳು ವರ್ಷದ ಪಯಣ. ಮನೆಯಲ್ಲಿ ಏನೇ ತೊಂದರೆ ಇದ್ದರೂ ಸರಿದೂಗಿಸಿಕೊಂಡು ಹೋಗಿ ಕುಕ್ಕಿಂಗ್‌ ಶೋಗಳನ್ನು ನಡೆಸಿ ಕೊಡುತ್ತೇನೆ.”

ತಮ್ಮ ಪತಿ ಕರ್ನಾಟಕ ಸರ್ಕಾರದಲ್ಲಿ ಗೆಜೆಟೆಡ್‌ ಆಫೀಸರ್‌ಆಗಿದ್ದರಿಂದ ಮೂರು ವರ್ಷಕ್ಕೊಮ್ಮೆ ಬೇರೆ ಬೇರೆ ಕಡೆ ವರ್ಗಾವಣೆ ಆಗುತ್ತಿತ್ತು. ಹಾಗಾಗಿ ಎಲ್ಲೆಲ್ಲಿ ಕುಕಿಂಗ್‌ ತರಬೇತಿ, ಕಾರ್ಯಕ್ರಮಗಳು ಇದ್ದರೂ ಇವರು ಅಲ್ಲಿಗೆ ಹೋಗಿ ಕಲಿಯುತ್ತಿದ್ದರು. ಅಲ್ಲದೆ, ಶಿಕ್ಷಕ ವೃತ್ತಿಯನ್ನೂ ಬಿಡಲಿಲ್ಲ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಬರಬೇಕಾಯ್ತು.

ಖೀರ್ರಾಣಿ ಕಿರೀಟ

ವಿಶೇಷ ಅಂದ್ರೆ, ಆಶಾರಾಣಿ ಸುಮಾರು 400ಕ್ಕೂ ಹೆಚ್ಚು ಟಿವಿ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಅಮೂಲ್ ‌ಅಂತ ಫೇಸ್‌ ಬುಕ್ ಲೈವ್ ‌ಶೋ ಕೂಡ ಕೊಡುತ್ತಿದ್ದಾರೆ. ಅದರಲ್ಲಿ ಇವರು ರೆಗ್ಯುಲರ್‌ ಶೆಫ್‌. ಸೌತ್‌ ಇಂಡಿಯಾ ಅಮೂಲ್ FB‌ಪೇಜ್‌ ಲೈವ್ ನ‌ಲ್ಲಿ ಮಾಡುತ್ತಿದ್ದಾರೆ. ಸೌತ್‌ ನಲ್ಲಿ ಇಂತಹದ್ದೊಂದು ಪ್ರಯತ್ನವನ್ನು ಮಾಡ್ತಿರೋದು ಅನ್ನೋದು ಮತ್ತೊಂದು ಹೆಮ್ಮೆಯ ಸಂಗತಿ.

ಅಮೂಲ್ ಕಂಪನಿಯವರು ಕುಕ್ಕಿಂಗ್‌ ಎಕ್ಸ್ ಪರ್ಟ್‌ ಅಂತ ಅವಾರ್ಡ್‌ ನೀಡಿದ್ದಾರೆ. ಸಿಹಿಕಹಿ ಚಂದ್ರುರಿಂದ ಇವರಿಗೆ ಎರಡು ಬಾರಿ ಕುಕ್ಕಿಂಗ್‌ ಕ್ವೀನ್‌ ಅಂತ ಅವಾರ್ಡ್‌ ಬಂದಿದೆ. ಸ್ನೇಹಿತರೆಲ್ಲಾ ಖೀರ್‌ ರಾಣಿ ಅಂತ ಹೊಗಳುತ್ತಾರೆ. ಪಪ್ಪಾಯ, ಗ್ರೀನ್‌ ಪೀಸ್‌, ಹೈದ್ರಾಬಾದ್‌ ನ ಕದ್ದೂ (ಬೂದುಗುಂಬಳ) ಖೀರು ಸೇರಿದಂತೆ ವಿಭಿನ್ನ ರೀತಿಯ ಖೀರುಗಳನ್ನು ಮಾಡುವ ವಿಭಿನ್ನ ಕಲೆ ಇವರದ್ದು. ಹೀಗಾಗಿಯೇ ಅದೆಷ್ಟೋ ಸ್ಪರ್ಧೆಗಳಲ್ಲಿ ಗೆಲುವು ಇವರದ್ದಾಗಿದೆ.

Asharani-(8)-A

17 ವರ್ಷಗಳ ಕಾಲ ಶಿಕ್ಷಕಿ

ಮತ್ತೊಂದು ಅಚ್ಚರಿ ಅಂದ್ರೆ ಆಶಾರಾಣಿ, ಸುಮಾರು 17 ವರ್ಷಗಳ ಕಾಲ ಸ್ಕೂಲ್ ‌ಟೀಚರ್‌ ಆಗಿ ಕೆಲಸ ಮಾಡಿದ್ದಾರೆ. ಅಡುಗೆ ಕಾರ್ಯಕ್ರಮಗಳ ಜೊತೆ ಟ್ಯೂಷನ್‌ ಮಾಡುವುದನ್ನೂ ಕೂಡಾ ಬಿಟ್ಟಿಲ್ಲ. ತುಂಬಾ ಬಡವರಿಗೆ, ಫೀಸ್‌ ಕಟ್ಟುವುದಕ್ಕೆ ಆಗುವುದಿಲ್ಲ ಎನ್ನುವವರಿಗೆ ಫ್ರೀಯಾಗಿ ಟ್ಯೂಷನ್‌ ಹೇಳಿಕೊಡುತ್ತಾರೆ. ಬಡವರಿಗೆ ಉಚಿತ ಶಿಕ್ಷಣ ನೀಡುತ್ತಾರೆ. ಇದನ್ನು ಗುರುತಿಸಿದ ಕೆಲವರು ನಾಲ್ಕು ಬಾರಿ ಸನ್ಮಾನ ಮಾಡಿದ್ದಾರೆ. ಮಿನಿಸ್ಟರ್‌ ಕೃಷ್ಣಭೈರೇಗೌಡರು ಸನ್ಮಾನ ಕೂಡ ಮಾಡಿದ್ದಾರೆ. ಅಷ್ಟೇ ಅಲ್ಲದೆ, ದುಬೈನಲ್ಲಿ `ನೊಬೆಲ್ ಕನ್ನಡತಿ’ ಅಂತಾರಾಷ್ಟ್ರೀಯ ಅವಾರ್ಡ್‌ ಕೂಡ ಸಿಕ್ಕಿದೆ.

ಆಶಾರಾಣಿ ಬ್ಲಾಗರ್‌ ಕೂಡಾ ಹೌದು. ಹೋಟೆಲ್ ‌ಗಳ ಬ್ಲಾಗ್ಸ್ ಕೂಡ ನಿರ್ವಹಣೆ ಮಾಡುತ್ತಾರೆ. ಫ್ರೀ ಇದ್ದಾಗ, ಚೆನ್ನಾಗಿರುವುದನ್ನು ನೋಡಿ, ಮನಸ್ಸಿಗೆ ಮಾಡಬಹುದು ಎನಿಸಿದರೆ ಮಾಡುತ್ತಾರೆ. ಕೆಲವರು ಹೊಸದಾಗಿ ಮಸಾಲಾ ಉತ್ಪನ್ನಗಳನ್ನು ಮಾಡಿರುತ್ತಾರೆ. ಅವರಿಗೆ ತಮ್ಮ ಪೇಜ್‌ ನಲ್ಲಿ ಪರಿಚಯ ಮಾಡಿಕೊಡುತ್ತಾರೆ. ಹಾಗಂತ ಅದಕ್ಕೆಲ್ಲಾ ಇವರು ಚಾರ್ಜ್‌ ಮಾಡೋದಿಲ್ಲ. ಅದೆಲ್ಲ ಉಚಿತ ಸೇವೆ ಅನ್ನೋದೇ ಖುಷಿಯ ವಿಚಾರ.

ಆಶಾರಾಣಿಗೆ ತಿಂಡಿ ಎಂದರೆ ಬಹಳ ಇಷ್ಟ. ಹಾಗಾಗಿ ಚಿಕ್ಕಪುಟ್ಟದಾಗಿ ಒಂದೊಂದೇ ಕಲಿಯಲು ಆರಂಭಿಸಿದರು. ಕಲಿಯುತ್ತಾ ಕಲಿಯುತ್ತಾ ಕಲಿಯುತ್ತಾ ಒಂದೊಂದಾಗಿ ಕ್ರಿಯೇಟ್‌ ಮಾಡೋಕೆ ಶುರು ಮಾಡಿದ್ರು. ಟಿವಿಗಳಲ್ಲಿ ಕರೆದರೂ, ಎಷ್ಟೇ ಬ್ಯುಸಿ ಇದ್ದರೂ, ಸಮಯ ಹೊಂದಿಸಿಕೊಂಡು ಹೋಗಿ ಪ್ರೋಗ್ರಾಮ್ ನೀಡಲು ಆರಂಭಿಸಿದರು. ಹಾಗೆ ಮಾಡಿದ ತಿಂಡಿ ಮಕ್ಕಳಿಗೆ ಟೇಸ್ಟ್ ಇರುತ್ತಿತ್ತು, ಆದರೂ ಟಿವಿ ಶೋ ಮುಗಿಸಿ, ಮನೆಯಲ್ಲಿ ಮಕ್ಕಳನ್ನೂ ನೋಡಿಕೊಳ್ಳುತ್ತಿದ್ದದ್ದು ಇವರ ಶಕ್ತಿಗೆ ಹಿಡಿದ ಕನ್ನಡಿಯೇ ಸರಿ.

“ಮನೆಯಲ್ಲಿ  ಎಲ್ಲರಿಗೂ ಸೌತ್‌ ಇಂಡಿಯನ್‌ ಇಷ್ಟ. ಎಷ್ಟೋ ಅಡುಗೆಗಳನ್ನು ಸ್ವತಃ ಕ್ರಿಯೇಟ್‌ ಮಾಡುತ್ತೇನೆ. ಮೊದಲೆಲ್ಲಾ ಟಿವಿ ಶೋಗಳಲ್ಲಿ ಮನೆಯಲ್ಲಿ ಒಮ್ಮೆ ಟ್ರೈ ಮಾಡಿ ನಂತರ ಹೋಗಿ ಅಲ್ಲಿ ಮಾಡುತ್ತಿದ್ದೆ.

“ಈಗೆಲ್ಲಾ ಆ ಸ್ಥಳದಲ್ಲಿ ಏನು ಸಮಾಗ್ರಿಗಳಿರುತ್ತವೋ ಅವನ್ನು ಬಳಸಿಕೊಂಡು ನೇರವಾಗಿ ಮಾಡಿ ತೋರಿಸುತ್ತೇನೆ. ಪ್ರಾಕ್ಟೀಸ್ ಮೇಕ್‌ ಮ್ಯಾನ್‌ ಪರ್ಫೆಕ್ಟ್ ಎನ್ನುವಂತೆ ಅಡುಗೆ ಮಾಡಿ, ಮಾಡಿ ಏನು ಹಾಕಿದರೆ ಯಾವ ರೀತಿಯ ರುಚಿ ಕೊಡಬಹುದು ಎಂಬುದು ಈಗ ನನಗೆ ಮನವರಿಕೆಯಾಗಿದೆ,” ಎನ್ನುತ್ತಾರೆ ಆಶಾರಾಣಿ.

“ಆಸಕ್ತಿ ಇರಲಿ ಅಥವಾ ಇಲ್ಲದಿರಲಿ ಎಲ್ಲರೂ ಅಡುಗೆ ಮಾಡುವುದನ್ನು ಕಲಿತಿರುವುದು ಒಳ್ಳೆಯದು. ಎಲ್ಲಾ ಸಮಯದಲ್ಲೂ ಕೆಲಸದವರನ್ನು ಅಥವಾ ಕುಕ್‌ ನ ನಂಬಿಕೊಳ್ಳಲು ಸಾಧ್ಯವಿಲ್ಲ.

“ನಾವು ಸೇವಿಸುವ ಆಹಾರ ಬಹಳ ಮುಖ್ಯ. ತುಂಬಾ ದೊಡ್ಡ ದೊಡ್ಡ ಅಡುಗೆಗಳನ್ನು ಕಲಿಯದಿದ್ದರೂ ನಮ್ಮ ಎಮರ್ಜೆನ್ಸಿಗೆ  ಎಷ್ಟು ಬೇಕೋ ಅನ್ನ, ಸಾಂಬಾರು, ಹುಳಿ, ದೋಸೆ ಇಂತಹ ಚಿಕ್ಕಪುಟ್ಟದನ್ನಾದರೂ ಕಲಿತಿರಬೇಕು. ಇದರಿಂದ ನಮ್ಮ ಆರೋಗ್ಯ ಉಳಿದುಕೊಳ್ಳುತ್ತದೆ.

“ಸ್ವತಃ ಮಾಡುವುದರಿಂದ ಸ್ವಚ್ಛತೆಯ ಬಗ್ಗೆಯೂ ನಮಗೆ ಗಮನವಿರುತ್ತದೆ. ಆಸಕ್ತಿ ಇಲ್ಲದೆ ಇರುವವರೂ ಕೂಡ ಕಲಿತುಕೊಳ್ಳುವುದು ಒಳ್ಳೆಯದು. ಹಲವಾರು ಬಗೆಯಲ್ಲಿ ಖೀರುಗಳನ್ನು ಮಾಡಬಹುದು ಎಂಬುದನ್ನು ತೋರಿಸಿದ್ದೇನೆ. ಪಾಯಸವನ್ನು ಹಲವಾರು ರೀತಿಯಲ್ಲಿ ಮಾಡಬಹುದು. ಶೋಸ್‌ ಇದ್ದಾಗ ಹೆಚ್ಚಾಗಿ ಮಾಡುತ್ತೇನೆ,” ಎನ್ನುತ್ತಾರೆ.

Asharani-(9)

ಆಶಾರಾಣಿಗೆ ಮಕ್ಕಳೂ ಕೂಡ ಸಾಥ್

ಮಕ್ಕಳಿಬ್ಬರೂ ಎಂಜಿನಿಯರ್‌ ಗಳಾದ್ರೂ ಕೂಡ ಆಶಾ ಮಾಡುವ ಅಡುಗೆಯ ವಿಡಿಯೋಗಳನ್ನು ಮಾಡುವ ಮೂಲಕ ಸಹಕಾರ ನೀಡುತ್ತಾರೆ. ಕೆಲವರಿಗೆ ಪೇಂಟಿಂಗ್‌, ಕೆಲವರಿಗೆ ಡ್ರಾಯಿಂಗ್‌ ಮತ್ತೆ ಕೆಲವರಿಗೆ ಅಡುಗೆ ಬಗ್ಗೆ ಆಸಕ್ತಿ ಇರುತ್ತೆ. ಏನೇ ಓದಿದ್ರೂ ಕೆಲವರಲ್ಲಿ ತಮ್ಮದೇ ಆದ ಒಂದು ಪ್ರತಿಭೆ ಅಡಗಿರುತ್ತದೆ. ಅದನ್ನು ಗುರುತಿಸಿಕೊಂಡು, ಬಿಗಿಹಿಡಿದು, ಎಷ್ಟೇ ಕಷ್ಟ ಬಂದರೂ ಮುಂದವರಿಸುತ್ತಾ ಹೋದಾಗ ಮಾತ್ರ ಯಶಸ್ಸು ಅರಸಿಕೊಂಡು ಬರುತ್ತದೆ. ಎಲ್ಲದರಲ್ಲೂ ಕಾಂಪಿಟೇಶನ್‌ ಇದ್ದೇ ಇರುತ್ತದೆ. ಅಡುಗೆ ಮಾಡುವವರಲ್ಲೂ ತುಂಬಾ ಚೆನ್ನಾಗಿ ಮಾಡುವವರೂ ಇರುತ್ತಾರೆ. ಅದನ್ನು ಹೇಗೆ ಬಡಿಸುತ್ತೇವೆ ಅನ್ನೋದು ಬಹಳ ಮುಖ್ಯ ಎಂಬುದು ಆಶಾರಾಣಿ ಅಭಿಪ್ರಾಯ.

ಯಾವುದೇ ಗಾಡ್‌ ಫಾದರ್‌ ಇಲ್ಲದೇ ಇಷ್ಟು ಸಾಧನೆ ಮಾಡಿರೋ ಆಶಾರಾಣಿ, ತಾನು ಒಂದೆರಡು ಶೋ ಮಾಡುತ್ತೇನಷ್ಟೇ ಅಂದುಕೊಂಡಿದ್ದರಂತೆ. ಈಗ ಅವರೇ ನಂಬಲಿಕ್ಕೆ ಆಗದಂತೆ ಸುಮಾರು 500ಕ್ಕೂ ಹೆಚ್ಚು ಶೋಗಳನ್ನು ಕೊಟ್ಟಿದ್ದಾರೆ. ಕುಕ್ಕಿಂಗ್ ಕ್ವೀನ್‌ ಹಂತವನ್ನೂ ದಾಟಿ ಕುಕ್ಕಿಂಗ್‌ ಕಾಂಪಿಟೇಶನ್‌ ಗಳಿಗೆ ಜಡ್ಜ್ ಆಗಿ ಹೋಗುತ್ತಿದ್ದಾರೆ. ಸದ್ಯ ಆಶಾ ಸೋಮನಾಥ್‌ ಅನ್ನೋ ಫೇಸ್‌ ಬುಕ್‌ ನಲ್ಲಿ ಬ್ಲಾಗ್‌ ಮಾಡುತ್ತಾರೆ. ಕೇವಲ ಫುಡ್‌ ಬ್ಲಾಗರ್‌ ಮಾತ್ರವಲ್ಲದೇ ಬಟ್ಟೆ ಅಂಗಡಿ, ರೆಸಾರ್ಟ್‌ ಗಳ ಬಗ್ಗೆಯೂ ಬ್ಲಾಗ್ ಮಾಡಿ ಯಂಗ್‌ ಸ್ಟರ್ಸ್‌ ಗೆ `ಕಿಚನ್‌ಟಿಪ್ಸ್’ ಕೂಡ ಕೊಡುವ ಮೂಲಕ ಕರ್ನಾಟಕದಲ್ಲಿ ತಮ್ಮದೇ ಖ್ಯಾತಿ ಗಳಿಸಿದ್ದಾರೆ. ಇಂತಹ ಸಾಧನೆಯ ಹಿಂದೆ ಶ್ರಮ, ಶ್ರದ್ಧೆ ಎರಡೂ ಇರಬೇಕು. ಹಾಗಿದ್ದಲ್ಲಿ ಮಾತ್ರ ಯಶಸ್ಸು ಸಾಧ್ಯ ಅನ್ನೋದು ಆಶಾರಾಣಿಯ ಮೂಲಮಂತ್ರ. ಸಾಧನೆಗೆ ವಯಸ್ಸಿನ ಮಿತಿ ಇರೋದಿಲ್ಲ. ಜೀವನದಲ್ಲಿ ಉತ್ಸಾಹದ ಜೊತೆಗೆ ಯಶಸ್ಸು ಗಳಿಸುವ ಹುಮ್ಮಸ್ಸು ಇರಬೇಕು. ಗುರಿ ಇರಬೇಕು. ಛಲ ಇಟ್ಟಿರಬೇಕು. ಸಾಧನೆಯೂ ಬೇಕು. ಹಾಗಿದ್ದಲ್ಲಿ ಮಾತ್ರ ಹೆಸರು, ಪ್ರಸಿದ್ಧಿ, ಖ್ಯಾತಿ ಅನ್ನೋ ಕಿರೀಟ ಸಾಧ್ಯ ಅನ್ನೋದಕ್ಕೆ ಆಶಾರಾಣಿ ಅವರೇ ಉತ್ತಮ ಉದಾಹರಣೆ!

ಸುನೀತಾ ಬಿ.ಎಂ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ