ಡಾ. ಮಾಧವಿ ಎಸ್‌. ಭಂಡಾರಿ ಅನುವಾದಕಿ ಅಧ್ಯಾಪಕಿ,

ಅನುವಾದಕಿ, ನಾಟಕಕಾರ್ತಿ, ನಿರ್ದೇಶಕಿ ಹೀಗೆ ಬಹುಮುಖ ಪ್ರತಿಭೆಯಿಂದ ತಮ್ಮ ವ್ಯಕ್ತಿತ್ವವನ್ನು ಹಿಗ್ಗಿಸಿಕೊಂಡಿರುವ ಮಾಧವಿ ಭಂಡಾರಿಯರ ಸಾಧನೆಗಳ ಪರಿಚಯ ಪಡೋಣವೇ……?

ಕನ್ನಡ ಸಾಹಿತ್ಯ ಸಾರಸ್ವತ ಲೋಕದಲ್ಲಿ, ಹಿಂದಿಯ ಅನನ್ಯ ಕೃತಿಗಳನ್ನು ಕನ್ನಡಕ್ಕೂ, ಕನ್ನಡದ ಕೃತಿಗಳನ್ನು ಹಿಂದಿಗೂ ಪ್ರವಹಿಸುವಂತೆ ಮಾಡಿರುವುದರಿಂದ, ಡಾ. ಮಾಧವಿ ಎಸ್‌. ಭಂಡಾರಿ ಹಿಂದಿ ಅಧ್ಯಾಪಕಿ ಆಗಿ ಸಾರ್ಥಕತೆ ಕಂಡುಕೊಂಡಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ.

ಉಡುಪಿಯಲ್ಲಿ `ಮಂದಾರ’ ಹೆಸರಿನ ನಿವಾಸದಲ್ಲಿ ನೆಲೆಸಿರುವ ಕನ್ನಡ ಹಾಗೂ ಹಿಂದಿಯಲ್ಲಿ ಅರಳಿರುವ ನಿಜ ಮಂದಾರ ಪುಷ್ಪವೇ ಮಾಧವಿ ಭಂಡಾರಿ.ಪ್ರೌಢ ಅನುವಾದಕಿ. ಉಡುಪಿಯ ಪೂರ್ಣಪ್ರಜ್ಞಾ ಕಾಲೇಜಿನಲ್ಲಿ ಅಧ್ಯಾಪಕಿ ಹಾಗೂ ಪ್ರಾಂಶುಪಾಲೆಯಾಗಿ ಈಗ ನಿವೃತ್ತಿ ಹೊಂದಿರುವ ಇವರ ಪ್ರೌಢ ಪ್ರಬಂಧ  `ಕಥಾ ಸಾಹಿತ್ಯ ಕೆ. ವಿವಿಧ್‌ ಆಯಾಮ್ ‘ಗೆ ಡಾಕ್ಟರೇಟ್‌ ಪದವಿ ಲಭಿಸಿದೆ. ಹಿಂದಿ ಪಠ್ಯ ಸಮಿತಿಯ ಅಧ್ಯಕ್ಷರಾಗಿ ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ಕರಾವಳಿ ತೀರದ ಪ್ರತಿಷ್ಟಿತ ಸ್ವಾಯತ್ತ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ಪತ್ರಿಕೋದ್ಯಮದ ಸಾಧನೆ

`ಚಾರುಲತಾ’ ಹೆಸರಿನಲ್ಲಿ ಪಠ್ಯ ಪುಸ್ತಕ ಸಂಪಾದಕಿಯಾಗಿಯೂ ದುಡಿದಿದ್ದಾರೆ. ಅನೇಕ ಎಂ.ಫಿಲ್ ‌ಮತ್ತು ಪಿ.ಎಚ್‌.ಡಿ ವಿದ್ಯಾರ್ಥಿಗಳಿಗೆ ತಮ್ಮ ಅಮೂಲ್ಯ ಮಾರ್ಗದರ್ಶನವನ್ನೂ ನೀಡಿದ್ದಾರೆ. `ಉತ್ಸವದಿಂದ ಉತ್ಸವಕ್ಕೆ’ ಕವನ ಸಂಕಲನ, `ಗಾಯನ’ ಕಥಾ ಸಂಕಲನ, `ಮಹಿಳೆ ಮತ್ತು ಕೋಮುವಾದ’ ಎಂಬ ವೈಚಾರಿಕ ಪ್ರಬಂಧಗಳು ಇವರ ಕನ್ನಡದ ಪ್ರಮುಖ ಪ್ರಕಟಣೆಗಳಾಗಿವೆ.

ದಾಸ ಸಾಹಿತ್ಯ

ಕನ್ನಡದಿಂದ ಹಿಂದಿಗೆ ಅನುವಾದಿಸಿರುವ ಇವರ ಪ್ರಮುಖ ಪ್ರಕಟಣೆಗಳು ದಾಸ ಭಾರತದ ಹಿಂದಿ ಅನುವಾದ. ವೈದೇಹಿಯರ `ಅಸ್ಪೃಶ್ಯರು’ ಕಾದಂಬರಿ `ಅಂತ್ಯಜ್‌’ ಅನ್ನುವ ಹೆಸರಿನಲ್ಲಿ, `ನಳಚರಿತೆ’ಯ ಗದ್ಯಾನುವಾದ, `ಚಕ್ರವ್ಯೂಹ’ ಎಂಬ ಯಕ್ಷಗಾನವನ್ನು ರಾಷ್ಟ್ರೀಯ ನಾಟಕ ಶಾಲೆಯ ಮಕ್ಕಳಿಗಾಗಿ ಅನುವಾದಿಸಿದ್ದಾರೆ.

ಪಳಗಿದ ಅನುವಾದ

ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿದ ಕೃತಿಗಳು `ಚಂದ್ರಕಾಂತ, ಭಗವಂತನ ಕಂದಮ್ಮಗಳು.’  `ಸಮಾಜಮಿತ್ರ’ ಮಾಸಪತ್ರಿಕೆಯಲ್ಲಿ ಸದಸ್ಯೆಯಾಗಿ ಅಂಕಣ ಬರಹಗಾರ್ತಿಯಾಗಿ 1994-1997ರವರೆಗೆ ಅಮೂಲ್ಯ ಸೇವೆ. ಇಷ್ಟವಲ್ಲದೆ, ಗೌರೀಶ್‌ಕಾಯ್ಕಿಣಿ, ಚಿಟ್ಟಾಣಿ, ಚಂಪಾ, ವೈದೇಹಿ ಮೊದಲಾದವರ ಅಭಿನಂದನಾ ಗ್ರಂಥಕ್ಕೆ ಬರಹಗಳನ್ನೂ ಬರೆದಿರುವರು. ಉದ್ಯಾರ ಮಾಧವಾಚಾರ್ಯ ಮತ್ತು ಭಾಸ್ಕರ ಮಯ್ಯರ ಕೃತಿಗಳಿಗೆ ಮುನ್ನುಡಿಯನ್ನು ಬರೆದಿರುವ ಹೆಗ್ಗಳಿಕೆ ಇವರದ್ದು.

ನಾಟಕಗಳ ಕುರಿತಾಗಿ

ಭೀಷ್ಮ ಸಹಾನಿಯವರ `ಮಾಧವಿ’ ನಾಟಕ, `ಸಾಯೋ ಆಟ’ ಮತ್ತು `ನಾಗಮಂಡಲ’ ನಾಟಕಗಳನ್ನು ನಿರ್ದೇಶಿಸಿದ್ದಾರೆ. ಅಲ್ಲದೆ ಹಲವು ರೇಡಿಯೋ ನಾಟಕಗಳನ್ನೂ ರಚಿಸಿ ನಿರ್ದೇಶಿಸಿದ್ದಾರೆ. ಚಿಂತನ, ಹಿಂದಿ ಪಾಠ ಮತ್ತು ಸ್ವರಚಿತ ಕವನಗಳನ್ನು ಆಕಾಶವಾಣಿಯಲ್ಲಿ ಪ್ರಸ್ತುತಪಡಿಸಿದ್ದಾರೆ. 2012ರಲ್ಲಿ ಇವರು ರಚಿಸಿದ ನಾಟಕಕ್ಕೆ ಆಕಾಶವಾಣಿ ರಾಷ್ಟ್ರೀಯ ಪುರಸ್ಕಾರ ಲಭಿಸಿದೆ. ನಟಿಯಾಗಿ ಅನೇಕ ತುಳು ಚಲನಚಿತ್ರಗಳು, ಕನ್ನಡದ ಪ್ರಮುಖ ಟಿ.ವಿ ಧಾರಾವಾಹಿಗಳಾದ `ಗುಡ್ಡದ ಭೂತ’ ಮತ್ತು `ಓ ನನ್ನ ಬೆಳಕೆ’ ನಾಟಕಗಳಲ್ಲಿ ಅದ್ಭುತ ನಟನೆ ಮೂಲಕ ಪ್ರೇಕ್ಷಕರನ್ನು ಸೂಜಿಗಲ್ಲಿನಂತೆ ಸೆಳೆದಿದ್ದಾರೆ. 2016ರಲ್ಲಿ ಮಾರಿಷಸ್‌ ನಲ್ಲಿ ನಡೆದ ವಿಶ್ವ ಹಿಂದಿ ಸಮ್ಮೇಳನದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದಾರೆ.

ಪ್ರಶಸ್ತಿ ಪುರಸ್ಕಾರಗಳು

ರಾಷ್ಟ್ರೀಯ ಕವಿಗೋಷ್ಠಿ, ವಿಚಾರ ಸಂಕಿರಣಗಳು ಹಾಗೂ ಕಾರ್ಯಾಗಾರಗಳಲ್ಲಿ ತಮ್ಮ ಪಾಂಡಿತ್ಯಪೂರ್ವ ಚಿಂತನೆಯಿಂದ ಮನ್ನಣೆ ಗಳಿಸಿದ್ದಾರೆ. `ನನಗೆ ನಾನೇ ಶಿಲ್ಪಿ’ ಹಿಂದಿ ಅನುವಾದಕ್ಕೆ ಗೊಯೆಂಕಾ ಪ್ರಶಸ್ತಿ ದೊರೆತಿದೆ. ಲಕ್ನೋದವರು ಭಾಷಾಂತರಕ್ಕೆ ಕೊಡ ಮಾಡುವ `ಸೌಹಾರ್ದ್‌’ ಸನ್ಮಾನ್‌ ದೊರೆತಿದೆ. ಹಿಂದಿ ಭಾಷಾ ಪ್ರಚಾರಕ ಸನ್ಮಾನ ಮುಂತಾದ ಇವರ ಪ್ರತಿಭಾ ಪಾಂಡಿತ್ಯಕ್ಕೆ ಸಾಕ್ಷಿಯಾಗಿವೆ.

ರಂಗಭೂಮಿಯ ಸೇವೆ

ರಂಗಭೂಮಿಯ ಇವರ ಸೇವೆಗೆ ವಿಶ್ವ ರಂಗಭೂಮಿ ದಿನದಲ್ಲಿ ಪುರಸ್ಕಾರ, ಉಡುಪಿ ಜಿಲ್ಲೆಯ ರಾಜ್ಯೋತ್ಸವದ ಪುರಸ್ಕಾರ, ಜಿಲ್ಲಾ ಕನ್ನಡ ಸಮ್ಮೇಳನದ ಸರ್ವಾಧ್ಯಕ್ಷೆಯ ಗೌರವ ಸಂದಾಯವಾಗಿದೆ. ಇವರಿಗೆ ಇನ್ನೂ ಹೆಚ್ಚಿನ ಪ್ರಶಸ್ತಿ ಪುರಸ್ಕಾರ ಲಭಿಸಲಿ, ಇವರ ದ್ವಿಭಾಷಾ ಪಾಂಡಿತ್ಯ ನಾಡಿನ ಜನತೆಗೆ ಲಭಿಸಲಿ ಎಂದು ಅಂತಾರಾಷ್ಟ್ರೀಯ ಮಹಿಳಾ ದಿನದ ಸಂದರ್ಭದಲ್ಲಿ ಗೃಹಶೋಭಾ ಹಾರೈಸುತ್ತಾಳೆ!

ಸುಮಾ ವೀಣಾ 

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ