ಸುಮಾ ಸತೀಶ್ ಲೇಖಕಿ
ಮೂಲತಃ ಲೇಖಕಿ, ಕವಿಯಿತ್ರಿ, ನಿರೂಪಕಿ, ನಾಟಕಕಾರ್ತಿ ಹಾಗೂ ಸಂಘಟಕಿಯಾದ ಸುಮಾ ಸತೀಶ್ ರ ಅನನ್ಯ ಸಾಧನೆಗಳ ಬಗ್ಗೆ ತಿಳಿಯೋಣವೇ......!
ಬೆಣ್ಣೆಯಲ್ಲಿ ಅದ್ದಿ ತೆಗೆದಂತಹ ಮೃದು ಮಾತು, ಸುಂದರ ಮುಗುಳ್ನಗೆ, ನಿರೂಪಣೆ ಮಾಡಲು ನಿಂತರೆ ಬಹಳ ಸರಾಗವಾಗಿ, ಪಟಪಟನೆ, ಚಂದದ ಕನ್ನಡ ಮಾತು ಇವರ ಬಾಯಿಂದ ಹೊರ ಹೊಮ್ಮುತ್ತದೆ. ಇವರ ಮಾತುಗಳನ್ನು ಕೇಳಲು ನಿಜಕ್ಕೂ ಕಿವಿಗೆ ಇಂಪು. ಇಷ್ಟೆಲ್ಲಾ ಪ್ರತಿಭಾವಂತೆಯಾದರೂ ಸ್ವಲ್ಪ ಹಮ್ಮುಬಿಮ್ಮು ಇಲ್ಲದ ವ್ಯಕ್ತಿತ್ವ. ಸ್ನೇಹಜೀವಿಯಾದ ಇರುವ ಹೋದೆಡೆಯೆಲ್ಲಾ ಆಪ್ತ ಬಳಗನ್ನು ಸಂಪಾದಿಸುತ್ತಾರೆ. ಶ್ರಮಜೀವಿಯಾದ ಇವರು ಒಪ್ಪಿಕೊಂಡ ಕೆಲಸಕ್ಕೆ ನ್ಯಾಯ ಒದಗಿಸುವ ಕಾರಣ ಎಲ್ಲರಿಗೂ ಅಚ್ಚುಮೆಚ್ಚು.
ಬಾಲ್ಯ : ಹುಟ್ಟಿದ್ದು ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಚಿಕ್ಕಮಾಲೂರು ಗ್ರಾಮದಲ್ಲಿ. ಬಾಲ್ಯದಿಂದಲೂ ಓದಿನ ಗೀಳು ಹತ್ತಿಸಿದ್ದು ಅಪ್ಪ. ಬಾಲಮಿತ್ರ, ಚಂದಮಾಮಾ, ಬೊಂಬೆಮನೆಗಳನ್ನು ತಂದುಕೊಡುತ್ತಿದ್ದರು. ಮಾಸ್ಟರ್ ಹಿರಣ್ಣಯ್ಯನವರ ಎಲ್ಲಾ ನಾಟಕಗಳನ್ನು ಕೇಳುತ್ತಲೇ ಬೆಳೆದವರು. ಅಪ್ಪನೊಂದಿಗೆ ನಿತ್ಯ ದಿನಪತ್ರಿಕೆಯ ಓದುವ ಹಾಗೂ ಚರ್ಚೆ ನಡೆಯುತ್ತಿದ್ದುದು ವೈಚಾರಿಕ ಚಿಂತನೆಗೆ ಭಿತ್ತಿಯಾಯಿತು. ಹಳ್ಳಿಯ ಪ್ರಕೃತಿಯ ಮಡಿಲಿನಲ್ಲಿ ಬೆಳೆದದ್ದೂ ಸಾಹಿತ್ಯಾಸಕ್ತಿ ಚಿಗುರೊಡೆಯಲು ಬೀಜವಾಯಿತು.
ಸಂಘಗಳೊಂದಿಗೆ ನಂಟು : ತುಮಕೂರು ವಿಶ್ವವಿದ್ಯಾಲಯದಲ್ಲಿ ಎಂ.ಎ (ಕನ್ನಡ ಸಾಹಿತ್ಯ) ಮಾಡಿದರು. ವಾಸವಿಯ ಯೂನಿಯನ್ ನಿಂದ ಚಿನ್ನದ ಪದಕ ವಿಜೇತೆ. ಸಾಹಿತ್ಯದಲ್ಲಿನ ಅಪರಿಮಿತ ಆಸಕ್ತಿ ಇವರಿಗೆ ಅನೇಕ ಸಂಘ ಸಂಸ್ಥೆಗಳಲ್ಲಿ ಸಕ್ರಿಯ ಪಾತ್ರ ವಹಿಸಲು ಅನುವು ಮಾಡಿಕೊಟ್ಟಿತು.
`ನಿಮ್ಮ ವೈಶ್ಯ ವಾರ್ತೆ' ಮಾಸಿಕದ ಉಪ ಸಂಪಾದಕಿ.
ಕರ್ನಾಟಕ ಆರ್ಯವೈಶ್ಯ ಸಾಹಿತ್ಯ ಪರಿಷತ್ತಿನಲ್ಲಿ ಕಾರ್ಯದರ್ಶಿ.
ಕರ್ನಾಟಕ ಲೇಖಕಿಯರ ಸಂಘ (ವಕೀಲೀಸಂ)ನಲ್ಲಿ ಕಾರ್ಯಕಾರಿ ಸಮಿತಿಯ ಸದಸ್ಯೆ.
ವಿಕಸನ ವೃಂದ ಸಂಸ್ಥೆಯ ಸೌರಭ ಎಂಬ ಸಾಹಿತ್ಯದ ಗುಂಪಿನ ಮೂಲಕ ಮೌಲ್ಯಯುತ ಸಾಹಿತ್ಯ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಪ್ರತಿ ಹದಿನೈದು ದಿನಕ್ಕೊಮ್ಮೆ ಕನ್ನಡ ಕೃತಿಯೊಂದರ ಮೌಲಿಕ ಪರಿಚಯ ಮಾಡುವ ಮೂಲಕ ಸಾಹಿತ್ಯಾಸಕ್ತರ ಓದಿಗೆ ನೀರೆರೆಯುತ್ತಾರೆ.
ಸಿರಿ ಸಾಂಸ್ಕೃತಿಕ ಮಹಿಳಾ ಸಂಘದಲ್ಲಿ ಸಂಘಟನಾ ಕಾರ್ಯದರ್ಶಿ.ಪ್ರಕಟಿತ ಕೃತಿಗಳು :
12 ಕಿರು ಹಾಸ್ಯ ನಾಟಕಗಳ ಸಂಕಲನ `ಮಿರ್ಚಿ ಮಸಾಲೆ ಮತ್ತು ಇತರ ನಗೆ ನಾಟಕಗಳು.'
ಅವನಿ ಕವನ ಸಂಕಲನ.
ವಚನ ಸಿರಿ ಆಧುನಿಕ ವಚನಗಳು.
ಹಾದಿಯಲ್ಲಿನ ಮುಳ್ಳುಗಳು ವೈಚಾರಿಕ ಲೇಖನ ಸಂಕಲನ.
ಬಳಗ ಬಳ್ಳಿಯ ಸುತ್ತ (ಸಂ.ಕೃತಿ).
ಶೂನ್ಯದಿಂದ ಸಿಂಹಾಸನದವರೆಗೆ ವ್ಯಕ್ತಿ ಚಿತ್ರಣ (ಅಚ್ಚಿನಲ್ಲಿ).
ಲಾಕ್ ಡೌನ್ ಸಮಯದಲ್ಲಿನ ಚಟುವಟಿಕೆ :
ಕೋವಿಡ್ ಜಗತ್ತನ್ನೇ ಬಂಧಿಸಿಟ್ಟ ಸಮಯದಲ್ಲಿ ಇವರು ರೆಕ್ಕೆ ಕಟ್ಟಿಕೊಂಡು ಹಾರಿದರು. ಅನೇಕ ಕಿರು ಹಾಸ್ಯ ವಿಡಿಯೋಗಳ ಚಿತ್ರಣವನ್ನು ಅವರದೇ ಯೂ ಟ್ಯೂಬ್ ಚಾನೆಲ್ ನಲ್ಲಿ ಸೇರಿಸಿದ್ದಾರೆ. ಜೊತೆಗೆ ಆನ್ ಲೈನ್ ನಲ್ಲಿ ಮಾಡಿದ ಕೆಲವು ಉಪನ್ಯಾಸಗಳು, ಕಿರು ಭಾಷಣಗಳೂ, ಏಕಪಾತ್ರಾಭಿನಯದ ತುಣುಕುಗಳೂ ಇವೆ. ವಿವಿಧ ಸಂಸ್ಥೆಗಳಡಿಯಲ್ಲಿ ನೀಡಿದ ಹಲವು ಕಾರ್ಯಕ್ರಮದ ವಿಡಿ.ಓಗಳಿವೆ. ಸ್ಥಳೀಯ ಚಾನೆಲ್ ಗಳಲ್ಲಿ ಕಿರು ನಾಟಕಗಳ ನಿರ್ದೇಶನ ಮತ್ತು ಅಭಿನಯ.
ಹಲವಾರು ಪತ್ರಿಕೆಗಳಲ್ಲಿ ಲೇಖನಗಳು ಮತ್ತು ಕವನಗಳು ಹಾಗೂ ಕೃತಿ ವಿಶ್ಲೇಷಣೆ ಪ್ರಕಟಣೆ.