ಮಧ್ಯಮ ವರ್ಗದ ಜೀವನದಲ್ಲಿ ಹಣಕಾಸಿನ ಉಳಿತಾಯ ಎಂದೊಡನೆ ದೊಡ್ಡ ತಲೆನೋವು ಶುರುವಾಗುತ್ತದೆ. ನಮ್ಮಿಂದ ಉಳಿತಾಯ ಸಾಧ್ಯವೇ ಇಲ್ಲ ಎಂದು ನಿರ್ಲಕ್ಷಿಸುವ ಬದಲು, ಇರುವುದರಲ್ಲಿ ಹೇಗೆ ಹಣಕಾಸಿನ ನಿರ್ವಹಣೆ ಮಾಡುವುದೆಂದು ವಿವರವಾಗಿ ತಿಳಿಯೋಣವೇ….?

ಜೀವನದಲ್ಲಿ ಹಣಕಾಸಿಗೆ ಅದರದೇ ಆದ ಮಹತ್ವವಿರುವುದು ನಮಗೆಲ್ಲ ಗೊತ್ತಿರುವ ವಿಷಯವೇ! ನಮ್ಮ ಸಂಪಾದನೆಯ ಹಣದಲ್ಲಿ ನೆಮ್ಮದಿಯ ಜೀವನವನ್ನು ನಡೆಸಲು ಎಷ್ಟು ಹಣ ಖರ್ಚು ಮಾಡಬಹುದು, ಮುಂದಿನ ದಿನಗಳಲ್ಲಿ ಕೂಡ ಸುಖಮಯವಾಗಿ ಕಳೆಯಲು ಎಷ್ಟು ಹಣ ಉಳಿತಾಯ ಮಾಡಬೇಕಾಗುವುದು ಎಂಬ ವಿಷಯದಲ್ಲಿ ಹಲವರಿಗೆ ಸ್ಪಷ್ಟತೆ ಇರುವುದಿಲ್ಲ. ಈ ಕೆಳಗಿನ ಸಲಹೆಗಳನ್ನು ಗಮದಲ್ಲಿಟ್ಟುಕೊಂಡರೆ ಹಣಕಾಸವನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಲು ಸಾಧ್ಯವಾಗಲಿದೆ.

50-30-20ರ ನಿಯಮ ನಾವು ನಮ್ಮ ಆದಾಯವನ್ನು ಈ ನಿಯಮದಂತೆ ವಿನಿಯೋಗಿಸುವುದು ಸದಾ ಅಪೇಕ್ಷಣೀಯ. ಆದಾಯದ 50%ರಷ್ಟನ್ನು ನಮ್ಮ ಪ್ರತೀ ತಿಂಗಳಿನ ಅಗತ್ಯಗಳಾದ ಮನೆ ಬಾಡಿಗೆ, ಪ್ರಾವಿಷನ್‌, ಹಾಲು, ನೀರು, ವಿದ್ಯುಚ್ಛಕ್ತಿ, ಬೇರೆ ಬೇರೆ ಸಾಲಗಳಿಗೆ ಕಟ್ಟಬೇಕಾದ ಸಮಭಾಜಿತ ಮಾಸಿಕ ಕಂತುಗಳು ಇಂಥವುಗಳಿಗಾಗಿ ಮೀಸಲಿಡಬೇಕು.

ಆದಾಯದ 30%ರಷ್ಟನ್ನು ಮನರಂಜನೆ ಅಂದರೆ ಟಿವಿ ವೀಕ್ಷಣೆಯ ಕೇಬಲ್/ಡಿಶ್‌ ಟಿವಿಯ ಮಾಸಿಕ ಬಾಡಿಗೆ, ಸಿನಿಮಾ ಮಂದಿರದ ವೆಚ್ಚ, ಹೋಟೆಲ್‌ ನ ಊಟ, ತಿಂಡಿ, ಪ್ರವಾಸ ಮುಂತಾದವುಗಳಿಗೆಂದು ಖರ್ಚು ಮಾಡಬೇಕಾದೀತು. ಉಳಿದ 20%ರಷ್ಟನ್ನು ನಾವು ಉಳಿತಾಯ ಮಾಡಲೇಬೇಕು. ಇದು ಕನಿಷ್ಠ ಮೊತ್ತ. ಇದಕ್ಕಿಂತ ಹೆಚ್ಚಿಗೆ ಉಳಿತಾಯ ಮಾಡುವ ಪ್ರಯತ್ನ ಮಾಡಬೇಕು. ಹೆಚ್ಚು ಹೆಚ್ಚು ಉಳಿತಾಯ ಮಾಡಿದಷ್ಟೂ ಭವಿಷ್ಯದಲ್ಲಿ ಹೆಚ್ಚಿನ ಮೊತ್ತ ನಮ್ಮ ಬಳಿ ಇರುವಂತಾಗುವುದು. ಹಾಗೆಂದು ಈಗಲೇ ಮಾಡಬೇಕಾದ ಅನಿವಾರ್ಯವಾದ ಖರ್ಚುಗಳನ್ನು ಕಡಿಮೆಗೊಳಿಸುವುದು ಎಂದರ್ಥವಲ್ಲ.

ವ್ಯಕ್ತಿಯಿಂದ ವ್ಯಕ್ತಿಗೆ, ಕುಟುಂಬದಿಂದ ಕುಟುಂಬಕ್ಕೆ ಉಳಿತಾಯ ಮಾಡುವ ಶೇಕಡದಲ್ಲಿ ವ್ಯತ್ಯಾಸವಾಗಬಹುದು. ಆದರೂ ಉಳಿತಾಯ ಶೇ.20ಕ್ಕಿಂತ ಕಡಿಮೆಯಾಗದಂತೆ ನೋಡಿಕೊಳ್ಳಬೇಕು. ಬ್ಯಾಂಕ್‌, ಅಂಚೆ ಕಛೇರಿಯಲ್ಲಿ ಸ್ಥಿರ ಠೇವಣಿಗಳು (ಫಿಕ್ಸೆಡ್ ಡೆಪಾಸಿಟ್‌ ಅಥವಾ ಎಫ್‌.ಡಿ), ಮ್ಯೂಚುವೆಲ್ ‌ಫಂಡ್‌, ಷೇರು, ಚಿನ್ನ ಮುಂತಾದವುಗಳಲ್ಲಿ ಹೂಡಿಕೆಯನ್ನು ಮಾಡಬಹುದು. ಹೆಚ್ಚಿನ ಬಡ್ಡಿಯ ಆಮಿಷದಲ್ಲಿ ಮೋಸ ಹೋಗದಂತೆ, ಸೈಬರ್‌ ವಂಚಕರ ಜಾಲಕ್ಕೆ ಬೀಳದಂತೆ ಎಚ್ಚರ ವಹಿಸಬೇಕು.

ನಮ್ಮ ತಿಂಗಳ ಸಂಪಾದನೆ ರೂ.50,000 ಇದ್ದರೆ, 50% ಅಂದರೆ ರೂ. 25,000ನ್ನು ತಿಂಗಳ ಅಗತ್ಯ ಖರ್ಚುಗಳಿಗೆ, 30%ನ್ನು ಅಂದರೆ ರೂ.15,000ನ್ನು ಮನರಂಜನೆಗಳಿಗೆ ಹಾಗೂ ಉಳಿದ 20%ನ್ನು ಅಂದರೆ ರೂ. 10,000 ನಾವು ಉಳಿತಾಯ ಮಾಡಲೇಬೇಕಾದ ಮೊತ್ತ. ಮುಂದೆ ಈ ರೀತಿಯ ಉಳಿತಾಯದಿಂದ ದೊರೆತ ಮೊತ್ತವನ್ನು ನಮ್ಮ ಅಗತ್ಯಗಳಿಗೂ, ಸ್ಪಾಶನ್ನು ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಬಳಸಿಕೊಳ್ಳಬಹುದು.

indian-real-estate-business-concept-showing-3d-model-house-with-keys-paper-currency-notes-calculator-selective-focus

72 ನಿಯಮ

ಸಾಮಾನ್ಯವಾಗಿ ನಮ್ಮ ಉಳಿತಾಯದ ಹಣ ದ್ವಿಗುಣಗೊಳ್ಳಲು (ಡಬಲ್ ಆಗಲು) ಎಷ್ಟು ವರ್ಷ ಬೇಕು ಎಂದು ತಿಳಿದುಕೊಳ್ಳುವ ಆಸಕ್ತಿ ನಮಗಿರುತ್ತದೆ. 72 ಎಂಬ ಸಂಖ್ಯೆಯಿಂದ ಬಡ್ಡಿ ದರವನ್ನು ಭಾಗಿಸಿದರೆ ದ್ವಿಗುಣಗೊಳ್ಳಲಿರುವ ವರ್ಷ ನಮಗೆ ತಿಳಿದು ಬರುವುದು. ಹಾಗಾಗಿಯೇ ಇದಕ್ಕೆ 72ರ ನಿಮಯ ಅನ್ನುವುದು. ಉದಾಹರಣೆಗೆ ನಾವು ಬ್ಯಾಂಕ್‌ ನಲ್ಲೋ, ಅಂಚೆ ಕಛೇರಿಯಲ್ಲೋ ಹಣವನ್ನು ಠೇವಣಿ (ಡೆಪಾಸಿಟ್‌) ಇಡುತ್ತೇವೆ ಅಂದುಕೊಳ್ಳೋಣ. ಆ ಠೇವಣಿಗೆ ವಾರ್ಷಿಕ ಬಡ್ಡಿ ದರ 8% ಎಂದಿದ್ದರೆ, ಆ ಠೇವಣಿ ಎಷ್ಟು ವರ್ಷದಲ್ಲಿ ದ್ವಿಗುಣಗೊಳ್ಳಲಿದೆ ಎಂದು ನಾವು ತಿಳಿದುಕೊಳ್ಳಬಹುದು.

ಅದು ಹೇಗೆಂದರೆ ಈ 72ರ ನಿಯಮದ ಪ್ರಕಾರ 72ನ್ನು ಬಡ್ಡಿ ದರವಾದ 8 ರಿಂದ ನಾವು ಭಾಗಿಸಬೇಕು. ಆಗ ದೊರಕುವ ಉತ್ತರ 9. ಅಂದರೆ ಈ ಠೇವಣಿಯು ವಾರ್ಷಿಕ 8% ಬಡ್ಡಿ ದರದಲ್ಲಿ, 9 ವರ್ಷಗಳಲ್ಲಿ ದ್ವಿಗುಣಗೊಳ್ಳಲಿದೆ. ಒಂದು ಲಕ್ಷ ರೂಪಾಯಿಯನ್ನು ಠೇವಣಿ ಇಟ್ಟರೆ 8% ಬಡ್ಡಿ ದರದಲ್ಲಿ 9 ವರ್ಷಗಳಲ್ಲಿ ಆ ಠೇವಣಿಯು ಎರಡು ಲಕ್ಷ ರೂಪಾಯಿಗಳಾಗಲಿವೆ ಎಂದಾಯಿತು. ಹಾಗೆಯೇ ವಾರ್ಷಿಕ ಬಡ್ಡಿ 9 ರಂತೆ 8 ವರ್ಷದಲ್ಲೂ, 6% ನಂತೆ 12 ವರ್ಷದಲ್ಲೂ ಎರಡು ಪಟ್ಟು ಆಗಲಿದೆ.

114 ನಿಮಯ

ಮೇಲಿನ ನಿಯಮದ ಹಾಗೆಯೇ, ನಮ್ಮ ಉಳಿತಾಯದ ಹಣ ಮೂರು ಪಟ್ಟು (ಟ್ರಿಪ್‌) ಆಗುವುದನ್ನು ಪರಿಶೀಸಬೇಕೆಂದಾದರೆ 114ನ್ನು ವಾರ್ಷಿಕ ಬಡ್ಡಿ ದರದಿಂದ ಭಾಗಿಸಬೇಕು. ಉದಾಹರಣೆಗೆ 8%ರ ಬಡ್ಡಿ ದರದಲ್ಲಿ ನೋಡಬೇಕೆಂದಾದರೆ, 114 ಭಾಗಿಸು 8 ಅಂದರೆ 14.25 ವರ್ಷ ಅಥವಾ 14 ವರ್ಷ 3 ತಿಂಗಳು (0.25 ವರ್ಷ ಅಂದರೆ ವರ್ಷದ ಕಾಲಂಶ). ಒಂದು ಲಕ್ಷ ರೂಪಾಯಿಯನ್ನು ಠೇವಣಿ ಇಟ್ಟರೆ 8%ರ ಬಡ್ಡಿ ದರದಲ್ಲಿ 14 ವರ್ಷ 3 ತಿಂಗಳುಗಳಲ್ಲಿ ಆ ಠೇಣಿಯು ಮೂರು ಲಕ್ಷ ರೂಪಾಯಿಗಳಾಗಲಿವೆ ಎಂದಾಯಿತು. 6%ರ ಬಡ್ಡಿ ದರದಲ್ಲಿ, 114 ಭಾಗಿಸುವ 6 ಅಂದರೆ 19 ವರ್ಷಗಳಲ್ಲಿ ಮೂರು ಪಟ್ಟಾಗಲಿದೆ. ಹೀಗೆಯೇ ಬೇರೆ ಬೇರೆ ವಾರ್ಷಿಕ ಬಡ್ಡಿ ದರದಲ್ಲಿ ನಮ್ಮ ಹಣ ಎಷ್ಟು ವರ್ಷದಲ್ಲಿ ತ್ರಿಗುಣಗೊಳ್ಳಲಿದೆ ಎಂದು ನಾವು ಅರಿತುಕೊಳ್ಳಬಹುದು.

144 ನಿಯಮ

ನಮ್ಮ ಉಳಿತಾಯದ ಹಣ ನಾಲ್ಕು ಪಟ್ಟು ಆಗಲು ಎಷ್ಟು ವರ್ಷ ಬೇಕು ಎಂದು ಕೂಡ ಪರಿಶೀಸಬಹುದು. ಎರಡು ಪಟ್ಟು ಆಗುವುದನ್ನು ನೋಡಲು ಸಂಖೆಯ 72 ರಿಂದ ನಾವು ಬಡ್ಡಿ ದರವನ್ನು ಭಾಗಿಸುವಂತೆ, ಇಲ್ಲಿ ನಾಲ್ಕು ಪಟ್ಟು ಆಗುವುದನ್ನು ನೋಡಲು 72ರ ಎರಡು ಪಾಲು ಅಂದರೆ 144 ರಿಂದ ಭಾಗಿಸಿದರೆ ಆಯಿತು. ಉದಾಹರಣೆಗೆ 12%ರ ಬಡ್ಡಿ ದರದಲ್ಲಿ ನೋಡಬೇಕೆಂದಾದರೆ, 144 ಭಾಗಿಸುವ 12 ಅಂದರೆ 12 ವರ್ಷದಲ್ಲಿ ನಾಲ್ಕು ಪಟ್ಟಾಗುತ್ತದೆ. ಒಂದು ಲಕ್ಷ ರೂಪಾಯಿಯನ್ನು ಠೇವಣಿ ಇಟ್ಟರೆ 12%ರ ಬಡ್ಡಿ ದರದಲ್ಲಿ 12 ವರ್ಷದಲ್ಲಿ ಆ ಠೇವಣಿಯು ನಾಲ್ಕು ಲಕ್ಷ ರೂಪಾಯಿಗಳಾಗಲಿವೆ ಎಂದಾಯಿತು. 6%ರ ಬಡ್ಡಿ ದರದಲ್ಲಿ, 144 ಭಾಗಿಸು 6 ಅಂದರೆ 24 ವರ್ಷಗಳಲ್ಲಿ ನಾಲ್ಕು ಪಟ್ಟಾಗಲಿದೆ. ಹೀಗೆಯೇ ಬೇರೆ ಬೇರೆ ವಾರ್ಷಿಕ ಬಡ್ಡಿ ದರದಲ್ಲಿ ನಮ್ಮ ಹಣ ಎಷ್ಟು ವರ್ಷದಲ್ಲಿ ನಾಲ್ಕು ಪಟ್ಟಾಗಲಿದೆ ಎಂದು ನಾವು ತಿಳಿದುಕೊಳ್ಳಬಹುದಾಗಿದೆ.

70 ನಿಯಮ

ಹಣದುಬ್ಬರ (ಇನ್‌ ಫ್ಲೇಶನ್‌) ಅಂದರೆ ನಾವು ಕಂಡುಕೊಳ್ಳಬೇಕಾದ ವಸ್ತುಗಳ ಬೆಲೆ ಏರುವುದು. ಉದಾಹರಣೆಗೆ ಒಂದು ವಸ್ತುವಿಗೆ ಈ ವರ್ಷ ರೂ.100 ಇದ್ದು ಮುಂದಿನ ವರ್ಷ ಅದೇ ವಸ್ತುವಿಗೆ ರೂ.105 ಕೊಡಬೇಕಾಗಿ ಬಂದರೆ ಆಗ 5%ರ ಹಣದುಬ್ಬರ ಇದೆಯೆಂದು ಹೇಳಬಹುದು. 5%ರ ಹಣದುಬ್ಬರವಿದ್ದು, ನಾವು ಉಳಿತಾಯ ಮಾಡಿದ ಹಣಕ್ಕೂ 5%ರ ಬಡ್ಡಿ ದೊರೆತರೆ, ಒಂದು ವರ್ಷದ ಬಳಿಕ ನೋಡಿದರೆ ನಮ್ಮ ಉಳಿತಾಯಕ್ಕೆ ಏನೂ ಬಡ್ಡಿ ಸಿಗದಂತೆಯೇ ಆಯಿತಲ್ಲವೇ? ನಮ್ಮ ಉಳಿತಾಯದ ಮೊತ್ತಕ್ಕೆ ಹಣದುಬ್ಬರಕ್ಕಿಂತ ಸದಾ ಹೆಚ್ಚಿನ ಬಡ್ಡಿ ದೊರೆಯುವಂತಿರಬೇಕು.

ನಮ್ಮ ಉಳಿತಾಯಕ್ಕೆ ಏನೂ ಬಡ್ಡಿ ಬರದಂತಿದ್ದರೆ, ಹಣದುಬ್ಬರವೆಂಬ ಪೆಡಂಭೂತದ ಕಾರಣದಿಂದ, ನಮ್ಮ ಬಳಿ ಈಗ ಇರುವ ದುಡ್ಡಿನ ಬೆಲೆ ಕಡಿಮೆ ಆದಂತಾಗುವುದು. 5%ರ ಹಣದುಬ್ಬರವಿದ್ದು, ನಮ್ಮ ಉಳಿತಾಯಕ್ಕೆ ಏನೂ ಬಡ್ಡಿ ಬರದೆ ಇದ್ದರೆ, ಈ ಉಳಿತಾಯದ ಮೊತ್ತ 70 ಭಾಗಿಸುವ 5 ಅಂದರೆ 14 ವರ್ಷದಲ್ಲಿ ಈಗಿರುವ ಮೊತ್ತದ ಅರ್ಧ ಬೆಲೆ ಇದ್ದಂತಾಗುವುದು. ಅಂದರೆ ಈಗ ನಮ್ಮ ಬಳಿ ಒಂದು ಲಕ್ಷ ರೂಪಾಯಿ ಇದ್ದು, ಅದನ್ನು ಎಲ್ಲೂ ಹೂಡಿಕೆ ಮಾಡದೆ ಇದ್ದರೆ, 5%ರ  ಹಣದುಬ್ಬರದಲ್ಲಿ, 14 ವರ್ಷದಲ್ಲಿ ನಮ್ಮ ಒಂದು ಲಕ್ಷ ರೂಪಾಯಿ ಬೆಲೆ ಬರೀ ಅರ್ಧ ಅಂದರೆ, ಬರೀ ಐವತ್ತು ಸಾವಿರ ರೂಪಾಯಿ ಎಂದಾಯಿತು! ಹಣದುಬ್ಬರ ಹೆಚ್ಚಾದಂತೆ ನಮ್ಮಲ್ಲಿರುವ ದುಡ್ಡಿನ ಬೆಲೆಯೂ ಬೇಗ ಬೇಗನೆ ಕಡಿಮೆಯಾಗುವುದು. ಇದೇ ಕಾರಣಕ್ಕಾಗಿಯೇ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ನಮ್ಮ ಉಳಿತಾಯದ ಮೊತ್ತವನ್ನು ಉತ್ತಮ ಬಡ್ಡಿ ಪಡೆಯಲು ನಾವು ಸೂಕ್ತ ಮಾರ್ಗಗಳಲ್ಲಿ ಹೂಡುವುದು ಅಗತ್ಯ.

ಆಪತ್ಕಾಲದ ಮೊತ್ತ

ಆರ್ಥಿಕ ಹಿಂಜರಿತ. ಈಗ ಕೆಲಸ ಮಾಡುವ ಸಂಸ್ಥೆ ಬಾಗಿಲು ಮುಚ್ಚುವುದು, ಮುಂತಾದ ಕಾರಣಗಳಿಗಾಗಿ ನೌಕರಿ ಕಳೆದುಕೊಳ್ಳುವ ಸಂಭಾವ್ಯತೆ ಇರುವಂತೆ ಸ್ವಂತ ಉದ್ಯೋಗದಲ್ಲಿ ನಷ್ಟದ ಸನ್ನಿವೇಶಗಳೂ ಎದುರಾಗಬಹುದು. ಹಾಗೆಯೇ ವೈದ್ಯಕೀಯ ವೆಚ್ಚ ಅಥವಾ ಇನ್ಯಾವುದಾದರೂ ಅನಿರೀಕ್ಷಿತ ಖರ್ಚುಗಳು ಕೂಡ ಧುತ್ತೆಂದು ಎದುರಾಗಬಹುದು. ಅಂಥ ಕಷ್ಟದ ಪರಿಸ್ಥಿತಿಗಳನ್ನು ಎದುರಿಸಲು ಯಾವಾಗಲೂ 36 ತಿಂಗಳುಗಳ ಆದಾಯದ ಹಣವನ್ನು ಆಪತ್ಕಾಲದ ಮೊತ್ತವಾಗಿ ಪ್ರತ್ಯೇಕವಾಗಿ ತೆಗೆದಿರಿಸುವುದು ಒಳ್ಳೆಯದು.

40% .ಎಂ. ನಿಯಮ

ದೊರಕುವ ಸಂಬಳದಲ್ಲಿ ಪ್ರತೀ ತಿಂಗಳೂ ಹಲವಾರು ಖರ್ಚುಗಳು ಇದ್ದೇ ಇರುತ್ತವೆ. ಮನೆ ಕಟ್ಟಲೆಂದು, ವಾಹನ ಖರೀದಿಗೆಂದು ಸಾಲ ಪಡೆದುಕೊಂಡು ಅದನ್ನು ಸಮಭಾಜಿತ ಮಾಸಿಕ ಕಂತುಗಳ ಮೂಲಕ ಕಟ್ಟಬೇಕಾದ ಅನಿವಾರ್ಯತೆ ಇರುತ್ತದೆ. ಈ ರೀತಿ  ಹೊರೆ ನಮ್ಮ ತಿಂಗಳ ಸಂಬಳದಲ್ಲಿ 40% ಗಿಂತ ಹೆಚ್ಚಿರದಂತೆ ನಾವು ಎಚ್ಚರಿಕೆ ವಹಿಸಬೇಕು. ತಿಂಗಳ ಸಂಬಳ ರೂ. 50,000 ಇದ್ದರೆ, ಸಂಬಳದ 40% ಅಂದರೆ ರೂ. 20,000 ಒಳಗೇ ಇದ್ದರೆ ನಾವು ನಮ್ಮ ಹಣಕಾಸವನ್ನು ಸಮರ್ಥವಾಗಿ ನಿರ್ವಹಿಸಲು ಸಾಧ್ಯವಾಗಲಿದೆ. ಈ 40%ರ ನಿಯಮನ್ನು ಸಾಲ ನೀಡುವ ಹಲವಾರು ಹಣಕಾಸಿನ ಸಂಸ್ಥೆಗಳು ಪಾಲಿಸುತ್ತವೆ.

ಜೀವ ವಿಮೆ

ವ್ಯಕ್ತಿಯ ಅನಿರೀಕ್ಷಿತ ಮರಣದಿಂದ ಅಂಥ ವ್ಯಕ್ತಿಯನ್ನು ಅವಲಂಬಿತವಾಗಿರುವವರು ಮಾನಸಿಕವಾಗಿ ಕುಸಿಯುಂತೆಯೇ ಹಣಕಾಸಿನ ಒತ್ತಡವನ್ನೂ ಅನುಭವಿಸುತ್ತಾರೆ. ಈ ರೀತಿಯ ಹಣಕಾಸಿನ ಅಡಚಣೆಯನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಜೀವವಿಮೆಯನ್ನು ಮಾಡಿಸಿಕೊಳ್ಳುವುದು ಅಪೇಕ್ಷಣೀಯ. ಎಷ್ಟು ವಿಮೆ ಮಾಡಿಸಬೇಕು ಎಂದು ಸಾಮಾನ್ಯವಾಗಿ ನಮ್ಮಲ್ಲಿ ಗೊಂದಲವಿರುತ್ತದೆ. ನಮ್ಮ ವಾರ್ಷಿಕ ಆದಾಯದ ಕನಿಷ್ಠ 10 ಪಟ್ಟರಷ್ಟು ಭರವಸೆಯ ಮೊತ್ತ (ಸಮ್ ಅಶ್ಶೂರ್ಡ್‌) ಇರುವುದು ಒಳ್ಳೆಯದು.

ತಿಂಗಳ ಸಂಬಳ ರೂ. 50,000 ಇದ್ದರೆ ವಾರ್ಷಿಕ ಆದಾಯ ರೂ. 6,00,000 ಆಯಿತು. ಅದರ ಹತ್ತು ಪಟ್ಟು ಅಂದರೆ ರೂ. 60,00,000 ದಷ್ಟು ಸಮ್ ಅಶ್ಶೂರ್ಡ್‌ ಇರುವಂತೆ ನಾವು ಜೀವ ವಿಮೆಯ ಪಾಲಿಸಿಗಳನ್ನು ಹೊಂದಿರಬೇಕು. ಇದಕ್ಕಿಂತ ಹೆಚ್ಚಿಗೇ ಹೊಂದಿರಬಹುದಾದರೂ ಅದಕ್ಕಾಗಿ ನಾವು ಕಟ್ಟಬೇಕಾದ ಮಾಸಿಕ ಅಥವಾ ವಾರ್ಷಿಕ ಕಂತುಗಳು (ಪ್ರೀಮಿಯಂ) ನಮಗೆ ಹೊರೆಯಲಾಗದಂತೆ ನೋಡಿಕೊಳ್ಳಬೇಕು.

ಆರೋಗ್ಯ, ಕುಟುಂಬ, ನೌಕರಿಯ ಬಗ್ಗೆ ನಾವೆಲ್ಲ ಸದಾ ಜಾಗರೂಕರಾಗಿರುತ್ತೇವೆ. ಹಾಗೆ ನಮ್ಮ ಹಣಕಾಸಿನ ವಿಷಯದಲ್ಲೂ ಇಂತಹ ಸಲಹೆಗಳನ್ನು ಗಮನದಲ್ಲಿಟ್ಟುಕೊಂಡು ಅಂತೆಯೇ ಪಾಲಿಸುವುದು ಕೂಡ ಜಾಣತನ.

ಬಿ.ಎನ್‌. ಭರತ್ಬಾಳಿಕೆ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ