ಅಕಾಲದಲ್ಲಿ ಪತಿಯನ್ನು ಕಳೆದುಕೊಂಡು ನಿರಂತರ ದುಃಖಕ್ಕೀಡಾಗಿದ್ದ ಸವಿತಾಳಿಗೆ ಸುರೇಶ್ರ ಸಾಂಗತ್ಯ ಬಹಳ ಪ್ರಿಯವಾಗತೊಡಗಿತು. ಇಲ್ಲದ್ದಕ್ಕಾಗಿ ತುಡಿಯುವುದೇ ಜೀವನವಲ್ಲ.... ಆದರೆ ಸವಿತಾಳ ಪಾಲಿಗೆ ಅದು ಅಷ್ಟು ಸುಲಭವಾಗಿರಲಿಲ್ಲ......
ಸವಿತಾ ಮತ್ತೆ ಮತ್ತೆ ತನ್ನ ಮನೆಯ ಬಾಲ್ಕನಿಯಿಂದ ಕೆಳಗೆ ಇಣುಕುತ್ತಿದ್ದಳು. ಪಾರ್ವತಿ ಇದುವರೆಗೂ ಇನ್ನೂ ಬಂದಿರಲಿಲ್ಲ. ಅನಗತ್ಯವಾಗಿ ಸಾಮಾನು ತರಿಸಿದೀನಲ್ಲ, ಇದ್ದುದರಲ್ಲಿ ಅಡ್ಜಸ್ಟಟ್ ಮಾಡಿಕೊಳ್ಳಬೇಕಿತ್ತು ಎಂದು 10ನೇ ಸಲ ಅಂದುಕೊಂಡಳು. ಸ್ವಲ್ಪ ಕಡಿಮೆ ಆಗುತ್ತಿತ್ತೇನೋ.... ಅದೇನೂ ದೊಡ್ಡ ವಿಷಯವಲ್ಲ, ಅನ್ಯಾಯವಾಗಿ ಆ ಪಾಪದವಳನ್ನು ಹೊರಗಟ್ಟಿದೆನಲ್ಲ ಎಂದು ಮತ್ತೆ ಮತ್ತೆ ಪೇಚಾಡಿಕೊಂಡಳು. ಅಷ್ಟರಲ್ಲಿ ಪಾರ್ವತಿ ಇವರ ಅಪಾರ್ಟ್ಮೆಂಟ್ ಮೇಯ್ನ್ ಗೇಟ್ ಬಳಿ ಬರುತ್ತಿರುವುದು ಕಾಣಿಸಿ, ಸಮಾಧಾನದ ನಿಟ್ಟುಸಿರಿಟ್ಟಳು. ಅವಳು ಬೆಲ್ ಮಾಡುವ ಮೊದಲೇ ಓಡಿ ಹೋಗಿ ಬಾಗಿಲು ತೆರೆದಳು. ಏದುಸಿರು ಬಿಡುತ್ತಾ ಒಳಬಂದ ಪಾರ್ವತಿ ನೇರವಾಗಿ ಎರಡು ಚೀಲದ ಸಾಮಗ್ರಿ ಹೊರಗಿನ ಬಾಲ್ಕನಿಯ ಬಿಸಿಲಿಗಿಟ್ಟು, ಉಸ್ಸಪ್ಪ ಎಂದು ಮಾಸ್ಕ್ ತೆಗಿದಿರಿಸಿ. ಬಾತ್ರೂಮಿಗೆ ಹೋಗಿ ಲಿಕ್ವಿಡ್ ಸೋಪ್ನಿಂದ ಮುಖ, ಕೈ ತೊಳೆದು ಒರೆಸುತ್ತಾ ಹೊರಬಂದು ನೆಲದಲ್ಲಿ ಕುಳಿತಳು.
``ಅಯ್ಯೋ ಸಾಕಾಯ್ತಕ್ಕಾ.... 2-3 ಅಂಗಡಿ ಅಲೆದು ಇಷ್ಟನ್ನೂ ತಗೊಂಡು ಬಂದೆ. ಎಲ್ಲಾ ಕಡೆ ಉದ್ದುದ್ದ ಕ್ಯೂ..... ನಮ್ಮ ಅಪಾರ್ಟ್ಮೆಂಟ್ದೇ ದೊಡ್ಡ ಸೂಪರ್ ಮಾರ್ಕೆಟ್ ಇದೆಯಲ್ಲ...... ಅಲ್ಲಿ ಕ್ಯೂನಲ್ಲಿ 15 ನಿಮಿಷ ನಿಂತು ಸಾಕಾಯ್ತು.... ನಂತರ ನಾನು ಪಕ್ಕದ ರೋಡು, ಅದರ ನಂತರದ ರೋಡಿಗೆ ಹೋಗಿ ಇಷ್ಟು ತರಬೇಕಾಯ್ತು....'' ಎಂದು ಎದ್ದು ಫ್ಯಾನ್ ಸ್ವಿಚ್ ಒತ್ತಿ ಅದರಡಿ ಕುಳಿತಳು.
``ಓಹ್.... ಇಷ್ಟು ಕಷ್ಟ ಯಾಕೆ ಪಡಬೇಕಾಯ್ತು? ಸಿಗದಿದ್ದರೆ ಬೇಡ.... ಸಿಗಲಿಲ್ಲ ಅಂತ ವಾಪಸ್ ಮನೆಗೆ ಬರಬಾರದೇ?''
``ಹಾಗಲ್ಲಕ್ಕಾ.... ಈ ಹಾಳು ಲಾಕ್ಡೌನ್ ಇನ್ನೂ ಎಷ್ಟು ದಿನ ಹೀಗೇ ಇರುತ್ತೋ ಏನೋ.... ದಿನೇದಿನೇ ನಮ್ಮ ಪರಿಸ್ಥಿತಿ ಕಂಗೆಡುವಂತಾಗಿದೆ. ಹೊರಗೆ ಓಡಾಡಿದಂತೆಲ್ಲ ಅಪಾಯಕ್ಕೆ ಬಲಿ ಆದಂತೆಯೇ.... ನಿಮಗೆ ಆಮೇಲೆ ಏನೂ ತೊಂದರೆ ಆಗಬಾರದು ಅಂತ ನನ್ನ ಉದ್ದೇಶ.''
``ಯಾಕೆ ನನ್ನ ಇಷ್ಟೊಂದು ಹಚ್ಚಿಕೊಂಡು ಸಾಯ್ತೀಯಾ? ನೀನು ಸುಧಾರಿಸ್ಕೋ, ನಾನು ಒಂದಿಷ್ಟು ಟೀ ಮಾಡಿ ತರ್ತೀನಿ..... ಅಷ್ಟರಲ್ಲಿ ಬಿಸಿಲಿಗಿಟ್ಟ ಆ ಸಾಮಾನು ಸ್ಯಾನಿಟೈಸ್ ಮಾಡಿ ಒಳಗೆ ತಂದಿಟ್ಟುಕೊಳ್ಳೋಣ,'' ಎನ್ನುತ್ತಾ ಸವಿತಾ ಟೀ ಮಾಡಲು ಹೊರಟಳು.
ಅಂದು ರಾತ್ರಿ ಮಲಗಿದ ಸವಿತಾಳಿಗೆ ನಿದ್ದೆ ಮಾರು ದೂರ ಹೋಗಿತ್ತು. ನಿಜಕ್ಕೂ ಈ ಪಾರ್ವತಿಯಂಥ ನಿಷ್ಠಾವಂಥ ಆಳು ತನಗೆ ಜೊತೆಯಾಗಿ ಸಿಕ್ಕಿರದಿದ್ದರೆ ತನ್ನ ಗತಿ ಏನಾಗುತ್ತಿತ್ತೋ? ಪತಿಯ ಮರಣದ ನಂತರ ಅನಿವಾರ್ಯವಾಗಿ ಕೆಲಸಕ್ಕೆ ಸೇರಬೇಕಾದ ಸವಿತಾ, ಬೆಂಗಳೂರಿನ ಯಾವುದೋ ಖಾಸಗಿ ಕಾಲೇಜಿನಲ್ಲಿ ಕನ್ನಡ ಲೆಕ್ಚರರ್ ಆಗಿದ್ದಳು. ಅಲ್ಲಿ ಈ ಪಾರ್ವತಿ ಆಯಾ ಆಗಿ ಕೆಲಸ ಮಾಡುತ್ತಿದ್ದಳು. ಗಂಡನ ಸತತ ಶೋಷಣೆಯಿಂದ ಕಂಗೆಟ್ಟಿದ್ದ ಪಾರ್ವತಿ ಅವನ ಕುಡಿತ, ಹೊಡೆತ ಬಡಿತಗಳಿಗೆ ದಿನದಿನ ನಲುಗಿಹೋಗಿದ್ದಳು. ಅತಿ ಸೂಕ್ಷ್ಮಮತಿಯಾದ ಸವಿತಾ ಇವಳ ಬಾಡಿಹೋದ ಮುಖ ಕಂಡಾಗಲೆಲ್ಲ ಅವಳು ಜೀವನದಲ್ಲಿ ಬಹಳ ನೋವು ಉಂಡಿದ್ದಾಳೆ ಎಂಬುದನ್ನು ಗಮನಿಸಿ ಆದಷ್ಟೂ ಸಾಂತ್ವನಪೂರ್ವಕವಾಗಿ ವಾತ್ಸಲ್ಯದಿಂದ ನಡೆದುಕೊಳ್ಳುತ್ತಿದ್ದಳು. ಪಾರ್ವತಿಯ ಸಂಬಳದಿಂದ ಬದುಕು ನಡೆಸುತ್ತಿದ್ದ ಅವಳ ಕುಡುಕ ಗಂಡ, ಅವಳನ್ನು ಹೊಡೆದು ಸಾಯಿಸುವುದೇ ಘನಕಾರ್ಯ ಎಂದು ಭಾವಿಸಿದ್ದ. ಅವರಿಗಿದ್ದ ಒಬ್ಬಳೇ ಮಗಳು ರತ್ನಾಳ ಮದುವೆಯಾಗಿ ಸುಖವಾಗಿದ್ದಳು. ಆ ಸಂದರ್ಭದಲ್ಲಿ ಪಾರ್ವತಿಯ ಕಷ್ಟ ಅರಿತ ಸವಿತಾ ತಾನೇ ಮುಂದೆ ಬಂದು ಪಾರ್ವತಿಗೆ ಬೆಂಬಲವಾಗಿ ನಿಂತದ್ದಲ್ಲದೆ, ಕೌಟುಂಬಿಕ ಹಿಂಸಾಚಾರದ ಪ್ರಕರಣದಲ್ಲಿ ಅವಳ ಗಂಡನನ್ನು ಜೈಲಿಗೆ ಹಾಕಿಸಿದಳು. ಎಲ್ಲವನ್ನೂ ಕಳೆದುಕೊಂಡು ಒಬ್ಬಂಟಿಯಾಗಿದ್ದ ಪಾರ್ವತಿಯನ್ನು ತನ್ನ ಮನೆಗೆ ಕರೆದುಕೊಂಡು ಬಂದು ಇರಿಸಿಕೊಳ್ಳುವ ಸಂದರ್ಭದಲ್ಲಿ, ಮುಂದೆ ಅವಳು ತನಗೆಂಥ ಆಧಾರ ಆಗಬಲ್ಲಳು ಎಂದು ಸವಿತಾಳಿಗೆ ಅಂದಾಜಿರಲಿಲ್ಲ. ಈ ರೀತಿ ಮಾನವೀಯತೆಯ ಸಂಬಂಧ ಅವರಿಬ್ಬರನ್ನೂ ಬಂಧಿಸಿತ್ತು.