ಇತ್ತೀಚೆಗೆ ಯೂಟ್ಯೂಬ್‌ನಲ್ಲಿ ಎಲ್ಲರ ಗಮನ ಸೆಳೆಯುತ್ತಿರುವ ಮ್ಯೂಸಿಕ್‌ ವಿಡಿಯೋ `ತೂ ಆಯೆ ನಾ….’ ಪುಲ್ವಾಮ ಅಟ್ಯಾಕ್‌ನಲ್ಲಿ ಸಾವಿಗೀಡಾದ ವೀರ ಸೈನಿಕರ ಕುರಿತಾದ ಹಾಡು. ಇದರಲ್ಲಿ ಮಾನ್ವಿತಾ ಹರೀಶ್‌ ಸೈನಿಕರ ಪತ್ನಿಯಾಗಿ ಕಾಣಿಸಿಕೊಂಡಿರುವಂಥ ಪಾತ್ರ….. ಮೊದಲ ಬಾರಿಗೆ ಮ್ಯೂಸಿಕ್‌ ಆಲ್ಬಂನಲ್ಲಿ ಕಾಣಿಸಿಕೊಂಡ ಮಾನ್ವಿತಾ ಹರೀಶ್‌ ಎಲ್ಲರ ಗಮನ ಸೆಳೆದಿದ್ದಾಳೆ. ಮಾನ್ವಿತಾ ಮಂಗಳೂರಿನ ಪ್ರತಿಭೆ. ರೇಡಿಯೋ ಜಾಕಿಯಾಗಿ ಕೆಲಸ ಮಾಡಿರುವ ಅನುಭವ. ಆದರೆ ಚಿಕ್ಕ ಹುಡುಗಿ ಇದ್ದಾಗಲೇ ಯಾರಾದರೂ ಏನಾಗುತ್ತೀಯ ಅಂತ ಕೇಳಿದರೆ ಮಾಲಾಶ್ರೀ, ಮಾಧುರಿ ತರಹ ತಾರೆಯಾಗ್ತೀನಿ ಎಂದು ಹೇಳುತ್ತಿದ್ದಳಂತೆ. ಆಗ ಅವಳ ವಯಸ್ಸು ಮೂರು ವರ್ಷ ಅಷ್ಟೆ.ಬೆಳೆಯುತ್ತಾ ಹೋದಂತೆ ತಾರೆಯಾಗೋ ಕನಸು ದೊಡ್ಡದಾಗುತ್ತಾ ಹೋಯಿತು. ರೇಡಿಯೋ ಜಾಕಿಯಾಗಿದ್ದಾಗ ಸಿನಿಮಾದಲ್ಲಿ ನಟಿಸುವ ಅವಕಾಶ ಬಂದಿತು. ಖ್ಯಾತ ನಿರ್ದೇಶಕ ದುನಿಯಾ ಸೂರಿಯವರ  `ಕೆಂಡ ಸಂಪಿಗೆ’ ಚಿತ್ರಕ್ಕಾಗಿ ನಾಯಕಿ ಪಾತ್ರ. ಮಾನ್ವಿತಾ ಮೊದಲ ಚಿತ್ರದಲ್ಲೇ ಪ್ರತಿಭಾವಂತೆ ಎಂದು ಪ್ರೂವ್ ಮಾಡಿಬಿಟ್ಟಳು.

“ನನ್ನೊಳಗಿದ್ದ ನಟಿಯನ್ನು ಗುರುತಿಸಿದ್ದ ಸೂರಿ ಸರ್‌ ನನ್ನ ಫೋಟೋ ನೋಡಿ ಆಡಿಶನ್‌ಗೆ ಕರೆದಿದ್ದಾಗ, ನೀನು ನೀನಾಗಿರು ಅಷ್ಟೆ ಅಂತ ಹೇಳಿದ್ದರು. ಶೂಟಿಂಗ್‌ ಸಮಯದಲ್ಲಿ ಸಹ ನಾನು ನಟನೆ ಮಾಡಿದರೆ ಸಾಕು, ಪಾತ್ರ ನೀನಾಗಿ ಬಿಹೇವ್‌ ಮಾಡು. ನಟನೆ ಬೇಡ ಅನ್ನುವರು. ನಟಿ ಎನ್ನುವ ಭ್ರಮೆಯಲ್ಲಿ ಇರಬೇಡ ಎಂದು ತುಂಬಾ ಹೇಳೋರು. ಅವರಿಂದ ತುಂಬಾ ಕಲಿತಿದ್ದೀನಿ.”

`ಕೆಂಡಸಂಪಿಗೆ’ ನನ್ನ ಮೊದಲ ಸಿನಿಮಾ ಎನ್ನುವ ಹೆಮ್ಮೆ ಇದೆ. ಸೂರಿ ಸರ್‌ `ಟಗರು’ ಚಿತ್ರದಲ್ಲೂ ಒಳ್ಳೆ ಪಾತ್ರ ಕೊಟ್ಟರು. ಅವರ ಚಿತ್ರದಲ್ಲಿ ಕೆಲಸ ಮಾಡೋದು ಅಂದರೆ ನಾವು ಒಂದು ಫಿಲ್ಮ್ ಇನ್‌ಸ್ಟಿಟ್ಯೂಟ್‌ಗೆ ಹೋದಂತೆ ಎನ್ನುವ ಮಾನ್ವಿತಾ, ಮೊದಲ ಚಿತ್ರಕ್ಕೆ ಸೈಮಾ ಅವಾರ್ಡ್‌ ಪಡೆದುಕೊಂಡಳು.

ಈಗ ಸ್ಯಾಂಡಲ್‌ವುಡ್‌ನ ಬಹು ಬೇಡಿಕೆಯ ತಾರೆಯಾಗಿ ಮಿಂಚುತ್ತಿರುವ ಮಾನ್ವಿತಾ, ನಾಗತಿಹಳ್ಳಿ ಚಂದ್ರಶೇಖರ್‌ರವರ `ಇಂಗ್ಲೆಂಡ್‌ V/S ಇಂಡಿಯಾ’  ಚಿತ್ರದಲ್ಲಿ ವಶಿಷ್ಟ ಸಿಂಹಗೆ ಜೋಡಿಯಾಗಿ ನಟಿಸಿದ್ದಾಳೆ.

“ಮೇಷ್ಟ್ರು `ಕೆಂಡಸಂಪಿಗೆ’ ಸಿನಿಮಾ ನೋಡಿ ನನ್ನ ಆಯ್ಕೆ ಮಾಡಿದ್ದರು. ಅವರ ಮಗಳು ಕನಸು ಬರೆದಿರೋ ಕಥೆ ಇದು. ಈ ಸಿನಿಮಾದಲ್ಲಿ ನನ್ನ ಪಾತ್ರ ಕೂಡ ತುಂಬಾನೆ ಚೆನ್ನಾಗಿದೆ. ನನ್ನ ಮತ್ತು ಅನಂತ್‌ ಸರ್‌ ಕಾಂಬಿನೇಶನ್‌ನಲ್ಲಿ ಮೂಡಿಬಂದಿರೋ ಕಾಮಿಡಿ ಸೀನ್ಸ್ ತುಂಬಾನೇ ನಗಿಸುತ್ತೆ. ಡಬ್ಬಿಂಗ್‌ ಸಮಯದಲ್ಲಿ ನೋಡಿದಾಗ ಖುಷಿಯಾಯಿತು.

“ಮೇಷ್ಟ್ರು ಈ ಜನರೇಷನ್ನಿಗೆ ತಕ್ಕಂತೆ ಅದ್ಭುತವಾದ ಸಿನಿಮಾ ಮಾಡಿದ್ದಾರೆ. ಲಂಡನ್ನಿನಲ್ಲಿ ಶೂಟಿಂಗ್‌ ಮಾಡಲಾಗಿದೆ. ಅರ್ಜುನ್‌ಜನ್ಯ ಮ್ಯೂಸಿಕ್‌, ಕೆ.ಕೆ.ರವರ ಕ್ಯಾಮೆರಾ ವರ್ಕ್‌, ಎಲ್ಲ ಇಷ್ಟವಾಗುತ್ತವೆ.”

ಈ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿರುವ ಮಾನ್ವಿತಾ ರಿಯಲ್ ಲೈಫ್‌ನಲ್ಲಿ ಹೇಗೆ ಎಂದು ಕೇಳಿದಾಗ, “ನಾನು ತುಂಬಾ ಸಿಂಪಲ್ ಹುಡುಗಿ. ರಸ್ತೆಯಲ್ಲಿ ಮಾರುವ ಇಡ್ಲಿ ತಿನ್ನೋಕ್ಕೂ ರೆಡಿ. ಹಾಗೆಯೇ ಫೈವ್ ಸ್ಟಾರ್‌ ಹೋಟೆಲ್‌ ಬಫೆಗೂ ಸೈ. ಬದುಕು ಸರಳವಾಗಿದ್ದಷ್ಟೂ ಸುಂದರ ಎಂಬುದನ್ನು ನನ್ನ ತಂದೆ ತಾಯಿ ಸೂರಿ ಸರ್‌ ಇವರಿಂದ ಕಲಿತಿದ್ದೀನಿ,” ಎನ್ನುತ್ತಾಳೆ ಮಾನ್ವಿತಾ.

`ಚೌಕ’ ಸಿನಿಮಾ ಎಂದೆಂದಿಗೂ ಮರೆಯಲಾರೆ ಎನ್ನುವುದಕ್ಕೆ ಬಲವಾದ ಕಾರಣವಿದೆ ಎನ್ನುತ್ತಾ, `ಟಗರು’ ಸಿನಿಮಾ ಶೂಟಿಂಗ್‌ ನಡೆದಿದ್ದಾಗ ದ್ವಾರಕೀಶ್‌ ಅಂಕಲ್ ಪ್ರೊಡಕ್ಷನ್‌ನಿಂದ ಫೋನ್‌ ಬಂತು. ನಿರ್ದೇಶಕ ತರುಣ್‌, ಕಾಶೀನಾಥ್‌ ಅವರ ಮಗಳ ಪಾತ್ರವಿದೆ ಒಂದು ಹಾಡಿರುತ್ತೆ ಎಂದು ಹಾಡನ್ನು ಕೇಳಿಸಿದರು.

`ಅಪ್ಪಾ ಐ ಲವ್ ಯು ಪಾ….’ ಹಾಡನ್ನು ಕೇಳಿದ ಕೂಡಲೇ ತುಂಬಾನೇ ಎಮೋಷನಲ್ ಆಗಿಬಿಟ್ಟೆ. ಆಗಷ್ಟೆ ನಾನು ನನ್ನ ತಂದೆಯನ್ನು ಕಳೆದುಕೊಂಡಿದ್ದೆ. ಅವರ ನೆನಪಿಗಾಗಿ ಈ ಪಾತ್ರ ಮಾಡಿದೆ. ಹಾಗೆ ಜನರ ನೆನಪಿನಲ್ಲಿ ಉಳಿಯಿತು,” ಎಂದು ಹೇಳುವ ಮಾನ್ವಿತಾ ಸಿನಿಮಾ ರಂಗದಲ್ಲಿ ಇನ್ನಷ್ಟು ಕಲಿಯಬೇಕು ಏನಾದರೂ ಸಾಧಿಸಬೇಕು ಎಂಬ ಛಲವಿರುವಂಥ ಹುಡುಗಿ.

– ಸರಸ್ವತಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ