ಕಥೆ - ಅರವಿಂದ್ ಜೋಶಿ
ಗೆಳೆಯನ ಬಳಿ ಎಮರ್ಜೆನ್ಸಿಗೆ ಇರಲಿ ಎಂದು ಕೊಂಡಿದ್ದ ರಿವಾಲ್ವರ್, ತಾನು ಇರಿಸಿದ್ದ ಜಾಗದಿಂದ ಕಣ್ಮರೆಯಾದಾಗ, ರಂಗಣ್ಣ ಕಂಗಾಲಾದ. ಮುಂದೆ ನಡೆದ್ದೇನು......?
ಆಜಾನುಬಾಹು, ಗಂಭೀರ ಸ್ವಭಾವದ ಜಮೀನ್ದಾರ್ ರಂಗಣ್ಣ, ಅಂದು ತನ್ನ ಸ್ವಗ್ರಾಮದಿಂದ ಪಟ್ಟಣದಲ್ಲಿರುವ ಕಛೇರಿಗೆ ಕೆಲಸದ ನಿಮಿತ್ತ, ಬಲಗೈ ಬಂಟ ಧೀರುವಿನೊಂದಿಗೆ ಹೊರಟ, ಮನೆಯ ವಿಶಾಲವಾದ ಜಗುಲಿ ಮೇಲೆ ಕುಳಿತು, ಶೂ ಹಾಕಿಕೊಳ್ಳುತ್ತಾ, ``ಏಯ್ ಧೀರೂ.... ಮಾಡಿ ಮ್ಯಾಲಿನ ನನ್ನ ರೂಮಿನ ಕಪಾಟನ್ಯಾಗ ಒಂದಿಷ್ಟು ಕಾಗದಾ ಪತ್ರ ಹಾಕಿಟ್ಟಿರೋ ಕರೀ ಬ್ಯಾಗ್ ಐತಿ..... ಬಿರ್ರನೆ ಹೋಗಿ ಅದ ತಕ್ಕೊಂಡು ಬಾ....'' ಎಂದು ಹೇಳಿದ.
ಅದನ್ನು ಕೇಳಿದ್ದೇ ತಡ, ಅಲ್ಲಿಯೇ ಕುಳಿತಿದ್ದ ಧೀರ, ``ಆಯ್ತು ಧಣಿ.....'' ಎಂದು ಓಡುತ್ತಾ ಹೋಗಿ ಆ ಬ್ಯಾಗ್ ಹೊತ್ತುಕೊಂಡು ಬಂದ.
``ಸರಿ..... ನಾ ಹೋಗಿ ಬರ್ತೇನೆ,'' ಎಂದು ಬಾಗಿಲಲ್ಲಿ ಬಂದು ನಿಂತಿದ್ದ ತನ್ನ ಮಡದಿಗೆ ಹೇಳಿ, ಆಕೆಯ ಯಾವ ಪ್ರತಿಕ್ರಿಯೆಗೂ ಕಾಯದೇ, ಬೈಕ್ ಏರಿ, ಹಿಂದಿನ ಸೀಟಿನಲ್ಲಿ ಧೀರೂನನ್ನು ಕೂರಿಸಿಕೊಂಡು ಪಟ್ಟಣದತ್ತ ಹೊರಟುಹೋದ.
ಸಾಯಂಕಾಲ ಐದರ ಸುಮಾರಿಗೆ ಶಿಷ್ಯನೊಂದಿಗೆ ಮನೆಗೆ ವಾಪಸ್ ಬಂದ ರಂಗಣ್ಣನ ಮೊಗದಲ್ಲಿ ಸಂತಸದ ಕಳೆ ಇತ್ತು. ಅಲ್ಲಿಗೆ ಆತ ಹೋಗಿದ್ದ ಕೆಲಸ ಆಗಿದೆ ಎಂದೇ ಊಹಿಸಬಹುದಾಗಿತ್ತು. ಕೆಲವು ನಿಮಿಷಗಳ ನಂತರ ಫ್ರೆಶಪ್ ಆಗಿ ಬಂದ, ರಿಲ್ಯಾಕ್ಸ್ ಮಾಡಿಕೊಳ್ಳಲು ಜಗುಲಿ ಮೇಲಿದ್ದ ಆರಾಮ ಕುರ್ಚಿ ಮೇಲೆ ಕೂತು ಹಾಗೇ ಕಣ್ಮುಚ್ಚಿದ.
ಒಂದು ಅರ್ಧ ಗಂಟೆ ಕೂಡ ಕಳೆದಿರಲಿಲ್ಲ, ಆತನಿಗೆ ಏನೋ ನೆನಪಾದಂತಾಗಿ ಮತ್ತೆ ಮಹಡಿ ಮೇಲಿದ್ದ ತನ್ನ ರೂಮಿಗೆ ಹೋಗಿ, ಸುಮಾರು ಒಂದು ಗಂಟೆಯ ನಂತರ ನಿಧಾನವಾಗಿ ಕೆಳಗಿಳಿದು ಬಂದವನ ಮೊಗದಲ್ಲಿ ಆ ತನಕ ಇದ್ದ ಸಂತಸದ ಕಳೆ ಮಾಯವಾಗಿ ಚಿಂತೆಯ ಕಾರ್ಮೋಡ ಕವಿದಂತೆ ಕಾಣುತ್ತಿತ್ತು. ಹುಬ್ಬು ಗಂಟಿಕ್ಕಿ ಆಗಾಗ ತಲೆ ಕೆರೆಯುತ್ತಾ, ಗಾಢ ಯೋಚನೆಯೊಳಗೆ ಮುಳುಗಿದ.
ಹೌದು..... ಈ ಎರಡು ತಿಂಗಳುಗಳ ಹಿಂದೆ, ಇದೇ ರಂಗಣ್ಣನ ಆತ್ಮೀಯ ಗೆಳೆಯ ಪರಶು ಒಂದು ದಿನ, ``ಅಲ್ವೋ ರಂಗಾ.... ಇಷ್ಟೆಲ್ಲಾ ವ್ಯವಹಾರ ಮಾಡ್ತಿದ್ದೀಯಲ್ಲ ಒಂದು ರಿವಾಲ್ವರ್ ಇಟ್ಕೊಂಡಿಲ್ಲಾ ಅಂದ್ರೆ ನಾಚಿಗ್ಗೇಡಿನ ವಿಚಾರ,'' ಎಂದು ಇವನ ಮನಕ್ಕೆ ನಾಟುವಂತೆ ಚುಡಾಯಿಸಿದ್ದ.
ಅದಕ್ಕೆ ರಂಗಣ್ಣ, ``ಇಲ್ವೋ.... ಅದರ ಲೈಸೆನ್ಸ್ ಗಾಗಿ ಅರ್ಜಿ ಹಾಕಿ ಆಗಲೇ ಐದಾರು ತಿಂಗಳು ಆಗ್ತಾ ಬಂತು, ಇನ್ಯಾವಾಗ್ ಬರ್ತದೋ ಗೊತ್ತಿಲ್ಲ...'' ಎಂದಿದ್ದ.
ಅದಕ್ಕೆ ಪರಶು, ``ಸರಿಹೋಯ್ತು ಕಣಯ್ಯಾ.... ನೀನು ಅದನ್ನು ನೆಚ್ಚಿಕೊಂಡು ಕೂತ್ರೆ ಮುಗ್ದಾ ಹೋಯ್ತು,'' ಎಂದ.
``ಮತ್ತಿನ್ನೇನು ಮಾಡ್ಲಿ ಹೇಳು....?'' ಎಂದು ರಂಗಣ್ಣ ಪ್ರಶ್ನಿಸಿದ.
``ನೋಡು ರಂಗಾ..... ನನ್ನ ಹತ್ರ ಒಂದಲ್ಲಾ ಅಂತ ಎರಡು ಇಂಪೋರ್ಟೆಡ್ ರಿವಾಲ್ವರ್ ಇವೆ. ಸದ್ಯಕ್ಕೆ ನನಗೆ ಒಂದು ಸಾಕು, ನಿನಗೆ ಬೇಕಾದ್ರೆ ಹೇಳು ಒಂದು ಕೊಡ್ತೀನಿ,'' ಎಂದು ಹೇಳುತ್ತಿದ್ದ ಪರುಶುನನ್ನು ಅರ್ಧಕ್ಕೆ ತಡೆದ ರಂಗಣ್ಣ, ``ಅಲ್ವೋ..... ಅದಕ್ಕೆ ಲೈಸೆನ್ಸ್.....'' ಎಂದು ರಾಗ ಎಳೆದ.





