ಮಳೆಗಾಲದ ತೇವಾಂಶದಿಂದಾಗಿ ಫಂಗಸ್‌ ಮತ್ತು ಬ್ಯಾಕ್ಟೀರಿಯಾಗಳು ಉತ್ಪತ್ತಿಯಾಗುತ್ತವೆ, ರೋಗಗಳೂ ಹರಡುತ್ತವೆ. ಗೋಡೆಗಳು ಅಂದಗೆಡುವುದಲ್ಲದೆ, ಅವು ವಿರೂಪವಾಗಿ ಕಾಣುತ್ತವೆ. ಪ್ಲ್ಯಾಸ್ಟರ್‌ ಮತ್ತು ಪೇಂಟ್‌ ಕಿತ್ತು ಹೋಗುತ್ತದೆ. ತೇವಾಂಶದ ಸಮಸ್ಯೆ ಮನೆಯ ಯಾವುದೇ ಭಾಗದಲ್ಲಿ ಉಂಟಾಗಬಹುದು. ತೇವಾಂಶ ಉಂಟಾಗಲು ಹಲವು ಕಾರಣಗಳಿವೆ. ಮನೆ ನಿರ್ಮಾಣದ ಸಂದರ್ಭದಲ್ಲಿ ಕಡಿಮೆ ದರ್ಜೆಯ ವಸ್ತುಗಳನ್ನು ಉಪಯೋಗಿಸುವುದು, ದೋಷಯುಕ್ತ ಡ್ಯಾಂಪ್‌ ಪ್ರೂಫ್‌ ಕೋರ್ಸ್‌, ಲೀಕ್‌ ಆಗಿರುವ ಪೈಪ್‌ಗಳು, ಮಳೆ ನೀರು, ಮೇಲ್ಫಾವಣಿ ಮೇಲೆ ನೀರು ಹರಿಯುವ ವ್ಯವಸ್ಥೆ ಮಾಡದೇ ಇರುವುದು ತೇವಾಂಶಕ್ಕೆ ಕಾರಣವಾಗಿವೆ.

ಸರಿಯಾದ ಕಿಟಕಿ ವ್ಯವಸ್ಥೆ ಇಲ್ಲದೇ ಇರುವುದು ಕೂಡ ತೇವಾಂಶಕ್ಕೆ ಕಾರಣವಾಗಬಹುದು. ಮನೆಯ ದೈನಂದಿನ ಕೆಲಸಗಳಾದ ಬಟ್ಟೆ ಒಗೆಯುವುದು, ಅಡುಗೆ ಕೋಣೆಗೆ ಕಿಟಕಿಗಳಿಲ್ಲದಿರುವುದು ಕೂಡ ಮಳೆಗಾಲದಲ್ಲಿ ತೇವಾಂಶಕ್ಕೆ ಕಾರಣವಾಗುತ್ತದೆ.

ತೇವಾಂಶ ರಹಿತ ಮನೆಗಾಗಿ

ಮನೆಯ ಯಾವುದೇ ಭಾಗದಲ್ಲಿ ನೀರು ಜಮೆಗೊಳ್ಳದಂತೆ  ನೋಡಿಕೊಳ್ಳಿ. ನೀರು ಸರಿಯಾಗಿ ಹರಿಯುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಕಿಟಕಿ ಹಾಗೂ ಬಾಗಿಲುಗಳ ಫ್ರೇಮ್ ಗಳು ಸೀಲ್ ಆಗಿವೆಯೋ ಇಲ್ಲವೋ ಎನ್ನುವುದನ್ನು ನೋಡಿ.

ಒಂದು ವೇಳೆ ಮನೆಯ ಸೂರು ಸೋರುತ್ತಿದ್ದರೆ, ತಕ್ಷಣವೇ ಅದನ್ನು ಸರಿಪಡಿಸಿ.

ಮನೆಯ ಕಿಟಕಿ ವ್ಯವಸ್ಥೆ ಸಮರ್ಪಕವಾಗಿರುವಂತೆ ನೋಡಿಕೊಳ್ಳಿ. ಬಾಥ್‌ ರೂಮಿನ ಶವರ್‌ ಅಥವಾ ಅಡುಗೆಮನೆಯಿಂದ ಹಬೆ ಸರಿಯಾಗಿ ಹೊರಗೆ ಹೋಗದಿದ್ದರೆ ಕೋಣೆಯ ಗೋಡೆಗಳು ಅದನ್ನು ಹೀರಿಕೊಳ್ಳುತ್ತವೆ. ಹೀಗಾಗಿ ಅಲ್ಲಿ ತೇವಾಂಶ ಜಮೆಗೊಳ್ಳುತ್ತದೆ. ಅದರಿಂದ ರಕ್ಷಿಸಿಕೊಳ್ಳಲು ವೆಂಟಿಲೇಶನ್‌ ವ್ಯವಸ್ಥೆ ಸರಿಪಡಿಸಿ. ಎಗ್ಸಾಸ್ಟ್ ಫ್ಯಾನ್‌ನ್ನು ಬಳಸಿ.

ಡ್ಯಾಂಪ್‌ ಪ್ರೂಫ್‌ ಕೂಡ ಒಳ್ಳೆಯ ಪರ್ಯಾಯ. ಅದು ಬಾಥ್‌ ರೂಮ್ ಗ್ಯಾರೇಜ್‌ ಕೋಣೆಗಳು ಹಾಗೂ ಬಟ್ಟೆ ಒಣಹಾಕುವ ಕಡೆ ಒಳ್ಳೆಯ ಪರಿಣಾಮ ಮೂಡಿಸುತ್ತದೆ. ಅವು ಗಾತ್ರದಲ್ಲಿ ಚಿಕ್ಕದಾಗಿದ್ದು ಅವನ್ನು ಎಲ್ಲಿ ಬೇಕೆಂದರಲ್ಲಿ ಸುಲಭವಾಗಿ ಇಡಬಹುದಾಗಿದೆ. ಮನೆ ಬಳಕೆಯ ಡೀಹ್ಯೂಮಿಡ್ ಫೈರ್‌ ಗಳಲ್ಲಿ ಬ್ಯಾಕ್ಟೀರಿಯಾ ಮತ್ತು ರೋಗಾಣುಗಳನ್ನು ಸಾಯಿಸುವ ಒಂದು ಹೆಚ್ಚುವರಿ ಯೂಪಿ ಲ್ಯಾಂಪ್‌ ಕೂಡ ಇರುತ್ತದೆ. ಕೆಲವು ಉಪಕರಣಗಳಲ್ಲಿ ದುರ್ಗಂಧ ಹೀರಿಕೊಳ್ಳುವ ಕಾರ್ಬನ್‌ ಫಿಲ್ಟರ್‌ ಕೂಡ ಇರುತ್ತದೆ.

ಸೀಪೇಜ್‌ನಿಂದ ರಕ್ಷಿಸಿಕೊಳ್ಳಲು ಹೊರಗೋಡೆಗಳ ಮೇಲೆ ವಾಟರ್‌ ಪ್ರೂಫ್‌ ಕೋಟ್ಸ್ ಹೊಡೆಸುವುದು ಒಳ್ಳೆಯದು. ಇದರಿಂದ ಮಳೆ ನೀರು ಹಾಗೂ ತೇವಾಂಶದ ಪರಿಣಾಮ ಗೋಡೆಗಳ ಮೇಲೆ ಗೋಚರಿಸದು. ಅದೇ ರೀತಿ ಛಾವಣಿಗೂ ವಾಟರ್‌ ಪ್ರೂಫ್‌ಕೋಟ್‌ ಹೊಡೆಸುವುದು ಸೂಕ್ತ. ಏಕೆಂದರೆ ನೀರಿನ ಸೀಪೇಜ್‌ನಿಂದ ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತದೆ.

ಎಷ್ಟೋ ಸಲ ಗೋಡೆಯ ತಳಭಾಗದಲ್ಲಿ ತೇವಾಂಶದ ಕಲೆಗಳು ಗೋಚರಿಸುತ್ತವೆ. ಅದಕ್ಕೆ ಕಾರಣ ಗ್ರೌಂಡ್‌ ವಾಟರ್‌ ಆಗಿರುತ್ತದೆ. ಅದು ಮೇಲೆ ಮೇಲೆ ಬಂದಾಗ ಹೀಗಾಗುತ್ತದೆ. ಅದರಿಂದ ರಕ್ಷಿಸಿಕೊಳ್ಳಲು ಡ್ಯಾಂಪ್‌ ಪ್ರೂಫ್‌ ಕೋರ್ಸ್‌ ಸೂಕ್ತವಾಗುತ್ತದೆ. ಅದರಲ್ಲಿ ಎಂತಹ ಮೆಟೀರಿಯಲ್ ಇರುತ್ತದೆ ಎಂದರೆ, ಗ್ರೌಂಡ್‌ ವಾಟರ್‌ ಗೋಡೆಯ ಮುಖಾಂತರ ಮೇಲೆ ಹೋಗುವ ಹಾಗೂ ಮನೆಗೆ ಹಾನಿ ಉಂಟಾಗುವುದನ್ನು ತಪ್ಪಿಸುತ್ತದೆ.

ಅಡುಗೆಮನೆಯ ವ್ಯವಸ್ಥೆ ಬದಲಿಸಿ

ಅಕ್ಕಿ, ಬೇಳೆ ಮುಂತಾದ ದೈನಂದಿನ ವಸ್ತುಗಳನ್ನು ಪ್ಲಾಸ್ಟಿಕ್‌ ಅಥವಾ ಗಾಜಿನ ಬಾಟಲ್‌ಗಳಲ್ಲಿ ಇರಿಸಿ. ಅವು ಏರ್‌ಟೈಟ್‌ ಆಗಿರುವುದು ಅತ್ಯವಶ್ಯ.

ನೀವು ಪ್ಲಾಸ್ಟಿಕ್‌ ಕಂಟೇನರ್ಸ್‌ ಉಪಯೋಗಿಸುತ್ತಿದ್ದಲ್ಲಿ ಅವುಗಳ ಗುಣಮಟ್ಟ ಚೆನ್ನಾಗಿರಬೇಕು.

ಕಾಫಿ, ಚಹಾಪುಡಿ, ಸಕ್ಕರೆ ಮತ್ತು ಮಸಾಲೆ ಪದಾರ್ಥಗಳನ್ನು ತೇವಾಂಶದಿಂದ ರಕ್ಷಿಸಿಕೊಳ್ಳಲು ಚಿಕ್ಕ ಗಾಜಿನ ಬಾಟಲ್‌ಗಳಲ್ಲಿ ಇರಿಸುವುದು ಒಳ್ಳೆಯದು. ಅವನ್ನು ಆಗಾಗ ಸ್ವಲ್ಪ ಹೊತ್ತು ಬಿಸಿಲಿಗೆ ಇಡಬೇಕು.

ಉಪ್ಪಿನಕಾಯಿಯನ್ನು ಗಾಜಿನ ದೊಡ್ಡ ಬೌಲ್ ‌ಅಥವಾ ಮಣ್ಣಿನ ಪಾತ್ರೆಯಲ್ಲಿ ಹಾಕಿಡಿ.

ಸ್ಟೀಲ್‌ ಪಾತ್ರೆಗಳನ್ನು ಬಳಸುವುದಾದರೆ ಅವುಗಳ ಸ್ವಚ್ಛತೆಯ ಬಗ್ಗೆ ಗಮನಕೊಡಿ. ಹಿಟ್ಟು, ರವೆ ಮುಂತಾದವುಗಳನ್ನು ಇಡಲು ಅವನ್ನು ಬಳಸಬಹುದು.

– ಜಿ. ಪಂಕಜಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ