ಅಭಿಮಾನಿಗಳ ಜಾಗೃತಗೊಳಿಸುತ್ತಿರುವ ಪರಿಣೀತಿ
ಬಾಲಿವುಡ್ನ ಖ್ಯಾತ ನಟಿ ಪರಿಣೀತಿ ಚೋಪ್ರಾ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ತನ್ನ ಅಭಿಮಾನಿಗಳನ್ನು ಕೊರೋನಾ ವೈರಸ್ ಕುರಿತು ಹೆಚ್ಚು ಹೆಚ್ಚಾಗಿ ಜಾಗೃತಗೊಳಿಸುತ್ತಿದ್ದಾಳೆ. ಬೇರೆ ಸೆಲೆಬ್ರಿಟಿಗಳು ತಮ್ಮ ಚಿತ್ರಗಳ ಬಿಡುಗಡೆ ದಿನಾಂಕದ ಕುರಿತು ತಲೆ ಕೆಡಿಸಿಕೊಂಡಿದ್ದರೆ, ಈ ಪರಿಣೀತಿ ಮಾತ್ರ ಜಾಗೃತಿ ಕ್ರಿಯೇಟ್ ಮಾಡುವಲ್ಲಿ ಬಿಝಿಯೋ ಬಿಝಿ! ಈಕೆಯ ಹೊಸ `ಸಂದೀಪ್ಔರ್ ಪಿಂಕಿ ಫರಾರ್’ (ಪರಾರಿ) ಚಿತ್ರ ಸಹ ತಡವಾಗಿ ರಿಲೀಸ್ ಆಗಲಿದೆ. ಈ ಚಿತ್ರದ ಟ್ರೇಲರ್ ಅಭಿಮಾನಿಗಳಿಗೆ ಬಹಳ ಇಷ್ಟವಾಗಿದೆ. ಪಾಪ, ಎಲ್ಲರಂತೆ ಇವಳೂ ಚಿತ್ರದ ಬಿಡುಗಡೆಯನ್ನೇ ಕಾಯುತ್ತಿದ್ದಾಳೆ. ಈ ಮಧ್ಯೆ ಇವಳು `ಜುವಾಹಾ ಸ್ಯಾರೀಸ್’ನ ರಾಯಭಾರಿ ಆಗಿದ್ದಾಳೆ.
ಅಮಿತ್ನನ್ನು ಬದಲಿಸಿದ ಪಾತ್ರ
ಅಮಿತ್ ಸಾಧ್ ಮೊದಲಿನಿಂದ ನೈಜ ಜೀವನದ ಆಧಾರಿತ ಚಿತ್ರಗಳಲ್ಲಷ್ಟೇ ನಟಿಸುತ್ತಾ ಬಂದಿದ್ದಾನೆ. ವರ್ತಮಾನದಲ್ಲೂ ಅಂಥದ್ದೇ ಕಂಟೆಂಟ್ ಇರುವ ಚಿತ್ರವನ್ನು ಪ್ರೇಕ್ಷಕರ ಮುಂದಿಡಲಿದ್ದಾನೆ. ಈತನ ಮುಂದಿನ ಒರಿಜಿನ್ ವೆಬ್ ಫಿಲ್ಮ್ `ಆಪರೇಶನ್ಪರಿಂದೆ’ ಇಂಥದೇ ಕಥೆ ಹೊಂದಿದೆ. ಇದರಲ್ಲಿ ಅಮಿತ್ ಸ್ಪೆಷಲ್ ಟಾಸ್ಕ್ ಆಫೀಸರ್ ಆಗಿರುತ್ತಾನೆ. ಜೇಲಿನಿಂದ ಪರಾರಿ ಆಗುವ ಖೈದಿಗಳನ್ನು ಹಿಡಿಯಲು ಅವರನ್ನು ಹಿಂಬಾಲಿಸುವ ಅಧಿಕಾರಿ ಪಾತ್ರದಲ್ಲಿ ಮಿಂಚಿದ್ದಾನೆ ಅಮಿತ್. ಈ ಚಿತ್ರ 24 ಗಂಟೆಗಳಲ್ಲಿ ನಡೆಯುವ ಘಟನೆಗಳ ಕಥಾನಕ ಹೊಂದಿದೆ. ಅಮಿತ್ನನ್ನು ಈ ಪಾತ್ರದ ಪರಕಾಯ ಪ್ರವೇಶ ಮಾಡಿರುವ ಬಗ್ಗೆ ಕೇಳಿದಾಗ, ಅತಿ ಉತ್ಸಾಹದಿಂದ ಆತ, “ಈ ಪಾತ್ರ ನಿಭಾಯಿಸಿದ ಮೇಲೆ ನನ್ನ ವ್ಯಕ್ತಿತ್ವದಲ್ಲಿ ಹೆಚ್ಚಿನ ಬದಲಾವಣೆ ಬಂದಿದೆ. ಇಂಥ ಕ್ಲಿಷ್ಟಕರ ಕೆರಿಯರ್ನಲ್ಲಿ ದಿನದಿನ ಹೋರಾಡುವ ಇಂಥ ಅಧಿಕಾರಿಗಳಿಗಾಗಿ ನನ್ನ ಮನಸ್ಸು ಸದಾ ಗೌರವದಿಂದ ಬಾಗುತ್ತದೆ, ಅವರ ಕುರಿತು 100 ಪಟ್ಟು ಆದರಣೆ ಹೆಚ್ಚಿದೆ. ಇದು ನನ್ನನ್ನು ಮತ್ತಷ್ಟು ಪರಿಪಕ್ವ ನಟನನ್ನಾಗಿ ಮಾಡಿದೆ!” ಎನ್ನುತ್ತಾನೆ.
ದೀಪಿಕಾ ಹೇಳಿದ್ದು ಯಾರ ಕುರಿತು?
ಇತ್ತೀಚೆಗೆ ಒಂದು ಟಿವಿ ವಾಹಿನಿಗೆ ಸಂದರ್ಶನ ಕೊಡುವಾಗ ದೀಪಿಕಾ ಪಡುಕೋಣೆ ತನ್ನ ಪೂರ್ವಾಶ್ರಮದ ಬಾಯ್ಫ್ರೆಂಡ್ಗಳ ಕುರಿತು ಖುಲ್ಲಂಖುಲ್ಲ ಹಂಚಿಕೊಂಡಳು. ಒಂದು ಸಲ ತನ್ನ ಮಾಜಿ ಬಾಯ್ಫ್ರೆಂಡ್ನ್ನು ಆಕೆ ರೆಡ್ಹ್ಯಾಂಡ್ ಆಗಿ ಹಿಡಿದು ಹಾಕಿದ್ದಳಂತೆ. ಅದಾದ ಮೇಲೆ ತಪ್ಪು ಒಪ್ಪಿಕೊಳ್ಳುತ್ತಾ, ಅವನು ಅವಳ ಮುಂದೆ ಕಿವಿ ಹಿಡಿದುಕೊಂಡು ಬಸ್ಕಿ ಹೊಡೆದನಂತೆ. ಆ ಸಮಯದಲ್ಲೇನೋ ಪಾಪ ಎನಿಸಿ ಅವಳು ಅವನನ್ನು ಕ್ಷಮಿಸಿದಳಂತೆ…. ಆದರೆ ಆ ಸಂಬಂಧ ಉಳಿಸಿಕೊಳ್ಳಬೇಕೇ ಎಂದು ಯೋಚಿಸಿ, ನಿರಾಕರಿಸಿದಳಂತೆ. ಇದೀಗ ಸುದ್ದಿ ಸಂಗ್ರಾಹಕರು ಇವಳ ಮಾಜಿ ಬಾಯ್ಫ್ರೆಂಡ್ ಯಾರಿರಬಹುದು….. ರಣಬೀರ್ ಕಪೂರ್ ಅಲ್ಲದೆ ಬೇರಾರಿರಲು ಸಾಧ್ಯ? ಎಂದು ಮಂಡೆ ಬಿಸಿ ಮಾಡಿಕೊಂಡಿದ್ದಾರಂತೆ. ದೀಪಿಕಾ ತಾನಾಗಿ ಇದರ ಕುರಿತು ಬಾಯಿಬಿಡದ ಹೊರತು ಈ ಸಸ್ಪೆನ್ಸ್ ಮುರಿಯಲಾಗದು. ನೋಡೋಣ….. ಮುಂದೆ ಗೊತ್ತಾದರೂ ಆಗಬಹುದು.
ಶೋಭಿತಾಳಿಗೆ ಸಿಕ್ಕಿದ ಸುವರ್ಣ ಅವಕಾಶ
ನಿರ್ದೇಶಕ ಶಶಿಕಿರಣ್ರ ಮುಂದಿನ `ಮೇಜರ್’ ಚಿತ್ರದಲ್ಲಿ ಶೋಭಿತಾಳಿಗೆ ಒಂದು ಅದ್ಭುತ ಪಾತ್ರ ಸಿಕ್ಕಿದೆಯಂತೆ. ಈ ಚಿತ್ರದ ಪ್ರಮುಖ ಕಲಾವಿದರಲ್ಲಿ ಅವಳೂ ಒಬ್ಬಳು. ಈ ಚಿತ್ರದಲ್ಲಿ ಅತಿ ಮಹತ್ವಪೂರ್ಣ ಪಾತ್ರ ನಿಭಾಯಿಸುತ್ತಿದ್ದಾಳೆ. ಈಗಾಗಲೇ ಈಕೆ ವೆಬ್ಸೀರೀಸ್ನ್ನೂ ಒಳಗೊಂಡಂತೆ ಹಲವಾರು ಚಿತ್ರಗಳಲ್ಲಿ ಮಿಂಚಿದ್ದಾಳೆ. ` ದಿ ಬಾರ್ಡ್ ಆಫ್ ಬ್ಲಡ್, ರಮಣ್ ರಾಘವ್, ದಿ ಬಾಡಿ’ ಇತ್ಯಾದಿ. ಆದರೆ ಇದುವರೆಗೂ ಅಂಥ ಮಹತ್ತರ ಐಡೆಂಟಿಟಿ ಸಿಕ್ಕಿರಲಿಲ್ಲ. ಮರಳಿ ಯತ್ನ ಮಾಡು…… ಎಂದು ಜಪಿಸುತ್ತಿರುವ ಶೋಭಿತಾಳಿಗೆ ಶುಭಾಗಲಿ!
ಅಕ್ಷಯ್ ಕುಮಾರ್ನ ಬೆಲ್ ಬಾಟಂ
ಇದು ಕನ್ನಡ ಚಿತ್ರದ ರೀಮೇಕ್ ಇರಬಹುದೇ ಅಂದುಕೊಂಡಿರಾ…..? ಖಂಡಿತಾ ಅಲ್ಲ, ಇದು ಅಪ್ಪಟ ಹಿಂದಿ ಮೂಲದ ಬಾಂಡ್ಚಿತ್ರ. ಎಲ್ಲೆಲ್ಲೂ ಈಗ ಕೊರೋನಾ ಮಹಿಮೆ ತಾಂಡವ ಆಡುತ್ತಿರುವುದರಿಂದ ಬಾಲಿವುಡ್ನ ಬಹುತೇಕ ಚಿತ್ರಗಳ ಬಿಡುಗಡೆ ಭಾಗ್ಯ ಮುಂದೂಡಲ್ಪಟ್ಟಿವೆ. ಈ ನಿಟ್ಟಿನಲ್ಲಿ ಅಕ್ಷಯ್ನ `ಬೆಲ್ ಬಾಟಂ’ ಮುಂದಿನ ಸಂಕ್ರಾಂತಿಗೆ ಬಿಡುಗಡೆ ಆಗಬೇಕಾದ್ದು ಯುಗಾದಿಗೆ ಬಿಡುಗಡೆ ಆಗುತ್ತಂತೆ. ಹಾಲಿವುಡ್ನ ಖ್ಯಾತ ಫ್ರಾಂಚೈಸಿ `ಫಾಸ್ಟ್ ಪ್ಯೂರಿಯಸ್’ ಸಹ ಮುಂದೂಡಲ್ಪಟ್ಟಿದೆಯಂತೆ. ಇವೆರಡೂ ಚಿತ್ರಗಳು ಒಟ್ಟಿಗೆ ರಿಲೀಸ್ ಆಗಿ ಕ್ಲಾಶ್ ಆಗುವುದರಲ್ಲಿತ್ತು. ಒಂದೆಡೆ ಅಕ್ಷಯ್ನ ಚಿತ್ರಗಳು ಬಾಕ್ಸ್ ಆಫೀಸಿನಲ್ಲಿ ಕಿಲಾಡಿಯಾಗಿ ಗೆಲ್ಲುತ್ತಿದ್ದರೆ, `ಫಾಸ್ಟ್ ಪ್ಯೂರಿಯಸ್’ ಸರಣಿ ಚಿತ್ರದ ಅಭಿಮಾನಿಗಳಿಗೇನೂ ಕೊರತೆ ಇಲ್ಲ.
ಬಾಲಿವುಡ್ ಕೊರೋನಾ
ಇತ್ತೀಚೆಗೆ ಸುದ್ದಿ ಸಂಗ್ರಾಹಕರು ತಾಜಾ ಮಾಹಿತಿಗಾಗಿ ಇನ್ನಿಲ್ಲದ ಅವಸ್ಥೆ ಪಡಬೇಕಿದೆ. ಏಕೆಂದರೆ ಯಾವ ಸೆಲೆಬ್ರಿಟಿಯನ್ನು ನೋಡಿದರೂ ಮಾಸ್ಕ್ ಹಾಕಿಕೊಂಡು ಮೆರೆಯುತ್ತಿದ್ದಾರೆ. ಹೀಗಾಗಿ ಯಾರದು ಅಂತ ಫೋಟೋ ತೆಗೆಯುವುದು? ಅವರನ್ನು ಗುರುತಿಸುವುದೇ ಕಷ್ಟವಾಗುತ್ತಿದೆ, ಹಾಗೊಮ್ಮೆ ಗುರುತಿಸಿದರೂ ಫೋಟೋ ಅಂತೂ ಕೆಟ್ಟದಾಗಿರುತ್ತದೆ. ಆ ಸ್ಟಾರ್ಗಳು ತಾನೇ ಪಾಪ ಏನು ಮಾಡಿಯಾರು? ಅವರಿಗಂತೂ ಊರಿಂದೂರಿಗೆ ಟ್ರಾವೆಲ್ ಮಾಡದೆ ಶೂಟಿಂಗ್ ಮಾಡಲಾಗದು. ವೈರಸ್ಗೆ ಹೆದರಿ ಮುಖಕ್ಕೆ ಮಾಸ್ಕ್ ಹಾಕಿಕೊಳ್ಳಬೇಕು….. ಅದರಲ್ಲಿ ಗ್ಲಾಮರ್ ಏನು ಬಂದೀತು ಮಣ್ಣು? ಥಿಯೇಟರ್ಗಂತೂ ಯಾರೂ ಬರುತ್ತಿಲ್ಲ, ಚಿತ್ರೀಕರಣವೇ ನಡೆಯದೆ ಎಲ್ಲೆಲ್ಲೂ ಭಣಭಣ ಎನ್ನುತ್ತಿದೆ. ರಿಲೀಸ್ ಆದ ಚಿತ್ರಗಳು ಹಿಗ್ಗಾಮುಗ್ಗಾ ಮಣ್ಣುಪಾಲಾಗುತ್ತಿವೆ. ಇನ್ನಾದರೂ ಈ ಮಹಾಮಾರಿಗೊಂದು ಮುಕ್ತಿ ದೊರಕಿ ಸ್ಟಾರ್ ಮತ್ತು ಅಭಿಮಾನಿಗಳು ಸಂಭ್ರಮಿಸುಂತಾಗಲಿ!
ಜಾಹ್ನವಿಯ ಖುಷಿಯ ಗುಟ್ಟು
ಇಲ್ಲಿ ಶ್ರೀದೇವಿಯ ಮಕ್ಕಳಾದ ಜಾಹ್ನವಿ, ಖುಷಿಯರ ಗುಟ್ಟಿನ ಬಗ್ಗೆ ಹೇಳುತ್ತಿಲ್ಲ. ಇತ್ತೀಚೆಗೆ ಜಾಹ್ನವಿಯ ಒಂದು ವಿಡಿಯೋ ಫೇಸ್ಬುಕ್ನಲ್ಲಿ ಖ್ಯಾತಿ ಪಡೆಯಿತು. ಅದರಲ್ಲಿ ಅವಳು ಶಾರೂಖ್ಖಾನ್ನ ಒಂದು ಹಾಡನ್ನು ಗುನುಗುತ್ತಾ ನರ್ತಿಸುತ್ತಿದ್ದಾಳೆ. ಆ ಹಾಡು ಅವಳ ಮೂಡ್ಗೆ ಸೂಟ್ ಆಗುವಂತಿದೆ. ಇದರಲ್ಲೇನು ಮಹಾ ಅಂತಿದ್ದೀರಾ…..? ಅವಳ ಹೊಸ ಚಿತ್ರಗಳಾದ `ಗಂಜನ್ ಸಕ್ಸೇನಾ, ರೂಹಿ ಅಫ್ಝಾನಾ’ ರಿಲೀಸ್ ಆಗಲಿವೆ. ತಂಗಿ ಖುಷಿ ಅಮೆರಿಕಾದಿಂದ ಶಾಶ್ವತ ವಾಪಸ್ ಮರಳಿದ್ದಾಳೆ ಎಂಬುದೂ ಈ ಅಕ್ಕನಿಗೆ ಖುಷಿಯಂತೆ!
ಸಲ್ಲೂಗೆ ಪೂಜಾ ಹೊಸ ನಾಯಕಿಯೇ?
`ಹೌಸ್ಫುಲ್’ ಚಿತ್ರದಲ್ಲಿ ಅಕ್ಷರಶಃ ತಾರಾಗಣವೇ ನೆರೆದಿತ್ತು, ಅಂದ್ರೆ ಅಷ್ಟು ಮಂದಿ ಪ್ರಮುಖ ಸ್ಟಾರ್ಸ್! ಹೀಗಾಗಿ ಕನ್ನಡತಿ ಪೂಜಾ ಹೆಗಡೆ ಈ ಚಿತ್ರದಲ್ಲಿ ಗುಂಪಲ್ಲಿ ಗೋವಿಂದ ಆಗಿದ್ದಳು. ಇದೀಗ ದಬಂಗ್ ಖಾನ್ ಸಲ್ಲೂನ ಕೃಪಾದೃಷ್ಟಿ ಇವಳ ಕಡೆ ಹರಿದಿದೆಯಂತೆ. ಆತನ ಮುಂದಿನ ಹೊಸ `ಕಭೀ ದೀವಾಲಿ ಕಭೀ ಈದ್’ ಚಿತ್ರದಲ್ಲಿ ಇವಳೇ ನಾಯಕಿಯಂತೆ! ಈ ಅಂತೆ ಕಂತೆ ನಿಜವಾದರೂ ಪೂಜಾಳಿಗೆ ಕಷ್ಟ ತಪ್ಪಿದ್ದಲ್ಲ. ಸಲ್ಲೂನ ನಾಯಕಿಯರು ಎಲ್ಲೂ ಸಲ್ಲರು ಎಂಬುದು ಗೊತ್ತಿರುವ ನಿತ್ಯ ಸತ್ಯ! ಸೋನಾಕ್ಷಿಯನ್ನೇ ನೋಡಿ…. ಯಾಕಾದ್ರೂ `ದಬಂಗ್’ ಚಿತ್ರದಲ್ಲಿ ನಟಿಸಿದೆನೋ ಎಂದು ತಲೆ ಮೇಲೆ ಕೈ ಹೊತ್ತಿದ್ದಾಳೆ.
ದಿಶಾಳ ಡ್ರೆಸ್ ಬಗ್ಗೆ ಕೋಪವೇಕೆ?
`ಮಂಗಲ್’ ಚಿತ್ರದಲ್ಲಿ ನಟಿ ದಿಶಾ ಪಟಾನಿ ಪಾರ್ಟಿಗಾಗಿ ಹಾಟ್ ರೆಡ್ ಡ್ರೆಸ್ ಧರಿಸಿದ್ದೇ ಬಂತು, ಫೇಸ್ಬುಕ್ನ ಟ್ರೋಲ್ ಆರ್ಮಿ ವ್ಯಂಗ್ಯ ವಾಗ್ಬಾಣಗಳ ಸುನಾಮಿ ಸುರಿಸಿತು. ಈ ಡ್ರೆಸ್ನಲ್ಲಿ ದಿಶಾ ತುಂಬಾ ಹಾಟ್ ಆಗಿದ್ದಿದ್ದೇನೋ ನಿಜ, ಆದರೆ ಆ ಡ್ರೆಸ್ ಅವಳ ಮೈ ಚರ್ಮವೇನೋ ಎಂಬಂತೆ ಟೈಟಾಗಿ ಅಂಟಿಕೊಂಡುಬಿಟ್ಟಿತ್ತು. ಅಂತೂ ಇಂತೂ ಪ್ರಕರಣ ತಣ್ಣಗಾಯಿತು ಅನ್ನುವಷ್ಟರಲ್ಲಿ ಇವಳ ಬಾಯ್ಪ್ರೆಂಡ್ ಟೈಗರ್ನ ತಂಗಿ ಕೃಷ್ಣಾ ಇವಳನ್ನು ಅದರ ಸೈಜ್ ಬಗ್ಗೆ ಕೆಣಕಬೇಕೇ? ಭಾವಿ ನಾದಿನಿಯ ಪ್ರಶ್ನೆಗೆ ಉತ್ತರಿಸುತ್ತಾ ದಿಶಾ, ಸೈಜ್ ಏನೋ ಸ್ಮಾಲ್. ಆದರೆ ಇದನ್ನು ಧರಿಸಿದ ಮೇಲೆ ಉಸಿರಾಡುವಷ್ಟು ಅವಕಾಶ ಸಿಗುತ್ತೋ ಇಲ್ಲವೋ ಹೇಳಲಾಗದು ಎಂದಳಂತೆ. ನೀನು ಸರಿಯಾದ ದಿಕ್ಕಿಗೇ ಗುರಿ ಇಟ್ಟಿದ್ದೀ ದಿಶಾ!
ಹೆಚ್ಚಿಸುವುದೋ ತಗ್ಗಿಸುವುದೋ?
ಎಲ್ಲರೂ ಮಾತಿಗೆ ಮುಂಚೆ ಬಾಡಿ ವೆಯ್ಟ್ ತಗ್ಗಿಸಬೇಕು ಅಂತ ಗೊಣಗುತ್ತಿದ್ದರೆ, ಚಿತ್ರಾಂಗದಾ ಸಿಂಗ್ ಮಾತ್ರ ತನ್ನ ದೇಹ ತೂಕ ಹೆಚ್ಚಬೇಕು ಅನ್ನುತ್ತಾಳೆ. ಇವಳಿಗೇನು ಹುಚ್ಚೇ ಎಂದು ಎಲ್ಲರೂ ಬೆರಗಾಗುವಷ್ಟರಲ್ಲಿ, ಇವಳಿಗೆ `ಬಾಬ್ ವಿಶ್ವಾಸ್’ ಚಿತ್ರದಲ್ಲಿ ಡುಮ್ಮಿಯ ಪಾತ್ರಕ್ಕಾಗಿ ಹೀಗೆ ಮಾಡಬೇಕಾಗಿದೆ ಎಂಬುದು ಖಾತ್ರಿಯಾಯಿತು. ಎಷ್ಟೋ ವರ್ಷ ಕಾದ ನಂತರ ಅಂತೂ ಚಿತ್ರಾಂಗದಾಳಿಗೆ ನಾಯಕಿಯಾಗುವ ಅವಕಾಶ ಸಿಕ್ಕಿರುವಾಗ, ಅದರಲ್ಲಿ ತಾನೇ ಪಾತ್ರ ಆಗಿಬಿಡುವ ಅವಕಾಶ ಬಿಟ್ಟಾಳೆಯೇ? ಇದೇ ಸ್ಥಿತಿ ನಾಯಕ ನಟ ಅಭಿಷೇಕ್ ಬಚ್ಚನ್ಗೂ ಆಗಿದೆಯಂತೆ. `ಎರಡೂ ದದ್ದ…. ಹೊರಕ್ಕೆ ಹಾಕು!’ ಎಂದು ಪ್ರೇಕ್ಷಕರು ಇವರಿಬ್ಬರ ಈ ಚಿತ್ರವನ್ನು ಫ್ಲಾಪ್ ಆಗಿಸಬಾರದಷ್ಟೆ.
ರಣಬೀರ್ ಶಾರೂಖ್ ಒಟ್ಟಿಗೆ ಕಾಣಿಸ್ತಾರಾ?
ಈಗ ಯಾವ ಕಿಂಗ್ ಅಲ್ಲದ ಈ ಖಾನ್ ಗೊತ್ತೋ ನಿಮಗೆ? ಯಾಕೆ ಹಾಗಂದ್ರು ಅಂತೀರಾ? ಈತ ಅತ್ತ ಬೆಳ್ಳಿ ಪರದೆ, ಕಿರುತೆರೆ, ಮಿನಿಪರದೆ (ವೆಬ್ ಸೀರೀಸ್) ಎಲ್ಲೆಲ್ಲೂ ಇಲ್ಲ….. ಅದಕ್ಕೆ! ಅಂತೂ ಇಂತೂ ಈತನಿಗೆ ರಣಬೀರ್ನ ಜೊತೆ ಸೀನಿಯರ್ ಸೈಂಟಿಸ್ಟ್ (ಅಕ್ಷಯ್ನ 2.0 ತರಹ) ಆಗಿ `ಬ್ರಹ್ಮಾಸ್ತ್ರ’ ಚಿತ್ರದಲ್ಲಿ ಕಾಣಿಸುತ್ತಾನಂತೆ….. ಹೀಗೆ ಆಗಾಗ ಕಾಣಿಸಪ್ಪ…. ಇಂದಿನ ಕಾಲದವರಿಗೆ ಮರೆವು ಜಾಸ್ತಿ!