ಸುಧಾ ಮೂರ್ತಿ ಈ ಹೆಸರು ಕನ್ನಡಿಗರ ಮನಸ್ಸಿನಲ್ಲಿ ಸದಾ ಅಚ್ಚಳಿಯದೆ ಉಳಿಯುವಂಥದ್ದು. ಅವರು ಇನ್ಛೋಸಿಸ್‌ ನಾರಾಯಣ ಮೂರ್ತಿ ಅವರ ಧರ್ಮಪತ್ನಿ ಎಂಬ ಕಾರಣದಿಂದ ಪ್ರಸಿದ್ಧರಾದವರಲ್ಲ. `ಇನ್ಛೋಸಿಸ್‌ ಪ್ರತಿಷ್ಠಾನ’ ಸ್ಥಾಪನೆ ಮಾಡಿಕೊಂಡು ಅದರ ಮೂಲಕ ರಾಜ್ಯಕ್ಕೆ ಎದುರಾದ ಎಂಥದೇ ಸಂಕಷ್ಟದ ಸ್ಥಿತಿಯಲ್ಲೂ ಸಹಾಯ ಹಸ್ತ ಚಾಚುವ ಗುಣದಿಂದಾಗಿ ಅವರು ಮನೆಮಾತಾಗಿ ಹೋಗಿದ್ದಾರೆ.

ವಿದ್ಯಾರ್ಥಿ ದೆಸೆಯಿಂದಲೇ ಸಮಾಜ ಸೇವೆಗೆ ಕಂಕಣಬದ್ಧರಾದ ಸುಧಾ, ಸುಮಾರು 3,000ದಷ್ಟು ದೇವದಾಸಿಯರನ್ನು ಮೂಲ ವೃತ್ತಿಯಿಂದ ಹೊರಬರುವಂತೆ ಮಾಡಿ ಅವರಿಗೆ ಕೌದಿ ಹೊಲಿಯುವ ಸ್ವಯಂ ಉದ್ಯೋಗ ಕಲ್ಪಿಸಿಕೊಟ್ಟರು. ಅವರು ಹೊಲಿದ ಕೌದಿಗಳನ್ನು ತಾವೇ ಖರೀದಿಸಿ ಅವನ್ನು ಉಡುಗೊರೆ ಕೊಡಲು ಬಳಸಿಕೊಂಡರು.

ಅಲ್ಲಿಂದ ಶುರುವಾದ ಅವರ ಸಹಾಯಹಸ್ತ ಚಾಚುವ ಕೈಂಕರ್ಯ ರಾಜ್ಯಕ್ಕೆ ಬಂದ ಅದೆಷ್ಟೋ ಸಂಕಷ್ಟದ ಸಮಯದಲ್ಲಿ ನೆರವಿಗೆ ಬಂತು. ಅದು ಭೀಕರ ಬರಗಾಲಕ್ಕೆ ಸಿಲುಕಿದ ದಿನಗಳೇ ಆಗಿರಬಹುದು ಅಥವಾ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಸುರಿದ ಭಾರಿ ಮಳೆಯಂತಹ ಸಂಕಷ್ಟದ ದಿನಗಳಲ್ಲಿ ಅವರು ಅವಶ್ಯಕ ವಸ್ತುಗಳನ್ನು ರವಾನಿಸಿ ಮಾನವೀಯತೆ ಮೆರೆದಿದ್ದರು. ಈಗ ಕೊರೋನಾದ ಭೀಕರ ಸನ್ನಿವೇಶದಲ್ಲೂ ಅವರು `ಇನ್ಛೋಸಿಸ್‌ ಪ್ರತಿಷ್ಠಾನ’ದ ವತಿಯಿಂದ ಸಹಾಯಹಸ್ತ ಚಾಚಿ ತಾವು ಯಾವಾಗಲೂ ದಾನಿಗಳ ಸಾಲಿನಲ್ಲಿ ಮುಂದಿದ್ದೇನೆ ಎಂಬುದನ್ನು ಸಾಬೀತು ಮಾಡಿ ತೋರಿಸಿದ್ದಾರೆ.

ಆಸ್ಪತ್ರೆಗೆ ಸಕಲ ಸೌಲಭ್ಯ ಕಲ್ಪಿಸುವ ಭರವಸೆ

ರಾಜ್ಯದಲ್ಲಿ ಕೊರೋನಾ ಇನ್ನೂ ತನ್ನ ರೆಕ್ಕೆ ಪಸರಿಸದೇ ಇರುವ ದಿನಗಳಲ್ಲಿ ಅಂದರೆ ಮಾರ್ಚ್‌ ಎರಡನೇ ವಾರದಲ್ಲಿಯೇ ಕೊರೋನಾ ಚಿಕಿತ್ಸೆಗೆ ಸಕಲ ನೆರವು ನೀಡುವುದಾಗಿ ಘೋಷಿಸಿದರು.

ಆಸ್ಪತ್ರೆಯೊಂದನ್ನು ತಮಗೆ ವಹಿಸಿಕೊಟ್ಟರೆ, ಅದರಲ್ಲಿ ಕೊರೋನಾ ವೈರಸ್‌ ಸೋಂಕಿತರಿಗೆ ಸಂಸ್ಥೆಯ ವತಿಯಿಂದ ಚಿಕಿತ್ಸೆ ನೀಡುವ ಸಕಲ ಸೌಲಭ್ಯವುಳ್ಳ ಆಸ್ಪತ್ರೆಯನ್ನಾಗಿ ಮಾಡುವುದಾಗಿ ಹೇಳಿದ್ದಾರೆ. ಈ ರೀತಿ ಅವರು ಸರ್ಕಾರದ ಕಷ್ಟವನ್ನು ಕಡಿಮೆ ಮಾಡಲು ನೆರವಾಗುತ್ತಿದ್ದಾರೆ.

ಇಷ್ಟೇ ಸಹಾಯದ ಭರವಸೆ ನೀಡಿದ ಸುಧಾ ಮೂರ್ತಿಯವರು ಸುಮ್ಮನೇ ಕುಳಿತುಕೊಳ್ಳಲಿಲ್ಲ. ಕೊರೋನಾ ಪೀಡಿತ ಜಿಲ್ಲಾಡಳಿತಗಳ ಮನವಿಗೆ ತಕ್ಷಣವೇ ಸ್ಪಂದಿಸಿ ಹಣಕಾಸು ಸಹಾಯ ಮಾಡುವುದರ ಮೂಲಕ ಅಗತ್ಯ ವೈದ್ಯಕೀಯ ಸಲಕರಣೆಗಳನ್ನು ಕೊಂಡುಕೊಳ್ಳಲು ನೆರವಾಗುತ್ತಿದ್ದಾರೆ.

ದಕ್ಷಿಣ ಕನ್ನಡಕ್ಕೆ ಸಹಾಯ ಹಸ್ತ

ದಕ್ಷಿಣ ಕನ್ನಡ ಜಿಲ್ಲಾಡಳಿತ ರಾಜ್ಯದ ಹಲವು ಸಂಘ ಸಂಸ್ಥೆಗಳಿಗೆ ಸಹಾಯ ಮಾಡಲು ಮನವಿ ಮಾಡಿಕೊಂಡಿತ್ತು. ಆ ಮನವಿಗೆ ಕೂಡಲೇ ಸ್ಪಂಧಿಸಿದ ಸುಧಾ ಮೂರ್ತಿಯವರು ತಮ್ಮ ಇನ್ಛೋಸಿಸ್‌ ಪ್ರತಿಷ್ಠಾನದ ಮೂಲಕ 28 ಲಕ್ಷ ರೂ.ಗಳ ಸಹಾಯ ಮಾಡಿದರು. ಆ ಮೊತ್ತದಲ್ಲಿ ಜಿಲ್ಲಾಡಳಿತ 1,65,000 ಮಾಸ್ಕ್, 2000 ಎನ್‌ 95 ಮಾಸ್ಕ್, 50 ಕ್ಯಾಪ್‌ಗಳು, 5000 ಬಾಟಲ್ ಸ್ಯಾನಿಟೈಸರ್‌, 60 ಸ್ಪೆಷಲ್‌ ಸರ್ಜಿಕ್‌ ಗ್ಲೌಸ್‌, 85 ಗ್ಲೌಸ್‌, 300 ಫಾಗ್‌ ಫ್ರೀ ಮಾಸ್ಕ್ ಗಳನ್ನು ಖರೀದಿಸಿತು.

ಧಾರವಾಡ ಜಿಲ್ಲೆಗೂ ನೆರವು

ಧಾರವಾಡ ಜಿಲ್ಲೆ ಹಾಗೂ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲ್ಲೂಕು ಒಳಗೊಂಡ ಕ್ಷೇತ್ರಕ್ಕೆ ಪರಿಹಾರ ಕಾರ್ಯ ಕೈಗೊಳ್ಳಲು 20 ಲಕ್ಷ ರೂ.ಗಳ ಪ್ರತ್ಯೇಕ ನೆರವು ಘೋಷಿಸಿದರು. `ಸಾಫಲ್ಯ ಪ್ರತಿಷ್ಠಾನ’ ಹಾಗೂ `ಗ್ರಾಮ ವಿಕಾಸ ಸಂಸ್ಥೆ’ಗಳ ಮೂಲಕ ಪರಿಹಾರ ಕಾರ್ಯಗಳು ನಡೆಯಲಿವೆ.

ಉಡುಪಿ ಜಿಲ್ಲೆಗೆ ನೆರವು

ಸುಧಾ ಮೂರ್ತಿಯವರು ಉಡುಪಿ ಜಿಲ್ಲೆಯಲ್ಲಿ ಕೊರೋನಾ ಸೋಂಕು ನಿಯಂತ್ರಿಸಲು ಹಾಗೂ ಪರೀಕ್ಷೆಗೆ ಅನುಕೂಲ ಕಲ್ಪಿಸಲು 54 ಲಕ್ಷ ರೂ. ಮೌಲ್ಯದ ವೈದ್ಯಕೀಯ ಉಪಕರಣ ಕೊಂಡುಕೊಳ್ಳಲು ನೆರವಾಗಿದ್ದಾರೆ.

ಹಲವು ಜಿಲ್ಲಾಡಳಿತಗಳ ನೆರವಿಗೆ ಸ್ಪಂದಿಸಿದ ಸುಧಾ ಮೂರ್ತಿಯವರು ಸಿನಿಮಾ ಕಾರ್ಮಿಕರ ಸಂಕಷ್ಟಕ್ಕೂ ಸ್ಪಂದಿಸಿದ್ದಾರೆ. ಸಿನಿಮಾ ಕಾರ್ಮಿಕರ 18 ಸಂಘಗಳ ಸಾವಿರಾರು ಕಾರ್ಮಿಕರಿಗೆ ಅಗತ್ಯ ಆಹಾರ ಸಾಮಗ್ರಿಗಳನ್ನು ನೀಡುವುದರ ಮೂಲಕ ಅವರ ಜೀವನಕ್ಕೆ ಒಂದಿಷ್ಟು ಆಸರೆ ನೀಡಿದ್ದಾರೆ.

ಇನ್ಛೋಸಿಸ್‌ ಪ್ರತಿಷ್ಠಾನ ಕೊರೋನಾ ಪೀಡಿತರ ನೆರವಿಗಾಗಿ ಸುಮಾರು 100 ಕೋಟಿ ರೂ. ಮೀಸಲಿಟ್ಟಿರುವುದು ಸುಧಾ ಮೂರ್ತಿಯವರ ಸಾಮಾಜಿಕ ಕಳಕಳಿಗೆ ಸಾಕ್ಷಿಯಾಗಿದೆ. ನಿಜಕ್ಕೂ ಅವರೊಬ್ಬ ಕೊರೋನಾ ವಾರಿಯರ್‌.

“ಕೊರೋನಾ ಪೀಡಿತರಿಗೆ ನೆರವಾಗಲು ನನ್ನ ಕೈಲಾದ ಅಳಿಲು ಸೇವೆ ಸಲ್ಲಿಸುತ್ತೇನೆ. `ಪರೋಪಕಾರಾರ್ಥ ಮಿದಂ ಶರೀರಂ’ ಎಂಬ ತತ್ವದಲ್ಲಿ ನಾನು ಮೊದಲಿನಿಂದ ನಂಬಿಕೆ ಇರಿಸಿಕೊಂಡು ಬಂದಿದ್ದೇನೆ. ನಮ್ಮ ಯೋಗ್ಯತಾನುಸಾರ ಯಾವುದೇ ದೊಡ್ಡ ಉದ್ಯಮ ನಡೆಸಿ ಅದರಲ್ಲಿ ಗ್ಲೋಬಲ್ ಐಡೆಂಟಿಟಿ ಸಿಕ್ಕಿದ ಮಾತ್ರಕ್ಕೆ ಅದೇ ಜೀವನದ ಅಂತಿಮ ಗೆಲುವು ಎಂದು ಯಾವತ್ತೂ ನಾನು ಭಾವಿಸುವುದಿಲ್ಲ. ಕೌದಿ ಹೊಲಿಸಿ, ನಾಲ್ಕು ಜನರಿಗೆ ಉಪಯುಕ್ತ ಆಗುವಂತೆ ಒದಗಿಸುವ ಹಾಗೆ ಬೆಳೆದು ಬಂದ ಈ ಹವ್ಯಾಸ ಇಂದು ಈ ಮಟ್ಟ ತಲುಪಿದೆ. ಅದು ಎಲ್ಲರಿಗೂ ಪ್ರೇರಣಾದಾಯಕವಾಗಲಿ, ಹೆಚ್ಚು ಜನರಿಗೆ ಉಪಕಾರ ಸಿಗಲಿ ಎಂದು ಬಯಸುತ್ತೇನೆ.”

ಅಶೋಕ ಚಿಕ್ಕಪರಪ್ಪಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ