ಪುಟ್ಟಿ : ಮಾಮ, ಮಾಮ….. ಮುಂದೆ ನಾನು ದೊಡ್ಡವಳಾದ ಮೇಲೆ ನಿಮ್ಮ ಮಗನ ಜೊತೆ ಮದುವೆ ಮಾಡಿಸ್ತೀರಾ?

ಅಂಗಡಿಯನು : ಅಷ್ಟೇ ತಾನೇ? ಹಾಗೆ ಆಗಲಿ ಬಿಡಮ್ಮ.

ಪುಟ್ಟಿ : ಹಾಗಿದ್ದರೆ ನಿಮ್ಮ ಭಾವಿ ಸೊಸೆಗೆ ಈಗ 2 ಬಾರ್‌ ಚಾಕಲೇಟ್‌ ಕೊಡಿ ಮತ್ತೆ…

ಮುಂಜಾನೆ ಅಡುಗೆಮನೆಯಲ್ಲಿ ಏನೋ ಕೆಲಸ ಮಾಡುತ್ತಿದ್ದ ಹೆಂಡತಿ ಗಿರಿಜಾಳಿಗೆ ಮಹೇಶ ಕೂಗಿ ಹೇಳಿದ, `ನಾನೊಂದು ಮದುವೆಗೆ ಹೋಗ್ತಿದ್ದೀನಿ…. ಬರೋದು ಸ್ವಲ್ಪ ತಡವಾಗಬಹುದು.’

`ಆಗಲಿ, ತುಂಬಾ ಲೇಟ್‌ ಮಾಡಬೇಡಿ,’ ಎಂದು ಒಳಗಿನಿಂದ ಉತ್ತರ ಬಂತು.

ಸಂಜೆ ಹೊತ್ತಿಗೆ ಮಹರಾಯ ಮದುವೆ ಮುಗಿಸಿಕೊಂಡು ಅಂತೂ ಮನೆಗೆ ಬಂದು ಸೇರಿದ. ಅವನನ್ನು ಕಂಡಿದ್ದೇ ಅವಳು ಹೌಹಾರಿದಳು. ಕಾರಣ? ಅವನು ಎರಡನೇ ಮದುವೆ ಮುಗಿಸಿಕೊಂಡು ಹೊಸ ಹೆಂಡತಿ ಜೊತೆ ಬಾಸಿಂಗ ಹಾರದ ಸಮೇತ ಹಾಜರಾಗಿದ್ದ!

ಎಂದಿನಂತೆ ಆ ದಿನ ಗಂಡ ಹೆಂಡಿರಲ್ಲಿ ಜಗಳ ನಡೆದಿತ್ತು. ತನ್ನನ್ನು ಬೈದ ಹೆಂಡತಿಯ ಮೇಲೆ ಸಿಡುಕುತ್ತಾ ಗಂಡ ಕೂಗಾಡಿದ.

ಗಂಡ : ನಾನು ಹೇಳ್ತೀನಿ… ಈಗಷ್ಟೇ ನೀನಾಡಿದ ಎಲ್ಲಾ ಮಾತುಗಳನ್ನೂ ತಕ್ಷಣ ವಾಪಸ್‌ ತೆಗೆದುಕೊ.

ಹೆಂಡತಿ : ಇಲ್ಲ…. ತೆಗೆದುಕೊಳ್ಳೋಲ್ಲ.

ಗಂಡ : ನೋಡು, ಕೊನೇ ಸಲ ಹೇಳ್ತಿದ್ದೀನಿ… ನಿನ್ನ ಮಾತುಗಳನ್ನು ವಾಪಸ್ಸು ತೆಗೆದುಕೊ…. ನಾನೀಗ ನಿನಗೆ ಕೇವಲ 5 ನಿಮಿಷ ಟೈಂ ಕೊಡ್ತೀನಿ.

ಹೆಂಡತಿ : ಅದೆಲ್ಲ ಇರಲಿ…. ನಾನು 5 ನಿಮಿಷಗಳಲ್ಲಿ ಆ ಮಾತುಗಳನ್ನು ವಾಪಸ್ಸು ತೆಗೆದುಕೊಳ್ಳಲಿಲ್ಲ ಅಂದ್ರೆ?

ಗಂಡ : ಅದೇ…. ಅದನ್ನೇ ನಾನು ಕೇಳ್ತಿರೋದು, ನಿನಗೆ ಎಷ್ಟು ಟೈಂ ಬೇಕಾಗುತ್ತೆ ಅಂತ?

ಊಟದ ನಂತರ ಪತಿ ತನ್ನ ಸುಶಿಕ್ಷಿತ ಪತ್ನಿಯನ್ನು ಪ್ರಶ್ನಿಸತೊಡಗಿದ.

ಪತಿ : ಊಟ ಆಯ್ತು, ಈಗ ಇನ್ನೇನು ಮಾಡಬೇಕೂಂತಿದ್ದಿ?

ಪತ್ನಿ : ಏನೂ ಅಂಥ ವಿಶೇಷ ಕೆಲಸಗಳಿಲ್ಲ, ಒಂದಿಷ್ಟು ಪತ್ರಿಕೆ ಓದೋದು…. ಟಿ.ವಿ ನೋಡೋದು…. ಇತ್ಯಾದಿ ಇತ್ಯಾದಿ.

ಪತಿ : ಸರಿ ಬಿಡು. ನೀನು ಇತ್ಯಾದಿ ಕೆಲಸಗಳಿಗೆ ಬಂದಾಗ ಅಗತ್ಯವಾಗಿ ನನ್ನ ಶರ್ಟಿನ ಬಟನ್‌ ಸರಿಪಡಿಸಿಬಿಡು.

ರೇಖಾ : ಏನ್ರಿ, ಇಷ್ಟು ದೊಡ್ಡ ವಕೀಲರಾದರೂ ನೀವಿನ್ನೂ ಮನೆಗೆ ಫ್ರಿಜ್‌, ವಾಷಿಂಗ್‌ ಮೆಷಿನ್‌ ಕೊಡಿಸಿಲ್ಲ.

ವಕೀಲ ಪತಿ : ಸ್ವಲ್ಪ ತಾಳ್ಮೆ ಇರಲಿ. ಈಗೊಂದು ಡೈವೋರ್ಸ್‌ ಕೇಸ್‌ ಬಿಸಿ ಹಿಡಿದಿದೆ. ಅತ್ತ ಅವರ ಮನೆ ಮುರಿಯುತ್ತಿದ್ದಂತೆ, ಇತ್ತ ನಮ್ಮ ಮನೆ ತುಂಬಿಸಿಕೊಳ್ಳೋಣ. ಏನಂತೀಯ?

ನವವಿವಾಹಿತ ಜೋಡಿಯೊಂದು ಸಾಗರದಾಚೆಯ ದ್ವೀಪ ಒಂದರಲ್ಲಿ ಮಧುಚಂದ್ರಕ್ಕೆಂದು ಹೋಟೆಲ್ ತಲುಪಿತು. ಅಲ್ಲಿನ ಮ್ಯಾನೇಜರ್‌ ಮಧುಕರನ ಬಗ್ಗೆ ವಿವರಗಳನ್ನೇನೂ ಕೇಳದೆ ರೆಜಿಸ್ಟರ್‌ನಲ್ಲಿ ಎಲ್ಲಾ ಬರೆದುಕೊಂಡಿದ್ದನ್ನು ನೋಡಿ ಮಾಧವಿ ಗಂಡನ ಬಗ್ಗೆ ಸಂಭ್ರಮಿಸಿದಳು.

ಮಾಧವಿ : ಓಹೋ…. ನನ್ನ ಗಂಡ ಸಾಗರದಾಚೆಗೂ ತುಂಬಾ ಫೇಮಸ್‌ ಅನ್ಸುತ್ತೆ ಅಲ್ವಾ….? ಅವರನ್ನು ಯಾವ ವಿವರವನ್ನೂ ಕೇಳದೆ ನೀವೇ ಎಲ್ಲಾ ಎಂಟ್ರಿ ಮಾಡಿಕೊಂಡಿರಿ….

ಮ್ಯಾನೇಜರ್‌ : ಫೇಮಸ್‌ ಅಂತೇನಲ್ಲ…. ಪ್ರತಿ ಸಲ ಹನಿಮೂನ್‌ಗೆಂದು ಅವರು ಹಲವು ವರ್ಷಗಳಿಂದ ನಮ್ಮ ಹೋಟೆಲ್‌ಗೆ ಬರುತ್ತಿರುತ್ತಾರೆ. ಹಾಗಾಗಿ……

ಸದಾ ಸಿಡಿಗುಟ್ಟುವ ಅತ್ತೆ ರತ್ನಮ್ಮನ ಜೊತೆ ಏಗಿ ಏಗಿ ವಿದ್ಯಾಳಿಗೆ ಸಾಕಾಗಿಹೋಗಿತ್ತು. ಒಂದು ದಿನ ಆಕೆ ದೊಡ್ಡ ರಾದ್ಧಾಂತ ಶುರು ಮಾಡಿದರು.

ರತ್ನಮ್ಮ : ಓ… ಸೊಸೆ ಮುದ್ದು, ಇಲ್ಲಿ ಮಂಚದ ಮೇಲೆ ಕೂತಿದ್ದೀಯಾ? ನಾನೂ ಬಂದು ಇಲ್ಲೇ ಕೂರ್ತೀನಿ. ಆಗ ನೀನೇನು ಮಾಡ್ತೀಯಾ?

ವಿದ್ಯಾ : ಆಗ ನಾನು ಎದ್ದು ಹೋಗಿ ಸೋಫಾದ ಮೇಲೆ ಕೂರ್ತೀನಿ.

ರತ್ನಮ್ಮ : ಹಾಗಿದ್ದರೆ ನಾನೂ ಅಲ್ಲೇ ಬಂದು ನಿನ್ನ ಪಕ್ಕ ಕೂತರೆ?

ವಿದ್ಯಾ : ಆಗ ನಾನು ಹೋಗಿ ನೆಲದ ಮೇಲೆ ಕೂರ್ತೀನಿ.

ರತ್ನಮ್ಮ : ಆಗ ನಾನು ಬಂದು ನೆಲದ ಮೇಲೆ ಕೂತರೆ ಏನು ಮಾಡ್ತೀಯಾ?

ವಿದ್ಯಾ : ಆಗ ನಾನು ಅಂಗಳದಲ್ಲಿ ಮರದಡಿ ಕೂರ್ತೀನಿ.

ರತ್ನಮ್ಮ : ನಾನು ಅಲ್ಲೂ ಬಂದು ನಿನ್ನೆದುರೇ ಕೂತೆ ಅಂತಿಟ್ಕೊ, ಆಗ ಏನು ಮಾಡ್ತೀಯಾ?

ವಿದ್ಯಾ : ಅಲ್ಲೇ ಒಂದು ಹಳ್ಳ ತೋಡಿ ಅದರೊಳಗೆ ಹೋಗಿ ಕೂರ್ತೀನಿ.

ರತ್ನಮ್ಮ : ನಾನು ಅಲ್ಲಿಗೂ ಬಿಡದೆ ಅಟ್ಟಿಸಿ ಕೊಂಡು ಬಂದರೆ ಆಗೇನು ಮಾಡ್ತೀಯಾ?

ವಿದ್ಯಾ : ನೀವು ಹಳ್ಳದಲ್ಲಿ ಕುಳಿತ ತಕ್ಷಣ ನಾನು ಮೇಲಿನಿಂದ ಮಣ್ಣು ಮುಚ್ಚಿ ಕಥೆ ಮುಗೀತು ಅಂದ್ಕೋತೀನಿ.

ಶೀಲಾ : ಏನ್ರಿ…. ನಿಮಗೆ ಎಷ್ಟು ಸಲ ಹೇಳೋದು? ನಿಮ್ಮ ತಲೆಗೂದಲಿಗೆ ಒಂದಿಷ್ಟು ಡೈ ಮಾಡಿಸಿ ಅಂತ… ಒಳ್ಳೆ ಮುದುಕನ ಹಾಗೆ ಕಾಣ್ತಿದ್ದೀರಿ!

ಸೋಮು : ಅದಕ್ಕೆ ಬೇಡ ಅಂತ ನಾನು ಸುಮ್ಮನಿರೋದು, ಇಲ್ಲದಿದ್ದರೆ ಬಸ್ಸಿನಲ್ಲಿ ಹಾಯಾಗಿ ಹುಡುಗಿಯರ ಬಳಿ ಕೂರೋದು ಹೇಗೆ?

ರಾಹುಲ್ : ಮದುವೆಗೆ ಮುಂಚಿನಿಂದಲೂ ನಿನಗೆ ಸ್ವಚ್ಛತೆ ಶುಭ್ರತೆಗಳ ಕುರಿತು ಹೆಚ್ಚಿನ ಕಾಳಜಿ ಅನ್ಸುತ್ತೆ….

ಸುಮಾ : ಥೂ ಹೋಗೀಪ್ಪ… ನೀವು ನನ್ನ ಬಹಳ ಹೊಗಳ್ತೀರಿ, ಅದು ಸರಿ, ಈ ವಿಷಯ ನಿಮಗೆ ಹೇಗೆ ಗೊತ್ತಾಯ್ತು?

ರಾಹುಲ್ ‌: ನಿನ್ನೆ ಆಫೀಸ್‌ಗೆ ನೀನು ಕಳುಹಿಸಿದ್ದ ಟಿಫನ್‌ ಬಾಕ್ಸ್ ತೆರೆದಾಗ, ಅಡುಗೆ ಬದಲು ಡಿಶ್‌ ವಾಶ್‌ ಬಾರ್‌ನ ವಾಸನೆ ಜೋರಾಗಿತ್ತು.

ವಕೀಲರು : ನಿಮ್ಮ ಬೆರಳು ಆಟೋಮ್ಯಾಟಿಕ್‌ ರೈಲ್ವೆ ಬಾಗಿಲಿನ ಸಿಸ್ಟಂನಿಂದಾಗಿ ಕತ್ತರಿಸಿಹೋಯಿತು ಅಂತ ರೈಲ್ವೆ ಇಲಾಖೆ ವಿರುದ್ಧ 50 ಸಾವಿರ ರೂ.ಗಳ ದಾವೆ ಹೂಡಿದ್ದೀರಿ, ಸರಿ ತಾನೇ?

ರತ್ನಾ : ಹೌದು, ಸರಿಯಾಗಿ ಹೇಳಿದ್ರಿ.

ವಕೀಲರು : ಆದರೆ ನಿಮ್ಮ ಎಡಗೈನ ಕಿರುಬೆರಳು ಅಷ್ಟು ಬೆಲೆ ಬಾಳುತ್ತೆ ಅಂತ ಹೇಗೆ ನಿರೂಪಿಸುತ್ತೀರಿ?

ರತ್ನಾ : ಈ ರಾಜ್ಯದ ಪ್ರಮುಖ ಆಡಳಿತಾಧಿಕಾರಿ ನನ್ನ ಗಂಡ. ಅವರನ್ನೇ ಅದರಿಂದ ಕುಣಿಸುತ್ತಿದ್ದೆ ಅಂತ ಸುಲಭವಾಗಿ ನಿರೂಪಿಸಬಲ್ಲೇ!

ಪತ್ನಿ : ಹಿಂದೆಲ್ಲ ಕಾಲೇಜಿನಲ್ಲಿ ನನ್ನ ಫ್ರೆಂಡ್ಸ್ ಏನು ಹೇಳುತ್ತಿದ್ದರು ಗೊತ್ತಾ?

ಪತಿ : ಏನದು ನಿನ್ನ ಹಳೆ ಕ್ಯಾತೆ?

ಪತ್ನಿ : ಬಹಳ ಪುರಸತ್ತಿದ್ದಾಗ ನನ್ನ ಫಿಗರ್‌ ತಯಾರಾಗಿರಬೇಕು ಅಂತ ಹೇಳ್ತಿದ್ರು.

ಪತಿ : ಹೂಂ, ಹೂಂ… ಪುರಸತ್ತಿದ್ದಾಗ ತಾನೇ ಬೇಡದ ಅನಗತ್ಯ ಕೆಲಸಗಳನ್ನು ಸುಲಭವಾಗಿ  ಮಾಡಬಹುದು….

ಅನಿಲ್ ‌: ನನಗೆ ಬಹಳ ದಿನಗಳಿಂದ ತಲೆಗೂದಲು ಸತತ ಉದುರುತ್ತಲೇ ಇದೆ.

ನೇತ್ರಾ : ಅದ್ಯಾಕೆ ಹಾಗೆ? ಮದುವೆಯಾದ ಹೊಸತರಲ್ಲಿ ಚೆನ್ನಾಗಿ ಇದ್ರಲ್ಲ….

ಅನಿಲ್ ‌: ಸಂಸಾರ ಸಾಗರದ ಆಳ ತಲುಪಿದಷ್ಟೂ ಈ ಸಮಸ್ಯೆ ಸಹಜವಾಗಿ ಹೆಚ್ಚುತ್ತಿದೆ ಅನ್ಸುತ್ತೆ.

ನೇತ್ರಾ : ಸಾಕು ಸಾಕು, ಡಾಕ್ಟರ್‌ ಇದಕ್ಕೆ ಏನು ಹೇಳಿದರು?

ಅನಿಲ್ ‌: ಏನೂ ಚಿಂತೆ ಮಾಡಬೇಡಿ, ಅದರಿಂದಲೇ ಹೀಗಾಗುತ್ತಿರೋದು ಅಂದ್ರು.

ನೇತ್ರಾ : ನಿಮಗೆ ಯಾವ ಮಹಾ ಚಿಂತೆ?

ಅನಿಲ್ ‌: ತಲೆಗೂದಲು ಉದುರುತ್ತಿರುವ ಚಿಂತೆ!

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ