ನಮ್ಮ ಮಕ್ಕಳಿಗೆ ಜಗತ್ತಿನ ಪ್ರತಿಯೊಂದು ಖುಷಿಯೂ ದೊರೆಯಲಿ, ಅವರಿಗೆ ಯಾವುದೇ ರೋಗ ಬರದಿರಲಿ ಎಂದು ಪ್ರತಿಯೊಬ್ಬ ಪೋಷಕರು ಬಯಸುತ್ತಾರೆ. ಈ ಕಾರಣದಿಂದ ಅವರ ಖುಷಿಯ ಬಗ್ಗೆ ಅವರ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರೆ. ಆದರೆ ಇಂದಿನ ಪರಿಸ್ಥಿತಿ ಎಲ್ಲಾ ಪೋಷಕರಿಗೆ ಹೆಚ್ಚು ಕ್ಲಿಷ್ಟಕರವಾಗಿದೆ. ಎಲ್ಲೆಡೆ ಭೀತಿಯ ವಾತಾವರಣವಿದೆ.

ಕೊರೋನಾದ ಮೂರನೇ ಅಲೆ ಮಕ್ಕಳ ಮೇಲೆ ಉಂಟಾಗಬಹುದೆಂಬ ಭಯ ಪೋಷಕರನ್ನು ಕಾಡುತ್ತಿದೆ. ಇಂತಹ ಸ್ಥಿತಿಯಲ್ಲಿ ಹೆದರುವ ಅಗತ್ಯವಿಲ್ಲ. ಅದರ ಬದಲಿಗೆ ಮಕ್ಕಳ ರೋಗನಿರೋಧಕ ಶಕ್ತಿ ಬಲಪಡಿಸುವ ಅಗತ್ಯವಿದೆ. ಏಕೆಂದರೆ ಅವರು ರೋಗಗಳೊಂದಿಗೆ ಹೋರಾಡಲು ಸಮರ್ಥರಾಗಬೇಕು.

ಮಕ್ಕಳ ರೋಗನಿರೋಧಕ ಶಕ್ತಿ ಬಲಪಡಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ :

ಆಹಾರದಲ್ಲಿ ಹಣ್ಣುತರಕಾರಿ ಇರಲಿ : ಮಕ್ಕಳು ಹಣ್ಣು ಹಾಗೂ ತರಕಾರಿಗಳನ್ನು ತಿನ್ನಲು ಹಿಂದೇಟು ಹಾಕುತ್ತಾರೆ. ಅದರ ಬದಲು ಅವರು ಫಾಸ್ಟ್ ಫುಡ್‌ ತಿನ್ನಲು ಇಷ್ಟಪಡುತ್ತಾರೆ. ಅದು ಅವರ ಹಸಿವನ್ನೇನೊ ನಿವಾರಿಸುತ್ತದೆ. ಆದರೆ ಅದು ಅವರ ದೇಹವನ್ನು ಬೊಜ್ಜುಮಯ ಹಾಗೂ ಸುಸ್ತಿಗೆ ದೂಡುತ್ತದೆ. ಅದೇ ಹಣ್ಣು ಹಾಗೂ ತರಕಾರಿಗಳು ಆ್ಯಂಟಿ ಆಕ್ಸಿಡೆಂಟ್‌ ವಿಟಮಿನ್‌ ಗಳಿಂದ ತುಂಬಿ ತುಳುಕುತ್ತಿರುತ್ತವೆ. ಅವು ರೋಗನಿರೋಧಕ ಶಕ್ತಿ ಹೆಚ್ಚಿಸುವ ಕೆಲಸ ಮಾಡುತ್ತವೆ. ಅದರಿಂದ ಮಕ್ಕಳ ಎನರ್ಜಿ ಮಟ್ಟ ಕಾಯ್ದುಕೊಂಡು ಹೋಗುತ್ತದೆ. ಅವರು ಎಲ್ಲ ಕೆಲಸಗಳನ್ನು ಪರಿಪೂರ್ಣ ಸ್ಛೂರ್ತಿಯಿಂದ ಮಾಡುತ್ತಾರೆ.

ಕ್ರಿಯೇಟಿವ್ ಐಡಿಯಾ : ಒಂದು ವೇಳೆ ಮಕ್ಕಳಿಗೆ ಹಣ್ಣುತರಕಾರಿಗಳನ್ನು ನೇರವಾಗಿ ಸೇವಿಸಲು ಕೊಟ್ಟರೆ ಅವರು ಹಿಂದೇಟು ಹಾಕುತ್ತಾರೆ. ನೀವು ನಿಮ್ಮ ಕ್ರಿಯೇಟಿವ್ ಕುಕಿಂಗ್‌ ಮುಖಾಂತರ ಹಣ್ಣು ಮತ್ತು ತರಕಾರಿಗಳನ್ನು ಸರ್ವ್ ‌ಮಾಡಿ. ಬೇಳೆ, ತರಕಾರಿಗಳ ಕಟ್ಲೆಟ್‌, ತರಕಾರಿಗಳ ಬಣ್ಣ ಬಣ್ಣದ ಸ್ಯಾಂಡ್‌ ವಿಚ್‌ ಇವುಗಳಲ್ಲಿ ಅವರಿಗೆ ಇಷ್ಟವಾಗುವ ಸಾಸ್‌ ಸೇರಿಸಿ ಸರ್ವ್ ಮಾಡಿ.

ಹಣ್ಣುಗಳನ್ನು ಫ್ರೂಟ್ಸ್ ಕಟರ್ಸ್‌ ನಿಂದ ಇಷ್ಟವಾಗುವ ಆಕಾರದಲ್ಲಿ ಕತ್ತರಿಸಿ, ಕೊಡಿ. ನಿಮ್ಮ ಕ್ರಿಯೇಟಿವಿಟಿ ಅವರಿಗೆ ಹಣ್ಣು ಹಾಗೂ ತರಕಾರಿಗಳ ಬಗ್ಗೆ ಪ್ರೀತಿ ಹುಟ್ಟಲು ಕಾರಣವಾಗುತ್ತದೆ.

ಡ್ರೈಫ್ರೂಟ್ಸ್ ಬೆಳವಣಿಗೆಗೆ ಪೂರಕ : ಮಕ್ಕಳು ಬೆಳವಣಿಗೆಯ ಹಂತದಲ್ಲಿರುವ ಅವರ ಆಹಾರದ ಬಗೆಗೆ ವಿಶೇಷ ಗಮನ ಕೊಡಬೇಕಾದ ಅಗತ್ಯ ಇರುತ್ತದೆ. ಇಲ್ಲದಿದ್ದರೆ ಚಿಕ್ಕ ವಯಸ್ಸಿನಲ್ಲಿಯೇ ಅವರಲ್ಲಿ ಹಲವಾರು ಕೊರತೆಗಳು ಉಳಿದುಬಿಡಬಹುದು. ಇದು ಅವರಲ್ಲಿ ಹಲವಾರು ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ.

ಹೀಗಾಗಿ ಅವರನ್ನು ಆಂತರಿಕವಾಗಿ ಸ್ಟ್ರಾಂಗ್‌ ಮಾಡಲು ದಿನ ಡ್ರೈಫ್ರೂಟ್ಸ್ ಕೊಡಿ. ಅವುಗಳಲ್ಲಿ ಪ್ರೋಟೀನ್‌, ಮಿನರಲ್ಸ್, ಫೈಬರ್‌ಮುಂತಾದವು ಇರುವುದರಿಂದ ರೋಗಗಳೊಂದಿಗೆ ಹೋರಾಡುವ ಶಕ್ತಿ ಹೆಚ್ಚುತ್ತದೆ. ಇವು ಅವರ ಸ್ಮರಣಶಕ್ತಿ ಹೆಚ್ಚಿಸುವ ಹಾಗೂ ಮೆದುಳಿನ ಆರೋಗ್ಯ ವರ್ಧಿಸುವ ಕೆಲಸ ಕೂಡ ಮಾಡುತ್ತವೆ.

ಈ ಕಾರಣದಿಂದಾಗಿ ಅವರಿಗೆ ರೋಗಾಣುಗಳೊಂದಿಗೆ ಹೋರಾಡುವ ಶಕ್ತಿ ಬರುತ್ತದೆ.

ಕ್ರಿಯೇಟಿವ್ ಐಡಿಯಾ : ಮಕ್ಕಳಿಗೆ ಡ್ರೈ ಫ್ರೂಟ್ಸ್ ತಿನ್ನಿಸುವುದು ಕಷ್ಟಕರವಾಗಿ ಪರಿಣಮಿಸಿದರೆ ಡ್ರೈಫ್ರೂಟ್ಸ್ ಪೇಸ್ಟ್ ಮಾಡಿ, ಅದನ್ನು ಹಾಲಿನಲ್ಲಿ ಮಿಶ್ರಣ ಮಾಡಿ ಕೊಡಿ. ಸ್ವೀಟ್‌ ಡಿಶ್‌ ನಲ್ಲಿ ಸೇರಿಸಿಯೂ ಕೊಡಬಹುದು. ಹೀಗೆ ಮಾಡುವುದರಿಂದ ಅವರು ಆಸಕ್ತಿಯಿಂದ ಸೇವಿಸಬಹುದು ಮತ್ತು ನಿಮ್ಮ ಟೆನ್ಶನ್‌ ಕೂಡ ಕಡಿಮೆಯಾಗುತ್ತದೆ.

ಬಹುಪಯುಕ್ತ ಯೋಗರ್ಟ್‌ : ನಿಮ್ಮ ಮಗುವಿಗೆ ಹಸಿವಾದಾಗ ದಿನಕ್ಕೊಮ್ಮೆ ಮೊಸರು ಅಥವಾ ಯೋಗರ್ಟ್‌ ಅವಶ್ಯವಾಗಿ ಕೊಡಿ. ಏಕೆಂದರೆ ಅವು ದೇಹಕ್ಕೆ ಬೇಕಾಗುವ ಎಲ್ಲ ಪೋಷಕಾಂಶಗಳನ್ನು ಹೊಂದಿರುತ್ತವೆ. ಅದರಲ್ಲಿರುವ ಕ್ಯಾಲ್ಶಿಯಂ ಹಲ್ಲು ಹಾಗೂ ಮೂಳೆಗಳಿಗೆ ಬಹಳ ಉಪಯುಕ್ತವಾಗುತ್ತದೆ.

ಅದರಲ್ಲಿ ಪ್ರೋಟೀನ್‌ ಹಾಗೂ ವಿಟಮಿನ್‌ `ಡಿ’ ರೋಗ ನಿರೋಧಕ ಶಕ್ತಿಯನ್ನು ಬಲಗೊಳಿಸುವುದರ ಜೊತೆ ಜೊತೆಗೆ ಚಯಾಪಚಯ ಕ್ರಿಯೆಯನ್ನು ಸುಗಮಗೊಳಿಸುತ್ತದೆ. ಅದರಲ್ಲಿರುವ ಮೆಗ್ನಿಷಿಯಂ, ಸೆಲೆನಿಯಂ ಹಾಗೂ ಝಿಂಕ್‌ ಇ ವೈರಸ್‌ನ ಕಾರಣದಿಂದ ಉಂಟಾಗುವ ಯಾವುದೇ ರೀತಿಯ ಉರಿ ಹಾಗೂ ಊತ ಉಂಟಾಗದಂತೆ ನೋಡಿಕೊಳ್ಳುತ್ತವೆ.

ಅದರಲ್ಲಿ ಹೆಲ್ದೀ ಪ್ರೊಬಯಾಟಿಕ್‌ ಇರುತ್ತದೆ. ಅದು ರೋಗಾಣುಗಳಿಂದ ರಕ್ಷಿಸುವ ಕೆಲಸ ಮಾಡುತ್ತದೆ. ಸಂಶೋಧನೆಗಳಿಂದ ತಿಳಿದುಬಂದ ಸಂಗತಿಯೆಂದರೆ, ದಿನ ಯೋಗರ್ಟ್‌ ಸೇವಿಸುವ ಮಗುವಿಗೆ ಕೆಮ್ಮು, ಶೀತ, ಕಿವಿ ಹಾಗೂ ಗಂಟಲಿನ ತೊಂದರೆ ಉಂಟಾಗುವ ಸಾಧ್ಯತೆ ಶೇ.19ರಷ್ಟು ಕಡಿಮೆಯಾಗುತ್ತದೆ.

ಕ್ರಿಯೇಟಿವ್ ‌ಐಡಿಯಾ : ನೀವು ಮಗುವಿಗೆ ಮೊಸರಿನಲ್ಲಿ ಚಾಕ್ಲೆಟ್‌ ಸಿರಪ್‌, ರೋಸ್‌ ಸಿರಪ್‌, ಡ್ರೈ ಫ್ರೂಟ್ಸ್ ಹಾಕಿ ಅದರ ರುಚಿಯನ್ನು ಹೆಚ್ಚಿಸಬಹುದು. ಇಲ್ಲಿ ಮ್ಯಾಂಗೊ, ರಾಸ್‌ಬೆರಿ, ಬ್ಲೂಬೆರಿ, ಅಲ್ಫೋನ್ಸಾ ಮ್ಯಾಂಗೊ, ಸ್ಟ್ರಾಬೆರಿ ಇತ್ಯಾದಿಗಳನ್ನು ಯೋಗರ್ಟ್ ಸೇವನೆಗೆ ಕೊಡುವುದರ ಮೂಲಕ ಅವರ ಆರೋಗ್ಯದ ಬಗ್ಗೆ ವಿಶೇಷ ಗಮನ ಕೊಡಬಹುದು.

ನೋ ಸಪ್ಲಿಮೆಂಟ್‌ ಓನ್ಲಿ ನ್ಯೂಟ್ರಿಶನ್‌ : ಎಲ್ಲಿಯವರೆಗೆ ನಮ್ಮ ರೋಗ ನಿರೋಧಕ ಸ್ಟ್ರಾಂಗ್‌ ಆಗುವುದಿಲ್ಲವೋ ಅಲ್ಲಿಯವರೆಗೆ ರೋಗಗಳೊಂದಿಗೆ ಹೋರಾಡಲು ಸಾಧ್ಯವಾಗುವುದಿಲ್ಲ. ಹಾಗೆಯೇ ನಾವಿಂದು ಪ್ರತಿಯೊಬ್ಬರೂ ವೈರಸ್‌ ಗಳ ತೆಕ್ಕೆಗೆ ಸಿಲುಕುತ್ತಿದ್ದು, ಯಾವಾಗ ನೋಡಿದರೂ ಹೆಲ್ತ್ ಸಪ್ಲಿಮೆಂಟ್ಸ್ ಹಾಗೂ ವಿಟಮಿನ್‌, ಮಿನರಲ್ ಗಳ ಸಪ್ಲಿಮೆಂಟ್‌ಗಳಿಗೆ ಮೊರೆ ಹೋಗುತ್ತಿದ್ದೇವೆ.

ಇಲ್ಲಿ ಏಳುವ ಪ್ರಶ್ನೆಯೇನೆಂದರೆ, ಮಕ್ಕಳಿಗೆ ಈ ಸಪ್ಲಿಮೆಂಟ್‌ ಗಳನ್ನು ಕೊಡಬೇಕಾ? ಈ ಕುರಿತಂತೆ ಮಕ್ಕಳ ತಜ್ಞ ಸುಮಿತ್‌ ಹೀಗೆ ಹೇಳುತ್ತಾರೆ, ನೀವು ನಿಮ್ಮ ಮಕ್ಕಳಿಗೆ ಸಪ್ಲಿಮೆಂಟ್‌ ಕೊಡುವುದನ್ನು ರೂಢಿ ಮಾಡಿಸಬೇಡಿ. ಏಕೆಂದರೆ ಅವು ಅವರ ದೇಹದ ಮೇಲೆ ತದ್ವಿರುದ್ಧ ಪರಿಣಾಮ ಬೀರುತ್ತವೆ. ಈ ಔಷಧಿಗಳು ಮಕ್ಕಳಲ್ಲಿ ಉಷ್ಣತೆ ಹೆಚ್ಚಿಸಿ ಅಸಿಡಿಟಿ ಹಾಗೂ ವಾಂತಿಗೆ ಕಾರಣವಾಗುತ್ತದೆ. ಅದರಿಂದಾಗಿ ಮಕ್ಕಳು ಏನಾದರೂ ತಿನ್ನಲು ಹಿಂದೇಟು ಹಾಕುತ್ತಾರೆ. ಇಂತಹ ಸ್ಥಿತಿಯಲ್ಲಿ ಅವರಿಗೆ ಕೇವಲ ನೂಟ್ರಿಷನ್ಸ್ ಕೊಡಿ.

ಅವರಿಗೆ ವಿಟಮಿನ್‌ `ಸಿ’ಯ ಕೊರತೆ ನೀಗಿಸಲು ಹುಳಿ ಹಣ್ಣುಗಳನ್ನು ಆ್ಯಂಟಿ ಆಕ್ಸಿಡೆಂಟ್ಸ್ ಹಾಗೂ ಕಬ್ಬಿಣಾಂಶಕ್ಕಾಗಿ ಬೀಟ್‌ ರೂಟ್, ವಿಟಮಿನ್‌ಗಾಗಿ 3 ವರ್ಷಕ್ಕೂ ಮೇಲ್ಪಟ್ಟ ಮಕ್ಕಳಿಗೆ ದಿನ 5-6 ಬಾದಾಮಿ ಹಾಗೂ ಅಖರೋಟ್‌ ಮತ್ತು ದೇಹದ ನೀರಿನಂಶ ಕಾಯ್ದುಕೊಂಡು ಹೋಗಲು ಎಳನೀರು ಕುಡಿಯಲು ಕೊಡಿ.

ಸಮಯಕ್ಕೆ ಸರಿಯಾಗಿ ನಿದ್ರೆ : ಸಂಶೋಧನೆಗಳಿಂದ ಸಾಬೀತಾದ ಸಂಗತಿಯೆಂದರೆ, ಯಾರು ಸಕಾಲಕ್ಕೆ ಮಲಗುವುದಿಲ್ಲವೋ, ಸರಿಯಾಗಿ ನಿದ್ರೆ ಮಾಡುವುದಿಲ್ಲವೋ ಅವರಿಗೆ ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಹಾಗೂ ಕಾರ್ಟಿಸೋಲ್ ಎಂಬ ಹಾರ್ಮೋನು ಸ್ರಾವವಾಗಿ ಅದು ಒತ್ತಡ ಹೆಚ್ಚಿಸುತ್ತದೆ. ಫ್ಲೂನೊಂದಿಗೆ ಹೋರಾಡುವ ಆ್ಯಂಟಿ ಬಾಡಿಗಳ ಸಂಖ್ಯೆ ಅರ್ಧದಷ್ಟಾಗುತ್ತದೆ. 5-6 ಗಂಟೆಗಳ ಪರಿಪೂರ್ಣ ನಿದ್ರೆಯಿಂದ ಸೈಟೊರೆನ್‌ ಎಂಬ ಹಾರ್ಮೋನು ಉತ್ಪಾದನೆಯಾಗಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಜರ್ಮನಿಯ ಸಂಶೋಧಕರು ಹೇಳಿರುವುದೇನೆಂದರೆ, ಉತ್ತಮ ಹಾಗೂ ಗಾಢನಿದ್ರೆಯಿಂದ ಮೆದುಳಿನ ಜೀವಕೋಶಗಳಿಗೆ ಬಲ ಸಿಗುತ್ತದೆ. ಅವು ಸೋಂಕಿನೊಂದಿಗೆ ಹೋರಾಡಲು ಸೂಕ್ತ ಎಂದು ಭಾವಿಸಲಾಗುತ್ತದೆ. ಹೀಗಾಗಿ ನಿಮ್ಮ ಮಕ್ಕಳಿಗೆ ಸರಿಯಾದ ಸಮಯಕ್ಕೆ ಮಲಗಲು ಅಭ್ಯಾಸ ಮಾಡಿಸಿ.

ದೈಹಿಕ ಚಟುವಟಿಕೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಳ : ಕೊರೋನಾ ವೈರಸ್‌ನ ಹಾವಳಿಯಿಂದಾಗಿ ಮಕ್ಕಳನ್ನು ಮನೆಯಲ್ಲಿ ಬಂಧಿಯಾಗಿಸಲಾಗುತ್ತಿದೆ. ಇದರಿಂದ ಅವರ ಕ್ರಿಯಾಶೀಲ ಚಟುವಟಿಕೆಯ ಅಭಾವದಿಂದಾಗಿ ಸಾಕಷ್ಟು ಒತ್ತಡಗ್ರಸ್ತರಾಗುತ್ತಾರೆ. ಅವರ ಬೇಸರ ನೀಗಿಸಲು ಅವರ ಫಿಟ್ನೆಸ್ ಹಾಗೂ ಇಮ್ಯುನಿಟಿಗಾಗಿ ಅವರನ್ನು ದೈಹಿಕವಾಗಿ ಕ್ರಿಯಾಶೀಲರಾಗಿಸುವುದು ಅತ್ಯವಶ್ಯ.

ಆನ್‌ ಲೈನ್‌ ಡ್ಯಾನ್, ಫಿಟ್ನೆಸ್‌ ಕ್ಲಾಸ್‌ಗಳಿಗೆ ಸೇರಿಸಬಹುದು. ಮನೆಯಲ್ಲಿ ಹೆಚ್ಚಿನ ಸ್ಥಳಾವಾಕಾಶ ಇದ್ದರೆ, ಕಣ್ಣು ಮುಚ್ಚಾಲೆ ಆಟ ಆಡಿಸಿ ಇದರಿಂದ ಅವರ ನೇತ್ರಶಕ್ತಿ ಸಹ ಬಲಿಷ್ಠಗೊಳ್ಳುವುದರ ಜೊತೆಗೆ ಹಾಸ್ಯಪ್ರಜ್ಞೆ ಸಹ ಹೆಚ್ಚುತ್ತದೆ. ಓಡುವುದರಿಂದ ಅವರ ದೇಹ ಬಲಿಷ್ಠ ಕೂಡ ಆಗುತ್ತದೆ. 5 ವರ್ಷಕ್ಕಿಂತ ಹಿರಿಯರಾದ ಮಕ್ಕಳಿಗೆ ಉಸಿರಾಟದ ವ್ಯಾಯಾಮ ಹಾಗೂ ಬೌಲಿಂಗ್‌ ಎಕ್ಸರ್ ಸೈಜ್‌ ಮಾಡಿಸುವುದರ ಮೂಲಕ ಅವರ ಶ್ವಾಸಕೋಶಗಳ ಸಾಮರ್ಥ್ಯ ಹೆಚ್ಚಿಸಬಹುದು. ಇದರಿಂದ ಅವರಿಗೆ ಆರೋಗ್ಯ ಹಾಗೂ ಆನಂದ ಎರಡೂ ದೊರೆಯುತ್ತದೆ.

– ಪ್ರಮೋದಿನಿ

ಇವುಗಳ ಸೇವನೆ ಕೂಡ ಅತ್ಯವಶ್ಯ

ಬಾದಾಮಿ : ಇದು ವಿಟಮಿನ್‌ `ಇ’ ಹಾಗೂ ಆ್ಯಂಟಿ ಆಕ್ಸಿಡೆಂಟ್‌ ಗಳಿಂದ ಸಮೃದ್ಧವಾಗಿರುವುದರಿಂದ, ಹೃದಯದ ಆರೋಗ್ಯವನ್ನು ಕಾಪಾಡುವುದರ ಜೊತೆ ಜೊತೆಗೆ ತೂಕ ನಿಯಂತ್ರಿಸುವ ಕೆಲಸವನ್ನು ಮಾಡುತ್ತದೆ.

ಅಖರೋಟ್‌ : ಇದು ವಿಟಮಿನ್‌, ಪ್ರೋಟೀನ್‌ ಹಾಗೂ ಒಮೇಗಾ ಫ್ಯಾಟಿ ಆ್ಯಸಿಡ್‌ ಒಳಗೊಂಡಿರುವುದರಿಂದ ರೋಗಗಳೊಂದಿಗೆ ಹೋರಾಡುವ ಶಕ್ತಿ ವರ್ಧಿಸುವುದರ ಜೊತೆ ಜೊತೆಗೆ ನಿಮ್ಮ ತ್ವಚೆಯ ಆರೋಗ್ಯವನ್ನು ಕಾಪಾಡುತ್ತದೆ.

ಗೋಡಂಬಿ : ಇದು ಮೆಗ್ನಿಷಿಯಂ ಹಾಗೂ ವಿಟಮಿನ್‌ ರಿಚ್‌ ಆಗಿರುತ್ತದೆ. ಹೀಗಾಗಿ ಇದು ಹಲವು ರೋಗಗಳಿಂದ ರಕ್ಷಿಸುತ್ತದೆ.

ಒಣದ್ರಾಕ್ಷಿ : ಪಚನ ಶಕ್ತಿಯನ್ನು ಸರಿಪಡಿಸುವುದರ ಜೊತೆ ಜೊತೆಗೆ ಕಬ್ಬಿಣಾಂಶದ ಕೊರತೆಯನ್ನು ನೀಗಿಸುತ್ತದೆ.

ಪಿಸ್ತಾ : ಇದು ಆ್ಯಂಟಿ ಆಕ್ಸಿಡೆಂಟ್‌, ಮೆಗ್ನಿಷಿಯಂ, ಕಾಪರ್‌, ಕಬ್ಬಿಣಾಂಶ ಸತ್ವ ಹೊಂದಿರುವುದರಿಂದ ಇದು ಹೊಟ್ಟೆ ತುಂಬಿರುವ ಅನುಭವ ನೀಡುವುದರ ಜೊತೆಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದರ ಜೊತೆಗೆ ಕಬ್ಬಿಣಾಂಶದ ಕೊರತೆ ಭರ್ತಿ ಮಾಡುತ್ತದೆ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ