ದಂತ ವೈದ್ಯಕೀಯದಲ್ಲಿ ಭಾರತೀಯ ಮಹಿಳೆಯರ, ಅದರಲ್ಲೂ ಕನ್ನಡತಿಯರ ಸಾಧನೆ ಅತಿ ಅಪರೂಪ! ಮನುಷ್ಯನಿಗೆ ಬಾಯಿ ತುಂಬಾ ಮುಖ್ಯ. ಅಂತೆಯೇ ಹಲ್ಲುಗಳೂ ಸಹ. ಮುಖ ಅಂದವಾಗಿ ಕಾಣಲಷ್ಟೇ ಅಲ್ಲ, ನಮ್ಮ ಮೂಲಭೂತ ಅಗತ್ಯವಾದ ಆಹಾರ ಸೇವನೆಗೆ ಬಾಯಿಯೇ ಮುಖ್ಯ. ಹೀಗಿರುವಾಗ ಅದರ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಅಗತ್ಯ. ಇಂದು ವಿಶ್ವದಲ್ಲಿ ಬಹಳ ಜನ ಬಾಯಿ ಕ್ಯಾನ್ಸರ್‌ ನಿಂದ ನರಳುತ್ತಿದ್ದಾರೆ. ತಂಬಾಕು ಸೇವನೆಯೇ ಇದಕ್ಕೆ ಕಾರಣ. ಈಗ ಆರೋಗ್ಯ ತಂತ್ರಜ್ಞಾನ ಬಹಳ ಮುಂದುವರಿದಿದೆ. ಹಿಂದೆ ಹಲ್ಲು ಹುಳುಕಾದರೆ ಅದನ್ನು ಕಿತ್ತು ಬಿಸಾಡುತ್ತಿದ್ದರು. ಆದರೆ ಈಗ ವೈದ್ಯಕೀಯ ವಿಜ್ಞಾನ ಅದಕ್ಕೆ ಆಸ್ಪದವೇ ಕೊಡುವುದಿಲ್ಲ. ಸರಿಯಾದ ಸಮಯಕ್ಕೆ ನೀವು ವೈದ್ಯರ ಹತ್ತಿರ ಹೋದರೆ, ಅಳುಕಿಲ್ಲದೆ ಬಾಯಿ ತುಂಬಾ ನಗುವುದು ಮತ್ತು ಆಹಾರ ಸೇವಿಸುವುದು ಸುಲಭ ಸಾಧ್ಯವಾಗಿದೆ.

ಈ ನಿಟ್ಟಿನಲ್ಲಿ ಛಾಯಾ ಆಲ್ಫ್ರೆಡ್‌ ಬಹಳಷ್ಟು ಕೆಲಸಗಳನ್ನು ಮಾಡಿದ್ದಾರೆ. ಮೊದಲ ಹಂತದಲ್ಲೇ ಬಾಯಿ ಕ್ಯಾನ್ಸರ್‌ ನ್ನು ಕಂಡುಕೊಂಡಾಗ ಅದರ ಚಿಕಿತ್ಸೆ ಸಾಧ್ಯವಿದೆ, ಅಲ್ಲದೆ ಅದರ ಮೂಲಕಾರಣ ವಾದ ತಂಬಾಕು ಸೇವನೆಯ ಬಗ್ಗೆ ಅರಿವು ಮೂಡಿಸುವ ಅನೇಕ ಶಿಬಿರಗಳನ್ನು ನಡೆಸಿದ್ದಾರೆ. ಛಾಯಾ ಬೆಂಗಳೂರಿನವರು. ತುಂಬು ಕುಟುಂಬ, ಹತ್ತು ಮಕ್ಕಳ ಮಧ್ಯೆ ಮಧ್ಯಮ ಕುಟುಂಬದಲ್ಲಿ ಬೆಳೆದು ಬಂದವರು. ಅಪರಿಮಿತ ಶಿಸ್ತು, ಕಠಿಣ ಶ್ರಮವನ್ನು ಮೊದಲಿನಿಂದ ತಾಯಿ ತಂದೆಯ ಮೂಲಕ ಪಡೆದರು. ಶ್ರಮ ಜೀವನ ನಡೆಸುತ್ತಿದ್ದ ಇವರ ಪೋಷಕರು ಶಾಲೆಯೊಂದನ್ನು ಪ್ರಾರಂಭಿಸಿದರು. ಸಾವಿರಾರು ಮಕ್ಕಳಿಗೆ ಶಿಕ್ಷಣ ನೀಡಿದರು.

ಆದರೆ ಇರಿಗೆ ನೊಂದವರ ನೋವು ಕಡಿಮೆ ಮಾಡುವ ವೈದ್ಯಕೀಯ ಶಿಕ್ಷಣ ಪಡೆಯುಲ್ಲಿ ಆಸಕ್ತಿ ಇತ್ತು. ಇವರಿಗೆ ಮೆರಿಟ್‌ ಸೀಟ್‌ ಸಿಗುವ ಸಾಧ್ಯತೆ ಇದ್ದೂ ಸಹ ಆ ವರ್ಷದ ಕೆಲವು ನಿಯಮಗಳಿಂದ ಅವರಿಗೆ ಖಾಸಗಿ ಕಾಲೇಜಿನಲ್ಲಿ ಸೀಟ್‌ ಸಿಗಲಿಲ್ಲವಾದರೂ, ಅದರ ಬದಲು ಪ್ರತಿಷ್ಠಿತ ಸರ್ಕಾರಿ ದಂತ ವಿಜ್ಞಾನ ಕಾಲೇಜಿನಲ್ಲಿಯೇ ಸೀಟ್‌ ಸಿಕ್ಕಿತು. ನಂತರ ಅಂತಿಮ ವರ್ಷದಲ್ಲಿ ಚಿನ್ನದ ಪದಕ ಗಳಿಸಿದರು.

ಕೊನೆಗೆ ಅದೇ ಕಾಲೇಜಿನಲ್ಲಿಯೇ ರೇಡಿಯಾಲಜಿ ವಿಷಯದಲ್ಲಿ ಸ್ನಾತಕೋತ್ತರ ಪದವಿಗಾಗಿ ಸೀಟ್‌ ಪಡೆದರು. ಅದೇ ಕಾಲೇಜಿನಲ್ಲಿ ಓದುವಾಗಲೇ ವಿಷಯದ ಬಗೆಗಿನ ಇವರ ಥೀಸಿಸ್‌ ಇಡೀ ಭಾರತದಲ್ಲೇ ಉತ್ತಮ ಥೀಸಿಸ್‌ ಎಂಬ ಪ್ರಶಸ್ತಿ ಪಡೆಯಿತು.

IMG_1011

ಪ್ರಸ್ತುತ ಈಗ ದಯಾನಂದ ಸಾಗರ್‌ ದಂತ ವೈದ್ಯಕೀಯ ಕಾಲೇಜಿನಲ್ಲಿ ಪ್ರೊಫೆಸರ್‌ ಮತ್ತು ಹೆಡ್‌ ಆಫ್‌ ದಿ ಡಿಪಾರ್ಟ್‌ ಮೆಂಟ್‌ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿಯೂ ಸದಸ್ಯರಾಗಿದ್ದಾರೆ. 60 ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವೈದ್ಯಕೀಯ ಪ್ರಕಾಶನಗಳು ಮತ್ತು ಮೂರು ಪುಸ್ತಕಗಳಿಗೆ ತಮ್ಮ ಕೊಡುಗೆಯನ್ನು ನೀಡಿದ್ದಾರೆ. ಅನೇಕ ನಿಯತಕಾಲಿಕೆಗಳ ವಿಮರ್ಶಕರಾಗಿದ್ದಾರೆ.

ಬಾಯಿಯ ಕ್ಯಾನ್ಸರ್‌ ನ್ನು ಮೊದಲ ಹಂತದಲ್ಲಿಯೇ ಕಂಡುಹಿಡಿಯಲು ಅಗತ್ಯವಿರುವ ಸಾಧನಗಳ ಬಗ್ಗೆ ಅಧ್ಯಯನ ನಡೆಸಿದ್ದಾರೆ. ಮೊದಲ ಹಂತದಲ್ಲಿರುವ ಕ್ಯಾನ್ಸರ್‌, ಮಧುಮೇಹ ಮತ್ತು ಜಠರದ ಕ್ಯಾನ್ಸರ್‌ ನಂತಹ ಕಾಯಿಲೆಗಳನ್ನು ಕಂಡುಹಿಡಿಯಲು ಬಾಯಲ್ಲಿರುವ ಉಗುಳು ಅಥವಾ ಜೊಲ್ಲಿನಿಂದ ಸಾಧ್ಯ ಎನ್ನುವುದರ ಬಗ್ಗೆ ಬಹಳಷ್ಟು ಅಧ್ಯಯನಗಳನ್ನು ನಡೆಸಿದ್ದಾರೆ.

ಕ್ಲಿಷ್ಟಕರ ಪರಿಸ್ಥಿತಿಗಳನ್ನು ಎದುರಿಸಿ ರೋಗಿಗಳಿಗೆ ನೋವಿನಿಂದ ಬಿಡುಗಡೆ ನೀಡುವಲ್ಲಿ ಪರಿಣಿತರಾಗಿದ್ದಾರೆ. ತಂಬಾಕು ಸೇವನೆಯಿಂದ ಎದುರಿಸ ಬೇಕಾದ ತೊಂದರೆಗಳ ಬಗ್ಗೆ ವಿದ್ಯಾರ್ಥಿಗಳು ಮತ್ತು ರೋಗಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಿದ್ದಾರೆ.

ಪ್ರತಿಷ್ಠಿತ ದೇವಾಂಗ್‌ ಮೆಹ್ತಾ ರಾಷ್ಟ್ರೀಯ ಶಿಕ್ಷಣ ಪ್ರಶಸ್ತಿಯನ್ನು ಪಡೆದಿದ್ದಾರೆ. ತೈವಾನ್‌ ರಾಷ್ಟ್ರಕ್ಕೆ ಅತಿಥಿ ಭಾಷಣಕಾರರಾಗಿ ಆಹ್ವಾನಿತರಾಗಿರುತ್ತಾರೆ.

2019ರಲ್ಲಿ `ಉದ್ಯೋಗದಲ್ಲಿ ಉತ್ತಮ ಮಹಿಳೆ’ ಎಂದು ಆಯ್ಕೆಯಾಗಿ ಪ್ರಶಸ್ತಿ ವಿಜೇತರಾಗಿದ್ದಾರೆ. ಇವರ ಸಾಧನೆಗಳು ಅನೇಕ. ವೈದ್ಯರಾಗಿ ಉತ್ತುಂಗ ಶಿಖರಕ್ಕೆ ಏರಿರುವುದಲ್ಲದೆ ಮತ್ತು ಕುಟುಂಬದ ನಿರ್ವಹಣೆಯಲ್ಲೂ ಯಶಸ್ವೀ ಜೀವನ ಇವರದು. ಇವರ ಎಲ್ಲಾ ಕಾರ್ಯಗಳಿಗೂ ಸಹಕಾರ ನೀಡುವ ಪತಿ ಆಲ್ಫ್ರೆಡ್‌ ಮನೋಹರ್‌ ಮತ್ತು ಇಬ್ಬರು ಮಕ್ಕಳ ಸುಖ ಜೀವನ ಛಾಯಾ ಅವರದು. ಆಲ್ ದಿ ಬೆಸ್ಟ್!

ಮಂಜುಳಾ ರಾಜ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ