ಇಂದು ನಮ್ಮ ಬದುಕಿನಲ್ಲಿ ಆಹಾರದಿಂದ ಹಿಡಿದು ಜೀವನಶೈಲಿಯವರೆಗೆ ಬಹಳಷ್ಟು ಬದಲಾವಣೆಗಳು ಆಗಿವೆ. ನಮಗೆ ಬೇಕೋ ಬೇಡವೋ ಅವುಗಳಿಗೆ ನಾವು ಹೊಂದಿಕೊಂಡುಬಿಟ್ಟಿದ್ದೇವೆ. ಅದರ ಪರಿಣಾಮವಾಗಿ ಸಕ್ಕರೆ ಕಾಯಿಲೆ, ಹೃದ್ರೋಗ, ಅಧಿಕ ರಕ್ತದೊತ್ತಡ, ಕ್ಯಾನ್ಸರ್‌ ಮುಂತಾದ ಕಾಯಿಲೆಗಳಿಂದ ನರಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಯುವ ವಯಸ್ಸಿನಲ್ಲಿಯೇ ಕಾಯಿಲೆಗಳು ಆಕ್ರಮಿಸಿ. ಜೀವನವಿಡಿ ಪಥ್ಯ ಮಾಡಲೇಬೇಕಾಗಿರುವುದಲ್ಲದೆ ಇಂಜೆಕ್ಷನ್‌ ಚುಚ್ಚುವಿಕೆ, ಮಾತ್ರೆ ಸಹ ಸೇವಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಅನಾರೋಗ್ಯಕ್ಕೆ ಕಾರಣ

ಇದಕ್ಕೆ ಮುಖ್ಯ ಕಾರಣ, ನಾವು ಆಹಾರ ಸ್ವೀಕರಿಸುವ ರೀತಿಯೇ ನಮ್ಮ ವ್ಯಕ್ತಿತ್ವ, ಆರೋಗ್ಯ, ಮನಸ್ಥಿತಿಯನ್ನು ನಿರ್ಧರಿಸುತ್ತದೆ. ಕೈಗೆ ಸಿಕ್ಕಿದ್ದನ್ನೆಲ್ಲ ತಿನ್ನುವುದು, ಒಂದಿಷ್ಟು ಗಂಟಲಿಗೆ ತುರುಕುವುದು, ಗಬಗಬನೇ ತಿನ್ನುವುದು, ಅವಸರದಲ್ಲಿ ಆಹಾರ ನುಂಗುವುದು, ಕುಕ್ಕರಗಾಲಲ್ಲಿ ಕುಳಿತು ಉಣ್ಣುವುದು, ನಿಂತುಕೊಂಡು ಊಟ ಮಾಡುವುದು….. ಇವೆಲ್ಲ ನಮ್ಮ ಆರೋಗ್ಯಕ್ಕೆ ಮಾರಕವಾಗಿದೆ.

ಮತ್ತೊಂದು ಅನಾರೋಗ್ಯಕ್ಕೆ ಕಾರಣ ನಾವೇ. ದುಃಖ, ಬೇಸರ ಒತ್ತಡದ ಮನಸ್ಥಿತಿಯಲ್ಲಿ ಆಹಾರ ಸೇವಿಸಿದರೆ, ಉತ್ತಮ ಆಹಾರ ಕೂಡ ಸರಿಯಾಗಿ ಪಚನಗೊಳ್ಳದೆ ದೇಹಕ್ಕೆ ಬಾಧೆ ಉಂಟಾಗಬಹುದು. ದೇಹ ಮತ್ತು ಮನಸ್ಸು ಒಂದೇ ನಾಣ್ಯದ ಎರಡು ಮುಖಗಳು. ಒಂದಕ್ಕೆ ರೋಗ ಬಂದರೆ, ಇನ್ನೊಂದಕ್ಕೆ ರೋಗ ಲಕ್ಷಣ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಒತ್ತಡದ ಮನಸ್ಥಿತಿಯಲ್ಲಿ ತಿಂದ ಆಹಾರ ಚೆನ್ನಾಗಿ ಜೀರ್ಣವಾಗುವುದಿಲ್ಲ ಎನ್ನುವುದನ್ನು ವೈದ್ಯ ವಿಜ್ಞಾನ ಸಹ ಒಪ್ಪುತ್ತದೆ. ಇಂದಿನ ದಿನಗಳಲ್ಲಿ ಹೆಚ್ಚು ಬಾಧಿಸುವ ಆಮ್ಲಪಿತ್ತ, ಅಸಿಡಿಟಿ, ಮೈಗ್ರೇನ್‌ ತಲೆನೋವು, ಕುತ್ತಿಗೆಯ ಸ್ನಾಯುಗಳಲ್ಲಿ ಬಿಗಿತ, ಬೆನ್ನುನೋವು, ಮಲಬದ್ಧತೆ ಮುಂತಾದ ರೋಗಗಳಿಗೆ ಇದೇ ಕಾರಣ.

ಆರೋಗ್ಯವೇ ಭಾಗ್ಯ

ಆರೋಗ್ಯವೇ ಭಾಗ್ಯವಲ್ಲವೇ, ಸಕಲ ಸಂಪತ್ತಿಗಿಂತಲೂ ಶರೀರ ಸಂಪತ್ತೆ ಅಧಿಕ. ತಲೆಮಾರುಗಳ ತನಕ ಕುಳಿತು ತಿಂದರೂ ಸವೆಯದಷ್ಟು ಆಸ್ತಿ ಇದ್ದಾಗ್ಯೂ ಆರೋಗ್ಯ ಇಲ್ಲದಿದ್ದರೆ ಏನು ಪ್ರಯೋಜನ? ಇಂದು ಕಾಯಿಲೆಗಳು ಕಾಣಿಸಿಕೊಂಡ ಕೂಡಲೇ ವೈದ್ಯರ ಬಳಿ ದೌಡಾಯಿಸುವುದು, ಹೆಚ್ಚು ಹಣ ಖರ್ಚು ಮಾಡಿ ಗುಣವಾಗದ ಕಾಯಿಲೆಗಳು ನಿರಂತರವಾಗಿ ಕಂಡು ಬರುತ್ತಿರುವ ದೃಶ್ಯ. ಕೆಲವೊಂದು ಮನೆಯಲ್ಲಿರುವ ಪದಾರ್ಥಗಳಿಂದ ರೋಗ ನಿವಾರಣೆಯನ್ನು ಮಾಡಿಕೊಳ್ಳಬಹುದು. ಅದಕ್ಕೆ ಬೇಕಾಗಿರುವುದು ಆಸಕ್ತಿ, ಉತ್ಸಾಹ, ತಾಳ್ಮೆ. ರೋಗಕ್ಕೆ ಸಂಬಂಧಪಟ್ಟ ವಿಷಯಗಳನ್ನು ಗಮನದಲ್ಲಿ ಇಟ್ಟುಕೊಂಡು ನಡೆದರೆ ರೋಗ ಮುಕ್ತ ಜೀವನ ನಡೆಸಲು ಸಾಧ್ಯ.

ರೋಗ ಬರುವುದಕ್ಕೆ ಕಾರಣ ಮುಖ್ಯವಲ್ಲ. ಅದು ಬಂದಾಗ, ಅದರಿಂದ ಸಂಪೂರ್ಣ ಮುಕ್ತರಾಗುವ ಚಿಂತೆ ನಡೆಸಬೇಕು. ಇವುಗಳು ಬರದಂತೆ ತಡೆಗಟ್ಟಲು ನಾವು ನೀವೇ ನಮ್ಮ ಆರೋಗ್ಯ ರಕ್ಷಣೆಗೆ ಮುಂದಾಗಬೇಕು. ಹಾಗಾಗಿ ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ. ನಮ್ಮ ಮಕ್ಕಳು ಆರೋಗ್ಯವಾಗಿರಲು ನಾವೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ನಾವು ಸಮರ್ಥರಾಗಲು ನೆಮ್ಮದಿಯ ಜೀವನ ಮಾಡಲು ಆರೋಗ್ಯವಾಗಿರಬೇಕು. ಕೆಲವು ನಿಯಮಗಳನ್ನು ನಾವು ಪಾಲಿಸಿದರೆ ಆರೋಗ್ಯವಂತರಾಗಿ ಬಾಳಬಹುದು.

ರುಚಿ ಮತ್ತು ಶುಚಿ ಆಹಾರ

ಮೊದಲನೆಯದಾಗಿ ಆಹಾರದಲ್ಲಿ ಪಿಷ್ಟ ಪದಾರ್ಥ, ಪ್ರೋಟೀನ್‌, ಸಕ್ಕರೆ, ಕೊಬ್ಬು, ವಿಟಮಿನ್ಸ್, ಲೋಹ, ಖನಿಜ, ಲವಣಾಂಶಗಳು ಸರಿ ಪ್ರಮಾಣದಲ್ಲಿರಬೇಕು. ಹೆಚ್ಚು ಹಣ್ಣು, ಹಸಿ ತರಕಾರಿ, ಬೇಳೆಕಾಳು, ಮೊಳಕೆಕಾಳು, ಹಾಲು, ಮೊಸರು ಮತ್ತು ಮಜ್ಜಿಗೆ ಮುಂತಾದವುಗಳನ್ನು ಹೆಚ್ಚು ಹೆಚ್ಚಾಗಿ ಬಳಸಿ. ಹಾಗೆ ಹಬೆಯಲ್ಲಿ ಬೆಂದ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಿ. ಯಾವುದೇ ಆಹಾರ ತೆಗೆದುಕೊಂಡರೂ ಸರಿಯಾದ ವೇಳೆಗೆ ಸೇವಿಸಿ. ಬೆಣ್ಣೆ, ಗಿಣ್ಣು (ಚೀಸ್‌), ಕರಿದ ಪದಾರ್ಥ, ಮಾಂಸಾಹಾರಗಳನ್ನು ಆದಷ್ಟು ಕಡಿಮೆ ಸೇವಿಸಿ. ಹಾಗೆ ರಸ್ತೆಯ ಪಕ್ಕದಲ್ಲಿನ ಆಹಾರಗಳನ್ನು ಸೇವಿಸಬೇಡಿ. ಕಾರಣ ಅದರ ಮೇಲೆ ಧೂಳು, ನೊಣ, ಸೊಳ್ಳೆ ಕುಳಿತುಕೊಂಡಿರುತ್ತವೆ. ರೆಡಿ ಟು ಈಟ್‌ ಆಹಾರಗಳನ್ನು ಸಹ ಸೇವಿಸಬೇಡಿ. ನೀವು ಅಡುಗೆಮನೆಯಲ್ಲಿ ಸಿದ್ಧಪಡಿಸಿದ ಆಹಾರಗಳನ್ನು ಮಾತ್ರ ಸೇವಿಸಿ. ಆಹಾರ ಶುಚಿಯಾಗಿ ಮತ್ತು ರುಚಿಯಾಗಿರಬೇಕು. ಆದಷ್ಟೂ ಜಂಕ್‌ಫುಡ್‌ ಮತ್ತು ಫಾಸ್ಟ್ ಫುಡ್ ಗಳಿಂದ ದೂರವಿರಿ.

ಮುಖ್ಯವಾಗಿ ಆಗಾಗ್ಗೆ ಆಹಾರವನ್ನು ಹೆಚ್ಚು ತಿನ್ನಬೇಡಿ. ತೂಕ ಹೆಚ್ಚಾಗದಂತೆ ಎಚ್ಚರವಹಿಸಿ. ತೂಕ ಹೆಚ್ಚಾದಷ್ಟು ನಾನಾ ರೀತಿಯ ಕಾಯಿಲೆಗಳು ಬರುತ್ತವೆ. ಆಹಾರ ತಿನ್ನುವಾಗ ನಿಮ್ಮ ವಯಸ್ಸಿಗೆ ತಕ್ಕಂತೆ ಇರಲಿ. ಎತ್ತರಕ್ಕೆ ಅನುಗುಣವಾಗಿ ನಿಮ್ಮ ಶರೀರದ ತೂಕ ಇದೆಯೇ ನೋಡಿಕೊಳ್ಳಿ. ತೂಕ ಹೆಚ್ಚು ಕಡಿಮೆ ಎಂದಾದರೆ ನಿಮ್ಮ ಪರಿಚಯದ ವೈದ್ಯರ ಸಲಹೆ ಪಡೆಯಿರಿ. ರಾತ್ರಿ ಹೊತ್ತು ಕಡಿಮೆ ಊಟ ಮಾಡಿ. ಬೆಳಗ್ಗೆಯಿಂದ ಸಾಯಂಕಾಲದವರೆಗೆ ಹೆಚ್ಚಾಗಿ 2-3 ಲೀಟರ್‌ ನೀರನ್ನು ಕುಡಿಯಿರಿ. ಸಂಜೆ ಮೇಲೆ ನೀರು ಹೆಚ್ಚಾಗಿ ಕುಡಿಯಬೇಡಿ.

ಜೀವನ ಶೈಲಿ

ದಿನಕ್ಕೆ ಒಂದು ಗಂಟೆ ಕಾಲ ಶರೀರಕ್ಕೆ ವ್ಯಾಯಾಮ ಆಗುವಂತಹ ಕೆಲವು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಶರೀರಕ್ಕೆ ವ್ಯಾಯಾಮ ಇಲ್ಲದಿದ್ದರೆ ಮನಸ್ಸಿಗೆ ಬೇಸರ, ದುಃಖ, ಸಿಟ್ಟು, ಭಯಗಳಿದ್ದರೆ ಹಸಿವು ಕಡಿಮೆಯಾಗುತ್ತದೆ. ಜೊತೆಗೆ ಬಾಯಿರುಚಿ ಹೋಗುತ್ತದೆ. ಆದ್ದರಿಂದ ನಿತ್ಯ ವ್ಯಾಯಾಮ, ನಡಿಗೆ, ಓಟ, ಈಜುವುದು, ಸೈಕಲ್ ತುಳಿಯುವುದು, ಬಯಲಿನಲ್ಲಿ ಆಟಗಳನ್ನು ಆಡುವುದು ಇಂಥವುಗಳನ್ನು ಮಾಡಿ. ಹಾಗೇ ಮೈಬಗ್ಗಿಸಿ ಮಾಡುವ ಕೆಲಸಗಳು, ಗಾರ್ಡನ್‌ ನಲ್ಲಿ ತರಕಾರಿ ಬೆಳೆಸುವುದು ಮುಂತಾದವುಗಳನ್ನು ಜೀವನಶೈಲಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಿ.

ಹಾಗೆ ಯೋಗ, ಧ್ಯಾನ, ಪ್ರಾಣಾಯಾಮವನ್ನು ದಿನಕ್ಕೆ 20 ನಿಮಿಷ ಮಾಡಿ. ಇದರಿಂದ ಮನಸ್ಸಿನ ಒತ್ತಡ ಕಡಿಮೆಯಾಗುತ್ತದೆ.

ದಿನನಿತ್ಯ ಸ್ನಾನ, ಬೆಳಗ್ಗೆ ಮತ್ತು ಸಂಜೆ ಹಲ್ಲುಜ್ಜುವುದು, ಹಾಗೆಯೇ ಒಳ ಉಡುಪುಗಳನ್ನು ಬದಲಿಸಿ ತೊಡುವುದು, ಉಗುರುಗಳನ್ನು ಅತಿಯಾಗಿ ಬೆಳೆಸದೆ ಆಗಾಗ ಕತ್ತರಿಸಿಕೊಳ್ಳುವುದು. ದಿನಕ್ಕೆ ಮೂರು ನಾಲ್ಕು ಸಲ ಕೈಕಾಲುಗಳನ್ನು ಸ್ವಚ್ಛ ಮಾಡಿಕೊಳ್ಳುವುದೂ ಸಹ ಮುಖ್ಯ.

ಮನೆಯ ಸ್ವಚ್ಛತೆಯೇ ನಮ್ಮ ಆರೋಗ್ಯಕ್ಕೆ ಮೂಲಕಾರಣ. ಮನೆಯ ಒಳಗೆ, ಅಕ್ಕಪಕ್ಕ ಮತ್ತು ಮನೆಯ ಮುಂದೆ ಸ್ವಚ್ಛವಾಗಿಡುವುದು ಮುಖ್ಯ ಕೆಲಸ. ಸೊಳ್ಳೆ, ನೊಣ, ಹಲ್ಲಿ, ಜಿರಲೆ ಇವುಗಳನ್ನು ನಿವಾರಿಸಿ. ಹಾಗೆಯೇ ಶೌಚಾಲಯವನ್ನು ಶುಚಿಯಾಗಿಟ್ಟುಕೊಳ್ಳಿ. ಯಾವಾಗಲೂ ಸ್ವಚ್ಛತೆಯಿಂದ ಇಟ್ಟುಕೊಂಡರೆ ಆರೋಗ್ಯಕ್ಕೆ ಒಳ್ಳೆಯದು.

ಸರಳ ತೃಪ್ತಿಕರ ಜೀವನ

ಇನ್ನು ಮುಖ್ಯವಾಗಿ ನೀವು ಯಾವಾಗಲೂ ನಗುಮುಖದಿಂದ ಇರಿ. ದುಗುಡ ದುಮ್ಮಾನಗಳನ್ನು ಬಿಟ್ಟು ಮಾನಸಿಕ ನೆಮ್ಮದಿಯಿಂದ ಇರಿ. ಇವರು ಸಂಪನ್ಮೂಲದಲ್ಲೇ ಸರಳ, ತೃಪ್ತಿಕರ ಜೀವನ ನಡೆಸಿ. ಅತಿಯಾಸೆ ಪಡಬೇಡಿ. ನಿಮ್ಮ ಆಸೆ ಆಕಾಂಕ್ಷೆ ನಿರೀಕ್ಷೆಗಳನ್ನು ಕಡಿಮೆ ಮಾಡಿ. ಅತೃಪ್ತಿಯಿಂದ ನೋವು, ನಿರಾಶೆ, ದುಃಖ, ಸಿಟ್ಟು, ಮತ್ಸರಗಳು ನಮ್ಮ ಬೆನ್ನು ಹತ್ತುತ್ತವೆ. ಇದ್ದುದರಲ್ಲಿ ತೃಪ್ತಿ, ಏನನ್ನೋ ಸಾಧಿಸಿದ್ದರಲ್ಲೇ ತೃಪ್ತಿ, ಅನುಭವಿಸಿದ್ದರಲ್ಲೇ ತೃಪ್ತಿ ಕಾಣುವ ಮನೋಭಾವ ಬೆಳೆಸಿಕೊಳ್ಳಿ. ಇದರಿಂದ ಆನಂದ, ಖುಷಿ ಸಿಗುತ್ತದಲ್ಲದೆ, ಆರೋಗ್ಯ ಸಹ ವೃದ್ಧಿಸುತ್ತದೆ. ಎಲ್ಲರೊಡನೆ ಸ್ನೇಹ ಪ್ರೀತಿಯಿಂದ ಇರಿ. ಯಾರನ್ನೂ ದ್ವೇಷ ಮಾಡಬೇಡಿ. ಇನ್ನೊಬ್ಬರಿಂದ ಕಿರಿಕಿರಿ ಆಗಿದ್ದರೆ, ಅವರಿಂದ ಆದಷ್ಟು ದೂರವಿರಿ. ಇನ್ನೊಬ್ಬರಿಗೆ ಮೋಸ ಮಾಡಿ ವಂಚನೆ ಮಾಡಬೇಡಿ. ಯಾರೊಂದಿಗೆ ಬದುಕಬೇಕೋ ವ್ಯವಹರಿಸಬೇಕೋ ಅವರೊಂದಿಗೆ ಸಹಕರಿಸಿ ಗೌರವ ತೋರಿಸಿ.

ಆತ್ಮವಿಶ್ವಾಸ ಹೆಚ್ಚಿಸಿ

ಆರೋಗ್ಯಕರ ಹವ್ಯಾಸಗಳಾದ ಸಂಗೀತ ಸಾಹಿತ್ಯ, ಕರಕುಶಲಕಲೆ, ಕ್ರೀಡೆಗಳನ್ನು ಬೆಳೆಸಿಕೊಳ್ಳಿ. ಧರ್ಮ ಆಧ್ಯಾತ್ಮದಲ್ಲಿ ಆಸಕ್ತಿ ವಹಿಸಿ, ಚಿಂತೆ ಮರೆತು ಖುಷಿಯಾಗಿರಿ. ಕಷ್ಟ ಸಮಸ್ಯೆಗಳು ಬಂದಾಗ ಮನಸ್ಸಿನಲ್ಲಿ ದೇವರ ಧ್ಯಾನ ಪ್ರಾರ್ಥನೆ ಮಾಡಿ. ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಿ. ನಿಮ್ಮ ನಿತ್ಯ ಕೆಲವು ಕರ್ತವ್ಯಗಳನ್ನು ಶ್ರದ್ಧೆಯಿಂದ ಮಾಡಿ. ನಮ್ಮ ಬಗ್ಗೆ ಆತ್ಮವಿಶ್ವಾಸ ಸ್ವಾಭಿಮಾನವಿದ್ದರೆ ಕಷ್ಟಕರ ಸನ್ನಿವೇಶ ಸಂದರ್ಭದಲ್ಲೂ ಯಶಸ್ಸನ್ನು ಗಳಿಸಬಲ್ಲೆವು.

ಯಾವುದೇ ದೈಹಿಕ ಮತ್ತು ಮಾನಸಿಕ ಕಾಯಿಲೆ ಇಲ್ಲದಿರುವುದೇ ಆರೋಗ್ಯ. ಪ್ರತಿಯೊಂದು ಕೆಲಸ ಕಾರ್ಯಗಳನ್ನು ಮಾಡಲು ಅವಶ್ಯವಿರುವ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ಚೆನ್ನಾಗಿರಬೇಕು. ಮನಸ್ಸು ಭಾವೋದ್ವೇಗಕ್ಕೆ ಒಳಗಾಗಿರದೇ ಪ್ರಶಾಂತವಾಗಿರಬೇಕು. ಆಗ ಮಾತ್ರ ಪರಿಪೂರ್ಣ ಆರೋಗ್ಯ ಎನಿಸಿಕೊಳ್ಳುತ್ತದೆ. ಈ ಪರಿಪೂರ್ಣ ಆರೋಗ್ಯವನ್ನು ಸಂಪಾದಿಸಿ ಉಳಿಸಿಕೊಳ್ಳಲು ನಾವೆಲ್ಲರೂ ಪ್ರಾಮಾಣಿಕವಾಗಿ ಪ್ರಯತ್ನ ಮಾಡಬೇಕು.

ಆರೋಗ್ಯ ಭಾಗ್ಯವೇ ಸಕಲ ಭಾಗ್ಯಗಳಲ್ಲಿ ಮಿಗಿಲಾದುದು. ಈ ಭಾಗ್ಯವನ್ನು ಸಂಪಾದಿಸಿ ನಿಮ್ಮ ಮನೆಯವರಿಗೂ, ಮಕ್ಕಳಿಗೂ ಸಹ ಸಂಪಾದಿಸಲು ಅನುವು ಮಾಡಿಕೊಡಿ. ನಮ್ಮ ಬೆಳೆಯುವ ಮಕ್ಕಳು ದೈಹಿಕವಾಗಿ, ಮಾನಸಿಕವಾಗಿ ಮತ್ತು ಸಾಮಾಜಿಕವಾಗಿ ಸದೃಢವಾಗಿ ಬೆಳೆಯಬೇಕು. ನಮ್ಮ ಆರೋಗ್ಯದ ಪ್ರಯತ್ನ ನಿರಂತರವಾಗಿರಲಿ.

ರಾಜೇಶ್ವರಿ ವಿಶ್ವನಾಥ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ