– ರಾಘವೇಂದ್ರ ಅಡಿಗ ಎಚ್ಚೆನ್.
ಬಿಜೆಪಿ ಯುವ ಘಟಕದ ಅಧ್ಯಕ್ಷ, ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಮತ್ತು ತಮಿಳುನಾಡಿನ ಖ್ಯಾತ ಗಾಯಕಿ ಶಿವಶ್ರೀ ಸ್ಕಂದ ಪ್ರಸಾದ್ ಮದುವೆ ನಡೆದಿದೆ. ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ರೆಸಾರ್ಟ್ನಲ್ಲಿ ಇಬ್ಬರ ಮದುವೆ ಸಂಪ್ರದಾಯಬದ್ಧವಾಗಿ ನಡೆದಿದೆ. ಇಂದು ಬೆಳಗ್ಗೆ ಶುಭ ಮುಹೂರ್ತ 10.45ರ ತುಲಾ ಲಗ್ನದಲ್ಲಿ ತೇಜಸ್ವಿ ಸೂರ್ಯ ಮತ್ತು ಶಿವಶ್ರೀ ಅವರ ಮದುವೆ ನಡೆದಿದೆ. ಇಂದು ಸಂಜಯೇ ಬೆಂಗಳೂರಿನ ಗಿರಿನಗರದಲ್ಲಿರುವ ನಿವಾಸದಲ್ಲಿ ಮನೆ ತುಂಬಿಸಿಕೊಳ್ಳುವ ಶಾಸ್ತ್ರ ನಡೆಯಲಿದೆ.
ಬುಧವಾರ ಸಂಜೆಯಿಂದಲೇ ರೆಸಾರ್ಟ್ನಲ್ಲಿ ವರಪೂಜೆ ಸೇರಿದಂತೆ ವಿವಿಧ ಮದುವೆ ಶಾಸ್ತ್ರಗಳು ಅರಂಭಗೊಂಡಿದ್ದವು. ಮದುವೆಯಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ, ಸಂಸದ ಸಿಎನ್ ಮಂಜುನಾಥ್, ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್, ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ, ವಿನಯ್ ಗುರೂಜಿ, ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಹಲವು ರಾಜಕೀಯ ಮತ್ತು ರಾಜಕೀಯೇತರ ಮುಖಂಡರು ಭಾಗವಹಿಸಿದ್ದರು.
ಮದುವೆಗೆ ಎರಡು ಕುಟುಂಬದ ಆಪ್ತ ಸದಸ್ಯರು ಮತ್ತು ಅತ್ಯಾಪ್ತ ರಾಜಕೀಯ ಗಣ್ಯರಿಗೆ ಆಹ್ವಾನಿಸಲಾಗಿತ್ತು. ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ತೇಜಸ್ವಿ ಸೂರ್ಯ ಮತ್ತು ಶಿವಶ್ರೀ ಸ್ಕಂದ ಪ್ರಸಾದ್ ವೈವಾಹಿಕ ಜೀವನಕ್ಕೆ ಕಾಲಿಟಿದ್ದಾರೆ.
ಮಾರ್ಚ್ 9ರಂದು ಅದ್ಧೂರಿಯಾಗಿ ಬೆಂಗಳೂರಿನ ಅರಮನೆ ಮೈದಾನದ ಗಾಯಿತ್ರಿ ವಿಹಾರದಲ್ಲಿ ತೇಜಸ್ವಿ ಸೂರ್ಯ ಮತ್ತು ಶಿವಶ್ರೀ ಸ್ಕಂದ ಪ್ರಸಾದ್ ಆರತಕ್ಷತೆ ನಡೆಯಲಿದೆ. ಈ ವೇಳೆ ರಾಜ್ಯ-ದೇಶದ ರಾಜಕೀಯ ಗಣ್ಯರು ಭಾಗಿಯಾಗಲಿದ್ದಾರೆ.
ಯಾರು ಈ ಶಿವಶ್ರೀ?
ತಮಿಳುನಾಡು ಮೂಲದ ಶಿವಶ್ರೀ ಅವರು ಗಾಯನವಲ್ಲದೆ ಭರತನಾಟ್ಯ ಕಲಾವಿದೆ ಕೂಡ ಹೌದು. ಮದ್ರಾಸ್ ವಿಶ್ವವಿದ್ಯಾಲಯದಿಂದ ಭರತನಾಟ್ಯದಲ್ಲಿ ಪದವಿಯನ್ನೂ ಗಳಿಸಿದ್ದಾರೆ. ಆಯೋಧ್ಯೆ ರಾಮಮಂದಿರ ಉದ್ಘಾಟನೆ ಸಂದರ್ಭದಲ್ಲಿ ಶಿವಶ್ರೀ ಅವರು ಹಾಡಿದ ರಾಮನ ಕುರಿತ ಗೀತೆಯನ್ನು ಮೆಚ್ಚಿ ಪ್ರಧಾನಿ ಮೋದಿ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.