– ರಾಘವೇಂದ್ರ ಅಡಿಗ ಎಚ್ಚೆನ್.
ಯುವ’ ಸಿನಿಮಾದಿಂದ ಕನ್ನಡ ಚಿತ್ರರಂಗ ಪ್ರವೇಶಿಸಿದ ದೊಡ್ಮನೆ ಕುಡಿ ಯುವ ರಾಜ್ಕುಮಾರ್ ತಮ್ಮ ಮೊದಲ ಚಿತ್ರದಿಂದಲೇ ಅಭಿಮಾನಿಗಳ ಮನ ಗೆದ್ದಿದ್ದಾರೆ. ಇಂದು ನಟನಿಗೆ 32ನೇ ಹುಟ್ಟುಹಬ್ಬದ ಸಂಭ್ರಮ. ಸದ್ಯ ‘ಎಕ್ಕ’ ಚಿತ್ರದ ಸಲುವಾಗಿ ಸುದ್ದಿಯಲ್ಲಿರುವ ಯುವ ತಮ್ಮ ಸದಾಶಿವನಗರ ನಿವಾಸದಲ್ಲಿ ಕೇಕ್ ಕತ್ತರಿಸದೇ ಅಭಿಮಾನಿಗಳ ಜೊತೆ ಜನ್ಮದಿನ ಆಚರಿಸಿಕೊಂಡರು.
ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿ ಹಿನ್ನೆಲೆಯಲ್ಲಿ ಯುವ ರಾಜ್ಕುಮಾರ್ ಕೇಕ್ ಕತ್ತರಿಸದಿರಲು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡರು. ಅಲ್ಲದೇ ಯುವ ಬರ್ತ್ಡೇ ಗಿಫ್ಟ್ ಆಗಿ ಇಂದು ಬೆಳಗ್ಗೆ ಎಕ್ಕ ಸಿನಿಮಾದ ಟೀಸರ್ ರಿಲೀಸ್ ಆಗಬೇಕಿತ್ತು. ಆದ್ರೆ ಉಗ್ರರ ದಾಳಿ ಹಿನ್ನೆಲೆಯಲ್ಲಿ ಟೀಸರ್ ಬಿಡುಗಡೆ ಮುಂದೂಡಲಾಯಿತು. ಬೆಳಗ್ಗೆ ಬಿಡುಗಡೆ ಆಗಬೇಕಿದ್ದ ಟೀಸರ್ ಅನ್ನು ಸಂಜೆ ಅನಾವರಣಗೊಳಿಸುವುದಾಗಿ ನಿರ್ಮಾಪಕ ಕಾರ್ತಿಕ್ ಗೌಡ ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ಮಾಹಿತಿ ಹಂಚಿಕೊಂಡರು. ಇದರ ಜೊತೆಗೆ ಉಗ್ರರಿಗೆ ತಕ್ಕ ಶಿಕ್ಷೆ ಆಗಬೇಕೆಂದು ನಟ ಯುವ ರಾಜ್ಕುಮಾರ್ ಆಗ್ರಹಿಸಿದ್ದಾರೆ. ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದಿರುವ ದಾಳಿ ಖಂಡನೀಯ. ಈ ರೀತಿ ಮುಗ್ಧ ಜನರನ್ನು ಕೊಲ್ಲೋದು ಸರಿಯಲ್ಲ. ದಾಳಿ ನಡೆಸಿದ ಉಗ್ರರಿಗೆ ತಕ್ಕ ಶಿಕ್ಷೆ ಆಗಬೇಕು. ಮತ್ತೆ ಮತ್ತೆ ಈ ರೀತಿಯ ದಾಳಿ ಆಗ್ತಿದ್ದು, ಸರ್ಕಾರ ಸರಿಯಾದ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಇನ್ನೂ ಕಾಶ್ಮೀರದಲ್ಲಿ ಯುವ ಸಾಂಗ್ ಶೂಟ್ ಆದ ಬಗ್ಗೆ ಮಾತನಾಡಿದರು. ಲಡಾಕ್ನಲ್ಲಿ ಚಿತ್ರೀಕರಣ ನಡೆಸಿದೆವು. ಅಲ್ಲಿ ದಾಳಿಯ ಯಾವುದೇ ಅನುಭವ ಆಗಿರಲಿಲ್ಲ. ಅಲ್ಲಿ ಸೇನೆಯ ರಕ್ಷಣೆಯಿತ್ತು. ಯಾವುದೇ ಅಹಿತಕರ ಘಟನೆಗಳು ಆಗಲಿಲ್ಲವೆಂದರು.
ಎಕ್ಕ ಸಿನಿಮಾದಲ್ಲಿ ರಗಡ್ ಲುಕ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾದ ಚಿತ್ರಕಥೆಯನ್ನು ರೋಹಿತ್ ಪದಕಿ ಮತ್ತು ವಿಕ್ರಮ್ ಹತ್ವಾರ್ ಬರೆದಿದ್ದು, ಸಂಗೀತವನ್ನು ಚರಣ್ ರಾಜ್ ಸಂಯೋಜಿಸಲಿದ್ದಾರೆ. ಹಾಡುಗಳಿಗೆ ಸಾಹಿತ್ಯವನ್ನು ವಿ.ನಾಗೇಂದ್ರ ಪ್ರಸಾದ್, ನಾಗಾರ್ಜುನ ಶರ್ಮಾ, ಡಾಲಿ ಧನಂಜಯ್ ಹಾಗೂ ರೋಹಿತ್ ಪದಕಿ ಬರೆಯಲಿದ್ದಾರೆ.
ರೋಹಿತ್ ಪದಕಿ ನಿರ್ದೇಶನವಿರುವ ಚಿತ್ರಕ್ಕೆ ಸತ್ಯ ಹೆಗಡೆ ಮುಖ್ಯ ಛಾಯಾಗ್ರಾಹಕರಾಗಿದ್ದು, ದೀಪು ಎಸ್.ಕುಮಾರ್ ಸಂಕಲನಕಾರರಾಗಿ ಕೆಲಸ ಮಾಡಲಿದ್ದಾರೆ. ವಿಶ್ವಾಸ್ ಕಶ್ಯಪ್ ಪ್ರೊಡಕ್ಷನ್ ವಿನ್ಯಾಸವನ್ನು ನೋಡಿಕೊಳ್ಳಲಿದ್ದಾರೆ. ಚಿತ್ರದ ಫೈಟ್ಸ್ ಸೀನ್ಗಳನ್ನು ಅರ್ಜುನ್ ರಾಜ್ ಮತ್ತು ಚೇತನ್ ಡಿಸೋಜಾ ನಿರ್ದೇಶಿಸಲಿದ್ದಾರೆ. ಅಶ್ವಿನಿ ಪುನೀತ್ ರಾಜ್ ಕುಮಾರ್ ಪಿ.ಆರ್.ಕೆ ಪ್ರೊಡಕ್ಷನ್ಸ್, ಜಯಣ್ಣ ಮತ್ತು ಭೋಗೇಂದ್ರ ಜಯಣ್ಣ ಫಿಲಂಸ್ ಹಾಗು ಕಾರ್ತಿಕ್ ಗೌಡ ಮತ್ತು ಯೋಗಿ ಜಿ.ರಾಜ್ ಕೆ.ಆರ್.ಜಿ.ಸ್ಟುಡಿಯೋಸ್ ಲಾಂಛನದಡಿಯಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ.