ಲಲಿತಕಲೆಗಳ ಆಗರ, ಸಾಹಿತ್ಯದ ಭಂಡಾರ, ಚುಟುಕುಗಳ ಚಮತ್ಕಾರ, ಮಂತ್ರಮುಗ್ಧಗೊಳಿಸುವ ಶಬ್ದ ಮಾಂತ್ರಿಕೆ, ದೇಶ ಸುತ್ತು ಕೋಶ ಓದು ಎನ್ನುವುದನ್ನು ನಿರೂಪಿಸುತ್ತಾ, ಸಾಗುತ್ತಿರುವ ಮಹಾನ್‌ ಪ್ರತಿಭಾನ್ವಿತ ಮಹಿಳಾ ಸಾಹಿತಿ, ನೃತ್ಯ ಕಲಾವಿದೆ, ಕ್ವಿಜ್‌ಕ್ವೀನ್‌, ಸಕಲಕಲಾವಲ್ಲಭೆ ಆಶಾ ಮೋಹನ್‌ ರ ಪರಿಚಯ ಪಡೆಯೋಣವೇ…..?

ಲಲಿತಾ ರಾವ್ ಹಾಗೂ ಕೆ.ವಿ. ರಾವ್‌ ರವರ ಪುತ್ರಿಯಾಗಿ ಜನಿಸಿದವರು ಆಶಾ ಮೋಹನ್‌. ತಮ್ಮ ಮನೆ ದೇವರಾದ ಕಲ್ಲಹಳ್ಳಿ ವೆಂಕಟರಮಣಸ್ವಾಮಿ ರಥೋತ್ಸವದ ದಿನ ಹುಟ್ಟಿದ ಕಾರಣ ಮಗುವಿಗೆ ಪದ್ಮಿನಿ (ವ್ಯಾವಹಾರಿಕ ನಾಮ ಆಶಾ ಮೋಹನ್‌) ಎಂದೇ ನಾಮಕರಣ ಮಾಡಿದರು. ಬೆಳೆಯುವ ಪೈರು ಮೊಳಕೆಯಲ್ಲಿ ಎಂಬಂತೆ ಎರಡು ವರ್ಷದ ಮಗು, ಅರಳು ಹುರಿದಂತೆ ಮಾತನಾಡುತ್ತ ಎಲ್ಲರ ಗಮನ ಸೆಳೆಯುತ್ತಿತ್ತು. ಬೇಬಿ ಪದ್ಮಿನಿ ಎಂಬ ಹೆಸರಿನಿಂದ ಹಲವಾರು ನಾಟಕಗಳಲ್ಲಿ ಅಭಿನಯಿಸುತ್ತಾ ಬೆಳೆದರು. 8 ವರ್ಷದ ಮಗು ಸುಲಲಿತವಾಗಿ ಸಣ್ಣ ಪುಟ್ಟ ಕಥೆ ಕವನಗಳನ್ನು ಬರೆಯಲು ಶುರು ಮಾಡಿತು. ಇದನ್ನು ಗಮನಿಸಿದ ಹೆತ್ತವರು ಮಗುವನ್ನು ಇನ್ನೂ ಎತ್ತರಕೆ ಬೆಳೆಯಲು ಪ್ರೋತ್ಸಾಹಿಸಿ ಹುರಿದುಂಬಿಸುತ್ತಿದ್ದರು. ತಮ್ಮ ಹತ್ತನೇ ವಯಸ್ಸಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು, ಸಂತ ಸಾಹಿತ್ಯೋತ್ಸವ ಮುಂತಾದ ಕಾರ್ಯಕ್ರಮಗಳಲ್ಲಿ ನಿರರ್ಗಳವಾಗಿ ಕನ್ನಡದಲ್ಲಿ ಭಾಷಣ ಮಾಡುವ ಮುಖೇನ ಜನ ಮೆಚ್ಚುಗೆ ಗಳಿಸಿದರು. ಅಲ್ಲದೆ ಇದನ್ನು ಗಮನಿಸಿದ ಅಂದಿನ ಮಂತ್ರಿಗಳಾದ ಬಿ. ರಾಚಯ್ಯ, ಶಿವಮೂರ್ತಿ ಶಾಸ್ತ್ರಿಗಳು ಆಶ್ಚರ್ಯಚಕಿತರಾಗಿ, ಹೂವಿನ ಹಾರವನ್ನು ಮಗುವಿನ ಕೊರಳಿಗೆ ಹಾಕಿ ಕಾಣಿಕೆ ನೀಡಿ ಸನ್ಮಾನಿಸಿದರು. ಕರ್ನಾಟಕ ಸರ್ಕಾರದಿಂದ ಏರ್ಪಡಿಸಿದ್ದ ವೇಷಭೂಷಣ ಸ್ಪರ್ಧೆಯಲ್ಲಿ ಕೊರವಂಜಿಯಾಗಿ ಅಭಿನಯಿಸಿ ಜನಕ್ಕೆ ಕಣಿ ಹೇಳಿ ಜನಮನ ಸೆಳೆದರು. ಪ್ರತಿಯಾಗಿ ಬಾಲಕಿಗೆ ಮುಖ್ಯಮಂತ್ರಿಗಳಿಂದ ವಿಶೇಷ ಬಹುಮಾನ ದೊರಕಿದ್ದು ಮರೆಯಲಾಗದ ಸುದಿನವಾಯಿತು.

IMG-20230306-WA0217

ಬೆಳೆಯುವ ಚಿಗುರು ಮೊಳಕೆಯಲ್ಲಿ

ಆಕಾಶವಾಣಿಯಲ್ಲಿ ಪ್ರಸಾರವಾಗುತ್ತಿದ್ದ ಮಕ್ಕಳ ಹಾಗೂ ಮಹಿಳೆಯರ ಕಾರ್ಯಕ್ರಮಕ್ಕೆ ಕನ್ವೀನರ್‌ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಆಕಾಶವಾಣಿಯಲ್ಲಿ ಗಣಿತ ಶಾಸ್ತ್ರ ಪ್ರವೀಣೆ `ಲೀಲಾವತಿ’ ನಾಟಕದಲ್ಲಿ ಲೀಲಾವತಿಯ ಪಾತ್ರ ನಿರ್ವಹಿಸಿ ಲೀಲಾಜಾಲವಾಗಿ ಗಣಿತವನ್ನು ಬಿಡಿಸುವ ರೀತಿ ಅಚ್ಚರಿ ಮೂಡಿಸುವಂತಿತ್ತು.

IMG-20220928-WA0297

ನಾಟಕಗಳಲ್ಲಿ ಮಿಂಚಿದ ಪ್ರತಿಭೆ

ಸನ್ಮಿತ್ರ ಕಲಾ ತಂಡದವರೊಂದಿಗೆ ಕಾಲೇಜು ಹುಡುಗಿಯಾಗಿ ನಾಯಕಿ ಪಾತ್ರದಲ್ಲಿ `ಪಿಕ್‌ ಪಾಕೆಟ್‌’ ನಾಟಕ ಹಲವಾರು ಪ್ರದರ್ಶನಗಳನ್ನು ಪೂರೈಸಿ ಯಶಸ್ವಿಗೊಂಡಿತ್ತು. ಇಂಡಿಯನ್‌ ಬ್ಯಾಂಕ್‌ ವಾರ್ಷಿಕೋತ್ಸವದಲ್ಲಿ `ನಂಜಿನ ನಾಲಿಗೆ’ ನಾಟಕದಲ್ಲಿ ಮತ್ತೆ ನಾಯಕಿಯ ಪಾತ್ರದಲ್ಲಿ ಮಿಂಚಿದರು. ಕನ್ನಡವಲ್ಲದೆ, ಶೇಕ್ಸ್ ಪಿಯರ್‌ ನ ಮ್ಯಾಕ್‌ ಬೆತ್‌ ನಲ್ಲಿಯೂ ಅಭಿನಯಿಸಿದ್ದಾರೆ. ಹಿಂದಿಯಲ್ಲಿ ಗೌತಮ ಬುದ್ಧ ಜೀವನ ಚರಿತ್ರೆ ಆಧಾರಿತ ಕಥಾ ಭಾಗ ಸಿದ್ಧಾರ್ಥದಲ್ಲಿಯೂ ನಟಿಸಿ ಅಭಿನಯಕ್ಕೆ ಭಾಷೆ ಮುಖ್ಯವಲ್ಲ ಎಂಬುದನ್ನು ಸಾಬೀತುಗೊಳಿಸಿದರು. ಇತ್ತೀಚೆಗೆ ಕಿತ್ತೂರು ರಾಣಿ ಚೆನ್ನಮ್ಮ ನಾಟಕದಲ್ಲಿ ಹಿರಿಯ ರಾಣಿ ರುದ್ರಮ್ಮನ ಪಾತ್ರ ಜನಮನ ಸೆಳೆಯಿತು. ಸುಚಿತ್ರ ಫಿಲ್ಮಂ ಸೊಸೈಟಿ ಹಾಗೂ ನಯನ ಸಭಾಂಗಣದಲ್ಲಿ ಎರಡು ಯಶಸ್ವಿ ಪ್ರದರ್ಶನ ಕಂಡು ಮೂರನೆಯ ಪ್ರದರ್ಶನಕ್ಕೆ ಸಿದ್ಧವಾಗಿದೆ.

IMG-20230211-WA0161

ಕಿರುತೆರೆಯಲ್ಲಿ……

ಉದಯ, ಚಂದನ, ಶಂಕರ, ಸುವರ್ಣ ಚಾನೆಲ್ ‌ಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ನಿರೂಪಣೆ ಹಾಗೂ ನಿರ್ದೇಶನದ ಹೊಣೆ ಹೊತ್ತು ಮಹಿಳೆಯರಿಂದ ಒಂದು ಗಂಟೆಯ ಕಾರ್ಯಕ್ರಮದ ಅವಕಾಶವನ್ನು ಪಡೆದು ವೀಕ್ಷಕರ ಪ್ರಶಂಸೆಗೆ ಪಾತ್ರರಾಗಿ ಹಲವು ಬಾರಿ ಪ್ರಸಾರವಾಗಲು ಅನುಮತಿ ದೊರಕಿತು. ಗಾಯನ ಸಮಾಜದಲ್ಲಿ ಆಕಾಶವಾಣಿಯವರು ಏರ್ಪಡಿಸುತ್ತಿದ್ದ ಕ್ರೀಡೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಸ್ಪರ್ಧೆಯಲ್ಲಿ ಹೆಚ್ಚಿನ ಬಹುಮಾನ ಲಭಿಸಿದೆ.

ರಾಜ್ಯ ಮಟ್ಟದಲ್ಲಿ ನಡೆದ ಕಿತ್ತೂರು ರಾಣಿ ಚೆನ್ನಮ್ಮ ಚರ್ಚಾ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ವೈಯಕ್ತಿಕ ಬಹುಮಾನ ಹಾಗೂ ಶಾಲೆಗೆ ಶೀಲ್ಡ್ ತರುವ ಮುಖೇನ ಕೀರ್ತಿ ತಂದಿದ್ದಾರೆ. ಚಿಕ್ಕ ವಯಸ್ಸಿನಿಂದಲೂ ವ್ಯಾಸಂಗದಲ್ಲಿ ಪ್ರಥಮ ಸ್ಥಾನದಲ್ಲೇ ಬಂದ ಇವರು 7ನೇ ತರಗತಿಯಲ್ಲಿ ಅತ್ಯಂತ ಹೆಚ್ಚು ಅಂಕ ಪಡೆದು ಸ್ಕಾಲರ್‌ ಶಿಪ್‌ ಪಡೆದರು, 10ನೇ ತರಗತಿಯಲ್ಲಿ ಶಾಲೆಗೆ ಪ್ರಥಮ ಸ್ಥಾನ ಪಡೆದು ಪ್ರಾಂಶುಪಾಲರಿಂದ `ದಿನಕರ್‌ ಮೆಮೋರಿಯಲ್ ಕಪ್‌’ ಸ್ವೀಕರಿಸಿರುವರು.

IMG-20230306-WA0222

ಕಾಲೇಜಿನ ಕಣ್ಮಣಿ

ವಿಜಯಾ ಕಾಲೇಜಿನ ವಿಜ್ಞಾನದ ವಿದ್ಯಾರ್ಥಿ ಬಿಎಸ್ಸಿಯಲ್ಲಿಯೂ ಟಾಪರ್‌ ಆಗಿ ಬಹುಮಾನ, ಕ್ರೀಡೆಯಲ್ಲಿಯೂ ಚಾಂಪಿಯನ್ ಆಗಿದ್ದರು. ಒಟ್ಟಿನಲ್ಲಿ ಶಾಲಾ ಕಾಲೇಜಿನ ಉತ್ತಮ ವಿದ್ಯಾರ್ಥಿಯಾಗಿ ಹೊರಹೊಮ್ಮಿದ ಇವರನ್ನು ಬೀಳ್ಕೊಡುವ ಸಂದರ್ಭದಲ್ಲಿ ಹೆತ್ತವರನ್ನೂ ಇವರೊಟ್ಟಿಗೆ ವೇದಿಕೆಗೆ ಕರೆದು ಹೂವಿನ ಮಾಲೆಯೊಂದಿಗೆ ಸನ್ಮಾನಿಸಿದ್ದು ಹೆಮ್ಮೆಯ ಸಂಗತಿ ಎನ್ನುತ್ತಾರೆ.

ಆಕಾಶವಾಣಿಯ ಕಲಾವಿದರೂ, ಹುಟ್ಟು ಅಂಧರಾದ ಡಿ. ಸೂರ್ಯಪ್ರಭಾ ಹಾಗೂ ಅವರ ಸಹೋದರಿ ದುರ್ಗಾ ದೇವಿ ಅವರುಗಳಿಂದ ಕರ್ನಾಟಕ ಸಂಗೀತ, ನಾಗರತ್ನಾ ಶಶಿಧರ್‌ ರವರಿಂದ ದೇವರ ನಾಮಗಳನ್ನು ಕಲಿತಿರುವರು. ಸಂಗೀತನೃತ್ಯ ಇವರ ಅಚ್ಚುಮೆಚ್ಚಿನ ಕ್ಷೇತ್ರ, ಪೌರಾಣಿಕ ನೃತ್ಯ ರೂಪಕಗಳಲ್ಲಿ ಹೆಚ್ಚಿನ ಆಸಕ್ತಿ. ಪೆನ್ಸಿಲ್ ಸ್ಕೆಚ್ಚಿಂಗ್‌, ಡಾಲ್ ಮೇಕಿಂಗ್‌, ನಿಟ್ಟಿಂಗ್‌, ಎಂಬ್ರಾಯಿಡರಿ, ಕ್ರೊಚೆಟ್‌, ಸ್ವಿಮ್ಮಿಂಗ್‌, ಆಧ್ಯಾತ್ಮ ಪುಸ್ತಕಗಳನ್ನು ಓದುವುದು, ಕಥೆ ಮತ್ತು ಕವಿತೆಗಳನ್ನು ಬರೆಯುವುದು ಇವರ ಇತರ ಹವ್ಯಾಸಗಳು.

ಯುವ ವಯಸ್ಸಿನಲ್ಲಿ ಸಾಧನೆಗಳಿಗೆ ಹಲವಾರು ಅವಕಾಶಗಳುಂಟು ಎಂಬುದಕ್ಕೆ ಮಗದೊಂದು ಉದಾಹರಣೆಯೆಂದರೆ, ಸ್ಟೂಡೆಂಟ್ಸ್ ಯೂನಿಯನ್‌ ನಲ್ಲಿ ಅವಿರೋಧವಾಗಿ ಆಯ್ಕೆಯಾಗಿ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸಿದ ರೀತಿ ಮುಂದೆ ಹಲವಾರು ಸಂಸ್ಥೆಗಳಲ್ಲಿ ನಾಯಕತ್ವ ವಹಿಸಲು ದಾರಿದೀಪವೇ ಆಯಿತೆಂದರೆ ತಪ್ಪಾಗಲಾರದು.

IMG-20180827-WA0652

ಕವಯಿತ್ರಿ ಲೇಖಕಿ

ಬಸವನಗುಡಿ ಯುವಕ ಸಂಘದಲ್ಲಿ ಮಕ್ಕಳ ದಿನಾಚರಣೆಯ ಸಂದರ್ಭದಲ್ಲಿ ಕವನವನ್ನು ರಚಿಸಿ ಓದಿದ ಪರಿಣಾಮವಾಗಿ, ಅಚ್ಚರಿಗೊಂಡ ದಿನಪತ್ರಿಕೆ, ವಾರಪತ್ರಿಕೆಯ ಸಂಪಾದಕರು ನಿರಂತರವಾಗಿ ಲೇಖನಗಳನ್ನು ಪ್ರಕಟಿಸುವ ಅವಕಾಶವನ್ನು ನೀಡಿದರು. ಅಲ್ಲದೆ, ತಮ್ಮ ಕಛೇರಿಗೆ ಆಹ್ವಾನಿಸಿ ಸಂದರ್ಶನದಲ್ಲಿ ಅನೇಕ ವಿಚಾರಗಳನ್ನು ಚರ್ಚಿಸಿ `ಪ್ರತಿಭಾವಂತೆ ಆಶಾ’ ಎಂಬ ಲೇಖನ ಮೂಡಿಬಂದಿತು.

ಇಂಗ್ಲಿಷ್‌ ಶಾರ್ಟ್‌ ಹ್ಯಾಂಡ್‌ ನಲ್ಲಿ ಕರ್ನಾಟಕ ರಾಜ್ಯಕ್ಕೆ ಮೊದಲ ರಾಂರ್ ಪಡೆದಿರುವವರು. ಇಂಡಿಯನ್‌ ಬ್ಯಾಂಕ್ ಉದ್ಯೋಗಿಯಾದ ಇವರು ಕೆಲಸದ ನಿಮಿತ್ತ ಬೆಂಗಳೂರು, ಮುಂಬೈ, ನಂಜನಗೂಡಿನಲ್ಲಿಯೂ ಕೆಲಸ ನಿರ್ವಹಿಸಿದ್ದಾರೆ. ಅಮೆರಿಕಾದಲ್ಲಿ ಮೂರು ವರ್ಷಗಳ ಕಾಲ ನೆಲೆಸಿ `ಫುಡ್‌ ಫಾರ್‌ ಥಾಟ್‌’ ಸಂಸ್ಥೆಯಲ್ಲಿ ಕೆಲಸ ಮಾಡಿದ ವೈಖರಿ ಮಾಲೀಕರಿಗೆ ಅಚ್ಚರಿ ಮೂಡಿಸಿತ್ತು.

IMG-20220506-WA0117

ಸಮಾಜ ಸೇವೆಯಲ್ಲೂ ಮುಂದು

ಸಮಾಜ ಸೇವೆಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡು ಕೊಡುಗೈ ದಾನಿ ಎನಿಸಿಕೊಂಡಿದ್ದಾರೆ. ಲಲಿತಗಿರಿ ಲಯನೆಸ್‌ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾಗಿ ಸಮಾಜಕ್ಕೆ ಸೇವೆ ಸಲ್ಲಿಸಿದ್ದಾರೆ. ಸಕ್ರಿಯ ಲಯನ್ಸ್ ಸಂಸ್ಥೆಯ ಮೂಲಕ ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆಗೆ ಸೇರ್ಪಡೆಯಾಗಿ ಯಶಸ್ವಿ ಕಾರ್ಯಕ್ರಮಗಳನ್ನು ನಡೆಸಿ ಹಲವಾರು ಪ್ರಶಸ್ತಿಗಳನ್ನು ಪಡೆದಿರುತ್ತಾರೆ.

ಲಯನಿಸಂನಲ್ಲಿ ಹಲವಾರು ಉನ್ನತ ಹುದ್ದೆಗಳಲ್ಲಿ ತಮ್ಮ ಕಾರ್ಯ ವೈಖರಿಗಳನ್ನು ತೋರಿ ಪ್ರಶಸ್ತಿ ಸನ್ಮಾನಗಳನ್ನು ಗಳಿಸಿದ್ದಾರೆ. ಬೆಸ್ಟ್ ಕನ್ಸೀಲರ್‌, ಬೆಸ್ಟ್ ಅಸೋಸಿಯೇಟ್‌, ಚೇರ್‌ ಪರ್ಸನ್‌ ಪ್ರಶಸ್ತಿಯನ್ನು ರಾಜ್ಯ ಹಾಗೂ ಮಲ್ಟಿಪಲ್ ರಾಜ್ಯಗಳಿಂದ ಪಡೆದಿದ್ದಾರೆ. ಬೆಸ್ಟ್ ಡಿಸ್ಟ್ರಿಕ್ಟ್ ಚೇರ್‌ ಪರ್ಸನ್‌, ಫೈವ್ ‌ಸ್ಟಾರ್‌ ಪ್ರಶಸ್ತಿ, ಅಂತಾರಾಷ್ಟ್ರೀಯ ಅಧ್ಯಕ್ಷರ ಪ್ರಶಸ್ತಿ, ಬೆಸ್ಟ್ ಲೇಡಿ ಡಿಸ್ಟ್ರಿಕ್ಟ್ ಚೇರ್‌ ಪರ್ಸನ್‌ ಪ್ರಶಸ್ತಿಯನ್ನು ರಾಜ್ಯ ಮತ್ತು ಮಲ್ಟಿಪಲ್ ಗಳಿಂದ, ಪ್ಲಾಟಿನಂ ಪ್ರಶಸ್ತಿ, ಬೆಸ್ಟ್ ಡಿಸ್ಟ್ರಿಕ್ಟ್ ಚೇರ್‌ ಪರ್ಸನ್‌ ಫಾರ್‌ ಮೆನ್ಸ್ ಡೇ ಸೆಲೆಬ್ರೇಷನ್ಸ್ ಹಾಗೂ ಇನ್ನೂ ಅನೇಕ ಪ್ರಶಸ್ತಿಗಳನ್ನು ಪಡೆದು ಪ್ರಖ್ಯಾತರಾಗಿದ್ದಾರೆ. ಲಯನ್ಸ್ ಗವರ್ನರ್‌ ಸೆಕ್ರೆಟರಿಯೇಟ್‌ ನಲ್ಲಿ ಗ್ಲೋಬಲ್ ಟೀಂ ಲೀಡರ್‌ ಹಾಗೂ ನ್ಯೂ ವಾಯ್ಸ್ ಟೀಮ್ ನಲ್ಲಿ ಲೀಡರ್‌ ಶಿಪ್‌ ಚೇರ್‌ ಪರ್ಸನ್‌ ಆಗಿದ್ದಾರೆ.

ಲಯನೆಸ್‌ ಸರ್ವೀಸ್‌ ರಲ್ಲಿ ರಾಷ್ಟ್ರೀಯ ಸಂಸ್ಥೆಯಾದ ಲಯನೆಸ್‌ ಸರ್ವೀಸ್‌ ಆರ್ಗನೈನೇಷನ್‌ ಮುಖೇನ ಸ್ಥಾಪಕ ಅಧ್ಯಕ್ಷೆಯಾದರು. ತಮ್ಮ ಜಿಲ್ಲೆಗೆ ಕೆ ಎ 1 ಅನುಪಮ ಎಂದು ನಾಮಕರಣ ಮಾಡಿ ತಮ್ಮ ಜಿಲ್ಲೆಯಡಿ 15 ಉಪ ಸಂಸ್ಥೆಗಳನ್ನು ಸ್ಥಾಪಿಸಿ ಸೇವಾಕಾರ್ಯಗಳನ್ನು ಆ ಸಂಸ್ಥೆಯ ಸದಸ್ಯರು ನಡೆಸುವಂತೆ ಆಣೆ ಮಾಡಿಕೊಟ್ಟಿರುವರು. ನಂತರ ತಮ್ಮ ಅಧ್ಯಕ್ಷಾವಧಿಯಲ್ಲಿ 6 ಸಂಸ್ಥೆಗಳನ್ನು ಸೇರ್ಪಡೆಗೊಳಿಸಿ ಅವುಗಳೂ ಕಾರ್ಯ ನಿರ್ವಹಿಸುವಂತೆ ಮಾಡಿಕೊಟ್ಟಿದ್ದಾರೆ. ಇದರ ಪರಿಣಾಮವಾಗಿ ಚಂಡೀಗರ್‌ ನಲ್ಲಿ ನಡೆದ ಆಲ್ ಇಂಡಿಯಾ ಲಯನೆಸ್‌ ಕ್ಲಬ್‌ ನ ವತಿಯಿಂದ ಸ್ಟಾರ್‌ ಅವಾರ್ಡ್‌ ಫಾರ್‌ ಬೆಸ್ಟ್ ಡಿಸ್ಟ್ರಿಕ್ಸ್ ಲಭಿಸಿರುವುದು. ಇವರ ಸೇವೆ ಹಾಗೂ ಆಡಳಿತ ಕಾರ್ಯವೈಖರಿಯನ್ನು ಗಮನಿಸಿದ ಆಲ್ ಇಂಡಿಯಾ ಲಯನೆಸ್‌ ಕ್ಲಬ್‌ನವರು ಇರನ್ನು 3ನೇ ಉಪಾಧ್ಯಕ್ಷೆಯನ್ನಾಗಿ ಆಯ್ಕೆ ಮಾಡಿದ್ದಾರೆ. ಟಿವಿಎಸ್‌ ಸಂಸ್ಥೆಯವರು ನಡೆಸಿದ 10 ಕಿ.ಮೀ. ನಡಿಗೆಯಲ್ಲಿ ಗೆದ್ದ ಸಂತಸ ಅಪರಿಮಿತವಾದದ್ದು ಎನ್ನುತ್ತಾರೆ ಈ ಕ್ವಿಜ್‌ಕ್ವೀನ್‌! ಹ್ಞಾಂ, ಇವರ ಮಗದೊಂದು ಹೈಲೈಟ್‌ ಕ್ವಿಜ್‌ ನಡೆಸುವುದು, ಹಾಗಾಗಿ ಈ ಹೆಸರು ಬಂದಿದೆ. ಪೇಂಟಿಂಗ್‌ ನಲ್ಲಿ ಆಸಕ್ತಿ ಇರುವ ಇವರಿಗೆ ಬಾಂಬೆ ಡೈಯಿಂಗ್‌ ಹಾಗೂ ಕ್ಯಾಮಲಿನ್‌ ಸಂಸ್ಥೆಯವರು ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಬಹಳಷ್ಟು ಬಾರಿ ಗಳಿಸಿದ್ದಾರೆ. ಟಾಟಾ ಇನ್‌ ಸ್ಟಿಟ್ಯೂಟ್‌ ನವರು ನಡೆಸಿದ ವಿಜ್ಞಾನ ಪ್ರಯೋಗ ಸ್ಪರ್ಧೆಯಲ್ಲಿ ವಿಶೇಷ ಬಹುಮಾನ ಪಡೆದಿದ್ದಾರೆ. ಲಾಲ್ ‌ಬಾಗ್‌ ಗ್ಲಾಸ್‌ ಹೌಸ್‌ ನಲ್ಲಿ ನಡೆದ ಆನ್‌ ದ ಸ್ಪಾಟ್ ಕಾಂಪಿಟೇಶನ್‌ ನಲ್ಲಿ ಪ್ರಥಮ ಬಹುಮಾನ, ಪ್ರಬಂಧ ಸ್ಪರ್ಧೆಗಳಲ್ಲಿ ಬಹುಮಾನ.

IMG-20180827-WA0645

ಸಂದ ಪ್ರಶಸ್ತಿಗಳು

ಸ್ವರ್ಣ ಭೂಷಣ, ಸೇವಾ ಮಿತ್ರ, ತಿರುಮಲ, ರಾಣಿ ಚೆನ್ನಮ್ಮ, ಪ್ರಜಾಭೂಷಣ ರಾಜ್ಯ ಪ್ರಶಸ್ತಿ, ಪ್ರತಿಭಾವಂತ ಮಹಿಳೆ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ (ಲಯನ್ಸ್ ಸಂಸ್ಥೆಯಿಂದ) ಉತ್ತಿಷ್ಠ ಸೇವಾ ಸಂಸ್ಥೆಯ ವತಿಯಿಂದ ಅಮೂಲ್ಯ ರತ್ನ ಪ್ರಶಸ್ತಿ, ಮದರ್‌ ತೆರೇಸಾ ಪ್ರಶಸ್ತಿ, ರಾಜರತ್ನ ಡಾ. ಪುನೀತ್‌ ರಾಜ್‌ ಕುಮಾರ್‌ ಪ್ರಶಸ್ತಿ, ಲಯನ್‌ ಕನ್ನಡ ಕಣ್ಮಣಿ ಪ್ರಶಸ್ತಿ, ಕಲಾಸೇವಾ ಪ್ರಶಸ್ತಿ, ಝೀ ಈವೆಂಟ್ಸ್ ನವರು ನಡೆಸಿದ ಗ್ರ್ಯಾಂಡ್‌ ಫಿನಾಲೆ ಬ್ಯೂಟಿ ಕಾಂಟೆಸ್ಟ್ ನಲ್ಲಿ ಮಿಸಸ್‌ ಸೌತ್‌ ಇಂಡಿಯನ್‌ ಎಲಿಗೆಂಟ್‌ ನೇಷನ್‌ ಪ್ರಶಸ್ತಿ, ಸ್ವರ್ಣ ಭಾರತ್‌ ಫೌಂಡೇಶನ್‌ ರವರಿಂದ ಇಂಡಿಯನ್‌ ಐಕಾನ್‌ ಪ್ರಶಸ್ತಿ.

ಎಷ್ಟೇ ವಿದೇಶಗಳನ್ನು ಸುತ್ತಿದ್ದರೂ ಕೂಡಾ ಹಳ್ಳಿಯ ಸೊಬಗಿಗೆ ಮನಸೋಲುತ್ತಾರೆ. ತಂದೆ ಅಗ್ರಿಕಲ್ಚರ್‌ ಡಿಪಾರ್ಟೆಮೆಂಟ್‌ ನಲ್ಲಿದ್ದದ್ದರ ಪ್ರಭಾವವೋ ಏನೋ ಸಸ್ಯ ಪ್ರಾಣಿ ಹಳ್ಳಿ ಎಂದರೆ ಬಲು ಒಲವು. ಕೆಲವು ಕಾಲ ಅಮೆರಿಕ ವಾಸಿಯಾಗಿದ್ದ ಇವರು ಅಲ್ಲಿನ 25ಕ್ಕೂ ಹೆಚ್ಚು ದೇಶಗಳನ್ನು ಸುತ್ತಿ ಬಂದಿದ್ದಾರೆ. ಭಾರತೀಯ ಸಂಸ್ಕೃತಿಯೇ ಅಚ್ಚುಮೆಚ್ಚು. ಪ್ರವಾಸ ಇವರ ಒಂದು ಹವ್ಯಾಸದಲ್ಲಿ ಒಂದು.

IMG-20230306-WA0219

ಉನ್ನತ ಹುದ್ದೆಗಳು

ಹಲವಾರು ಸಂಸ್ಥೆಗಳಲ್ಲಿ ಉನ್ನತ ಹುದ್ದೆಗಳನ್ನು ಪಡೆದು ಸೇವೆಗಳನ್ನು ಮಾಡಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಬಿಇಎಲ್ ಆಫೀಸರ್ಸ್‌ ಲೇಡೀಸ್‌ ಕ್ಲಬ್‌, ಇಂಡಿಯನ್‌ ಬ್ಯಾಂಕ್‌ ಆಫೀಸರ್ಸ್ ಅಸೋಸಿಯಷನ್‌, ಅಖಿಲ ಭಾರತ ಮಧ್ವ ಮಹಿಳಾ ಸಂಘ, ಕರ್ನಾಟಕ ಲೇಖಕಿಯರ ಸಂಘ, ಸ್ಛೂರ್ತಿ ಮಹಿಳಾ ಸಮಾಜ, ಬನಶಂಕರಿ ಮಹಿಳಾ ಸಮಾಜ, ಮಹಾಲಕ್ಷ್ಮಿ ಭಜನಾ ಮಂಡಳಿ, ಭರತೇಶ ಕೃಷ್ಣ ಮಹಿಳಾ ಸಮಾಜ, ಚಂದ್ರಿಕಾ ಮಹಿಳಾ ಸಮಾಜ ಹಾಗೂ ಇನ್ನೂ ಅನೇಕ. ಇವರ ಈ ಎಲ್ಲಾ ಕೆಲಸಗಳಿಗೆ ಪರಿಪೂರ್ಣ ಸಹಕಾರ ನೀಡುತ್ತಿರುವ ಪತಿ ಮೋಹನ್‌, ಅಮೆರಿಕಾದಲ್ಲಿ ನೆಲೆಸಿರುವ ಇಬ್ಬರು ಪುತ್ರಿಯರು ಹಾಗೂ ಅಳಿಯಂದಿರುಗಳ ಪ್ರೋತ್ಸಾಹವಿದೆ. ಇಂಥಹ ಪ್ರತಿಭಾನ್ವಿತ ಮಹಿಳೆಯ ಮತ್ತಷ್ಟು ಮಗದಷ್ಟು ಸಾಧಿಸುವಂತಾಗಲಿ. ಸಮಾಜಕ್ಕೆ ಉತ್ತಮ ಕೆಲಸಗಳನ್ನು ಮಾಡುವಂತಾಗಲಿ ಎಂದು ಗೃಹಶೋಭಾ ಹಾರೈಸುತ್ತಾಳೆ!

ಸವಿತಾ ನಾಗೇಶ್

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ