ಸರಸ್ವತಿ ನಟರಾಜ್ಕಾದಂಬರಿಗಾರ್ತಿ

ಕನ್ನಡ ಸಾಹಿತ್ಯದ ಸಾರಸ್ವತ ಲೋಕದಲ್ಲಿ ಅಪರೂಪದ ಕಥೆ, ಕವನ, ಕಾದಂಬರಿಗಾರ್ತಿಯಾಗಿ ಗುರುತಿಸಿಕೊಂಡಿರುವ ಸರಸ್ವತಿ ನಟರಾಜ್‌ ಅವರ ಸಾಧನೆ ಮೇರು ಮಟ್ಟದ್ದು. ಇವರ ಕುರಿತಾಗಿ ಹೆಚ್ಚಿನ ವಿವರಗಳನ್ನು ತಿಳಿಯೋಣವೇ…….?

ಎಲೆಮರೆಯ ಕಾಯಿಯಂತೆ ಸದ್ದಿಲ್ಲದೆ ಕನ್ನಡ ತಾಯಿಯ ಸೇವೆಗೈಯುತ್ತಿರುವ ಸರಸ್ವತಿ ನಟರಾಜ್‌ ರವರು ಕನ್ನಡ ಸಾರಸ್ವತ ಲೋಕಕ್ಕೆ ಹಲವಾರು ಮೌಲ್ಯಯುತ ಕೃತಿಗಳೊಂದಿಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಇಂದಿನ ಆಧುನಿಕ ತಲೆಮಾರಿನವರಿಗೆ ಇವರ ಬರವಣಿಗೆ ಒಂದು ಅಪರೂಪದ ಮಾರ್ಗದರ್ಶಕ ಕೃತಿಗಳು ಎಂದರೆ ಅತಿಶಯೋಕ್ತಿಯಲ್ಲ.

ಸಾಹಿತ್ಯ ಮತ್ತು ಮೌಲ್ಯಯುತ ಕೃತಿಗಳ ಕುರಿತು ಆಳವಾಗಿ, ಗಂಭೀರ ವಿಚಾರ ಲಹರಿಯುಳ್ಳ ತಮ್ಮದೇ ಓದುಗರ ಒಂದು ತಂಡನ್ನು ಇವರು ಕಟ್ಟಿಕೊಟ್ಟಿದ್ದಾರೆ ಎಂದೇ ಹೇಳಬಹುದು. ಸ್ತ್ರೀ ಸಾಹಿತ್ಯ ಎಂದ ತಕ್ಷಣ ಅದು ಕೇವಲ ಅಡುಗೆಮನೆ ಸಾಹಿತ್ಯ ಎಂದು ಅಣಕಾಡುವ ಬುದ್ಧಿಜೀವಿ ವಿಮರ್ಶಕರ ಕಣ್ತೆರೆಸುವಂತಿವೆ ಇವರ ಕೃತಿಗಳು ಎಂದೇ ಹೇಳಬಹುದು.

ಬಾಲ್ಯದಿಂದಲೇ ಬರವಣಿಗೆ ಮೂಲತಃ ಹಾಸನ ಜಿಲ್ಲೆಯ ಸಕಲೇಶಪುರದರಾದ, ಸರಳ ಸ್ವಭಾವದ ಮೆದು ನುಡಿಯ ಸರ್ವಯುವತಿಯರು ಸೇಂಟ್‌ ಜೋಸೆಫ್‌ ಶಾಲೆಯಲ್ಲಿ ಹೈಸ್ಕೂಲ್ ‌ವಿದ್ಯಾಭ್ಯಾಸ ಮಾಡುವಾಗಿನಿಂದಲೇ ಸಣ್ಣ ಪುಟ್ಟ ಲೇಖನಗಳನ್ನು ಬರೆಯುವ ಮೂಲಕ ತಮ್ಮ ಬರವಣಿಗೆಯ ಒಲವನ್ನು ಹೊರ ಹಾಕಿದ್ದರು. ಬಾಲ್ಯದಿಂದಲೇ ಇವರಿಗೆ ಸಾಹಿತ್ಯದಲ್ಲಿ ಅಪಾರ ಆಸಕ್ತಿ ಎಂಬುದಕ್ಕೆ ಇದುವೇ ಸಾಕ್ಷಿ. ಹೀಗೆ ಬಾಲ್ಯದಿಂದ ಆರಂಭವಾದ ಇವರ ಸಾಹಿತ್ಯ ಕೃಷಿ, ನಿರಂತರ ಬೆಳೆಯುತ್ತಾ ಒಂದು ಸಾಗರದಷ್ಟು ದಟ್ಟವಾಗಿ ನಿಂತಿದೆ ಎನ್ನಬಹುದು.

ವಿವಾಹದ ನಂತರ ಪದವಿ ಪಡೆದು, ಸತತ ಅಧ್ಯಯನ ಶೀಲರಾಗಿ, ಶಾಸ್ತ್ರೀಯ ಸಂಗೀತ, ಕಲೆ ಇನ್ನಿತರ ಕ್ಷೇತ್ರಗಳಲ್ಲಿಯೂ ಸಕ್ರಿಯರಾಗಿದ್ದರು. ಗಂಭೀರವಾಗಿ ಬರವಣಿಗೆಯಲ್ಲಿ ತೊಡಗಿಕೊಂಡಿದ್ದು, ನಲವತ್ತರ ನಂತರವೇ. ಈ ರೀತಿ ತಮ್ಮ ಜೀವನಾನುಭವಗಳಿಂದ ಅಪಾರ ಜ್ಞಾನ ಪಡೆದು, ವಾಸ್ತವಿಕ ಬದುಕಿನ ಬವಣೆಗಳನ್ನೇ ತಮ್ಮ ಕೃತಿಗಳಲ್ಲಿ ಎರಕ ಹೊಯ್ದಿದ್ದಾರೆ. ಮೌಲ್ಯಯುತ ಸಾಹಿತ್ಯ ಕೃಷಿ

ಇವರ ಕಥೆಗಳು, ಕಾವ್ಯ, ಕಾದಂಬರಿಗಳೆಲ್ಲ ವೈಶಿಷ್ಟ್ಯಪೂರ್ಣವಾದ, ಅಪಾರ ಸೃಜನಾತ್ಮಕ ಸಾಮರ್ಥ್ಯವನ್ನು ಹೊಂದಿರುವ ಕಥಾಹಂದರವನ್ನು ಹೊಂದಿದ್ದು, ಹೊಸತನದಿಂದ ಲಕಲಕಿಸುತ್ತವೆ. ಇವರ ಸಾಹಿತ್ಯ ಸೃಷ್ಟಿಯನ್ನು ಆಮೂಲಾಗ್ರವಾಗಿ ಗಮನಿಸಿದರೆ ಅದು ಎಂತಹ ಗಂಭೀರ, ವಿಭಿನ್ನ, ವೈವಿಧ್ಯಮಯ, ಅನನ್ಯ ಅಕ್ಷರ ಸಂಪತ್ತನ್ನು ಹೊಂದಿದೆ ಎಂಬುದನ್ನು ಓದುಗರು ಸಹೃದಯತೆಯಿಂದ ಹಂಚಿಕೊಳ್ಳುತ್ತಿರುತ್ತಾರೆ.

ಸ್ಪರ್ಧೆಗಳಲ್ಲಿ ಪೈಪೋಟಿಗಟ್ಟಲೆ ಸಾಹಿತ್ಯದ ಮೂಲಕ ಸಾಹಿತ್ಯ ಲೋಕದಲ್ಲಿ ಗುರುತಿಸಿಕೊಂಡಿರುವ ಸರಸ್ವತಿಯವರು ಕಥಾಸ್ಪರ್ಧೆ, ಕವನ ಸ್ಪರ್ಧೆ, ಕಾದಂಬರಿ ಸ್ಪರ್ಧೆಗಳಲ್ಲಿ ಸಾಕಷ್ಟು ಬಹುಮಾನಗಳನ್ನು ಪಡೆದಿದ್ದಾರೆ. ಇವರ ಕಥೆ, ಕಾದಂಬರಿಗಳು ಓದುಗರ ಜನಮಾನಸದಲ್ಲಿ ಸದಾ ಹಸಿರಾಗಿ ಉಳಿದಿದ್ದು, ಆ ಮೂಲಕ ಗಟ್ಟಿತನವನ್ನು ಕಂಡುಕೊಂಡಿದ್ದಾರೆ. ಹೀಗಾಗಿ ಎಲ್ಲ ಬಗೆಯ ಸಾಹಿತ್ಯ ಸ್ಪರ್ಧೆಗಳಲ್ಲೂ ಇವರಿಗೆ ಬಹುಮಾನ ಕಟ್ಟಿಟ್ಟ ಬುತ್ತಿ!

ಇದುವರೆಗೂ ಏಳು ಕಾದಂಬರಿಗಳನ್ನು ಬರೆದಿದ್ದು ಸಂಖ್ಯಾ ದೃಷ್ಟಿಯಲ್ಲಿ ಅತೀ ಹೆಚ್ಚಲ್ಲದಿದ್ದರೂ ಪ್ರತೀ ಕಾದಂಬರಿಯೂ ಅದರದೇ ಆದ ಉತ್ತಮ ಶೈಲಿ, ಮೊನಚು ಭಾಷೆ, ಮನಸೆಳೆವ ನಿರೂಪಣೆ ಹಾಗೂ ಮನೋವೈಜ್ಞಾನಿಕ ಗ್ರಹಿಕೆಗಳಿಂದ ಸಾಹಿತ್ಯ ವಾಗ್ಮಿಯ ಲೋಕದಲ್ಲಿ ಗಟ್ಟಿಯಾಗಿ ನೆಲೆ ಕಂಡುಕೊಂಡಿದೆ ಎಂದರೆ ಉತ್ಪ್ರೇಕ್ಷೆಯಲ್ಲ. ಕೇವಲ ಸಂಖ್ಯಾ ದೃಷ್ಟಿಯಿಂದ ಅಪಾರ ಕೃತಿಗಳನ್ನು ಹೆಚ್ಚಿಸಬೇಕು ಎಂದು ಹಗಲು ರಾತ್ರಿ ಪುಸ್ತಕಗಳನ್ನು ಹೊಸೆಯದೆ, ಅಮೂಲ್ಯ ಅನನ್ಯ ಕೃತಿಗಳನ್ನು ಕೊಟ್ಟಿರುವುದು ಇವರ ಅಪಾರ ಪ್ರತಿಭೆಗೆ ಕೈಗನ್ನಡಿ ಎನ್ನಬಹುದು.

ಕಾದಂಬರಿಗಳಿಂದ ಜನಮನ್ನಣೆ

ಮೊದಲ ಕಾದಂಬರಿ `ಜ್ಯೋತಿ’ ನಾಡಿನ ಸುಪ್ರಸಿದ್ಧ ವಾರಪತ್ರಿಕೆ ಸುಧಾದಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿದ್ದಲ್ಲದೆ, `ಜೀವನದಿ’ ಎಂಬ ಹೆಸರಿನಲ್ಲಿ ಟಿವಿ ವಾಹಿನಿಯಲ್ಲಿ ಧಾರಾವಾಹಿಯಾಗಿ ಪ್ರಸಾರಗೊಂಡು ಜನಮನ ಸೂರೆಗೊಂಡು ಅತ್ಯುತ್ತಮ ಸನ್ಮಾನಕ್ಕೆ ಪಾತ್ರವಾಯ್ತು. ಇವರ `ಮನೆ’ ಕಾದಂಬರಿ ಮಾಸ್ತಿ ಟ್ರಸ್ಟ್ ವತಿಯಿಂದ ಕಾದಂಬರಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದೆ. ಹೀಗೆ ಕಾದಂಬರಿಗಳು ಮಾತ್ರವಲ್ಲದೆ, ಅವನ್ನು ಕಿರುತೆರೆಯಲ್ಲಿ ಧಾರಾವಾಹಿಗಳಾಗಿ ಗುರುತಿಸಿಕೊಂಡು ಇವರು ಕನ್ನಡಿಗರ ಮನೆಮಾತಾಗಿದ್ದಾರೆ.

ಸಂಸ್ಕೃತಕ್ಕೆ ದಾಂಗುಡಿ

ಇವರ ಮತ್ತೊಂದು ಕಾದಂಬರಿ `ಸಿಕ್ಕು’ ಸುಧಾ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಹರಿದು ಬಂದದ್ದಲ್ಲದೆ, ಅದು ಸಂಸ್ಕೃತ ಭಾಷೆಗೂ ಅನುವಾದಗೊಂಡು `ಸಂದೇಶ್‌’ ಸಂಸ್ಕೃತ ಪತ್ರಿಕೆಯಲ್ಲಿಯೂ ಧಾರಾವಾಹಿಯಾಗಿ ಮೂಡಿದ ಹೆಗ್ಗಳಿಕೆಗೆ ಪಾತ್ರವಾಯಿತು. ಮುಂದೆ `ಗ್ರಂಥಿ ಲವ್‌’ ಎಂಬ ಹೆಸರಿನಿಂದ ಸಂಸ್ಕೃತದಲ್ಲಿ ಪ್ರಕಟಗೊಂಡು, ಸುಧಾ ಮೂರ್ತಿ ಅವರಿಂದ ಈ ಪುಸ್ತಕ ಬಿಡುಗಡೆಯಾಯಿತು. ಕನ್ನಡದಿಂದ ಸಂಸ್ಕೃತಕ್ಕೆ ಅನುವಾದಗೊಂಡ ಕನ್ನಡ ಲೇಖಕಿಯರ ಅಪರೂಪದ ಕೃತಿಗಳಲ್ಲಿ ಇರದು ಮೊದಲ ಸಾಲಿನಲ್ಲಿ ನಿಲ್ಲುತ್ತವೆ.

ಆಧುನಿಕ ತಲೆಮಾರಿನವರಿಗಾಗಿ ತಂತ್ರಜ್ಞಾನ ಹಾಗೂ ಕಾರ್ಪೊರೇಟ್‌ ಪ್ರಪಂಚದಂತಹ ಅಪರೂಪದ ವಿಷಯವನ್ನು ಒಳಗೊಂಡ `ಸೊನ್ನೆ ಮತ್ತು ಒಂದು’ ಅವರ ಹೊಸ ಕಾದಂಬರಿ ಬಿಡುಗಡೆಯ ಹಂತದಲ್ಲಿದೆ. ಬದುಕಿನ ದಟ್ಟ ಅನುಭವಗಳನ್ನು ಅದರ ಎಲ್ಲಾ ಸೂಕ್ಷ್ಮತೆಯೊಂದಿಗೆ ಹಿಡಿದಿಡುವಂಥ ಅಪರೂಪದ ಸಾಮರ್ಥ್ಯ ಇವರಿಗಿದೆ. ತಮ್ಮ 64ನೇ ವಯಸ್ಸಿನಲ್ಲೂ ಉತ್ಸಾಹದ ಚಿಲುಮೆಯಂತೆ ಅಧ್ಯಯನಶೀಲರಾಗಿರುವ ಸರಸ್ವತಿ ನಟರಾಜ್‌ ರವರು ಅನ್‌ ಲೈನ್‌ ತರಗತಿಗಳಲ್ಲಿ ಹಳೆಗನ್ನಡ ಪಾಠಗಳನ್ನು ಅಭ್ಯಾಸ ಮಾಡುತ್ತಿರುವವರು. ಇವರ ಕ್ರಿಯಾಶೀಲತೆ, ಸೃಜನಶೀಲತೆ, ಸರಳತೆ, ಪ್ರತಿಯೊಬ್ಬ ಮಹಿಳೆಗೂ ಮಾದರಿ.

ಸುಮಾ ರಮೇಶ್

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ