ಹೊಸದಾಗಿ ಮದುವೆಯಾದ ದಂಪತಿಗೆ, ಹುಡುಗನ ತಾಯಿ ತಂದೆಯರೇ ಅವರ ಪ್ರೈವೆಸಿಗೆ ಧಕ್ಕೆ ಬಾರದಿರಲೆಂದು ಬೇರೆ ವಾಸಿಸಲು ಹೊಸ ಮನೆ ಕೊಡಿಸಿದರು. ಅದನ್ನು ಮತ್ತಷ್ಟು ಅಂದಗೊಳಿಸಲು, ನವ ದಂಪತಿ ತಮ್ಮ ಸಂಪಾದನೆ ಪೂರ್ತಿ ಸುರಿದರು. ಈ ಮಧ್ಯೆ ಅತ್ತೆ ನಡುನಡುವೆ ಮಗನ ಮನೆಗೆ ಬಂದು, ಗೃಹಕೃತ್ಯಗಳಲ್ಲಿ ಮೂಗು ತೂರಿಸುತ್ತಾ, ಇದು ಹೀಗೇಕೆ, ಅದು ಹಾಗೇಕೆ ಎಂದು ದಬಾಯಿಸ ತೊಡಗಿದರು. ಕರೆಗಂಟೆ ಒತ್ತಿದಾಗ ಮನೆಯ ಆಳು ಕದ ತೆರೆಯಲು ತಡ ಮಾಡಿದಳೆಂದು, ಅವಳನ್ನು ಬದಲಾಯಿಸಲು ಹುನ್ನಾರ ನಡೆಸಿದರು. ಅಡುಗೆಯವಳು ಮಸಾಲಾ ಟೀ ಬದಲು ಗ್ರೀನ್ ಟೀ ಕೊಟ್ಟಳೆಂದು ಅವಳನ್ನೂ ಓಡಿಸುವುದೇ?
ಇಷ್ಟು ಮಾತ್ರವಲ್ಲದೇ, ಆಕೆ ಮಗನ ಹೊಸ ಸಂಸಾರವನ್ನು ಒಂದಾಗಿಸುವ ಬದಲು ಮುರಿಯಲು ಮುಂದಾದರು. ಇದೇ ಕೆಲಸವನ್ನು ನಮ್ಮ ಕೇಂದ್ರ ಸರ್ಕಾರ ನಿಯುಕ್ತ ರಾಜ್ಯಪಾಲರುಗಳು BJP ಆಡಳಿತವಿಲ್ಲದ ರಾಜ್ಯಗಳಲ್ಲೂ ನಡೆಸುತ್ತಿದ್ದಾರೆ.
ದೆಹಲಿಯಲ್ಲಂತೂ ಇದು ಭಯಂಕರ ರೂಪ ತಾಳಿ, ಒಬ್ಬರಾದ ಮೇಲೆ ಒಬ್ಬರಂತೆ ರಾಜ್ಯಪಾಲರನ್ನು ಬದಲಾಯಿಸುತ್ತಿದೆ. 7ಕ್ಕೆ 7 ಸಂಸತ್ತಿನ ಸೀಟುಗಳನ್ನು ಗೆದ್ದರೂ, ಮೊದಲು 2 ಸಲ ಅದು ವಿಧಾನಸಭೆ ಹಾಗೂ ದೆಹಲಿ ನಗರ ನಿಗಮ ಚುನಾವಣೆಗಳಲ್ಲಿ ಅರವಿಂದ್ ಕೇಜ್ರಿವಾಲ್ರ ನಿಂದ ಸೋತಿದ್ದನ್ನು ಮರೆಯಬಾರದು. ಹೀಗಾಗಿಯೇ ಅದು ಮೇಲೆ ಹೇಳಲಾದ ಅತ್ತೆಯಂತೆ ವ್ಯವಹರಿಸುತ್ತಿದೆ, ಕಾರಣ.... ಮಗ ತಾನು ಮೆಚ್ಚಿದ ಹುಡುಗಿಯನ್ನು ಮದುವೆ ಆದನೇ ಹೊರತು ತಾಯಿ ಆರಿಸಿದವಳನ್ನಲ್ಲ!
ಈ ರೀತಿ ಸದಾ ಕಾಟ ಕೊಡುವ ಹಕ್ಕು ಸಹಜವಾಗಿಯೇ ಬೆರೆತುಹೋಗಿದೆ. ಏಕೆಂದರೆ ಪುರಾಣಗಳಲ್ಲಿ ಹೇಳಿರುವಂತೆ ಇದ್ದಕ್ಕಿದ್ದಂತೆ ರಾಜನ ಒಡ್ಡೋಗಲಕ್ಕೆ ನುಗ್ಗಿ ಬರುವ ಋಷಿಗಳು, ರಾಜನ ಕಿವಿ ಹಿಂಡಿ ತಮಗೆ ಬೇಕಾದ ಕೆಲಸ ಮಾಡಿಸಿಕೊಳ್ಳುತ್ತಿದ್ದರು, BJP ಇದಕ್ಕೆ ಹೊರತಲ್ಲ.
ನರಸಿಂಹಾವತಾರದಲ್ಲಿ ಮಹಾವಿಷ್ಣು ಹಿರಣ್ಯಕಶಿಪುವನ್ನು ಅಕಾರಣವಾಗಿಯೇ ಸಂಹರಿಸಿದ. ಯಾವುದೇ ಕಾರಣವಿಲ್ಲದೆ ಕೃಷ್ಣನು ಪಾಂಡವ ಕೌರವರ ಮಧ್ಯೆ ಭೇದಭಾವ ತೋರಿ, ಕೌರವರ ವಿನಾಶಕ್ಕೆ ಕಾರಣನಾದ. ತಾಟಕಿ ಸುಬಾಹುರಂಥ ರಾಕ್ಷಸ ಸಂಹಾರಕ್ಕಾಗಿ ವಿಶ್ವಾಮಿತ್ರನು ರಾಮ ಲಕ್ಷ್ಮಣರ ಸಹಾಯ ಕೋರಿದ್ದೇಕೆ? ಇಡೀ ರಾಮಾಯಣದಲ್ಲಿ ಇಂಥದೇ ಋಷಿಗಳು ಅಯೋಧ್ಯೆಯ ಆಡಳಿತದಲ್ಲಿ ಸತತ ವಿಘ್ನ ಉಂಟು ಮಾಡುತ್ತಲೇ ಇದ್ದರು.
ಈ ಋಷಿಗಳು ಬೇಕೆಂದೇ ಎಲ್ಲಾ ಕಾಲದ ರಾಜರನ್ನೂ ತಮ್ಮ ಬೆರಳ ತುದಿಯಲ್ಲೇ ಕುಣಿಸಿದ್ದಾರೆ. ಇದೇ ತರಹ ಕೇಂದ್ರ ಸರ್ಕಾರ BJP ಆಡಳಿತವಿಲ್ಲದ ತಮಿಳುನಾಡು, ಪ.ಬಂಗಾಳ, ಕೇರಳ, ದೆಹಲಿ, ಛತ್ತೀಸ್ ಗಢ, ಝಾರ್ಖಂಡ್ ರಾಜ್ಯಗಳಲ್ಲಿ ರಾಜ್ಯಪಾಲರನ್ನು ನೇಮಿಸಿ ಕುಣಿಸುತ್ತಿದೆ!
ಪೌರಾಣಿಕ ಋಷಿಗಳ ಈ ಮೂಗು ತೂರಿಸುವಿಕೆಯಿಂದ ಅಂದಿನ ರಾಜರು ಅವರ ಶಾಪಕ್ಕೆ ಹೆದರಿ, ಅವರ ಮಾತುಗಳನ್ನು ಪರಿಪಾಲಿಸುತ್ತಿದ್ದಂತೆ. ಇದೇ ಋಷಿಬುದ್ಧಿಯ ಅತ್ತೆಯವರು ಮಗನ ಮನೆಯನ್ನು ನರಕವಾಗಿಸುತ್ತಿದ್ದಾರೆ. ಸಾಮಾನ್ಯವಾಗಿ ಈ ಅತ್ತೆಯರು ಯಾರೋ ಸಾಧುಸಂತರುಗಳ ಭಕ್ತೆಯರಾಗಿದ್ದು, ಸದಾಕಾಲ ಅವರ ಸೇವೆಗೆ ತೊಡಗಿರುತ್ತಾರೆ. ಆ ಸಾಧು ಸಂತರ ಆದೇಶ ಪರಿಪಾಲಿಸಲು ಈ ಅತ್ತೆಯರು ಆಧುನಿಕ ಸೊಸೆಯರನ್ನು ಗೋಳಾಡಿಸುತ್ತಾರೆ.